KV Tirumalesh; ಸಾಹಿತಿ, ವಿಮರ್ಶಕ ಕೆ. ವಿ. ತಿರುಮಲೇಶ್ ನಿಧನ
ಕವಿ, ವಿಮರ್ಶಕ, ಕತೆಗಾರ ಕೆ. ವಿ. ತಿರುಮಲೇಶ್ ಹೈದರಾಬಾದ್ನ ನಿವಾಸದಲ್ಲಿ ನಿಧನ ಹೊಂದಿದರು.
ಬೆಂಗಳೂರು, ಜನವರಿ 30; ಕವಿ, ವಿಮರ್ಶಕ ಕೆ. ವಿ. ತಿರುಮಲೇಶ್ ವಿಧಿವಶರಾದರು. ಹೈದರಾಬಾದ್ನಲ್ಲಿ ವಾಸವಾಗಿದ್ದ ಅವರು ಕೇರಳದ ಕಾಸರಗೋಡಿನ ಕಾರಡ್ಕ ಗ್ರಾಮದಲ್ಲಿ ಜನಿಸಿದ್ದರು.
80 ವರ್ಷದ ಕೆ. ವಿ. ತಿರುಮಲೇಶ್ ಸೋಮವಾರ ಬೆಳಗ್ಗೆ ಹೈದರಾಬಾದ್ನ ನಿವಾಸದಲ್ಲಿ ನಿಧನ ಹೊಂದಿದರು. ಹೈದರಾಬಾದ್ನ ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಇಂಗ್ಲಿಶ್ ಎಂಡ್ ಫಾರಿನ್ ಲಾಂಗ್ವೇಜಸ್ ಸಂಸ್ಥೆಯಲ್ಲಿ ಅವರು ಕಾರ್ಯ ನಿರ್ವಹಣೆ ಮಾಡಿ ನಿವೃತ್ತರಾಗಿದ್ದರು.
ಹಿರಿಯ ಕನ್ನಡ ಚಳವಳಿಯ ಹೋರಾಟಗಾರ ಪ.ಮಲ್ಲೇಶ್ ವಿಧಿವಶ
ಕೆ. ವಿ. ತಿರುಮಲೇಶ್ ಅಕ್ಷಯ ಕಾರವ್ಯ, ಅರಬ್ಬಿ, ಪಾಪಿಯೂ, ಮುಖವಾಡಗಳು, ವಠಾರ ಕವನ ಸಂಕಲನಗಳನ್ನು ರಚನೆ ಮಾಡಿದ್ದರು. ಆರೋಪ, ಅನೇಕ, ಮುಸುಗು ಕಾದಂಬರಿಗಳನ್ನು ರಚನೆ ಮಾಡಿದ್ದರು.
ಬದಲಾದ ಕೈ ಸಾರಥಿ: ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಸಾಯಿ ಗಾಂವಕರ್ ನೇಮಕ
ಭಾಷೆಯ ಕುರಿತು ಆಳವಾದ ಅಧ್ಯಯನ ಮಾಡಿದ್ದ ಅವರು ಸೂಕ್ಷ್ಮವಾಗಿ ಎಲ್ಲರಿಗೂ ಸರಳವಾಗಿ ಅರ್ಥವಾಗುವಂತೆ ಬರೆಯತ್ತಿದ್ದರು. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಅವರು ಪಡೆದಿದ್ದರು.
ನೆರೆರಾಜ್ಯದಂತೆ ಇಲ್ಲಿ ಕನ್ನಡ ಕಡ್ಡಾಯ ಕಾನೂನು ಜಾರಿ ಆಗಲಿ: ಕಸಾಪ ಪತ್ರ
ಕಾಸರಗೋಡಿನ ಕಾರಡ್ಕದಲ್ಲಿ ಜನಿಸಿದ ಕೆ. ವಿ. ತಿರುಮಲೇಶ್ ತಮ್ಮ ಜೀವಿತದ ಬಹು ಪಾಲನ್ನು ಕರ್ನಾಟಕದ ಹೊರಗೆ ಕಳೆದಿದ್ದಾರೆ. ಆದರೆ ಕನ್ನಡ ಭಾಷೆಯ ಮೇಲೆ ಅವರಿಗೆ ಅಪಾರವಾದ ಪ್ರೀತಿ ಇತ್ತು. ನಮ್ಮ ಕನ್ನಡ, ಸಮೃದ್ಧ ಕನ್ನಡ, ಇನ್ನಷ್ಟು ಕನ್ನಡ ಎಂಬ ಭಾಷಾ ವಿಜ್ಞಾನ ಲೇಖನಗಳನ್ನು ಅವರು ಬರೆದಿದ್ದಾರೆ.
ಡಾ. ಪುರುಷೋತ್ತಮ ಬಿಳಿಮಲೆ ತಮ್ಮ ಫೇಸ್ಬುಕ್ ಪೋಸ್ಟ್ ಮೂಲಕ ಕೆ. ವಿ. ತಿರುಮಲೇಶ್ ನೆನಪು ಹಂಚಿಕೊಂಡಿದ್ದಾರೆ. ಆ ಪೋಸ್ಟ್ನ ವಿವರ ಹೀಗಿದೆ.
ಭಾಷೆಯ ಕುರಿತಾಗಿ ಅತ್ಯಂತ ಸೂಕ್ಷ್ಮವಾಗಿ ಮತ್ತು ನವಿರಾಗಿ ಯೋಚಿಸಿ ಬರೆಯುತ್ತಿದ್ದ ಕೆಲವೇ ಕೆಲವರಲ್ಲಿ ಕೆ.ವಿ.ತಿರುಮಲೇಶ್ ಕೂಡಾ ಒಬ್ಬರು. ಅವರು ಕವಿ, ಕತೆಗಾರ, ಅನುವಾದಕ, ಭಾಷಾ ವಿಜ್ಞಾನಿ, ಮತ್ತು ವಿಮರ್ಶಕ. ಅವರು ಕಾಸರಗೋಡಿನಲ್ಲಿದ್ದಾಗ ನಮಗೆಲ್ಲ ಬಹಳ ಹತ್ತಿರದವರಾಗಿದ್ದರು.
ತಿರುಮಲೇಶ್ ಹುಟ್ಟಿದ ಸ್ಥಳ ಕಾರಡ್ಕ (ಸೆಪ್ಟಂಬರ ೧೨, ೧೯೪೦) . ಇದೇ ಊರಿನಲ್ಲಿ ಹುಟ್ಟಿದ ಇನ್ನೊಬ್ಬ ಕವಿ ವೇಣುಗೋಪಾಲ ಕಾಸರಗೋಡು ಬಹಳ ಬೇಗ ತೀರಿಕೊಂಡರು. ಕಾರಡ್ಕದ ಕಾರಣಿಕ ಪುರುಷರು ಎಂದು ನಾನು ಅವರಿಗೆ ಹೇಳುತ್ತಿದ್ದೆ. ನವ್ಯಸಾಹಿತ್ಯ ಕಾಲದಲ್ಲಿ ಕಾಸರಗೋಡು ಬಹಳ ಕಾರಣಗಳಿಂದ ಸುದ್ದಿಯಲ್ಲಿತ್ತು. ತಿರುಮಲೇಶ್, ವೇಣುಗೋಪಾಲ ಕಾಸರಗೋಡು, ಎಂ. ಗಂಗಾಧರ ಭಟ್, ಯು ಮಹೇಶ್ವರಿ, ಲಲಿತಾ ಎಸ್ ಎನ್ ಭಟ್, ಮೊದಲಾದವರು ನವ್ಯ ಕಾಲಘಟ್ಟದ ದೊಡ್ಡ ಹೆಸರುಗಳು. ಇವರೆಲ್ಲ ಒಟ್ಟು ಸೇರಿ ಒಮ್ಮೆ ʼ ಕಯ್ಯಾರರು ಇನ್ನು ಬರೆಯಬೇಕಾಗಿಲ್ಲʼ ಎಂದು ಘೋಷಿಸಿ ದೊಡ್ಡ ಗುಲ್ಲೆಬ್ಬಿಸಿದ್ದರು.
ಮುಂದೆ ತಿರುಮಲೇಶ್ ಹೈದರಾಬಾದಿನ ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಇಂಗ್ಲೀಷ್ ಅಂಡ್ ಫಾರಿನ್ ಲಾಂಗ್ವೇಜಸ್ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿ ಸೇರಿ ಅಲ್ಲಿಯೇ ನಿವೃತ್ತರಾದರು. ಹೊರನಾಡ ಕನ್ನಡಿಗರಾದ ನಾವು ಆ ಕಾರಣಕ್ಕೇನೇ ಹಲವು ವಿಷಯಗಳ ಬಗ್ಗೆ ಹರಟುತ್ತಿದ್ದೆವು. ಕಳೆದ ಸುಮಾರು ೫೦ ವರ್ಷಗಳಿಂದ ತಿರುಮಲೇಶ್ ಬರೆಯುತ್ತಲೇ ಇದ್ದರು. 'ಮುಖವಾಡಗಳು' ಹಾಗೂ 'ವಠಾರ' ಕವನ ಸಂಕಲನಗಳ ಮೂಲಕ ಅವರು ನವ್ಯ ಕಾಲಘಟ್ಟದಲ್ಲಿ ಜನಪ್ರಿಯರಾದರು. ಅಕ್ಷಯ ಕಾವ್ಯ, ಮಹಾಪ್ರಸ್ಥಾನ, ಅವಧ, ಪಾಪಿಯೂ , ಆರೋಪ, ಮುಸುಗು, ಕಳ್ಳಿಗಿಡದ ಹೂವು, ಸಮ್ಮುಖ, ಕಾವ್ಯಕಾರಣ ಇವರ ಇತರ ಮುಖ್ಯ ಕೃತಿಗಳು. ಕಲಿಗುಲ ಮತ್ತು ಟೈಬೀರಿಯಸ್ ಅವರಿಗೆ ಹೆಸರು ತಂದುಕೊಟ್ಟ ನಾಟಕಗಳು. ಡಾನ್ ಕ್ವಿಕ್ಸಾಟನ ಸಾಹಸಗಳು ಮತ್ತು ಗಂಟೆ ಗೋಪುರ ಅವರ ಒಳ್ಳೆಯ ಅನುವಾದಗಳು.
ಬೇಂದ್ರೆಯವರ ಕಾವ್ಯಶೈಲಿ, ನಮ್ಮ ಕನ್ನಡ, ಮತ್ತು ಅಸ್ತಿತ್ವವಾದ ಇವರ ಮುಖ್ಯ ವಿಮರ್ಶಾ ಕೃತಿಗಳು. ದೊಡ್ಡ ಲೇಖಕನೊಬ್ಬ ತೀರಿಕೊಂಡಾಗ ಸಹಜವಾಗಿ ಒಂದು ಬಗೆಯ ನಿರ್ವಾತ ಉಂಟಾಗುತ್ತದೆ. ಅದನ್ನು ಯಾರಾದರೂ ತುಂಬಿಸುವವರೆಗೆ ನಾವೆಲ್ಲ ಕಾಯಬೇಕಾಗುತ್ತದೆ.