ಕಳಸಾ ಬಂಡೂರಿ: ಜುಲೈ 16ಕ್ಕೆ ಉತ್ತರ ಕರ್ನಾಟಕ ಬಂದ್
ಗದಗ, ಜುಲೈ, 13: ಕಳಸಾ ಬಂಡೂರಿ ಹೋರಾಟ ಒಂದು ವರ್ಷದಿಂದ ನಡೆಯುತ್ತಿದ್ದು ಜುಲೈ 16 ಒಂದು ವರ್ಷ ಪೂರ್ಣಗೊಳ್ಳುತ್ತದೆ ಈ ಪ್ರಯುಕ್ತ ನಾಲ್ಕು ಜಿಲ್ಲೆಗಳನ್ನು ಬಂದ್ ಮಾಡಿ ಪ್ರತಿಭಟಿಸಲಾಗುವುದು ಎಂದು ಕಳಸಾ ಬಂಡೂರಿ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಎಂ. ಸಲೀಂ ಸಂಗನಮಲ್ಲಾ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಸಲೀಂ, ಕಳಸಾ-ಬಂಡೂರಿ ಯೋಜನೆಗೆ ಕೇಂದ್ರ ಹಾಗೂ ರಾಜ್ಯ ಸರಕಾರ ಯಾವುದೇ ತರಹದ ಪರಿಹಾರ ಕಂಡು ಹಿಡಿಯುವಲ್ಲಿ ವಿಫಲವಾಗಿದ್ದು ಧಾರವಾಡ, ಗದಗ, ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆ ಬಂದ್ ಗೆ ಕರೆಕೊಟ್ಟಿದ್ದೇವೆ ಎಂದು ತಿಳಿಸಿದ್ದಾರೆ. [ಬೆಳಗಾವಿ ಸಂಸದರ ಮನೆ ಮುಂದೆ ಪ್ರಾಣ ಬಿಟ್ಟ ಗದಗದ ರೈತ]
ಸರ್ವ ಪಕ್ಷ ಸಭೆಯಲ್ಲಿ ನಾವು ನಿಮ್ಮ ಪರವಾಗಿ ಇದ್ದೇವೆ, ನಿಮ್ಮ ವಿವಾದವನ್ನು ಬೇಗನೆ ಬಗೆಹರಿಸುತ್ತೇವೆ ಎಂದು ಹೋರಾಟಗಾರರಿಗೆ ಹೇಳಲಾಗಿತ್ತು. ಹೋರಾಟಗಾರರಿಗೆ ವಚನ ಕೊಟ್ಟು ಬಿಜೆಪಿ ಹಾಗೂ ಕಾಂಗ್ರೆಸ್ ಮುಖಂಡರು ವಚನ ಭ್ರಷ್ಟರಾಗಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ನೀರಿನ ಹೋರಾಟ ಬಗೆಹರಿದರೆ 1 ಕೋಟಿ 20 ಲಕ್ಷ ಜನರ ಸಮಸ್ಯೆ ಬಗೆಹರಿದಂತಾಗುತ್ತದೆ. ಉತ್ತರ ಕರ್ನಾಟಕದ ಜನ ರಾಜಕಾರಣಿಗಳ ವರ್ತನೆಯಿಂದ ಬೇಸತ್ತು ಹೋಗಿದ್ದಾರೆ. ಕಾಂಗ್ರೆಸ್ ಹಾಗೂ ಬಿಜೆಪಿ ಮುಖಂಡರು ತಕ್ಷಣ ಗೋವಾ ಮುಖ್ಯಮಂತ್ರಿಗೆ ಮನವೊಲಿಸುವಲ್ಲಿ ಮುಂದಾಗಬೇಕು. ಮತ್ತು ಆದಷ್ಟು ಬೇಗನೆ ರೈತ ಸೇನಾ ಕರ್ನಾಟಕ ಹೋರಾಟಗಾರರನ್ನು ಪ್ರಧಾನ ಮಂತ್ರಿ ಮೋದಿಯವರ ಬಳಿ ಮುಂದೆ ಕರೆದುಕೊಂಡು ಹೋಗಿ ಸಮಸ್ಯೆ ಬಗೆಹರಿಸಬೇಕು ಎಂದು ಒತ್ತಾಯ ಮಾಡಿದ್ದಾರೆ.[ಏನಿದು ಕಳಸಾ-ಬಂಡೂರಿ ಯೋಜನೆ?]
ಆದರೆ ಮಹಾದಾಯಿ ಕಳಸಾ-ಬಂಡೂರಿ ಹೋರಾಟದ ಕಿಚ್ಚು ಇನ್ನೂ ಕಡಿಮೆ ಆಗಿಲ್ಲ. ಹೋರಾಟ ಇನ್ನೂ ಉಗ್ರವಾಗಿ ನಡೆಯುವುದು. ನಾಲ್ಕು ಜನ ಹೋರಾಟಗಾರರು ಹುತಾತ್ಮರಾಗಿದ್ದಾರೆ. ಆದರೂ ಸಹ ಕೇಂದ್ರದ ಹಾಗೂ ರಾಜ್ಯ ಸರಕಾರ ಬೇಜವಾಬ್ದಾರಿತನ ತೋರಿಸುತ್ತಾ ಇದೆ. ಅದಕ್ಕೊಸ್ಕರ ಜುಲೈ 16ರಂದು 4 ಜಿಲ್ಲೆ ಸಂಪೂರ್ಣ ಬಂದ್ ಗೆ ಕರೆ ಕೊಡಲಾಗಿದೆ ಎಂದು ಸಲೀಂ ಹೇಳಿದ್ದಾರೆ.
ಹೋರಾಟಗಾರರನ್ನು ಕರೆದುಕೊಂಡು ಜೂಲೈ 4ರ ಒಳಗಡೆ ಪ್ರಧಾನಮಂತ್ರಿ ಮೋದಿಯವರನ್ನು ಭೇಟಿಯಾಗಿ ವಿವಾದ ಬಗೆಹರಿಸಿಕೊಡಬೇಕು. ಇಲ್ಲದಿದ್ದರೆ ಮುಂದಿನ ಹೋರಾಟ ಉಗ್ರ ರೂಪದಲ್ಲಿ ಹಮ್ಮಿಕೊಳ್ಳಲಾಗುವುದು ಎಂದು ಸಲೀಂ ಸಂಗನಮಲ್ಲಾ ಎಚ್ಚರಿಸಿದ್ದಾರೆ.