ಕಲಬುರಗಿ : ಲಂಚ ಪಡೆಯುವಾಗ ಎಸಿಬಿ ಬಲೆಗೆ ಬಿದ್ದ ಅಧಿಕಾರಿ
ಕಲಬುರಗಿ, ಜೂನ್ 28 : ಸಮಾಜ ಕಲ್ಯಾಣ ಇಲಾಖೆಯ ಪ್ರಥಮ ದರ್ಜೆ ಸಹಾಯಕ ಲಂಚ ಪಡೆಯುವ ವೇಳೆ ಎಸಿಬಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಭ್ರಷ್ಟಾಚಾರ ತಡೆ ಕಾಯ್ದೆಯಡಿ ಆರೋಪಿ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ.
ಕಲಬುರಗಿ ಜಿಲ್ಲೆಯ ಚಿತ್ತಾಪುರದ ಸಮಾಜ ಕಲ್ಯಾಣ ಇಲಾಖೆ ಪ್ರಥಮ ದರ್ಜೆ ಸಹಾಯಕ ನರಸಪ್ಪ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಕೈಗೆ ಸಿಕ್ಕಿಬಿದ್ದವರು. 2 ಸಾವಿರ ರೂ. ಲಂಚ ಸ್ವೀಕರಿಸುವಾಗ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು ನರಸಪ್ಪ ಅವರನ್ನು ಬಂಧಿಸಿದ್ದಾರೆ. [ಎಸಿಬಿ ದಾಳಿ : 30 ಸಾವಿರ ಲಂಚ ಪಡೆಯುವಾಗ ಸಿಕ್ಕಿಬಿದ್ದ ಅಧಿಕಾರಿ]

ಚಿತ್ತಾಪೂರ ತಾಲೂಕಿನ ಬಸವನಗರದಲ್ಲಿರುವ ಖಾಸಗಿ ಕಟ್ಟಡದ ಮಾಲೀಕರು ತಮ್ಮ ಕಟ್ಟಡವನ್ನು ಸಮಾಜ ಕಲ್ಯಾಣ ಇಲಾಖೆಗೆ ಬಾಡಿಗೆಗೆ ನೀಡಿದ್ದು, ಪ್ರತಿ ತಿಂಗಳು ಸಮಾಜ ಕಲ್ಯಾಣ ಇಲಾಖೆಯಿಂದ ಬಾಡಿಗೆಯ ಹಣವನ್ನು ಪಡೆಯುತ್ತಿದ್ದಾರೆ. [ಶಿವಮೊಗ್ಗದಲ್ಲಿ ಎಸಿಬಿ ಪೊಲೀಸ್ ಠಾಣೆ ಆರಂಭ]
ಪ್ರತಿ ತಿಂಗಳ ಬಾಡಿಗೆ ಹಣದ ಚೆಕ್ ನೀಡಲು ಪ್ರಥಮ ದರ್ಜೆ ಸಹಾಯಕರಾದ ನರಸಪ್ಪ ಅವರು 2 ಸಾವಿರ ರೂ. ಲಂಚ ಪಡೆಯುತ್ತಿದ್ದರು. ಈ ಕುರಿತು ಬಾಡಿಗೆ ಪಡೆಯುವವರು ಕಲಬುರಗಿ ಜಿಲ್ಲಾ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು. [ಭ್ರಷ್ಟಾಚಾರ ನಿಗ್ರಹ ದಳದ ಯಾವ ಕಚೇರಿ ಎಲ್ಲಿರುತ್ತದೆ?]
ಜೂನ್ 27ರಂದು ದಾಳಿ ನಡೆಸಿದ ಎಸಿಬಿ ಪೊಲೀಸರು ಲಂಚ ಪಡೆಯುವಾಗ ನರಸಪ್ಪ ಅವರನ್ನು ಬಂಧಿಸಿದ್ದಾರೆ.
ಆರೋಪಿ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆ-1988ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿ, ಮುಂದಿನ ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ದೂರು ಕೊಡಿ : ಸರ್ಕಾರಿ ಕಚೇರಿಗಳಲ್ಲಿ ಲಂಚ ಕೇಳಿದರೆ ಸಾರ್ವಜನಿಕರು ಎಸಿಬಿ ಕಚೇರಿಗೆ ದೂರು ನೀಡಿ ಎಂದು ಪ್ರಕಟಣೆಯಲ್ಲಿ ಮನವಿ ಮಾಡಲಾಗಿದೆ. ದೂರು ನೀಡಲು ವಿಳಾಸ ಕೆಳಗಿನಂತಿದೆ.
ಭ್ರಷ್ಟಾಚಾರ ನಿಗ್ರಹ ದಳ
ನೆಲಮಹಡಿ, ಖನಿಜ ಭವನ
ರೇಸ್ ಕೋರ್ಸ್ ರಸ್ತೆ, ಬೆಂಗಳೂರು - 560001
ಭ್ರಷ್ಟಾಚಾರ ನಿಗ್ರಹ ದಳ ಸಹಾಯವಾಣಿ 080 - 22342100.












Click it and Unblock the Notifications