'ಜನಾರ್ದನ ಪೂಜಾರಿ ಯಾರು?' : ಸ್ಪೀಕರ್ ಕಾಗೋಡು ಪ್ರಶ್ನೆ
ಬೆಂಗಳೂರು, ಜ.6 : 'ಜನಾರ್ದನ ಪೂಜಾರಿ ಯಾರು? ಎಂಬುದೇ ಗೊತ್ತಿಲ್ಲ' ಎಂದು ಹೇಳುವ ಮೂಲಕ ವಿಧಾನಸಭೆ ಸ್ಪೀಕರ್ ಕಾಗೋಡು ತಿಮ್ಮಪ್ಪ ಪೂಜಾರಿ ಅವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಾಗೋಡು ತಿಮ್ಮಪ್ಪ ಪ್ರತಿಪಕ್ಷದಂತೆ ವರ್ತಿಸುತ್ತಿದ್ದಾರೆ ಎಂದು ಪೂಜಾರಿ ವಾಗ್ದಾಳಿ ನಡೆಸಿದ್ದರು.
ಮಂಗಳವಾರ ವಿಧಾನಸೌಧದ ತಮ್ಮ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರು, 'ರಾಜಕೀಯ ವ್ಯಾಪಾರವಲ್ಲ, ಸಾಮಾಜಿಕ ಸೇವಾಕ್ಷೇತ್ರ. ಚುನಾವಣೆಯಲ್ಲಿ ನಾನು ಯಾರಿಗೂ ಟೋಪಿ ಹಾಕಲು ಬಂದಿಲ್ಲ. ಭೂ ಹೋರಾಟ ನನ್ನ ಹುಟ್ಟುಗುಣ' ಎಂದು ಹೇಳಿದರು.

'ಸ್ಪೀಕರ್ ಕಾಗೋಡು ತಿಮ್ಮಪ್ಪ ಪ್ರತಿಪಕ್ಷದವರಂತೆ ಸರ್ಕಾರದ ವಿರುದ್ಧ ಟೀಕೆ ಮಾಡುತ್ತಿದ್ದಾರೆ, ಸರ್ಕಾರ ಬೀಳಿಸುತ್ತಾರೆಯೇ?'ಎಂದು ಪೂಜಾರಿ ಸೋಮವಾರ ಪ್ರಶ್ನಿಸಿದ್ದರು. ಇದಕ್ಕೆ ಇಂದು ತಿರುಗೇಟು ನೀಡಿದ ಸ್ಪೀಕರ್, 'ಪೂಜಾರಿ ಯಾರು? ಎಂಬುದೇ ಗೊತ್ತಿಲ್ಲ. ಇಂತಹ ಹೇಳಿಕೆ ನೀಡಲು ಅವರ ಹಿಂದೆ ಯಾರಿದ್ದಾರೆ? ಎಂಬುದು ತಿಳಿದಿಲ್ಲ' ಎಂದರು. [ಸರ್ಕಾರ ಟೀಕಿಸುವ ಕಾಗೋಡು ತಿಮ್ಮಪ್ಪ ವಿರುದ್ಧ ದೆಹಲಿಗೆ ಪತ್ರ!]
'ಜನಾರ್ಧನ ಪೂಜಾರಿ ಅವರು ರಾಜಕೀಯಕ್ಕೆ ಬರುವ ಮುನ್ನ ವಕೀಲರಾಗಿ ಸೇವೆ ಸಲ್ಲಿಸುತ್ತಿದ್ದರು ಎಂದಷ್ಟು ಗೊತ್ತು. ನನ್ನ ವ್ಯಾಪ್ತಿಯಲ್ಲಿ ನಾನು ಮಾತನಾಡುತ್ತೇನೆ. ನನಗೇನು ಭಾಷಣ ಮಾಡುವುದಕ್ಕೆ ಬರುವುದಿಲ್ಲ ಎಂದು ಯಾರೂ ಭಾವಿಸಬಾರದು' ಎಂದು ಪೂಜಾರಿ ಅವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. [ಸಿದ್ದರಾಮಯ್ಯ ಸರ್ಕಾರ ಬಿಜೆಪಿ ಆಡಳಿತದಂತಾಗಿದೆ!]
'ಸರ್ಕಾರದ ಆಡಳಿತ ಪಾರದರ್ಶಕವಾಗಿರಬೇಕು ಎಂಬುದಕ್ಕಾಗಿ ನಾನು ಹೇಳಿಕೆ ನೀಡಿದ್ದೆ. ಇದು ಕೆಲವರಿಗೆ ಹಿಡಿಸುವುದಿಲ್ಲ. ನನ್ನ ಉದ್ದೇಶ ಜನರ ಸಮಸ್ಯೆ ಬಗೆಹರಿಯಬೇಕೆಂಬುದಷ್ಟೆ' ಎಂದು ಸ್ಪೀಕರ್ ಸ್ಪಷ್ಟಪಡಿಸಿದರು.
ಸಿಎಂ ಸಿದ್ದರಾಮಯ್ಯ ಸರ್ಕಾರದ ಕಾರ್ಯವೈಖರಿಯನ್ನು ಹರಿತ ಮಾತುಗಳಲ್ಲಿ ಟೀಕಿಸಿ, ಪ್ರತಿಪಕ್ಷದವರಂತೆ ವರ್ತಿಸುವ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರ ವಿರುದ್ಧ ಹೈಕಮಾಂಡ್ ನಾಯಕರಿಗೆ ದೂರು ನೀಡಲಾಗಿತ್ತು ಮತ್ತು ಜನಾರ್ದನ ಪೂಜಾರಿ ಸ್ಪೀಕರ್ ಹೇಳಿಕೆಗೆ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ್ದರು.












Click it and Unblock the Notifications