'ಸರ್ಕಾರದ ತಪ್ಪಿಗೆ ಜನರನ್ನು ನೇಣಿಗೆ ಹಾಕುವುದು ಸರಿಯಲ್ಲ'
ಬೆಂಗಳೂರು, ಮೇ 11 : ಬೆಂಗಳೂರಿನಲ್ಲಿ ನಡೆಯುತ್ತಿರುವ ಕೆರೆ ಒತ್ತುವರಿ ತೆರವು ಕಾರ್ಯಾಚರಣೆ ಬಗ್ಗೆ ಸ್ಪೀಕರ್ ಕಾಗೋಡು ತಿಮ್ಮಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಾರ್ಯಾಚರಣೆ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆಯುವುದಾಗಿ ಅವರು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಭಾನುವಾರ ಮಾತನಾಡಿದ ಕಾಗೋಡು ತಿಮ್ಮಪ್ಪ ಅವರು, 'ಸರ್ಕಾರದ ತಪ್ಪು ಇಟ್ಟುಕೊಂಡು ಜನರನ್ನು ನೇಣಿಗೆ ಹಾಕುವುದು ಸರಿಯಲ್ಲ, ಸಾಮಾನ್ಯ ಜನರಿಗೂ ಆಕಾಶದ ಮೇಲೆ ಇದ್ದವರಿಗೂ ಒಂದೇ ಕಾನೂನು' ಎಂದು ಆಕ್ರೋಶ ವ್ಯಕ್ತಪಡಿಸಿದರು. [ಬೆಂಗಳೂರಿಗರ ಆತಂಕ ದೂರ ಮಾಡಿದ ಸರ್ಕಾರ]

'ಈ ಪ್ರಕರಣದಲ್ಲಿ ಸರ್ಕಾರ ಮತ್ತು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಕಡೆಯಿಂದಲೂ ತಪ್ಪಾಗಿದೆ. ಪರಿಸ್ಥಿತಿ ಹೀಗಿರುವಾಗ ಜನಸಾಮಾನ್ಯರ ಮನೆಗಳನ್ನು ತೆರವುಗೊಳಿಸಿ ಅವರನ್ನು ಸಂಕಷ್ಟಕ್ಕೆ ದೂಡುವುದು ಎಷ್ಟು ಸರಿ? ಎಂದು ಪ್ರಶ್ನಿಸಿದ ಅವರು, ಈ ಬಗ್ಗೆ ಸಿಎಂಗೆ ಪತ್ರ ಬರೆಯುತ್ತೇನೆ' ಎಂದು ಹೇಳಿದರು. [ಬೆಂಗಳೂರು : ವಾಸದ ಮನೆ ಒತ್ತುವರಿ ತೆರವಿಲ್ಲ]
'ಶಾಸಕರಿಗೆ ಡಾಲರ್ಸ್ ಕಾಲೋನಿಯಲ್ಲಿ ನಿವೇಶನ ನೀಡಲಾಗಿದೆ. ಈ ಬಡಾವಣೆಗೆ ಕೆರೆ ಭೂಮಿಯನ್ನು ಕಾನೂನುಬದ್ಧವಾಗಿಯೇ ನೀಡಲಾಗಿದೆ. ಜನಸಾಮಾನ್ಯರಿಗೊಂದು ಕಾನೂನು, ಆಕಾಶದಿಂದ ಇಳಿದವರಿಗೊಂದು ಕಾನೂನು ಇರುವುದಿಲ್ಲ. ಬಿಡಿಎ ಇಂಥ ವಿಚಾರದಲ್ಲಿ ಸರಿಯಾದ ಹೆಜ್ಜೆ ಇಡಬೇಕು' ಎಂದು ಸ್ಪೀಕರ್ ತಿಳಿಸಿದರು. [ಸಿದ್ದರಾಮಯ್ಯ ಸರ್ಕಾರ ಬಿಜೆಪಿ ಆಡಳಿತದಂತಾಗಿದೆ!]
ಶೀಘ್ರ ವರದಿ ಕೊಡಲು ಸೂಚಿಸುವೆ : 'ಕೆರೆ ಒತ್ತುವರಿ ಪ್ರಕರಣದ ಇತ್ಯರ್ಥ ಸಂಬಂಧ ಸದನ ಸಮಿತಿ ರಚನೆ ಮಾಡಲಾಗಿದೆ. ಆದರೆ, ಇದರ ಉದ್ದೇಶವೇ ಕಾರ್ಯಗತವಾದಂತೆ ಕಾಣುತ್ತಿಲ್ಲ. ಸಮಿತಿ ಅಧ್ಯಕ್ಷರನ್ನು ಕರೆಸಿ ಮಾತುಕತೆ ನಡೆಸಲಾಗುವುದು. ಶೀಘ್ರದಲ್ಲೇ ವರದಿ ಸಲ್ಲಿಸುವಂತೆ ಸೂಚಿಸಲಾಗುವುದು' ಎಂದು ಕಾಗೋಡು ತಿಮ್ಮಪ್ಪ ಹೇಳಿದರು.
ಸ್ಪೀಕರ್ ಸಿಟ್ಟು ಇದೇ ಮೊದಲಲ್ಲ : ಸ್ಪೀಕರ್ ಕಾಗೋಡು ತಿಮ್ಮಪ್ಪ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿರುವುದು ಇದೇ ಮೊದಲಲ್ಲ. ಹಿಂದೆ ಆರೋಗ್ಯ ಇಲಾಖೆಯಲ್ಲಿನ ಖಾಲಿ ಹುದ್ದೆ ಭರ್ತಿಮಾಡಿ ಎಂದು ಸ್ಪೀಕರ್ ಸಚಿವರಿಗೆ ಸೂಚನೆ ಕೊಟ್ಟಿದ್ದರು.
'ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾಂಗ್ರೆಸ್ ಸರ್ಕಾರದ ಆಡಳಿತ ವೈಖರಿ ಹಿಂದಿನ ಬಿಜೆಪಿ ಸರ್ಕಾರದಂತೆಯೇ ಇದೆ. ಜನರಿಗೆ ಕೊಟ್ಟ ಮಾತಿನಂತೆ ಹೊಸ ಸರ್ಕಾರ ನಡೆದುಕೊಳ್ಳತ್ತಿಲ್ಲ" ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.












Click it and Unblock the Notifications