Kabini Dam: ಕಬಿನಿ ಜಲಾಶಯದಲ್ಲಿ ಒಂದೇ ದಿನಕ್ಕೆ ಒಳಹರಿವು ಭಾರೀ ಹೆಚ್ಚಳ, ವಿವರ
ಬೆಂಗಳೂರು, ಜುಲೈ 01: ಮರೆಯಾಗಿದ್ದ ಮುಂಗಾರು ಮಳೆ ಕರ್ನಾಟಕದಲ್ಲಿ ಮತ್ತೆ ಆರ್ಭಟಿಸಲು ಸಜ್ಜಾಗಿದೆ. ಈಗಾಗಲೇ ಕೇರಳ ಭಾಗದಲ್ಲಿ ಅತ್ಯಧಿಕ ಮಳೆ ಬರುತ್ತಿದೆ. ಈ ಕಾರಣದಿಂದಾಗಿ ಕೇರಳದಲ್ಲಿ ಹುಟ್ಟು ಕರ್ನಾಟಕದಲ್ಲಿ ಹರಿಯುವ ಕಪಿಲಾ ನದಿ ನೀರಿನ ಪ್ರಮಾಣದಲ್ಲಿ ಭಾರೀ ಏರಿಕೆ ಆಗಿದೆ. ಹೀಗಾಗಿ ಈ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಕಬಿನಿ ಜಲಾಶಯದ ಒಳಹರಿವು ಹೆಚ್ಚಳವಾಗಿದೆ.
ಕೇರಳದಲ್ಲಿ ಹುಟ್ಟಿ, ಅರಣ್ಯ ಪ್ರದೇಶ, ಕಣಿವೆ ಭಾಗದ ಮೂಲಕ ಹರಿದು ಕರ್ನಾಟಕ ಮೈಸೂರು ಜಿಲ್ಲೆಯ ಕಾವೇರಿ ನದಿ ಸೇರಿವು ಕಪಿಲಾ ನದಿಗೆ ಜಿಲ್ಲೆಯ ಹೆಗ್ಗಡದೇವನಕೋಟೆಯಲ್ಲಿ ಕಬಿನಿ ಜಲಾಶಯ ಕಟ್ಟಲಾಗಿದೆ. ಭಾರೀ ಮಳೆಯಿಂದಾಗಿ ಇಲ್ಲಿ ಅಪಾರ ಪ್ರಮಾಣದ ನೀರು ಸಂಗ್ರಹವಾಗುತ್ತಿದೆ. ಇಂದು ಜುಲೈ 01 ರಂದು ಈ ಜಲಾಶಯದ ಒಳಹರಿವಿನ ಪ್ರಮಾಣ ಏರಿಕೆ ಆಗಿದೆ.

ಸೋಮವಾರದಂದು ಕಬಿನಿ ಜಲಾಶಯದಲ್ಲಿ ಒಳಹರಿವಿನ ಪ್ರಮಾಣ ಬರೋಬ್ಬರಿ 5560 ಕ್ಯೂಸೆಕ್ಸ್ ಇದೆ. ಒಟ್ಟು ಕಬಿನಿ ಜಲಾಶಯದ ಸಾಮರ್ಥ್ಯ 19.52 ಟಿಎಂಸಿ ಇದೆ. ಆಣೆಕಟ್ಟಿನ 2284 ಅಡಿ ನೀರು ಸಂಗ್ರಹದ ಪೈಕಿ ನಿರಂತರ ಮಳೆಯಿಂದಾಗಿ 2277 ಅಡಿಯಷ್ಟು ನೀರು ಸಂಗ್ರಹವಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಮಾಹಿತಿ ನೀಡಿದೆ.
ಆಣೆಕಟ್ಟಿನ ಹೊರ ಹರಿವು 1000 ಕ್ಯೂಸೆಕ್
ಇದರೊಂದಿಗೆ ಕಬಿನಿ ಜಲಾಶಯದಿಂದ ಎಂದಿನಂತೆ ಹೊರ ಹರಿವು 1000 ಕ್ಯೂಸೆಕ್ ಇದ್ದು, ಈವರೆಗಿನ ನೀರಿನ ಸಂಗ್ರಹಣೆ ಪ್ರಮಾಣ ಶೇಕಡಾ 78.69 ರಷ್ಟು ಇದೆ. ಇನ್ನೂ ಈ ಕಬಿನಿ ಜಲಾಶಯದ ಸುತ್ತಮುತ್ತ ಕಳೆದ 24 ಗಂಟೆಗಳಲ್ಲಿ 15 ಮಿಲಿ ಮೀಟರ್ ಮಳೆ ದಾಖಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕೇರಳ ಕರ್ನಾಟಕ ಗಡಿಯಲ್ಲಿ ಮಳೆ ಮುಂದುವರಿದಿದೆ. ಕರ್ನಾಟಕದ ಮಲೆನಾಡು, ಕರಾವಳಿಯಲ್ಲಿ ಇನ್ನಷ್ಟು ದಿವಸ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಇದೆಲ್ಲ ನೋಡಿದರೆ ಕಪಿಲಾ ನದಿ ವ್ಯಾಪ್ತಿಯಲ್ಲಿ ನೀರಿನ ಸಂಗ್ರಹಣೆ ಹಾಗೂ ಒಳಹರಿವಿನ ಪ್ರಮಾಣ ಇನ್ನಷ್ಟು ಹೆಚ್ಚಾಗಲಿದೆ ಎಂದು ಊಹಿಸಲಾಗಿದೆ.
ಮೈಸೂರು, ಇತರ ಜಿಲ್ಲೆಗಳಿಗೆ ಭಾರಿ ಮಳೆ
ಮೈಸೂರಿನ ಉತ್ತರ ಭಾಗದಲ್ಲಿ ಶನಿವಾರದಿಂದ ಭಾನುವಾರ ರಾತ್ರಿವರೆಗೆ ಭಾರೀ ಮಳೆ ಆಗಿದೆ. ಬಿರುಗಾಳಿ ಸಹಿತ ಮಳೆ ಆಗಿದೆ. ಮೈಸೂರು ಮಾತ್ರವಲ್ಲದೇ, ಕೊಡಗು, ಮಡಿಕೇರಿ, ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಹೊನ್ನಾವರ, ಧರ್ಮಸ್ಥಳ, ಮಂಗಳೂರು ಇನ್ನಿತರ ಭಾಗದಲ್ಲಿ ಅತ್ಯಧಿಕ ಮಳೆ ಆಗಿದೆ.
ಮಲೆನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ಸಕಲೇಶಪುರ, ಮೈಸೂರು, ಕೊಡಗಿನ ಭಾಗದಲ್ಲೂ ಅತ್ಯಧಿಕ ಮಳೆ ಮುನ್ಸೂಚನೆ ನೀಡಲಾಗಿದೆ. ಮುಂದಿನ ಕೆಲವು ದಿನಗಳಲ್ಲಿ ರಾಜ್ಯಾದ್ಯಂತ ಮುಂಗಾರು ಆರ್ಭಟಿಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.












Click it and Unblock the Notifications