ಅಕ್ಷಯ ಪಾತ್ರ ಫೌಂಡೇಷನ್ ಕಾರ್ಯಕ್ರಮಕ್ಕೆ ಅಣ್ಣಮಲೈ ರಾಯಭಾರಿ
ಬೆಂಗಳೂರು, ಜನವರಿ 16 : ಅಕ್ಷಯ ಪಾತ್ರ ಫೌಂಡೇಷನ್ ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈರನ್ನು ರಾಯಭಾರಿಯಾಗಿ ನಿಯೋಜನೆ ಮಾಡಿದೆ. ರಾಯಭಾರಿಯಾಗಿ ನೇಮಕವಾಗಿರುವುದನ್ನು ಅವರು ಸಹ ಖಚಿತಪಡಿಸಿದ್ದಾರೆ.
ಶಾಲೆಗಳ ಪುನಶ್ಚೇತನ, ವಿದ್ಯಾರ್ಥಿಗಳಿಗೆ ಪ್ರೋತ್ಸಾಹ, ಪ್ರತಿಭಾನ್ವೇಷಣೆ ಮುಂತಾದ ಚಟುವಟಿಕೆಗಳಿಗಾಗಿ 'ನೆಸ್ಟ್' ಎಂಬ ಕಾರ್ಯಕ್ರಮವನ್ನು ಅಕ್ಷಯ ಪಾತ್ರ ಫೌಂಡೇಷನ್ ಜಾರಿಗೆ ತರುತ್ತಿದೆ. ಈ ಕಾರ್ಯಕ್ರಮಕ್ಕೆ ಅಣ್ಣಾಮಲೈ ರಾಯಭಾರಿಯಾಗಿದ್ದಾರೆ.
ಅಕ್ಷಯ ಪಾತ್ರ ಫೌಂಡೇಷನ್ ಉಪಾಧ್ಯಕ್ಷ ಚಂಚಲಪತಿ ದಾಸ್, "ಮಕ್ಕಳು ತಮ್ಮ ಕನಸನ್ನು ನನಸಾಗಿಸಿಕೊಳ್ಳುವ ಈ ಕಾರ್ಯಕ್ರಮಕ್ಕೆ ಯುವ ನಾಯಕರೊಬ್ಬರು ರಾಯಭಾರಿಯಾಗಿರುವುದು ಸಂತಸ ತಂದಿದೆ" ಎಂದರು.

ಅಣ್ಣಾಮಲೈ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, "ಈ ಕಾರ್ಯಕ್ರಮದಲ್ಲಿ ರಾಯಭಾರಿಯಾಗಿ ಪಾಲ್ಗೊಳ್ಳುವುದು ನನಗೆ ಗೌರವ ತಂದಿದೆ. ಶಾಲೆಗಳಲ್ಲಿ ಮಕ್ಕಳ ಹಿನ್ನಲೆಯನ್ನು ಪರಿಗಣಿಸದೆ ಅವರಿಗೆ ಪ್ರೋತ್ಸಾಹ ನೀಡುವ ಕಾರ್ಯಕ್ರಮಕ್ಕೆ ಸಹಕಾರ ನೀಡಲಿದ್ದೇನೆ" ಎಂದು ಹೇಳಿದ್ದಾರೆ.
2011ರ ಕರ್ನಾಟಕ ಬ್ಯಾಚ್ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿಯಾಗಿದ್ದರು. 2019ರ ಮೇ 28ರಂದು ಅವರು ರಾಜೀನಾಮೆ ನೀಡಿದ್ದರು. ಅಕ್ಟೋಬರ್ನಲ್ಲಿ ರಾಜೀನಾಮೆ ಅಂಗೀಕಾರವಾಗಿತ್ತು.
'ಕರ್ನಾಟಕದ ಸಿಂಗಂ' ಎಂದು ಖ್ಯಾತಿ ಪಡೆದಿದ್ದ ಅಣ್ಣಾಮಲೈ ಹಲವಾರು ಯುವಕರಿಗೆ ಸ್ಫೂರ್ತಿ. ತಮಿಳುನಾಡು ಮೂಲದ ಅಣ್ಣಾಮಲೈ ರಾಜಕೀಯಕ್ಕೆ ಧುಮುಕಲಿದ್ದಾರೆ ಎಂಬ ಸುದ್ದಿಗಳು ಹಬ್ಬಿವೆ.












Click it and Unblock the Notifications