ನಾಗಮಂಡಲ ಖ್ಯಾತಿಯ ಗೋಪಾಲ ವಾಜಪೇಯಿ ನಿಧನ
ಬೆಂಗಳೂರು, ಸೆಪ್ಟೆಂಬರ್ 21: ಸಾಹಿತಿ ಗೋಪಾಲ ವಾಜಪೇಯಿ ಮಂಗಳವಾರ ರಾತ್ರಿ ಖಾಸಗಿ ಆಸ್ಪತ್ರೆಯೊಂದರಲ್ಲಿ ನಿಧನರಾಗಿದ್ದಾರೆ. ಅವರಿಗೆ 64 ವರ್ಷ ವಯಸ್ಸಾಗಿತ್ತು. ಬೆಂಗಳೂರಿನ ಉತ್ತರಹಳ್ಳಿಯಲ್ಲಿದ್ದ ಅವರಿಗೆ ಪತ್ನಿ ಮತ್ತು ಇಬ್ಬರು ಮಕ್ಕಳಿದ್ದಾರೆ.
ಸಂಯುಕ್ತ ಕರ್ನಾಟಕ, ಕಸ್ತೂರಿ, ಕರ್ಮವೀರದಲ್ಲಿ ಗೋಪಾಲ ವಾಜಪೇಯಿ ಅವರು ಕಾರ್ಯ ನಿರ್ವಹಿಸಿದ್ದರು. ಹುಬ್ಬಳ್ಳಿಯಲ್ಲಿ 'ಅಭಿನಯ ಭಾರತಿ' ಹೆಸರಿನಲ್ಲಿ ಕಲಾ ತಂಡವೊಂದನ್ನು ಅವರು ಕಟ್ಟಿದ್ದರು. ದೊಡ್ಡಪ್ಪ ಎಂಬುದು ವಾಜಪೇಯಿ ಅವರ ಖ್ಯಾತಿ ಪಡೆದ ನಾಟಕ.[ನಾಗಮಂಡಲಕ್ಕಾಗಿ ಯಾಜ್ಞಿಕ್ ಆದ ಗೋಪಾಲ ವಾಜಪೇಯಿ]
ನಟ ಶಂಕರನಾಗ್, ಸಿ.ಅಶ್ವತ್ಥ್, ಗಿರೀಶ್ ಕಾರ್ನಾಡ್ ಅವರ ಒಡನಾಡಿಯಾಗಿದ್ದ ಗೋಪಾಲ ವಾಜಪೇಯಿ, ನಾಗಮಂಡಲ, ಸಂತ ಶಿಶುನಾಳ ಶರೀಫ, ಸಂತೆಯಲ್ಲಿ ನಿಂತ ಕಬೀರ ಸಿನಿಮಾಗಳಿಗೆ ಗೀತ ರಚನೆ ಮಾಡಿದ್ದರು. ಇತ್ತೀಚೆಗೆ ಬಿಡುಗಡೆಯಾದ, ಶಿವರಾಜ ಕುಮಾರ್ ಅಭಿನಯದ ಸಂತೆಯಲ್ಲಿ ನಿಂತ ಕಬೀರದಲ್ಲಿನ ಗೀತೆಗಳು ಅವರ ಹಿಂದಿನ ಚಿತ್ರಗೀತೆಗಳಂತೆಯೇ ಜನಮೆಚ್ಚುಗೆಗೆ ಪಾತ್ರವಾಗಿದ್ದವು.
ಸೂಪರ್ ನೋವಾ ಎಂಬ ಮಕ್ಕಳ ಚಿತ್ರದಲ್ಲಿ ಚಿನ್ನವನ್ನು ತಯಾರಿಸಲು ಪ್ರಯತ್ನಿಸುವ ಅಕ್ಕಸಾಲಿಗನ ಪಾತ್ರ ನಿರ್ವಹಿದ್ದರು ಗೋಪಾಲ ವಾಜಪೇಯಿ. ಮೃತರ ಅಂತ್ಯಕ್ರಿಯೆ ಗುರುವಾರ ಮಧ್ಯಾಹ್ನ ಬೆಂಗಳೂರಿನಲ್ಲಿ ನಡೆಯುತ್ತದೆ ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ. ಸಂಪರ್ಕಕ್ಕೆ ಮೊಬೈಲ್ ಸಂಖ್ಯೆ 9060644145