ದಂಡ ವಸೂಲಿ ಮಾಡುವುದಿಲ್ಲ ಎಂಬ ಸುದ್ದಿ ಸುಳ್ಳು ಎಂದಿದ್ದಾಕೆ ರವಿಕಾಂತೇಗೌಡ?
ಬೆಂಗಳೂರು, ಆಗಸ್ಟ್ 10: ಬೆಂಗಳೂರಿನಲ್ಲಿ ಸಂಚಾರ ನಿಯಮ ಉಲ್ಲಂಘನೆ ಮಾಡಿದವರಿಗೆ ದಂಡ ವಿಧಿಸದಂತೆ ಪಿ.ಡಿ.ಎ ಮಷಿನ್ಗಳನ್ನು ಹಿರಿಯ ಅಧಿಕಾರಿಗಳು ವಾಪಸು ಪಡೆದಿದ್ದಾರೆ ಎಂಬುದು ಸುಳ್ಳು ಎಂದು ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಬಿ.ಆರ್. ರವಿಕಾಂತೇಗೌಡ ಸ್ಪಷ್ಟನೆ ನೀಡಿದ್ದಾರೆ.
ರಾಜ್ಯದಲ್ಲಿ ನೂತನ ಗೃಹ ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಕೂಡಲೇ ಸಂಚಾರ ನಿಯಮ ಉಲ್ಲಂಘನೆ ಹೆಸರಿನಲ್ಲಿ ಸಂಚಾರ ಪೊಲೀಸರು ಮಾಡುತ್ತಿದ್ದ ಸುಲಿಗೆ ನಿಲ್ಲಿಸಿದ್ದಾರೆ. ಗೃಹ ಸಚಿವರ ಆದೇಶದ ಮೇರೆಗೆ ಬೆಂಗಳೂರಿನಲ್ಲಿ ಸಂಚಾರ ನಿಯಮ ಉಲ್ಲಂಘನೆ ಮಾಡಿದವರಿಗೆ ದಂಡ ವಿಧಿಸುತ್ತಿಲ್ಲ. ದಂಡ ವಿಧಿಸುವ ಪಿಡಿಎ ಯಂತ್ರಗಳನ್ನು ಹಿರಿಯ ಸಂಚಾರ ವಿಭಾಗದ ಪೊಲೀಸ್ ಅಧಿಕಾರಿಗಳು ವಾಪಸು ಪಡೆದಿದ್ದಾರೆ ಎಂಬ ಸಂಗತಿ ದೊಡ್ಡ ಸುದ್ದಿಯಾಗಿತ್ತು. ಕೆಲವು ಮಾಧ್ಯಮಗಳು ದೊಡ್ಡ ಮಟ್ಟದಲ್ಲಿ ಸುದ್ದಿಯನ್ನು ಬಿತ್ತರಿಸಿದ್ದವು. ನೂತನ ಗೃಹ ಸಚಿವರ ಹೆಸರಿನಲ್ಲಿಹರಿಬಿಟ್ಟ ಈ ಸುದ್ದಿ ಸಾಮಾಜಿಕ ಜಾಲ ತಾಣದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ನಾಂದಿ ಹಾಡಿತ್ತು.
ಈ ಕುರಿತು ಸ್ಪಷ್ಟನೆ ನೀಡಿರುವ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಬಿ.ಆರ್. ರವಿಕಾಂತೇಗೌಡ, "ಸಂಚಾರ ನಿಯಮಗಳನ್ನು ಜಾರಿಗೊಳಿಸಲು ಉಪಯೋಗಿಸುವ ಪಿ.ಡಿ.ಎ ಯಂತ್ರಗಳನ್ನು ಕೆಲವು ಹಿರಿಯ ಪೊಲೀಸ್ ಅಧಿಕಾರಿಗಳು ಸಂಚಾರ ಪೊಲೀಸರಿಂದ ವಾಪಸು ಪಡೆದಿದ್ದಾರೆ. ಸಂಚಾರ ನಿಯಮ ಉಲ್ಲಂಘನೆ ಮಾಡಿದವರ ಮೇಲೆ ಯಾವುದೇ ಪ್ರಕರಣ ದಾಖಲಿಸದಂತೆ ಹಿರಿಯ ಅಧಿಕಾರಿಗಳು ಆದೇಶ ಮಾಡಿದ್ದಾರೆ ಎಂಬುದರ ಬಗ್ಗೆ ಹಲವು ಸುದ್ದಿ ಮಾಧ್ಯಮಗಳು ಸುದ್ದಿ ಪ್ರಕಟಿಸಿವೆ.

ವಾಸ್ತವದಲ್ಲಿ ಇಂಥ ಯಾವುದೇ ಸೂಚನೆ ನೀಡಿರುವುದಿಲ್ಲ. ಸಂಚಾರ ಪೊಲೀಸರಿಂದ ಪಿ.ಡಿ.ಎ. ಯಂತ್ರಗಳನ್ನು ವಾಪಸು ಪಡೆದಿಲ್ಲ. ಜಂಟಿ ಪೊಲೀಸ್ ಆಯುಕ್ತರು ಪಿಡಿಎ ವಾಪಸು ಪಡೆಯವ ಬಗ್ಗೆ ಹೇಳಿಕೆ ನೀಡಿರುತ್ತಾರೆ ಎಂಬುದು ಸತ್ಯಕ್ಕೆ ದೂರವಾಗಿದೆ. ಈ ವಿಚಾರವಾಗಿ ಯಾವುದೇ ಪ್ರತಿನಿಧಿಯೂ ಜಂಟಿ ಪೊಲೀಸ್ ಆಯುಕ್ತರನ್ನು ಸಂಪರ್ಕಿಸಿರುವುದಿಲ್ಲ. ಸಂಚಾರ ನಿಯಮ ಉಲ್ಲಂಘನೆ ಮಾಡಿದವರ ಮೇಲೆ ಕೇಸು ದಾಖಲಿಸಿ ದಂಡ ವಸೂಲಿ ಮಾಡಬಾರದು ಎಂಬ ಆದೇಶ ಮಾಡಲಾಗಿದೆ ಎಂಬುದು ಶುದ್ಧ ಸುಳ್ಳು" ಎಂದು ಸ್ಪಷ್ಟ ಪಡಿಸಿದ್ದಾರೆ.
ಯಾಕೆ ಉದ್ಭವಿಸಿತು ಗೊಂದಲ?: ನೂತನ ಗೃಹ ಸಚಿವರಾಗಿ ಅರಗ ಜ್ಞಾನೇಂದ್ರ ಅವರು ಅಧಿಕಾರ ವಹಿಸಿಕೊಂಡ ಕೂಡಲೇ ಕೆಲವು ಜನಪರ ಹಾಗು ಪೊಲೀಸ್ ಕಲ್ಯಾಣ ಕುರಿತ ವಿಚಾರಗಳನ್ನು ಪ್ರಸ್ತಾಪಿಸಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದರು. ತುಮಕೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ ಪೊಲೀಸರ ಕಲ್ಯಾಣಕ್ಕಾಗಿ ಔರಾದ್ಕರ್ ವರದಿಯನ್ನು ಜಾರಿ ಮಾಡಲಾಗುವುದು ಎಂದು ಹೇಳಿಕೆ ನೀಡಿದ್ದರು. ಇದಾಗಿ ಬೆಂಗಳೂರಿನಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಜತೆ ಸಭೆ ನಡೆಸಿ ಚರ್ಚೆ ನಡೆಸಿದ್ದರು.

ಬೆಂಗಳೂರಿನಲ್ಲಿ ಕಾನೂನು ಸುವ್ಯವಸ್ಥೆ ಪಾಲನೆ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಪಾಲನೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದರು. ಪೊಲೀಸ್ ಇಲಾಖೆಯಲ್ಲಿ ತಂತ್ರಜ್ಞಾನ ಅಳವಡಿಕೆ, ಅನುದಾನ ಕುರಿತು ಚರ್ಚೆ ಮಾಡಿದ್ದಾಗಿ ಸ್ಪಷ್ಟಪಡಿಸಿದ್ದರು. ಸಚಿವ ಕೆ.ಎಸ್.ಈಶ್ವರಪ್ಪ ಅವರ ವಿವಾದಾತ್ಮಕ ಹೇಳಿಕೆ ಬಗ್ಗೆ ಗೃಹ ಸಚಿವರನ್ನು ಕಾಲುಎಳೆಯುವ ಪ್ರಯತ್ನ ಮಾಡಲಾಯಿತಾದರೂ ಆರಗ ಜ್ಞಾನೇಂದ್ರ ಚಾಣಾಕ್ಷತೆಯಿಂದ ಹೇಳಿಕೆ ನೀಡಿ ತಪ್ಪಿಸಿಕೊಂಡಿದ್ದರು. ಗೃಹ ಸಚಿವರ ಈ ಹೇಳಿಕೆ ಕೂಡ ದೊಡ್ಡ ಮಟ್ಟದಲ್ಲಿ ಸುದ್ದಿ ಆಯಿತು. ಆನಂತರ ಪ್ರಸಾರ ವಾಗಿದ್ದೇ ಪಿಡಿಎ ಯಂತ್ರಗಳ ವಾಪಸು ಸುದ್ದಿ.

ವಿವಾದಕ್ಕೆ ನಾಂದಿ ಆಯ್ತು
ಸಂಚಾರದ ಹೆಸರಿನಲ್ಲಿ ವಸೂಲಿ ಮಾಡುವ ಸಂಚಾರ ಪೊಲೀಸರಿಗೆ ಆರಂಭದಲ್ಲಿಯೇ ಬಿಸಿ ಮುಟ್ಟಿಸಿದ್ದಾರೆ. ಸಂಚಾರ ನಿಯಮ ಉಲ್ಲಂಘನೆ ಮಾಡಿವರನ್ನು ರಸ್ತೆ ಬದಿ ನಿಲ್ಲಿಸಿ ದಂಡ ಹಾಕಬಾರದು ಎಂದು ಗೃಹ ಸಚಿವರು ತಿಳಿಸಿದ್ದಾರೆ. ಗೃಹ ಸಚಿವರ ಆದೇಶದ ಹಿನ್ನೆಲೆಯಲ್ಲಿ ಸಂಚಾರ ನಿಯಮ ಜಾರಿಗಾಗಿ ಪೊಲೀಸರಿಗೆ ನೀಡಿರುವ ಪಿಡಿಎ ಯಂತ್ರಗಳನ್ನು ಹಿರಿಯ ಪೊಲೀಸ್ ಅಧಿಕಾರಿಗಳು ವಾಪಸು ಪಡೆದಿದ್ದಾರೆ ಎಂಬ ಸುದ್ದಿ ಕೆಲವು ಸಂಸ್ಥೆಗಳಲ್ಲಿ ಪ್ರಕಟವಾಗಿದ್ದೇ ಇದೀಗ ಸಂಚಾರ ಪೊಲೀಸರು ತಲೆ ಬಿಸಿ ಮಾಡಿಕೊಂಡಿದ್ದಾರೆ.

Recommended Video
ರಾಜ್ಯದಲ್ಲಿ ಸಂಚಾರ ನಿಯಮ ಉಲ್ಲಂಘನೆ ಮಾಡಿದವರನ್ನು ನಿಲ್ಲಿಸಬೇಡ ಎಂದು ಗೃಹ ಸಚಿವರೇ ಹೇಳಿದ ಮೇಲೆ ದಂಡ ಯಾಕೆ ಎಂದು ಪ್ರಶ್ನೆ ಮಾಡುವಂತಾಗಿದೆ. ಅದರಲ್ಲೂ ಸಾಮಾಜಿಕ ಜಾಲ ತಾಣದಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆಗೆ ನಾಂದಿ ಹಾಡಿದೆ. ವಾಸ್ತವದಲ್ಲಿ ಅರಗ ಜ್ಞಾನೇಂದ್ರ ಹೆಸರಿನಲ್ಲಿ ಈ ಸುದ್ದಿಯನ್ನು ಹುಟ್ಟು ಹಾಕಿದ್ದು ಯಾರು? ಇದರ ಹಿಂದಿರುವ ಉದ್ದೇಶ ಏನು? ಎಂಬುದು ಮಾತ್ರ ನಿಗೂಢ. ಈ ಕುರಿತು ಇದೀಗ ಗೃಹ ಸಚಿವರೇ ಸ್ಪಷ್ಟನೆ ನೀಡುವ ಅನಿವಾರ್ಯತೆ ಎದುರಾಗಿದೆ.












Click it and Unblock the Notifications