Siddeshwara Swamiji: ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಶ್ರೀ ಲಿಂಗೈಕ್ಯ
ವಿಜಯಪುರ, ಜ. 02: ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಶ್ರೀಗಳು (81) ಲಿಂಗೈಕ್ಯರಾಗಿದ್ದಾರೆ. ಶ್ರೀಗಳ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಭಕ್ತರ ಆಕ್ರಂದನ ಮುಗಿಲು ಮುಟ್ಟಿದೆ. ಮಠದತ್ತ ಭಕ್ತರು ಧಾವಿಸುತ್ತಿದ್ದು, ಪೊಲೀಸರು ಮಠದ ಸುತ್ತ ಮುತ್ತ ಹೆಚ್ಚಿನ ಭದ್ರತೆ ಒದಗಿಸಿದ್ದಾರೆ.
ಕಳೆದ 5 ದಿನಗಳಿಂದ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರಿಗಳಿಗೆ ಮಠದಲ್ಲಿ ಚಿಕಿತ್ಸೆ ನಡೆಯುತ್ತಿತ್ತು. ವೈಕುಂಠ ಏಕಾದಶಿಯ ದಿನವೇ ಶ್ರಿಗಳು ಇಹಲೋಕ ತ್ಯಜಿಸಿದ್ದಾರೆ. ಇಂದು ಸಂಜೆ 6 ಗಂಟೆಗೆ ನಿಧನರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಮಾಹಿತಿ ನೀಡಿದರು.
ಸಿದ್ದೇಶ್ವರ ಶ್ರೀಗಳು ತನ್ನ ಮರಣ ಯಾವ ರೀತಿ ಇರುತ್ತೆ ಎಂದು 2014ರಲ್ಲೇ ಹೇಳಿದ್ದರು. ನಡೆದಾಡುವ ದೇವರು ಎಂದೇ ಕರೆಯಲ್ಪಡುವ ಶ್ರೀಗಳು ನನ್ನನ್ನು ಹೂಳಬೇಡಿ, ಸುಡಬೇಕು ಎಂದು ತನ್ನ ಭಕ್ತರಿಗೆ ಸೂಚನೆ ನೀಡಿದ್ದರು.

ವೈಕುಂಠ ಏಕಾದಶಿಯ ಪುಣ್ಯದಿನದಂದು ಶ್ರೀಗಳ ಲಿಂಗೈಕ್ಯರಾಗಿದ್ದು, ಮಂಗಳವಾರ ಬೆಳಗ್ಗಿನ ಜಾವದಿಂದ ಶ್ರೀಗಳ ಪಾರ್ಥಿವ ಶರೀರದ ಅಂತಿಮಯಾತ್ರೆ ನಡೆಯಲಿದೆ.
ಉತ್ತರ ಕರ್ನಾಟಕದಲ್ಲಿ ನಡೆದಾಡುವ ದೇವರಾಗಿರುವ ಸಿದ್ದೇಶ್ವರ ಸ್ವಾಮೀಜಿಗಳ ಆರೋಗ್ಯ ಕಳೆದೆರಡು ದಿನ ಚೇತರಿಕೆ ಕಂಡಿತ್ತು, ಆದರೆ, ಮಂಗಳವಾರ ಆರೋಗ್ಯದಲ್ಲಿ ತೀವ್ರ ಏರುಪೇರಾಗಿತ್ತು.
ಶ್ರೀಗಳ ಆರೋಗ್ಯದಲ್ಲಿ ತೀವ್ರ ಏರುಪೇರು ಕಂಡುಬರುತ್ತಿದೆ. ಶ್ರೀಗಳ ಉಸಿರಾಟ ಹಾಗೂ ನಾಡಿಮಿಡಿತ ಕ್ಷಣಕ್ಷಣಕ್ಕೂ ಕುಸಿಯುತ್ತಿದೆ ಎಂದು ಆಸ್ಪತ್ರೆಯ ವೈದ್ಯರು ಮಂಗಳವಾರ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದರು.
ಶ್ರೀಗಳ ಅಗಲಿಕೆಗೆ ಇಡೀ ರಾಜ್ಯವೇ ದುಖಃದ ಮಡಿಲಲ್ಲಿದೆ. ಮಠದ ಆವರಣದಲ್ಲಿ ಭಕ್ತರ ಆಕ್ರಂದನ ಮುಗಿಲು ಮುಟ್ಟಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.
ವಿಜಯಪುರದ ಜ್ಞಾನಯೋಗಾಶ್ರಮಕ್ಕೆ ಭಕ್ತರು, ಹಲವಾರು ಗಣ್ಯರು ಭೇಟಿ ನೀಡಿ, ಸಿದ್ದೇಶ್ವರ ಶ್ರೀಗಳು ಬೇಗ ಗುಣಮುಖರಾಗಲಿ ಎಂದು ಹಾರೈಸಿದ್ದರು. ಆದರೆ, ಅವರ ಪ್ರಾರ್ಥನೆ ಫಲ ನೀಡಲಿಲ್ಲ.












Click it and Unblock the Notifications