ದೇವೇಗೌಡರಿಂದಲೇ ಜೆಡಿಎಸ್ ಪಕ್ಷ ನಾಶ, ಸಿದ್ದು ಭವಿಷ್ಯ
ಮೈಸೂರು, ಜೂನ್ 04 : ಜೆಡಿಎಸ್ ಮುಗಿಸುವ ಅಗತ್ಯತೆ ಕಾಂಗ್ರೆಸ್ಗಿಲ್ಲ. ಸ್ಟಿಂಗ್ ಆಪರೇಷನ್ಗೆ ಸಂಬಂಧಿಸಿದಂತೆ ಸನ್ಮಾನ್ಯ ದೇವೇಗೌಡರು ಬೇಜವಾಬ್ದಾರಿಯ ಹೇಳಿಕೆ ನೀಡುತ್ತಿದ್ದು, ಅವರಿಂದಲೇ ಆ ಪಕ್ಷ ನಿರ್ನಾಮವಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭವಿಷ್ಯ ನುಡಿದಿದ್ದಾರೆ.
ನಾಲ್ವಡಿ ಕೃಷ್ಣರಾಜ ವೊಡೆಯರ್ ಜಯಂತಿ ಮತ್ತಿತರ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಶನಿವಾರ ಮೈಸೂರಿಗೆ ಆಗಮಿಸಿದ ವೇಳೆ ಲಲಿತ್ ಮಹಲ್ ಹೆಲಿಪ್ಯಾಡ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸ್ಟಿಂಗ್ ಆಪರೇಷನ್ ಬಗ್ಗೆ ಮಾಜಿ ಪ್ರದಾನಿ ಎಚ್.ಡಿ.ದೇವೇಗೌಡ ಅವರು ಬೇಜವಾಬ್ದಾರಿತನದಿಂದ ಮಾತನಾಡಿದ್ದಾರೆ ಎಂದು ಅವರ ವಿರುದ್ಧ ಹರಿಹಾಯ್ದರು. [ವೋಟಿಗಾಗಿ ನೋಟು: ಯಾರು, ಏನು ಹೇಳಿದರು?]
ಸ್ಟಿಂಗ್ ಆಪರೇಷನ್ ನಡೆಸಿರುವುದು ಇಂಡಿಯಾ ಟುಡೇ ಮತ್ತು ನ್ಯಾಷನಲ್ ಚಾನಲ್ಗಳು ಮಾತ್ರ. ಇದರಲ್ಲಿ ಕಾಂಗ್ರೆಸ್ ಕೈವಾಡವಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಜೆಡಿಎಸ್ ಮುಗಿಸಲು ಕಾಂಗ್ರೆಸ್ ಪಕ್ಷದ ಅವಶ್ಯಕತೆ ಬೇಕಾಗಿಲ್ಲ. ಆ ಪಕ್ಷದ ಪಾಪದಿಂದ ಜೆಡಿಎಸ್ ಪಕ್ಷವೇ ನಿರ್ನಾಮವಾಗುತ್ತದೆ. ಕಾಂಗ್ರೆಸ್ ಪಕ್ಷ ಯಾವತ್ತೂ ಆಮಿಷ ಒಡ್ಡುವ ಕೆಲಸ ಮಾಡುವುದಿಲ್ಲ. ಇದು ಏನಿದ್ದರೂ ದೇವೇಗೌಡ ಕುಟುಂಬದ ಕೆಲಸ ಎಂದು ಛೇಡಿಸಿದರು.
ಜೆಡಿಎಸ್ನ ಚೆಲುವರಾಯಸ್ವಾಮಿ ಡಿ.ಕೆ. ಶಿವಕುಮಾರ್ ಜೊತೆ ಮತ ಯಾಚಿಸುತ್ತಿದ್ದಾರಲ್ಲ ಎಂಬ ಪ್ರಶ್ನೆಗೆ, ಉತ್ತರಿಸಿದ ಮುಖ್ಯಮಂತ್ರಿಗಳು, ರಾಜ್ಯಸಭೆ ಚುನಾವಣೆಗೆ ಮತ ಕೇಳುವ ಹಕ್ಕು ಎಲ್ಲರಿಗೂ ಇದೆ. ಈ ಚುನಾವಣೆಯಲ್ಲಿ ಮತ ಹಾಕುವಾಗ ತೋರಿಸಿ ಹಾಕುವ ಸಂಪ್ರದಾಯವಿದೆ. ಅವರಿಬ್ಬರಲ್ಲಿ ಸ್ನೇಹವಿದೆಯೇ ಹೊರತು ಬೇರೆ ತಂತ್ರಗಾರಿಕೆ ಏನೂ ಇಲ್ಲ. ಸಾಮಾನ್ಯವಾಗಿ ಡಿಕೆಶಿ ಅವರು ಚೆಲುವರಾಯಸ್ವಾಮಿ ಅವರಲ್ಲಿ ಮತ ಯಾಚಿಸುವುದು ತಪ್ಪೇನಿಲ್ಲ ಎಂದು ಸಮರ್ಥಿಸಿಕೊಂಡರು. [ಪಾಟೀಲರ ಬಾಯಲ್ಲಿ ಇದೆಂಥ ಅವಾಚ್ಯ ಶಬ್ದ, ಶಿವಶಿವ!]
ರಾಜ್ಯದ ಪೊಲೀಸರು ಶಿಸ್ತಿನ ಸಿಪಾಯಿಗಳು. ತಮ್ಮ ಶಿಸ್ತನ್ನು ಕಾಪಾಡಿಕೊಂಡಿದ್ದಾರೆ. ಕರ್ತವ್ಯದಿಂದ ವಜಾ ಆದ ನೌಕರರು ಪೊಲೀಸ್ ಮಹಾಸಂಘ ಎಂದು ಕಟ್ಟಿಕೊಂಡು ವಾಟ್ಸ್ ಆಪ್ ಮೂಲಕ ಪ್ರತಿಭಟನೆಗೆ ಪ್ರಚೋದನೆ ನೀಡುತ್ತಿದ್ದರು. ಇದರಲ್ಲಿ ಕಾರ್ಯನಿರತರಾಗಿ ಸೇವೆ ಮಾಡುತ್ತಿರುವ ಯಾವೊಬ್ಬ ಪೊಲೀಸರೂ ಮುಷ್ಕರದಲ್ಲಿ ಭಾಗಿಯಾಗಿಲ್ಲ. ಶಿಸ್ತು ಕಾಪಾಡಿರುವುದಕ್ಕೆ ಧನ್ಯವಾದ ಎಂದರು.