ವಿದೇಶಿ ಜೀನ್ಸ್ ಎಂದೂ ಭಾರತೀಯತೆಯನ್ನು ಒಪ್ಪುವುದೇ ಇಲ್ಲ! ಕಾಂಗ್ರೆಸ್ ವಿರುದ್ಧ ಜೆಡಿಎಸ್ ಟೀಕೆ
ಕಲರ್ ಕಲರ್ ಕುಮಾರಣ್ಣ ಎಂದು ಕಾಂಗ್ರೆಸ್ ಮಾಡಿದ್ದ ಟ್ವೀಟ್ಗೆ ಜೆಡಿಎಸ್ ಕೆಂಡ ಕಾರಿದ್ದು, ಕಲುಷಿತ ಮನಸ್ಸಿನ ಕಾಂಗ್ರೆಸ್ ಕಣ್ಣಿಗೆ ಸದಾ ಕಾಮಾಲೆಯೇ ಎಂದು ಟೀಕಿಸಿದೆ. ಬಿಜೆಪಿ & ಆರೆಸ್ಸೆಸ್ ವಿರುದ್ಧ ಹೆಚ್ಡಿ ಕುಮಾರಸ್ವಾಮಿ ಮಾತನಾಡಿದ್ದ ವಿಡಿಯೋ ಹಂಚಿಕೊಂಡಿದ್ದ ಕಾಂಗ್ರೆಸ್ ಆರ್ ಎಸ್ಎಸ್ ವಿರೋಧಿಸಿದ್ದ ಕುಮಾರಸ್ವಾಮಿ ಅವರೇ ಇಂದು ಅದರ ಪರವಾಗಿದ್ದಾರೆ ಎಂದು ಹೇಳಿತ್ತು.
ಹೆಚ್ಡಿ ಕುಮಾರಸ್ವಾಮಿ ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿಯನ್ನು ಉಲ್ಲೇಖಿಸಿದ್ದ ಕಾಂಗ್ರೆಸ್, ಆರ್ ಎಸ್ಎಸ್ ದೇಶ ವಿರೋಧಿ ನಿಲುವುಗಳ ಬಗ್ಗೆ ಚರ್ಚೆ ಮಾಡಿದ್ದೀರಾ ಎಂದು ಕೇಳಿತ್ತು. ಇದೇ ವಿಚಾರ ಈಗ ಜೆಡಿಎಸ್ ಪಕ್ಷವನ್ನು ಕೆರಳಿಸಿದ್ದು, ಕಾಂಗ್ರೆಸ್ ವಿರುದ್ಧ ಟ್ವೀಟ್ ಮಾಡಿದೆ.

ಕಾಮಾಲೆ ಕಣ್ಣಿನ ಕಾಂಗ್ರೆಸ್
ಕಲುಷಿತ ಮನಸ್ಸಿನ ಕಾಂಗ್ರೆಸ್ ಕಣ್ಣಿಗೆ ಸದಾ ಕಾಮಾಲೆಯೇ. ಹೆಚ್ಡಿ ಕುಮಾರಸ್ವಾಮಿ ಅವರ ನಿಂದನೆಯೇ ಅದಕ್ಕೆ ಅಂಟಿದ ಬೇನೆ. ದೇಶವನ್ನೇ ಒಡೆದ ಪಕ್ಷಕ್ಕೆ ಹಿಂದುತ್ವವೂ ರುಚಿಸುವುದಿಲ್ಲ, ನಮ್ಮ ಆದರ್ಶ ಪರಂಪರೆಯೂ ಆಗುವುದಿಲ್ಲ. ಅಷ್ಟೇ ಏಕೆ, ಭಾರತವೂ ಸಹ್ಯವಲ್ಲ! ಅದರ , ವಿದೇಶಿ ಜೀನ್ಸ್ ಎಂದೂ ಭಾರತೀಯತೆಯನ್ನು ಒಪ್ಪುದೇ ಇಲ್ಲ. ಇದೇನು ಹೊಸತಲ್ಲ ಎಂದು ಜೆಡಿಎಸ್ ಟ್ವೀಟ್ನಲ್ಲಿ ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದೆ.
ಕುಮಾರಸ್ವಾಮಿ ಬದಲಾಗಿದ್ದಾರೆ
ಕಲ್ಲಡ್ಕ ಪ್ರಭಾಕರ ಭಟ್ಟರ ಶ್ರೀರಾಮ ವಿದ್ಯಾಕೇಂದ್ರಕ್ಕೆ ಕುಮಾರಸ್ವಾಮಿ ಅವರು ಮುಕ್ತ ಮನಸ್ಸಿನಿಂದ ಭೇಟಿ ನೀಡಿದ್ದರು, ಹೌದು. ಅಲ್ಲಿನ ಶೈಕ್ಷಣಿಕ ವಾತಾವರಣ, ಮಕ್ಕಳ ಶಿಸ್ತು, ದೇಶಪ್ರೇಮವನ್ನು ಕಣ್ಣಾರೆ ಕಂಡ ಅವರ ಮನಸ್ಸಿನಲ್ಲಿ ಪರಿವರ್ತನೆ ಆಗಿದ್ದರೆ, ಅದೇನು ಮಹಾ ಅಪರಾಧವೇ?
ಪರಿವರ್ತನೆಯೇ ಜಗದ ನಿಯಮ, ಪ್ರತಿಗಾಮಿತನವೇ ಮಾರಣಹೋಮ. ತುಷ್ಠೀಕರಣದ ಅಂಟುವ್ಯಾಧಿಯಿಂದ ಬಳಲುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಮಾರಣಹೋಮದಲ್ಲಿಯೇ ನಂಬಿಕೆ! ಎಂದು ಹೇಳಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಜತೆ ರಾಜ್ಯದ ಅಭಿವೃದ್ಧಿಯ ಬಗ್ಗೆಯೇ ಕುಮಾರಸ್ವಾಮಿ ಅವರು ಚರ್ಚಿಸಿದ್ದಾರೆ. ಸಂಶಯ ಪಿಶಾಚಿ ಕಾಂಗ್ರೆಸ್ಸಿಗೆ ಹುಳುಕು ಹುಡುಕುವುದೇ ಚಟ. ಜಾತಿ, ಧರ್ಮಗಳನ್ನು ಒಡೆದು ದೇಶಕ್ಕೆ ಶಾಪವಾಗಿ, ಬೆದರಿಕೆಯಾಗಿರುವ ಪ್ರತಿಗಾಮಿ ಪಕ್ಷಕ್ಕೆ ಶಾಂತಿ, ಸೌಹಾರ್ದತೆ ಎಂದರೇನೇ ಅಪಥ್ಯ ಎಂದು ಹೇಳಿದೆ.
ಕಾಂಗ್ರೆಸ್ ಹೇಳಿದ್ದೇನು?
ಹೆಚ್ಡಿ ಕುಮಾರಸ್ವಾಮಿ ಆರ್ ಎಸ್ಎಸ್ ವಿರುದ್ಧ ಮಾತನಾಡಿದ್ದ ವಿಡಿಯೋ ಹಂಚಿಕೊಂಡಿದ್ದ ಕಾಂಗ್ರೆಸ್, ಹೆಚ್ಡಿ ಕುಮಾರಸ್ವಾಮಿ ಅವರೇ, ಕೆಲವೇ ದಿನಗಳ ಹಿಂದೆ, ನಿಮ್ಮದೇ ಬಾಯಲ್ಲಿ ಆಡಿದಂತಹ ಮಾತುಗಳಿವು. ಆರ್ ಎಸ್ಎಸ್ ಎಂಬ ವಿಚ್ಛಿದ್ರಕಾರಿ ಸಂಘಟನೆಯನ್ನು ವಿರೋಧಿಸಿ ಬಹಳ ಸೊಗಸಾಗಿ ಮಾತಾಡಿದ್ದೀರಿ, ಈಗ ಆ ನಿಮ್ಮ ಪ್ರಜ್ಞೆ ಎಲ್ಲಿ ಹೋಯ್ತು? ಎಂದು ಪ್ರಶ್ನೆ ಮಾಡಿತ್ತು.
ಮೊನ್ನೆ ಮೊನ್ನೆಯಷ್ಟೇ ಕಲ್ಲಡ್ಕದಲ್ಲಿ ನಿಮ್ಮ ಪ್ರಜ್ಞೆಯನ್ನು ಆರ್ ಎಸ್ಎಸ್ ಪದತಲದಲ್ಲಿಟ್ಟು ಬರುವಾಗ ನಿಮ್ಮ ಪ್ರಜ್ಞೆ ಎಲ್ಲಿ ಕಳೆದುಹೋಗಿತ್ತು? ಅಂದಹಾಗೆ ಮೊನ್ನೆ ಮೋದಿಯವರನ್ನು ಭೇಟಿಯಾದಾಗ ಆರ್ ಎಸ್ಎಸ್ನ ದೇಶವಿರೋಧಿ ನಿಲುವುಗಳ ಬಗ್ಗೆ ಮೋದಿಯವರಿಗೆ ತಿಳಿಸಿದಿರಾ? ಎಂದು ಪ್ರಶ್ನೆ ಮಾಡಿತ್ತು.












Click it and Unblock the Notifications