ಹೊರಟ್ಟಿಗೆ ಸಭಾಪತಿ ಸ್ಥಾನ ಸಿಗುವಂತೆ ಮಾಡಲು ಜೆಡಿಎಸ್ ಚಿಂತನೆ
ರಾಜ್ಯ ವಿಧಾನ ಮಂಡಲದ ಮೇಲ್ಮನೆಯ ಸಭಾಪತಿ ಸ್ಥಾನದ ಮೇಲೆ ಜೆಡಿಎಸ್ ಆಸಕ್ತಿ. ಸ್ಪೀಕರ್ ಸ್ಥಾನಕ್ಕೆ ಬಸವರಾಜ್ ಹೊರಟ್ಟಿಯವರನ್ನು ಕೂರಿಸಲು ಚಿಂತನೆ. ಈ ಸಂಬಂಧ, ಕಾಂಗ್ರೆಸ್ ನೊಂದಿಗೆ ಷರತ್ತುಬದ್ಧ ಮಾತುಕತೆಗೆ ನಿರ್ಧಾರ. ಹಾಲಿ ಸಭಾಪತಿ ಡಿ.ಎಚ್. ಶಂಕರ
ಬೆಂಗಳೂರು, ಜೂನ್ 6: ಜೆಡಿಎಸ್ ಹಿರಿಯ ನಾಯಕ, ಮಾಜಿ ಶಿಕ್ಷಣ ಸಚಿವ ಬಸವರಾಜ ಹೊರಟ್ಟಿಯವರನ್ನು ಮೇಲ್ಮನೆಯ ಸಭಾಪತಿ ಮಾಡುವ ವಿಚಾರದಲ್ಲಿ ಜೆಡಿಎಸ್ ತೀವ್ರ ತೆರನಾಗಿ ಚಿಂತನೆಯಲ್ಲಿ ತೊಡಗಿದೆ.
ಸದ್ಯಕ್ಕೆ ಈ ಸ್ಥಾನದಲ್ಲಿರುವ ಬಿಜೆಪಿಯ ನಾಯಕ ಡಿ.ಎಸ್. ಶಂಕರಮೂರ್ತಿಯವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವ ವಿಚಾರದಲ್ಲಿ ಹೊರಟ್ಟಿಯವರನ್ನು ಸಭಾಪತಿ ಮಾಡುವ ಷರತ್ತನ್ನು ಕಾಂಗ್ರೆಸ್ ಗೆ ವಿಧಿಸಲು ಜೆಡಿಎಸ್ ಉತ್ಸುಕವಾಗಿದೆ ಎಂದು ಹೇಳಲಾಗಿದೆ.

ಆದರೆ, ಈ ವಿಚಾರ ಇನ್ನೂ ಜೆಡಿಎಸ್ ಪಕ್ಷದ ಅಂಗಳ ಬಿಟ್ಟು ಆಚೆ ಬಂದಿಲ್ಲ. ಈಗಾಗಲೇ ಅವಿಶ್ವಾಸ ಮಂಡನೆ ವೇಳೆ ಕಾಂಗ್ರೆಸ್ಸನ್ನು ಬೆಂಬಲಿಸುವುದಾಗಿ ಜೆಡಿಎಸ್, ಕಾಂಗ್ರೆಸ್ ಸಂದೇಶ ರವಾನಿಸಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷವು ಮಾತುಕತೆಗೆ ಬಂದಾಗ ಮಾತ್ರ ತನ್ನ ಈ ಅಭಿಲಾಷೆಯನ್ನು ಷರತ್ತಿನ ರೂಪದಲ್ಲಿ ಕಾಂಗ್ರೆಸ್ ಮುಂದಿಡಲು ಜೆಡಿಎಸ್ ನಿರ್ಧರಿಸಿದೆ ಎನ್ನುತ್ತಿವೆ ಮೂಲಗಳು.
ಆದರೆ, ಈ ಚಿಂತನೆಯ ಹಿನ್ನೆಲೆಯಲ್ಲಿ ಆ ಪಕ್ಷದ ನಾಯಕರಲ್ಲೇ ಗೊಂದಲವಿದೆ ಎನ್ನಲಾಗಿದೆ. ಶಂಕರಮೂರ್ತಿ ಪದಚ್ಯುತಿ ವಿಚಾರದಲ್ಲಿ ಕಾಂಗ್ರೆಸ್ ಅನ್ನು ಬೆಂಬಲಿಸಿದರೆ, ಮುಂದೆ ಅದು ಚುನಾವಣೆಯ ವೇಳೆ ಬಿಜೆಪಿಗೆ ಎರಡೂ ಪಕ್ಷಗಳ ಮೇಲೆ (ಕಾಂಗ್ರೆಸ್, ಜೆಡಿಎಸ್) ಆರೋಪಗಳನ್ನು ಮಾಡಲು ದಾರಿ ಮಾಡಿಕೊಟ್ಟಂತಾಗುತ್ತದೆ ಎಂಬ ಆತಂಕವನ್ನು ಕೆಲವು ನಾಯಕರು ವ್ಯಕ್ತಪಡಿಸಿದ್ದಾರೆನ್ನಲಾಗಿದೆ.












Click it and Unblock the Notifications