ಕಾಂಗ್ರೆಸ್ ಉರುಳಿಸಿದ 'ಹೊರಟ್ಟಿ' ದಾಳಕ್ಕೆ ಮರುಳಾಗುವುದೇ ಜೆಡಿಎಸ್?
ಹಾಲಿ ವಿಧಾನ ಪರಿಷತ್ ಸ್ಪೀಕರ್ ಆಗಿರುವ ಬಿಜೆಪಿಯ ಶಂಕರಮೂರ್ತಿಯವರನ್ನು ಆ ಸ್ಥಾನದಿಂದ ಕೆಳಗಿಳಿಸಲು ಕಾಂಗ್ರೆಸ್ ಯತ್ನಿಸಿದೆ. ಆದರೆ, ಅದಕ್ಕೆ ಅತ್ಯಗತ್ಯವಾಗಿದ್ದ ಜೆಡಿಎಸ್ ಬೆಂಬಲ ಸಿಕ್ಕಿಲ್ಲ. ಇದು ಕುತೂಹಲ ಕೆರಳಿಸಿದೆ.
ಬಿಜೆಪಿ ಹಿರಿಯ ಸದಸ್ಯ ಹಾಗೂ ಮೇಲ್ಮನೆ ಸಭಾಪತಿಯಾಗಿರುವ ಡಿ.ಎಚ್. ಶಂಕರ ಮೂರ್ತಿಯವರ ಪದಚ್ಯುತಿಗೆ ಶತಾಯ ಗತಾಯ ಯತ್ನಿಸುತ್ತಿರುವ ಕಾಂಗ್ರೆಸ್, ಈಗ ಜೆಡಿಎಸ್ ನ ತಂತ್ರಗಾರಿಕೆ ಅಕ್ಷರಶಃ ಸಿಲುಕಿದೆ ಎಂಬುದರನ್ನು ಅನುಮಾನವೇ ಇಲ್ಲ.
ಅಂದಹಾಗೆ, ರಾಜ್ಯ ವಿಧಾನ ಪರಿಷತ್ ನಲ್ಲಿ 75 ಸ್ಥಾನಗಳಿದ್ದು, ಸದ್ಯಕ್ಕೆ 1 ಸ್ಥಾನ ಮಾತ್ರ ತೆರವಾಗಿದೆ (ಬಿಜೆಪಿಯ ವಿಮಲಾಗೌಡ ನಿಧನದಿಂದ). ಕಾಂಗ್ರೆಸ್ ಗೆ 33 ಸದಸ್ಯ ಬಲವಿದ್ದು, ಬಿಜೆಪಿಗೆ 23 ಹಾಗೂ ಜೆಡಿಎಸ್ ಗೆ 13 ಸ್ಥಾನಗಳಿವೆ. ಇನ್ನು ಪಕ್ಷೇತರರ ಸಂಖ್ಯೆ 5 ಇದೆ. ಸಭಾಪತಿ ಸ್ಥಾನದಲ್ಲಿ ವಿಶ್ವಾಸ ಮತ ಗೆಲ್ಲಲು 38 ಮತಗಳು ಬೇಕು.
ಹಾಗಾಗಿ, ಕಾಂಗ್ರೆಸ್ ಪಕ್ಷಕ್ಕೆ 33 ಸ್ಥಾನವಿರುವುದರಿಂದ ವಿಶ್ವಾಸ ಮತ ಗೆಲ್ಲಲು ಇನ್ನು ಐದು ಮತಗಳಷ್ಟೇ ಬೇಕಿರುವುದರಿಂದ ಅದು ಪಕ್ಷೇತರರ ಸಹಾಯ ಕೋರುವ ಸಾಧ್ಯತೆಗಳಿವೆ.

ಕಗ್ಗಂಟಿನಲ್ಲಿ ಕಾಂಗ್ರೆಸ್
ಆದರೆ, ಅಸಲಿ ವಿಚಾರ ಅದಲ್ಲ. ಈ ಸರ್ಕಸ್ ನಲ್ಲಿ ಕಾಂಗ್ರೆಸ್ ಪಕ್ಷವು ಜೆಡಿಎಸ್ ಉರುಳಿಸಿದ ದಾಳಕ್ಕೆ ಸಿಲುಕಿದ್ದೇ ಭಾರೀ ಕುತೂಹಲದ ವಿಚಾರ. ಶಂಕರ ಮೂರ್ತಿ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಿ ಎರಡು ದಿನಗಳು ಕಳೆದಿವೆ.

ಜೆಡಿಎಸ್ ಗೆ ರಾಜ ಸಂದೇಶ
ಶಂಕರ ಮೂರ್ತಿಯವನ್ನು ಸಭಾಪತಿ ಸ್ಥಾನದಿಂದ ಕೆಳಗಿಳಿಸಲೇಬೇಕೆಂಬ ತನ್ನ ಹಠಕ್ಕೆ ಬೆಂಬಲ ನೀಡುವಂತೆ ಕಾಂಗ್ರೆಸ್ ಪಕ್ಷ ಜೆಡಿಎಸ್ ಪಕ್ಷದ ಪಾಳಯಕ್ಕೆ ಮನವಿಯೊಂದನ್ನು ರವಾನಿಸಿತ್ತು.

ವ್ಹಿಪ್ ಜಾರಿಗೊಳಿಸಿದ ಜೆಡಿಎಸ್
ಇಂಥ ಸಂದರ್ಭಗಳು ಬಂದಾಗ ಯಾವಾಗಲೂ ಚಾಣಾಕ್ಷ ನಡೆ ಅನುಸರಿಸುವ ಜೆಡಿಎಸ್, ಬುಧವಾರ ರಾತ್ರಿ ಹಠಾತ್ತಾಗಿ ತನ್ನ ಪಕ್ಷದ ಎಲ್ಲಾ ಮೇಲ್ಮನೆ ಸದಸ್ಯರಿಗೆ ವ್ಹಿಪ್ ಜಾರಿಗೊಳಿಸಿ, ಗುರುವಾರ ನಡೆಯಲಿರುವ ವಿಧಾನ ಪರಿಷತ್ ಸಭೆಗೆ ಹಾಜರಾಗಬೇಕೆಂದೂ, ಅಂದು ನಡೆಯಲಿರುವ ಅವಿಶ್ವಾಸ ಗೊತ್ತುವಳಿ ಬಗೆಗಿನ ಮತದಾನದಲ್ಲಿ ಶಂಕರ ಮೂರ್ತಿ ಪರವಾಗಿಯೇ ಮತ ಚಲಾಯಿಸಬೇಕೆಂದೂ ಕಟ್ಟುನಿಟ್ಟಾಗಿ ಆದೇಶಿಸಿದೆ.

ಹೊರಟ್ಟಿ ಕಡೆಗೆ ಕಾಂಗ್ರೆಸ್ ಚಿತ್ತ
ಈಗ ಇರುಸು ಮುರುಸಿಗೆ ಒಳಗಾಗಿರುವುದು ಕಾಂಗ್ರೆಸ್. ಏಕೆಂದರೆ, ಪಕ್ಷದ ಹಿರಿಯ ನಾಯಕ ಜಿ. ಪರಮೇಶ್ವರ್ ಅವರನ್ನೇ ಖುದ್ದಾಗಿ ದೊಡ್ಡ ಗೌಡರ ಮನೆಗೆ ಕಳುಹಿಸಿ ಮಾತನಾಡಿಸಿದ್ದರೂ, ಈ ಭೇಟಿ ಮುಗಿದ 24 ಗಂಟೆಯೊಳಗೆ ಜೆಡಿಎಸ್ ತನ್ನ ನಿರೀಕ್ಷೆಗೆ ವಿರುದ್ಧವಾಗಿ ನಿಂತಿದ್ದು ಕಾಂಗ್ರೆಸ್ ಗೆ ತೀವ್ರ ಮುಜುಗರಕ್ಕೀಡು ಮಾಡಿದೆ.
ಆದರೂ, ವಿಶ್ವಾಸ ಕಳೆದುಕೊಳ್ಳದ ಅದು, ಜೆಡಿಎಸ್ ನ ಬಸವರಾಜ ಹೊರಟ್ಟಿಯವರನ್ನು ಸಭಾಪತಿ ಸ್ಥಾನಕ್ಕೆ ಆಯ್ಕೆ ಮಾಡುವುದಾದರೆ ತಾನು ಅದನ್ನು ಬೆಂಬಲಿಸುವುದಾಗಿ ಪ್ರಕಟಿಸುವುದರ ಮೂಲಕ ಜೆಡಿಎಸ್ ತಮಗೆ ಸಹಾಯ ಮಾಡಬೇಕೆಂದು ಪರೋಕ್ಷವಾಗಿ ಕೇಳಿಕೊಂಡಿದೆ. ಆದರೆ, ಇದಕ್ಕೆ ಜೆಡಿಎಸ್ ಕಡೆಯಿಂದ ತೀವ್ರ ಟೀಕೆ ವ್ಯಕ್ತವಾಗಿದ್ದು, ಈಗ ಕಾಂಗ್ರೆಸ್ ಗೆ ಹೊರಟ್ಟಿ ನೆನಪಾದರೆ, ಇಷ್ಟು ದಿನ ನಿದ್ದೆ ಮಾಡುತ್ತಿತ್ತೇ ಎಂದು ಹೇಳಿದೆ.
ರಾಜಕೀಯ ಲೆಕ್ಕಾಚಾರವೇ ಕುತೂಹಲ
ಇದೆಲ್ಲದರ ನಡುವೆಯೇ ಹಾಲಿ ಸಭಾಪತಿ ಶಂಕರಮೂರ್ತಿಯವರು, ಜೆಡಿಎಸ್ ಬೆಂಬಲ ನಮ್ಮ ಕಡೆ (ಬಿಜೆಪಿ) ಇದ್ದು, ತಾವು ಸಭಾಪತಿ ಸ್ಥಾನದಲ್ಲೇ ಮುಂದುವರಿಯುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಹಾಗಾಗಿ, ಈ ಎಲ್ಲಾ ಬೆಳವಣಿಗೆಗಳು ಜೂನ್ 15ರ ವಿಧಾನ ಪರಿಷತ್ ಅಧಿವೇಶನವನ್ನು ಮತ್ತಷ್ಟು ಇಂಟೆರೆಸ್ಟಿಂಗ್ ಎನಿಸಿವೆ. ಆದರೆ, ಅದೇನೇ ಇರಲಿ, ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್, ಜೆಡಿಎಸ್ ಒಳಒಪ್ಪಂದದೊಂದಿಗೆ ಕಣಕ್ಕಿಳಿಯುತ್ತವೆ ಎಂಬ ಲೆಕ್ಕಾಚಾರ ಹಲವರದ್ದು. ಹೀಗಿರುವಾಗ, ಈಗ ವಿಧಾನ ಪರಿಷತ್ ನಲ್ಲಿ ಜೆಡಿಎಸ್ ನಡೆದುಕೊಂಡಿರುವ ರೀತಿ, ಇಷ್ಟಾದರೂ ಜೆಡಿಎಸ್ ಗೆ ಮುಂದೆ ಶರಣೋ ಶರಣೋ ಎನ್ನುತ್ತಿರುವ ಕಾಂಗ್ರೆಸ್ ಗಳ ಮುಂದಿನ ರಾಜಕೀಯ ಲೆಕ್ಕಾಚಾರ ಹೇಗಿರುತ್ತೆ ಎನ್ನುವುದೇ ಕುತೂಹಲಕಾರಿ.












Click it and Unblock the Notifications