ಚುನಾವಣೆ ಸೋಲಿಗೆ ನನ್ನ ಮೇಲೆ ಗೂಬೆ ಕೂರಿಸಬೇಡಿ; ಸಿದ್ದರಾಮಯ್ಯ
ಬೆಂಗಳೂರು, ಆಗಸ್ಟ್ 23 : "2019ರ ಲೋಕಸಭೆ ಚುನಾವಣೆ ವೇಳೆ ಜೆಡಿಎಸ್ ಜೊತೆ ಮೈತ್ರಿ ಬೇಡ. ಫ್ರೆಂಡ್ಲಿ ಫೈಟ್ ಇರಲಿ ಎಂದಿದ್ದೆವು" ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಶುಕ್ರವಾರ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಸಿದ್ದರಾಮಯ್ಯ, ಜೆಡಿಎಸ್ ವರಿಷ್ಠ ಎಚ್. ಡಿ. ದೇವೇಗೌಡ ಮಾಡಿದ್ದ ಆರೋಪಗಳಿಗೆ ತಿರುಗೇಟು ನೀಡಿದರು. "ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಸೋಲಿಗೆ ಅವರೇ ಕಾರಣ" ಎಂದು ಸ್ಪಷ್ಟಪಡಿಸಿದರು.
"ಹಳೆ ಮೈಸೂರು ಭಾಗದಲ್ಲಿ ಪಂಚಾಯಿತಿ ಮಟ್ಟದ ಚುನಾವಣೆಯಿಂದ ಎಲ್ಲಾ ಚುನಾವಣೆಗಳಲ್ಲೂ ಕಾಂಗ್ರೆಸ್-ಜೆಡಿಎಸ್ ಫೈಟ್ ಕೊಟ್ಟಿದ್ದೆ ಹೆಚ್ಚು. ಹೀಗಾಗಿ ಫ್ರೆಂಡ್ಲಿ ಫೈಟ್ ಇರಲಿ ಎಂದಿದ್ದೆವು" ಎಂದು ತಿಳಿಸಿದರು.

"ಮಂಡ್ಯ, ತುಮಕೂರು ಕ್ಷೇತ್ರದಲ್ಲಿ ಸೋಲಿಗೆ ನಾವೇ ಕಾರಣ ಎಂದು ಆರೋಪ ಮಾಡಿದರು. ಮೈಸೂರು, ಬೆಂಗಳೂರು ಉತ್ತರ ಸೇರಿದಂತೆ ಹಲವೆಡೆ ನಮ್ಮ ಸೋಲಿಗೆ ನೀವು ಕಾರಣ ಅಲ್ಲವೋ?" ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
"ಹಾಸನದಲ್ಲಿ ದೇವೇಗೌಡರ ಮೊಮ್ಮಗ ಗೆದ್ದಿದ್ದಾರೆ. ನಮ್ಮ ಪಕ್ಷ ಅಲ್ಲಿ ಕೆಲಸ ಮಾಡಿಲ್ಲವೇ?. ಒಟ್ಟಿಗೆ ಪ್ರಚಾರ ಮಾಡಿದ್ದೇವೆ, ಹಾಗಾಗಿಯೇ ಗೆದ್ದರು" ಎಂದು ಪ್ರಜ್ವಲ್ ರೇವಣ್ಣ ಗೆಲುವಿನ ಬಗ್ಗೆ ವಿಷಯ ಪ್ರಸ್ತಾಪಿಸಿದರು.
"ಹಿಂದೆ-ಮುಂದೆ ರಾಜಕೀಯ ಮಾಡುವ ಅಭ್ಯಾಸ ನನಗಿಲ್ಲ. ನೇರ ರಾಜಕಾರಣ ಮಾಡುತ್ತೇನೆ. ತಾತ, ಮೊಮ್ಮಕ್ಕಳು ಎಲ್ಲಾ ಕುಟುಂಬ ನಿಂತಿದ್ದರಿಂದ ಸೋಲು ಕಂಡರು. ನನ್ನ ಮೇಲೆ ಸುಮ್ಮನೆ ಗೂಬೆ ಕೂರಿಸುವುದು ಸರಿಯಲ್ಲ" ಎಂದು ಸಿದ್ದರಾಮಯ್ಯ ಹೇಳಿದರು.












Click it and Unblock the Notifications