ಮೈಸೂರನ್ನು ಅಜ್ಞಾನದ ಕಡೆಗೆ ಕರೆದೊಯ್ಯುತ್ತಿರುವ ಸಂಸದ ಪ್ರತಾಪ ಸಿಂಹ: ಸಿ.ಎಂ.ಇಬ್ರಾಹಿಂ
ಮೈಸೂರು,ನವೆಂಬರ್ 16: ಮೈಸೂರು ಸಾಂಸ್ಕೃತಿಕ ನಗರಿ, ಪ್ರತಾಪ್ ಸಿಂಹ ಅಜ್ಞಾನದ ಕಡೆ ಕರೆದುಕೊಂಡು ಹೋಗ್ತಿದ್ದಾನೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಕಿಡಿಕಾರಿದರು.
ಮೈಸೂರಿನಲ್ಲಿ ಬುಧವಾರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಟಿಪ್ಪು ಕುರಿತ ಪುಸ್ತಕ ಮತ್ತು ನಾಟಕ ಆಕ್ರೋಶಕ್ಕೆ ಕಾರಣವಾಗಿದೆ. ಯಾವುದೇ ಗಲಾಟೆಗಳು ನಡೆಯಬಾರದು ಎಂದು ಸಭೆ ನಡೆಸಿದ್ದೇನೆ. ಪುಸ್ತಕದಲ್ಲಿ ಟಿಪ್ಪು ಸುಲ್ತಾನ್ ಬಗ್ಗೆ ಕೆಟ್ಟದಾಗಿ ತೋರಿಸಲಾಗಿದ್ದು, ಪ್ರತಾಪ್ ಸಿಂಹ ಎರಡು ಸಮಾಜಗಳ ಮಧ್ಯೆ ವಿಷ ಹಾಕುವ ಕೆಲಸ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಟಿಪ್ಪು ಸುಲ್ತಾನ್ ಪ್ರತಿಮೆ ಏಕೆ ಮಾಡಬಾರದು: ವೀರಪ್ಪ ಮೊಯ್ಲಿ ಪ್ರಶ್ನೆ
ನಂಜುಂಡೇಶ್ವರನ ಬಳಿ ಇರುವ ಪಚ್ಚೆ ವಜ್ರ ಟಿಪ್ಪು ಸುಲ್ತಾನ್ ಕೊಟ್ಟಿದ್ದು, ಅದನ್ನು ಸಂಸದ ಪ್ರತಾಪ್ ಸಿಂಹ ವಾಪಸ್ ತೆಗೆದುಕೊಳ್ತಾರಾ, ಮೋದಿ ನಿಂತು ಭಾಷಣ ಮಾಡುವ ಕೆಂಪುಕೋಟೆ ಷಹಜಹಾನ್ ಕಟ್ಟಿಸಿದ್ದು, ಅದನ್ನು ಪ್ರತಾಪ ಸಿಂಹ ಒಡೆಸ್ತಾನಾ ಎಂದು ಪ್ರಶ್ನಿಸಿದರು.
ಟಿಪ್ಪು ನಾಟಕ ಪ್ರದರ್ಶನ ತಡೆಗೆ ನ್ಯಾಯಾಲಯದ ಮೊರೆ ಹೋಗಲಾಗಿದೆ ಅಂತ ತಿಳಿಸಿದ್ರು. ಇನ್ನು, ಮೈಸೂರು ಅಥವಾ ಶ್ರೀರಂಗಪಟ್ಟಣದಲ್ಲಿ ಟಿಪ್ಪು ಸುಲ್ತಾನ್ ಪ್ರತಿಮೆಯನ್ನ ಸ್ಥಾಪನೆ ಮಾಡ್ತೀವಿ ಎಂದಿರುವ ಶಾಸಕ ತನ್ವೀರ್ ಸೇಠ್ಗೆ ಏನೂ ಗೊತ್ತಿಲ್ಲ. ಪರಿಸ್ಥಿತಿ ಬದಲಾಗಿದೆ ಅಂತ ಧರ್ಮ ಬದಲಾಯಿಸಲು ಆಗುತ್ತಾ. ರಾಜಕಾರಣ ಇವತ್ತು ಇರುತ್ತೇ ನಾಳೆ ಸಾಯುತ್ತೇ, ನಮಗೆ ಧರ್ಮನೇ ಮುಖ್ಯ. ನಮ್ಮಲ್ಲಿ ಪ್ರತಿಮೆಗೆ ಅವಕಾಶ ಇಲ್ಲವಾಗಿದ್ದು, ಟಿಪ್ಪು ಪ್ರತಿಮೆ ಸ್ಥಾಪನೆ ಪ್ರಶ್ನೆಯೇ ಇಲ್ಲ. ಪೂಜೆ ಮಾಡುವುದು, ಕುಂಕುಮ ಹಚ್ಚುವುದು ನಮ್ಮಲ್ಲಿಲ್ಲ. ಬಡವರಿಗೆ ಸಹಾಯ ಮಾಡುವುದೇ ನಮ್ಮ ಆಚರಣೆ. ನಮ್ಮಲ್ಲಿ ಜಯಂತಿಯೂ ಇಲ್ಲದ ಕಾರಣ ಟಿಪ್ಪು ಜಯಂತಿ ಮಾಡಿದ್ದು ತಪ್ಪು ಎಂದು ಸಿ.ಎಂ.ಇಬ್ರಾಹಿಂ ತಿಳಿಸಿದ್ರು.
ಟಿಪ್ಪು ಸುಲ್ತಾನ್ ಕುರಿತು ವಿವಾದಾತ್ಮಕ ನಾಟಕ ಕೃತಿ ಬಿಡುಗಡೆ ಹಿನ್ನೆಲೆ ರಾಜ್ಯದಲ್ಲಿ ಆಗುತ್ತಿರುವ ಕೆಲ ಸೂಕ್ಷ್ಮ ಧಾರ್ಮಿಕ ವಿಚಾರಗಳ ಕುರಿತು ಸಭೆ ನಡೆಸಲಾಗಿದೆ. ಮೈಸೂರಿನಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಮೀಟಿಂಗ್ ನಡೆಸಿದ್ದು, ಮುಸ್ಲಿಂ ಮೌಲ್ವಿಗಳು ಮತ್ತು ಧಾರ್ಮಿಕ ಮುಖಂಡರ ಜೊತೆ ಹಲವು ಮಹತ್ವ ವಿಚಾರಗಳನ್ನ ಚರ್ಚೆ ಮಾಡಲಾಗಿದೆ. ಪ್ರತಾಪ್ ಸಿಂಹ ಸೇರಿದಂತೆ ಬಿಜೆಪಿ ನಾಯಕರು ಟಿಪ್ಪು ಬಗ್ಗೆ ಲಘುವಾಗಿ ಮಾತಾಡ್ತಿರೋ ವಿಚಾರ ಹೆಚ್ಚು ಚರ್ಚೆಗೆ ಬಂದಿದೆ ಅನ್ನೋ ಮಾಹಿತಿ ಲಭ್ಯವಾಗಿದೆ.
ದೆಹಲಿ ಯುವತಿ ಕೊಲೆ ಪ್ರಕರಣ ಲವ್ ಜಿಹಾದ್ಗೆ ತಿರುಗಿದ ವಿಚಾರಕ್ಕೆ ಮಾತನಾಡಿ, ಪ್ರಮೋದ ಮುತಾಲಿಕ್ ಗೆ ಲವ್ ಮಾಡಿ ಗೊತ್ತಿಲ್ಲ. ಮೊದಲು ಲವ್ ಮಾಡಿ ಟೇಸ್ಟ್ ನೋಡಲು ಹೇಳಿ.ಈ ವಿಚಾರವನ್ನು ಇಗ್ನೋರ್ ಮಾಡಿ.ಚರ್ಚೆಯಾಗಬೇಕಿರುವ ವಿಚಾರಗಳು ಸಾಕಷ್ಟು ಇವೆ.ಇನ್ನು ಆರು ತಿಂಗಳು ತಡೆಯಿರಿ ಕುಮಾರಸ್ವಾಮಿ ಮುಖ್ಯಮಂತ್ರಿ ಆಗ್ತಾರೆ.ಇಂತಹ ಅಹಿತಕರ ಸಮಾಜದಲ್ಲಿ ಶಾಂತಿ ಕದಡುವ ಘಟನೆಗಳು ನಡೆಯದಂತೆ ನೋಡಿಕೊಳ್ತಾರೆ ಎಂದು ಸಿ.ಎಂ ಇಬ್ರಾಹಿಂ ಭವಿಷ್ಯ ನುಡಿದರು.
ಟಿಪ್ಪು ಸುಲ್ತಾನರನ್ನು ಈ ದೇಶದ ರಾಷ್ಟ್ರಪತಿಗಳು ಸಹ ಹಾಡಿ ಹೊಗಳಿದ್ದಾರೆ. ಬ್ರಿಟಿಷರ್ ಕೂಡ ಸುಲ್ತಾರಿಗೆ ಗೌರವ ನೀಡಿದ್ದಾರೆ. ಪದೇ ಪದೇ ಟಿಪ್ಪು ಬಗ್ಗೆ ಲಘುವಾದ ಹೇಳಿಕೆ ನೀಡಬಾರದು. ಸಂಸದ ಪ್ರತಾಪ್ ಸಿಂಹ ಅಶಾಂತಿ ಮೂಡಿಸುವ ಹೇಳಿಕೆ ನೀಡುತ್ತಿದ್ದಾರೆ. ಪ್ರತಾಪ್ ಸಿಂಹ ಶತ್ರುಗಳು ಮನೆಗೆ ಬಂದ್ರು ದೇವೋಭವ ಅನ್ನಬೇಕು. ವೋಟಿಗಾಗಿ ಚಿಲ್ಲರೆ ಮಾತಾಡುವುದನ್ನು ನಿಲ್ಲಿಸು. ಏನೇನೋ ಮಾತನಾಡುವ ನಿನಗೆ ನಾಚಿಕೆ ಆಗಬೇಕು ಎಂದು ಕಿಡಿಕಾರಿದ್ದಾರೆ.