Budget 2023; ಕೇಂದ್ರ ಬಜೆಟ್ನಿಂದ ನಿರಾಸೆ, ಮೂಗಿಗೆ ತುಪ್ಪ ಸವರಿದ ಹಾಗಿದೆ: ಜೆಡಿಎಸ್ ಹೇಳಿದ್ದೇನು?
ಉಳ್ಳವರ ಪರ ವಕಾಲತ್ತು ವಹಿಸಿ, ಅವರಿಗೆ ಅನುಕೂಲ ಮಾಡಿಕೊಡಲು ಹೊರಟಿದೆ ಈ ಆಯವ್ಯಯ ಎಂದು ಜೆಡಿಎಸ್ ರಾಜ್ಯ ಘಟಕ ಟ್ವೀಟ್ ಮಾಡಿದೆ.
ಬೆಂಗಳೂರು, ಫೆಬ್ರವರಿ2: 2023-24ನೇ ಸಾಲಿನ ಮುಂಗಡ ಪತ್ರವನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ್ದು ಆಯಿತು, ಜಾಹೀರಾತಿನ ಮಾಧ್ಯಮಗಳ ಭರ್ಜರಿ ಪ್ರಚಾರವೂ ಆಯಿತು. ಈಗ ಆಯವ್ಯಯದ ಪ್ರತಿಯನ್ನು ಕೂಲಂಕಷವಾಗಿ ನೋಡಿದರೆ ಬರೀ ನಿರಾಸೆಯೇ ಮೂಡುತ್ತದೆ. ಮೂಗಿಗೆ ತುಪ್ಪ ಸವರಿದ ಹಾಗಿದೆ ಎಂದು ಜೆಡಿಎಸ್ ರಾಜ್ಯ ಘಟಕ ಟ್ವೀಟ್ ಮಾಡಿದೆ.
ಕೇಂದ್ರ ಬಜೆಟ್ ಕುರಿತು ಸರಣಿ ಟ್ವೀಟ್ ಮೂಲಕ ಜೆಡಿಎಸ್ ಅಸಮಾಧಾನ ವ್ಯಕ್ತಪಡಿಸಿದೆ. ಉಳ್ಳವರ ಪರ ವಕಾಲತ್ತು ವಹಿಸಿ, ಅವರಿಗೆ ಅನುಕೂಲ ಮಾಡಿಕೊಡಲು ಹೊರಟಿದೆ ಈ ಆಯವ್ಯಯ. ತೆರಿಗೆ ವಿನಾಯಿತಿಯಲ್ಲಿ ಸ್ವಲ್ಪ ಬದಲಾವಣೆ ಮಾಡಿರುವುದು ಬಿಟ್ಟರೆ, ಜಿಎಸ್ ಟಿ ಹಾಗೂ ಇನ್ನೂ ಮುಂತಾದ ಪರೋಕ್ಷ ತೆರಿಗೆ ಇಳಿಸುವ ಬಗ್ಗೆ ಮೌನ ವಹಿಸಿದೆ. ಇಡೀ ದೇಶದ ಎಲ್ಲರೂ ಈ ಪರೋಕ್ಷ ತೆರಿಗೆ ತುಂಬುತ್ತಾರೆ.
ಕರ್ನಾಟಕದಿಂದಲೇ ರಾಜ್ಯಸಭೆಗೆ ಹೋಗಿರುವ ನಿರ್ಮಲಾ ಸೀತಾರಾಮನ್ ಅವರೆ, ರಾಜ್ಯದ ಯಾವ ಪ್ರಮುಖ ಬೇಡಿಕೆಗಳ ಬಗ್ಗೆ ಪ್ರಸ್ತಾಪವೇ ಮಾಡಿಲ್ಲವೇಕೆ? ನಮ್ಮ ರಾಜ್ಯದಿಂದ ಕೇಂದ್ರದ ಖಜಾನೆಗೆ ದಂಡಿಯಾಗಿ ತೆರಿಗೆ ಸಂಗ್ರಹವಾಗುತ್ತಿದೆ. ಆದರೆ, ಕರುನಾಡಿನ ಕೆಲವು ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಾಣಲು ಅಂಗಲಾಚುವ ಪರಿಸ್ಥಿತಿ ಬಂದಿದೆ ಎಂದು ಜೆಡಿಎಸ್ ಟ್ವೀಟ್ ಮಾಡಿದೆ.

ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ನೀಡಲಾಗುವುದು ಎಂದು ಹೇಳಲಾಗಿದೆ. ಇದರ ಯೋಜನಾ ವೆಚ್ಚವೇ 23,000 ಕೋಟಿಯಷ್ಟಾಗುತ್ತದೆ. ಕೇಂದ್ರದ ಅನುದಾನಿತ ಯೋಜನೆಯಾಗಬೇಕೆಂದರೆ ಕನಿಷ್ಠ 50% ಅನುದಾನ ಘೋಷಿಸಬೇಕಿತ್ತು. ಇನ್ನೂ, ಇದಕ್ಕೆ ಸಂಬಂಧಿಸಿದ ವಿವರಗಳು ಅಸ್ಪಷ್ಟವಾಗಿದೆ.
ಇನ್ನು ಮಹದಾಯಿ, ಮೇಕೆದಾಟು, ಕೃಷ್ಣ ಮೇಲ್ದಂಡೆ ಯೋಜನೆಗಳ ಬಗ್ಗೆ ಮಾತೇ ಇಲ್ಲ. ಮೆಟ್ರೋ ಹಾಗೂ ಉಪನಗರ ರೈಲ್ವೆ ಯೋಜನೆಗಳಿಗೆ ಹೆಚ್ಚಿನ ಅನುದಾನವೂ ಇಲ್ಲ. ನಮ್ಮ ಸಮಸ್ಯೆಗಳ ಬಗ್ಗೆ ಕೇಂದ್ರಕ್ಕೆ ಗಟ್ಟಿಯಾಗಿ ಮನವರಿಕೆ ಮಾಡಬೇಕಿದ್ದ ರಾಜ್ಯ ಬಿಜೆಪಿ ಸರ್ಕಾರವಂತೂ ಸಂಪೂರ್ಣ ನಿಷ್ಕ್ರಿಯವಾಗಿದೆ. ಇದು ನಮ್ಮ ದೌರ್ಭಾಗ್ಯ ಎಂದು ಜೆಡಿಎಸ್ ಟ್ವೀಟ್ ಮೂಲಕ ಅಸಮಾಧಾನ ಹೊರಹಾಕಿದೆ.
ಮಹಾತ್ಮಾ ಗಾಂಧೀ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೆ (ನರೇಗಾ) ಶೇ 32ರಷ್ಟು ಕಡಿಮೆ ಅನುದಾನ ಮೀಸಲಿಡಲಾಗಿದೆ. ಕಳೆದ ಬಾರಿ ನೀಡಿದ್ದ 89,400 ಕೋಟಿಯ ಬದಲಿಗೆ ಈ ಸಲ ಕೇವಲ 60,000 ಕೋಟಿ ನೀಡಲಾಗಿದೆ. ಗ್ರಾಮೀಣ ಭಾಗದ ಆರ್ಥಿಕತೆಯ ಬೆನ್ನೆಲುಬು ಮುರಿಯುವ ನಡೆ ಇದು. ಬಿಜೆಪಿ ಸರ್ಕಾರ ಯಾರ ಪರ ಎಂಬುದಕ್ಕೆ ಸಾಕ್ಷಿ ಇದು.
2023-24ನೇ ಸಾಲಿನ ಮುಂಗಡ ಪತ್ರವನ್ನು ಕೇಂದ್ರ ಹಣಕಾಸು ಸಚಿವೆ @nsitharaman ಮಂಡಿಸಿದ್ದು ಆಯಿತು, ಜಾಹೀರಾತಿನ ಮಾಧ್ಯಮಗಳ ಭರ್ಜರಿ ಪ್ರಚಾರವೂ ಆಯಿತು. ಈಗ ಆಯವ್ಯಯದ ಪ್ರತಿಯನ್ನು ಕೂಲಂಕಷವಾಗಿ ನೋಡಿದರೆ ಬರೀ ನಿರಾಸೆಯೇ ಮೂಡುತ್ತದೆ. ಮೂಗಿಗೆ ತುಪ್ಪ ಸವರಿದ ಹಾಗಿದೆ.
— Janata Dal Secular (@JanataDal_S) February 2, 2023
1/10
ಗ್ರಾಮೀಣಾಭಿವೃದ್ಧಿಗೆ ಸಂಬಂಧಿಸಿ ಅನುದಾನ ಕಡಿತವಾಗಿದೆ. ಕಳೆದ ಬಾರಿ 2,43,417 ಕೋಟಿ ನೀಡಲಾಗಿತ್ತು. ಈಗ 2,38,204 ಕೋಟಿ ನೀಡಲಾಗಿದೆ. ಭಾರತದ ಬಹುದೊಡ್ಡ ಸಂಖ್ಯೆಯ ಜನರು ವಾಸಿಸುವ ಗ್ರಾಮೀಣ ಪ್ರದೇಶಗಳ ಬಗ್ಗೆ ಕೇಂದ್ರದ ತಾತ್ಸಾರ ಮನೋಭಾವ ಮತ್ತೆ ಮುಂದುವರಿದಿದೆ ಎಂದು ಜೆಡಿಎಸ್ ಹೇಳಿದೆ.
ಆಹಾರ ಸಬ್ಸಿಡಿಗೆ ಕೊಡುವ ಅನುದಾನದಲ್ಲಿ ದೊಡ್ಡ ಮಟ್ಟದ ಕಡಿತ ಮಾಡಲಾಗಿದೆ. 2022-23ರಲ್ಲಿ 2,87,194 ಕೋಟಿ ಸಬ್ಸಿಡಿ ನೀಡಲಾಗಿತ್ತು. ಈ ಬಾರಿ ಅದರಲ್ಲಿ ಶೇ 31ರಷ್ಟು ಕಡಿಮೆ ಮಾಡಿ, 1,97,350 ಕೋಟಿಗೆ ಇಳಿಸಲಾಗಿದೆ. ಹಸಿವು ನಿರ್ಮೂಲನೆ, ಆಹಾರ ಖಾತರಿಯಂತ ಜವಾಬ್ದಾರಿಗಳಿಂದ ಜಾರಿಕೊಳ್ಳಲು ಸರ್ಕಾರ ಸನ್ನದ್ಧವಾಗಿರುವಂತಿದೆ.
ಪಿಎಂ ಕಿಸಾನ್ ಯೋಜನೆಗೂ ಕಳೆದ ಬಾರಿ ನೀಡಿದ್ದ ಅನುದಾನವನ್ನೇ ಮುಂದುವರಿಸಲಾಗಿದೆ. ಹಾಗಿದ್ದರೆ, ಹೊಸದಾಗಿ ಸೇರ್ಪಡೆಯಾದ ರೈತರ ಗತಿಯೇನು? ಹಣದುಬ್ಬರ ಹೆಚ್ಚಾಗಿರುವ ಈ ಸಂದರ್ಭದಲ್ಲಿ ರೈತರಿಗೆ ನೀಡುವ ಆದಾಯ ಬೆಂಬಲ ಹೆಚ್ಚಾಗಬೇಕಲ್ಲವೆ? ಎಂದು ಜೆಡಿಎಸ್ ಪ್ರಶ್ನಿಸಿದೆ.
ಬಜೆಟ್ ಗಾತ್ರ ಹೆಚ್ಚಾಗಿದ್ದರೂ, ಅದಕ್ಕೆ ಸರಿಯಾದ ಅನುಪಾತದಲ್ಲಿ ಜನಪರ ಕಾರ್ಯಕ್ರಮಗಳಿಗೆ ಸಿಗಬೇಕಿದ್ದ ಅನುದಾನ ಸಿಕ್ಕಿಲ್ಲ. ಕಣ್ಣೊರೆಸುವ ತಂತ್ರಗಳಿಂದ ದೇಶದ ಜನರ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಿಲ್ಲ. ಇಂತಹ ನಿರಾಶಾದಾಯ ಬಜೆಟ್ ಅನ್ನು ಜನಪರ ಎನ್ನುವವರೆ, ನಿಮ್ಮ ಕುರುಡು ಅಭಿಮಾನದಿಂದ ದೇಶ ನರಳುವಂತಾಗುತ್ತಿದೆ.












Click it and Unblock the Notifications