ಮತ್ತೆ ಜೆಡಿಎಸ್ ಶಾಸಕಾಂಗ ಸಭೆ: ಬೆಂಗಳೂರು ಬದಲಿಗೆ ಹಾಸನದಲ್ಲಿ ಆಯೋಜನೆ
ಬೆಂಗಳೂರು, ಸೆಪ್ಟೆಂಬರ್ 21: ಇಪ್ಪತ್ತು ದಿನಗಳ ಹಿಂದಷ್ಟೆ ದಿಢೀರ್ ಎಂದು ಶಾಸಕಾಂಗ ಸಭೆ ಕರೆದಿದ್ದ ಜೆಡಿಎಸ್ ಪಕ್ಷವು ಈಗ ಮತ್ತೆ ಶಾಸಕಾಂಗ ಸಭೆ ಕರೆದಿದೆ.
ನಾಳೆ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆಯು ಹಾಸನದಲ್ಲಿ ನಡೆಯಲಿದೆ. ಸಭೆಯ ಮಾಹಿತಿ ಮಾಧ್ಯಗಳಿಗೆ ಸೋರಿಕೆ ಆಗಬಾರದೆಂದು ಸಭೆಯಲ್ಲಿ ಬೆಂಗಳೂರಿನ ಬದಲಿಗೆ ಹಾಸನದಲ್ಲಿ ಇರಿಸಿಕೊಳ್ಳಲಾಗಿದೆ.
ಸಭೆಯ ನೇತೃತ್ವವನ್ನು ದೇವೇಗೌಡ, ಕುಮಾರಸ್ವಾಮಿ ಹಾಗೂ ಎಚ್.ವಿಶ್ವನಾಥ್ ವಹಿಸಲಿದ್ದಾರೆ. ಸಭೆಗೆ ಜೆಡಿಎಸ್ನ ಪರಿಷತ್ ಸದಸ್ಯರು, ಸಂಸದರು ಹಾಗೂ ಕೆಲವು ಮುಖಂಡರನ್ನು ಕರೆಯಲಾಗಿದೆ.
ಬಿಜೆಪಿಯ ಆಪರೇಷನ್ ಕಮಲದ ಭೀತಿ ಇರುವ ಕಾರಣ ಹಠಾತ್ತನೆ ಶಾಸಕಾಂಗ ಸಭೆ ಕರೆಯಲಾಗಿದೆ. ಅತೃಪ್ತ ಶಾಸಕರಿಗೆ ನಿಗಮ ಮಂಡಳಿಗಳ ಸ್ಥಾನ ನೀಡಲಾಗುವುದು ಎಂದು ನಾಳಿನ ಸಭೆಯಲ್ಲಿ ಮನವೊಲಿಸಲಾಗುತ್ತದೆ. ಯಾವುದೇ ಕಾರಣಕ್ಕೂ ಶಾಸಕರು ಪಕ್ಷ ಬಿಟ್ಟು ಹೋಗಬಾರದು, ಬಿಜೆಪಿಯವರು ಸಂಪರ್ಕಿಸಿದರೆ ವರಿಷ್ಠರ ಗಮನಕ್ಕೆ ತರಬೇಕು ಎಂದು ನಾಳೆ ಹೇಳಲಿದ್ದಾರೆ.

ಅಷ್ಟೆ ಅಲ್ಲದೆ ಲೋಕಸಭೆ ಚುನಾವಣೆ ಹಾಗೂ ಪರಿಷತ್ ಸ್ಥಾನಗಳ ಆಯ್ಕೆ ಬಗ್ಗೆಯೂ ನಾಳಿನ ಸಭೆಯಲ್ಲಿ ಚರ್ಚೆ ನಡೆಯಲಿದೆ. ಇದರ ಹೊರತಾಗಿ ಕುಮಾರಸ್ವಾಮಿ ವಿರುದ್ಧ ಬಿಜೆಪಿ ಮಾಡುತ್ತಿರುವ ಪ್ರತಿಭಟನೆಯನ್ನು ಎದುರಿಸುವ ಬಗ್ಗೆಯೂ ನಾಳೆ ಚರ್ಚೆ ನಡೆದು ಕೆಲವು ಸೂಚನೆಗಳನ್ನು ಮುಖಂಡರು ನೀಡಲಿದ್ದಾರೆ.
ಕಾಂಗ್ರೆಸ್-ಜೆಡಿಎಸ್ ಜಂಟಿಯಾಗಿ ಬಿಜೆಪಿಯ ಆಪರೇಶನ್ ಕಮಲವನ್ನು ಎದುರಿಸಲು ಕಾರ್ಯತಂತ್ರ ರೂಪಿಸಿದ್ದು. ಅದನ್ನು ಶಾಸಕರೊಂದಿಗೆ ಚರ್ಚಿಸಲು ನಾಳಿನ ಸಭೆ ಕರೆಯಲಾಗಿದೆ ಎನ್ನಲಾಗುತ್ತಿದೆ. ಇಂದು ಕುಮಾರಸ್ವಾಮಿ ಸಿದ್ದರಾಂಯ್ಯ, ಪರಮೇಶ್ವರ್, ಡಿ.ಕೆ.ಶಿವಕುಮಾರ್, ದಿನೇಶ್ ಗುಂಡೂರಾವ್, ಈಶ್ವರ್ ಖಂಡ್ರೆ ಅವರುಗಳು ಈ ಬಗ್ಗೆ ಚರ್ಚೆ ನಡೆಸಿದ್ದು, ಹೊಸ ಕಾರ್ಯತಂತ್ರದೊಂದಿಗೆ ಬಿಜೆಪಿಯ ಸವಾಲುಗಳನ್ನು ಎದುರಿಸಲಿದ್ದಾರೆ ಎನ್ನಲಾಗುತ್ತಿದೆ.












Click it and Unblock the Notifications