Get Updates
Get notified of breaking news, exclusive insights, and must-see stories!

ಮತಾಂತರ ನಿಷೇಧ ಕಾಯ್ದೆಗೆ ಜೆಡಿಎಸ್ ಬೆಂಬಲ ಇಲ್ಲ: ಎಚ್.ಡಿ. ಕುಮಾರಸ್ವಾಮಿ

ನವದೆಹಲಿ, ಡಿಸೆಂಬರ್ 16: ರಾಜ್ಯದ ಬಿಜೆಪಿ ಸರಕಾರ ಜಾರಿಗೆ ತರಲು ಉದ್ದೇಶಿಸಿರುವ ಮತಾಂತರ ನಿಷೇಧ ಕಾಯ್ದೆಯನ್ನು ವಿರೋಧಿಸುವುದಾಗಿ ಈಗಾಗಲೇ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿದೆ. ಈಗ ಮತ್ತೊಂದು ವಿರೋಧ ಪಕ್ಷವಾದ ಜೆಡಿಎಸ್ ಸಹ ತನ್ನ ಬೆಂಬಲ ಇಲ್ಲ ಎಂದು ಹೇಳಿದೆ.

ಈ ಸಂಬಂಧ ನವದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ ಕುಮಾರಸ್ವಾಮಿ, 'ಬೆಳಗಾವಿಯಲ್ಲಿ ವಿಧಾನಸಭೆ ಅಧಿವೇಶನ ಕರೆದಿರುವುದು ಉತ್ತರ ಕರ್ನಾಟಕ ಸೇರಿದಂತೆ ರಾಜ್ಯ ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲಿಕ್ಕೆ. ಅಗತ್ಯವಿಲ್ಲದ ಮತಾಂತರ ನಿಷೇಧ ಕಾಯ್ದೆಯ ಬಗ್ಗೆ ಅಲ್ಲ' ಎಂದರು.

ಈ ಕಾಯ್ದೆಯನ್ನು ನಮ್ಮ ಪಕ್ಷ ಸ್ಪಷ್ಟವಾಗಿ ವಿರೋಧಿಸುತ್ತದೆ ಹಾಗೂ ಕಲಾಪದಲ್ಲಿ ಭಾಗಿಯಾಗುವ ನಮ್ಮ ಎಲ್ಲ ಶಾಸಕರು ಕೂಡ ಇದನ್ನು ಖಡಾತುಂಡವಾಗಿ ವಿರೋಧ ಮಾಡುತ್ತಾರೆ ಎಂದು ಕುಮಾರಸ್ವಾಮಿ ಅವರು ತಿಳಿಸಿದರು.

JDS not support to Anti Conversion Bill: HDK

ಎಲ್ಲರೂ ಗಾಜಿನ ಮನೆಯಲ್ಲಿ ಇದ್ದಾರೆ:

ಬಿಟ್ ಕಾಯಿನ್ ಹಗರಣ ಹಾಗೂ ಗುತ್ತಿಗೆದಾರರಿಂದ 40% ಕಮಿಷನ್ ವಸೂಲಿ ಮಾಡುವ ಬಗ್ಗೆ ಜೆಡಿಎಸ್ ಮಾತನಾಡುತ್ತಿಲ್ಲ ಎನ್ನುವ ಆರೋಪವನ್ನು ಸ್ಪಷ್ಟವಾಗಿ ತಳ್ಳಿಹಾಕಿದ ಅವರು, ಗುತ್ತಿಗೆದಾರ ಸಂಘದ ಒಬ್ಬರು ಪ್ರಧಾನ ಮಂತ್ರಿಗಳಿಗೆ ಬರೆದಿರುವ ಪತ್ರ ಇಟ್ಟುಕೊಂಡು ಕಾಂಗ್ರೆಸ್ ನಾಯಕರು 40% ಕಮಿಷನ್ ಅಂತ ಮಾತನಾಡುತ್ತಿದ್ದಾರೆ. ಈ ಪರ್ಸಂಟೇಜ್ ವ್ಯವಹಾರ ಬರಲು ಯಾರು ಕಾರಣ? 10%, 20%, 30%, 40% ಕಮಿಷನ್ ಅಂತ ಹೇಳುವವರಿಗೆ ಆ ಬಗ್ಗೆ ಮಾತನಾಡುವ ನೈತಿಕತೆ ಇದೆಯಾ? ಎಲ್ಲರೂ ಗಾಜಿನ ಮನೆಯಲ್ಲಿ ಇರುವವರೇ. ಗಾಜಿನ ಮನೆಯಲ್ಲಿ ಕೂತು ಕಲ್ಲು ಯಾಕೆ ಹೊಡೆಯುತ್ತಾರೆ? ಎಂದು ಕುಮಾರಸ್ವಾಮಿ ಅವರು ಪ್ರಶ್ನೆ ಮಾಡಿದರು.

ಯಾರು ಇವತ್ತು ಕಮಿಷನ್ ಬಗ್ಗೆ ಮಾತನಾಡುತ್ತಿದ್ದಾರೆ, ಅದೇ ಕಾಂಗ್ರೆಸ್ ಪಕ್ಷದ ನಾಯಕರು ಐದು ವರ್ಷ ಆಡಳಿತ ನಡೆಸಿದರಲ್ಲ, ಅವರ ಕಾಲದಲ್ಲಿ ಏನೇನಾಯ್ತು ಎಂದು ಹೇಳಬೇಕಲ್ಲ. ಅವರ ಕಾಲದಲ್ಲಿ ಎಷ್ಟು ಪರ್ಸಂಟೇಜ್ ಇತ್ತು ಎನ್ನುವುದು ಅವರಿಗೂ ಗೊತ್ತು. ಹೀಗಾಗಿ ಕಾಂಗ್ರೆಸ್ ನಾಯಕರಿಗೆ ಈ ಬಗ್ಗೆ ಮಾತನಾಡುವ ನೈತಿಕತೆ ಖಂಡಿತಾ ಇಲ್ಲ ಎಂದು ಅವರು ಟೀಕಾಪ್ರಹಾರ ನಡೆಸಿದರು.

ನಿಮ್ಮ ಸರಕಾರ ಇದ್ದಾಗ ಈ ಪರ್ಸಂಟೇಜ್ ವ್ಯವಹಾರದ ವಿರುದ್ಧ ಯಾಕೆ ಕ್ರಮ ಜರುಗಿಸಲು ಆಗಲಿಲ್ಲ ಎಂದು ಕೆಲವರು ಕೇಳುತ್ತಿದ್ದಾರೆ. ಸ್ವತಂತ್ರ ಸರಕಾರ ನನಗೆಂದೂ ಬರಲಿಲ್ಲ. ಆದರೆ ಯಾವುದೇ ಕಾರಣಕ್ಕೂ ಪರ್ಸಂಟೇಜ್ ವ್ಯವಸ್ಥೆಯನ್ನು ನನ್ನ ಕಚೇರಿಯಲ್ಲಿ ಇಟ್ಟಿರಲಿಲ್ಲ. ನನ್ನ ಕಾಲದಲ್ಲೂ ಎಲ್ಲೆಲ್ಲಿ ಪರ್ಸಂಟೇಜ್ ಹೋಗ್ತಾ ಇತ್ತು ಎನ್ನುವ ಮಾಹಿತಿ ನನಗೆ ಇತ್ತು. ಮುಂದೆ ನಮ್ಮ ಪಕ್ಷಕ್ಕೆ ಜನರು ಸ್ವತಂತ್ರ ಸರಕಾರ ಕೊಟ್ಟರೆ ಆಗ ಈ ಬಗ್ಗೆ ಚರ್ಚೆ ಮಾಡಬಹುದು ಎಂದು ಮಾಜಿ ಮುಖ್ಯಮಂತ್ರಿಗಳು ಹೇಳಿದರು.

JDS not support to Anti Conversion Bill: HDK

ಬಿಜೆಪಿ, ಕಾಂಗ್ರೆಸ್ ಆತ್ಮಕ್ಕೆ ಪ್ರಶ್ನೆ ಹಾಕಿಕೊಳ್ಳಲಿ:

ಪರ್ಸಂಟೇಜ್ ಬಗ್ಗೆ ಮಾತನಾಡುವ ನೈತಿಕತೆ ರಾಜ್ಯದ ಎರಡೂ ಪಕ್ಷಗಳಿಗೆ ಇಲ್ಲ ಎಂದು ಅವರು ಹೇಳಿದರಲ್ಲದೆ, ಪ್ರತಿ ಯೋಜನೆಗೆ ಹಣಕಾಸು ಇಲಾಖೆ ಹೊಂದಿದ್ದ ನನ್ನ ಕಚೇರಿಯಿಂದ ಎಂದೂ ಪರ್ಸಂಟೇಜ್ ವ್ಯವಸ್ಥೆ ಇರಲಿಲ್ಲ. ಅಂತದ್ದಕ್ಕೆ ಪ್ರೋತ್ಸಾಹ ಕೊಟ್ಟಿಲ್ಲ. ಆಗ ನಡೆದಿರುವ ಪರ್ಸಂಟೇಜ್ ವ್ಯವಹಾರದಲ್ಲಿ ನನ್ನ ಪಾತ್ರ ಇಲ್ಲ. ಆದರೆ ಇವತ್ತು ಪರ್ಸಂಟೇಜ್ ಬಗ್ಗೆ ಯಾರು ಯಾರು ಮಾತನಾಡುತ್ತಿದ್ದಾರೆ ಅವರು ತಮ್ಮ ಆತ್ಮಕ್ಕೆ ಪ್ರಶ್ನೆ ಹಾಕಿಕೊಂಡರೆ ಉತ್ತರ ಸಿಗುತ್ತದೆ ಎಂದು ಕುಮಾರಸ್ವಾಮಿ ಅವರು ತಿಳಿಸಿದರು.

ಎಲ್ಲರೂ ಗಾಜಿನ ಮನೆಯಲ್ಲಿ ಇದ್ದೇ ಮಾತನಾಡುತ್ತಿದ್ದಾರೆ. ಇವರಿಗೆ ಹಾಗೆ ಮಾತನಾಡಲು ಯಾವ ನೈತಿಕತೆ ಇದೆ. ದೇವರಾಜ ಅರಸು ಅವರ ನಂತರ ಐದು ವರ್ಷ ಮುಖ್ಯಮಂತ್ರಿ ಆಗಿದ್ದ ಸಿದ್ದರಾಮಯ್ಯ ಅವರ ಸರಕಾರದಲ್ಲಿ ಪರ್ಸಂಟೇಜ್ ವ್ಯವಹಾರ ಇರಲಿಲ್ಲವಾ? ಅವರು ಆತ್ಮ ಮುಟ್ಟಿಕೊಂಡು ಹೇಳ್ತಾರಾ? ಇಂತದ್ದನ್ನು ತಡೆಯಲು ಎಲ್ಲ ಪಕ್ಷಗಳು ಮಾತ್ರ ಅಲ್ಲ, ಜನಪ್ರತಿನಿಧಿಗಳ ಪಾತ್ರ ತುಂಬಾ ಇದೆ ಎಂದು ಅವರು ಅಭಿಪ್ರಾಯಪಟ್ಟರು.

ಮೆಟ್ರೊ ಉದಾಹರಣೆ ಕೊಟ್ಟ ಹೆಚ್ ಡಿಕೆ:

'ನಾನು ಮುಖ್ಯಮಂತ್ರಿ ಆಗಿದ್ದಾಗ ಯಾವುದೇ ಕಡತ ವಿಲೇವಾರಿ ಮಾಡಬೇಕಾದ ಸಂದರ್ಭದಲ್ಲಿ ನಾನು ಪರ್ಸಂಟೇಜ್ ಇಟ್ಟಿರಲಿಲ್ಲ. ಉದಾಹರಣೆಗೆ, ನಮ್ಮ ಮೆಟ್ರೊ ಯೋಜನೆಗೆ, ರಾಜ್ಯದಲ್ಲಿ ಮೊದಲ ಬಾರಿಗೆ 19 ಕಿ.ಮೀ. ದೂರದ ಪ್ರಥಮ ಹಂತಕ್ಕೆ ಚಾಲನೆ ನೀಡಿದ್ದು 2006ರ ನಾನು ಮುಖ್ಯಮಂತ್ರಿ ಆಗಿದ್ದಾಗ. ಆಗ ಟೆಂಡರ್‌ಗೆ ಒಪ್ಪಿಗೆ ಕೊಟ್ಟೆ. ಒಂದು ಕ್ಷಣವೂ ತಡ ಮಾಡದೇ ಫೈಲ್ ಕ್ಲಿಯರ್ ಮಾಡಿದೆ. ಆ ಗುತ್ತಿಗೆದಾರ ಯಾರೂ ಅನ್ನೋದು ನನಗೆ ಗೊತ್ತಿರಲಿಲ್ಲ. ನಾನು ಇಟ್ಟ ಷರತ್ತು ಏನೆಂದರೆ, ನಿಗದಿತ ಸಮಯದಲ್ಲಿ ಕಾಮಗಾರಿ ಮುಗಿಸಬೇಕು ಎಂತಾ ಹೇಳಿದ್ದು ಮಾತ್ರ. 2018ರಲ್ಲಿ ಕೂಡ ನಾನು ಸಿಎಂ ಆಗಿದ್ದಾಗ ಗುತ್ತಿಗೆದಾರರನ್ನು ಕರೆದು ನಿಮ್ಮ ಕಡತಕ್ಕೆ ಸಹಿ ಹಾಕುತ್ತಿದ್ದೇನೆ, ಇಷ್ಟು ಹಣ ಕೊಡಬೇಕು ಎಂದು ಕೇಳಿದವನಲ್ಲ. ಹೀಗಾಗಿ ಎಲ್ಲರೂ ಗಾಜಿನ ಮನೆಯಲ್ಲಿ ಇದ್ದಾರೆ. ಇದರ ಬಗ್ಗೆ ಮಾತನಾಡುವ ನೈತಿಕತೆ ಎಲ್ಲಿ ಉಳಿಸಿಕೊಂಡಿದ್ದಿರಿ ಎನ್ನುವುದೇ ನನ್ನ ಪ್ರಶ್ನೆ' ಎಂದು ಮಾಜಿ ಮುಖ್ಯಮಂತ್ರಿಗಳು ಹೇಳಿದರು.

ಅದಕ್ಕೆ ಜನತೆಗೆ ನಾನು ಕೇಳುತ್ತಿದ್ದೇನೆ, ಒಮ್ಮೆ ನನಗೆ ಸ್ವತಂತ್ರ ಸರಕಾರ ನೀಡಲಿ, ಅದರಲ್ಲಿ ನಾನು ವಿಫಲ ಆದರೆ ಅವತ್ತು ನಂಗೇನೂ ಶಿಕ್ಷೆ ಕೊಡಬೇಕೋ ಕೋಡಿ. ಅದು ಬಿಟ್ಟು ಪರ್ಸಂಟೇಜ್ ಹೊಡೆಯುವ ಇಂಥ ಕೆಲಸ ಮಾಡುವವರಿಗೆ ಮತ್ತೆ ಮತ್ತೆ ಅವಕಾಶ ಕೊಟ್ಟರೆ ನಾವು ಹೋರಾಟ ಮಾಡುವುದು ಹೇಗೆ? ಎಂದು ಪ್ರಶ್ನೆ ಮಾಡಿದರು.

ಸಾವಿಲ್ಲದ ಮನೆಯಲ್ಲಿ ಸಾಸಿವೆ ತನ್ನಿ ಎಂದು ಗೌತಮ ಬುದ್ಧ ಹೇಳಿದ ಮಾತನ್ನು ಉಲ್ಲೇಖಿಸಿದ ಅವರು, ಅದೇ ಪರಿಸ್ಥಿತಿ ಈಗ ಎಲ್ಲ ಕಡೆ ಇದೆ. ಇಂಥ ಪರಿಸ್ಥಿಯಲ್ಲಿ ಯಾರ ಬಗ್ಗೆ ಚರ್ಚೆ ಮಾಡ್ತಾರೆ ಕಾಂಗ್ರೆಸ್ ನಾಯಕರು? ಎಂದು ಮಾಜಿ ಮುಖ್ಯಮಂತ್ರಿಗಳು ಪ್ರಶ್ನಿಸಿದರು.

Recommended Video

      IPL 2022 Mega Auction: IPL ನಲ್ಲಿ ದುಡ್ಡಿನ ಸುರಿಮಳೆ! | Oneindia Kannada

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+