ಪರಿಷತ್ ಚುನಾವಣೆ; ಜೆಡಿಎಸ್ ಶಾಸಕನಿಂದ ಬಿಜೆಪಿ ಅಭ್ಯರ್ಥಿಗೆ ಮತ!
ಬೆಂಗಳೂರು, ಫೆಬ್ರವರಿ 17 : ಒಂದು ಸ್ಥಾನಕ್ಕೆ ನಡೆಯುತ್ತಿರುವ ವಿಧಾನ ಪರಿಷತ್ ಉಪ ಚುನಾವಣೆಯಲ್ಲಿ ಜೆಡಿಎಸ್ ಶಾಸಕರೊಬ್ಬರು ಬಿಜೆಪಿ ಅಭ್ಯರ್ಥಿಗೆ ಮತದಾನ ಮಾಡಿದರು. ಮತದಾನ ಇನ್ನೂ ನಡೆಯುತ್ತಿದ್ದು, ಸಂಜೆ ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.
ವಿಧಾನ ಪರಿಷತ್ ಉಪ ಚುನಾವಣೆಯಲ್ಲಿ ಮತದಾನ ಮಾಡಬಾರದು ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ತೀರ್ಮಾನವನ್ನು ಕೈಗೊಳ್ಳಲಾಗಿತ್ತು. ಆದ್ದರಿಂದ, ಶಾಸಕರು ಚುನಾವಣೆಯಿಂದ ದೂರ ಉಳಿದಿದ್ದಾರೆ. ಆದರೆ, ಒಬ್ಬರು ಶಾಸಕರು ಮತದಾನ ಮಾಡಿದ್ದಾರೆ.
ರಿಜ್ವಾನ್ ಅರ್ಷದ್ ರಾಜೀನಾಮೆಯಿಂದ ತೆರವಾದ ವಿಧಾನ ಪರಿಷತ್ತಿನ ಒಂದು ಸ್ಥಾನಕ್ಕೆ ಇಂದು ಚುನಾವಣೆ ನಡೆಯುತ್ತಿದೆ. ಬಿಜೆಪಿಯಿಂದ ಉಪ ಮುಖ್ಯಮಂತ್ರಿ, ಸಾರಿಗೆ ಸಚಿವ ಲಕ್ಷ್ಮಣ ಸವದಿ ಕಣದಲ್ಲಿದ್ದಾರೆ. ನಾಮಪತ್ರ ಸಲ್ಲಿಸಿದ್ದ ಇಬ್ಬರು ಅಭ್ಯರ್ಥಿಗಳು ವಾಪಸ್ ಪಡೆದಿದ್ದಾರೆ.
ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಶಾಸಕ ಜಿ. ಟಿ. ದೇವೇಗೌಡ ಪಕ್ಷದ ಚಟುವಟಿಕೆಗಳಿಂದ ದೂರ ಉಳಿದಿದ್ದಾರೆ. ಅವರು ವಿಧಾನ ಪರಿಷತ್ ಉಪ ಚುನಾವಣೆಯಲ್ಲಿ ಬಿಜೆಪಿಯ ಲಕ್ಷ್ಮಣ ಸವದಿಗೆ ಮತ ಹಾಕಿದ್ದಾರೆ. ಈ ಕುರಿತು ಅವರು ಹೇಳಿಕೆನ್ನು ನೀಡಿದ್ದಾರೆ.

ಜಿ. ಟಿ. ದೇವೇಗೌಡ ಹೇಳಿದ್ದೇನು?
ಮಾಧ್ಯಮಗಳ ಜೊತೆ ಮಾತನಾಡಿದ ಜಿ. ಟಿ. ದೇವೇಗೌಡರು, "ನಾನು ಜೆಡಿಎಸ್ ಪಕ್ಷದ ಶಾಸಕ, ಚಾಮುಂಡೇಶ್ವರಿ ಕ್ಷೇತ್ರದ ಜನ ನನ್ನನ್ನು ಗೆಲ್ಲಿಸಿದ್ದಾರೆ ಅವರು ಓಟ್ ಹಾಕಿ ಅಥವಾ ಹಾಕಬೇಡಿ ಅಂತ ಯಾವ ನಿರ್ದೇಶನವನ್ನೂ ನನಗೆ ಕೊಟ್ಟಿಲ್ಲ ನನ್ನ ಬಳಿ ಯಾರೂನೂ ಮಾತಾಡಿಲ್ಲ" ಎಂದು ಹೇಳಿದರು.

ನಮ್ಮ ಮತ ವ್ಯರ್ಥ ಆಗಬಾರದು
"ಚುನಾವಣೆ ಇದ್ದಿದ್ದರಿಂದ ನಾನು ಸೀದಾ ವಿಧಾನಸೌಧಕ್ಕೆ ಬಂದೆ. ಒಬ್ಬ ಅಭ್ಯರ್ಥಿ ನಾಮಪತ್ರ ವಾಪಾಸ್ ತೆಗೆದುಕೊಂಡಿದ್ದಾರೆ ಶಾಸಕರಾಗಿ ನಮ್ಮ ಮತ ವ್ಯರ್ಥ ಆಗಬಾರದು. ಲಕ್ಷ್ಮಣ ಸವದಿ ಈ ರಾಜ್ಯದ ಉಪಮುಖ್ಯಮಂತ್ರಿ ಅವರಿಗೆ ಓಟ್ ಹಾಕೋದು ನಮ್ಮ ಕರ್ತವ್ಯ. ಅದನ್ನು ಮಾಡಿದ್ದೀನಿ" ಎಂದು ಜಿ. ಟಿ. ದೇವೇಗೌಡರು ಹೇಳಿಕೆ ನೀಡಿದರು.

ಎಚ್. ಡಿ. ಕುಮಾರಸ್ವಾಮಿ ವಾಗ್ದಾಳಿ
ಮಾಧ್ಯಮಗಳ ಜೊತೆ ಮಾತನಾಡಿದ್ದ ಎಚ್. ಡಿ. ಕುಮಾರಸ್ವಾಮಿ, "ಮಾಜಿ ಸಚಿವ ಜಿ. ಟಿ. ದೇವೇಗೌಡ ನಮ್ಮಪಕ್ಷದಲ್ಲಿ ಇದ್ದಾರಾ?. ಅವರು ಬೇಕಾದಂತೆ ಈಗಾಗಲೇ ಹೇಳಿಕೆಗಳನ್ನು ಕೊಟ್ಟಿದ್ದಾರೆ. ವಿಧಾನ ಪರಿಷತ್ ಚುನಾವಣೆಯಲ್ಲಿ ಮತದಾನ ಮಾಡಬಾರದು ಎಂದು ಶಾಸಕಾಂಗ ಪಕ್ಷದ ಸಭೆಯಲ್ಲಿ ತೀರ್ಮಾನ ಮಾಡಿದ್ದೇವೆ" ಎಂದು ಹೇಳಿದ್ದಾರೆ.

ಜಿ. ಟಿ. ದೇವೇಗೌಡರಿಗೆ ಬಿಟ್ಟಿದ್ದು
"ಶಾಸಕಾಂಗ ಪಕ್ಷದ ಸಭೆಯ ತೀರ್ಮಾನಕ್ಕೆ ಗೌರವ ಕೊಡಬೇಕು ಎಂಬುದು ಜಿ. ಟಿ. ದೇವೇಗೌಡರಿಗೆ ಬಿಟ್ಟಿದ್ದು. ವಿಧಾನ ಪರಿಷತ್ ಚುನಾವಣೆಯಲ್ಲಿ ಮತದಾನ ಮಾಡುವುದು ವ್ಯರ್ಥ ಎಂದು ಕಾಂಗ್ರೆಸ್ ನಾಯಕರೂ ನಿರ್ಧಾರ ಮಾಡಿದ್ದಾರೆ. ಹಾಗಾಗಿ ನಾವೂ ಸಹ ಮತದಾನದಲ್ಲಿ ಪಾಲ್ಗೊಳ್ಳದೇ ಇರುವ ಬಗ್ಗೆ ತೀರ್ಮಾನಿಸಿದ್ದೇವೆ" ಎಂದು ಕುಮಾರಸ್ವಾಮಿ ಹೇಳಿದರು.












Click it and Unblock the Notifications