ಏಪ್ರಿಲ್ 17-19ರೊಳಗೆ ಮಂಡ್ಯ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಶಾಸಕ ಎಂ.ಶ್ರೀನಿವಾಸ್ ನಾಮಪತ್ರ ಸಲ್ಲಿಕೆ
ಮಂಡ್ಯ, ಏಪ್ರಿಲ್ 6:ಕರ್ನಾಟಕ ವಿಧಾನಸಭಾ ಚುನಾವಣೆ ಕಣ ರಂಗೇರುತ್ತಿದ್ದಂತೆ ಮಂಡ್ಯ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಶಾಸಕ ಎಂ ಶ್ರೀನಿವಾಸ್ ಅವರು ಏಪ್ರಿಲ್ 17-19ರೊಳಗೆ ನಾಮಪತ್ರ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ. ಈ ವಿಚಾರವನ್ನು ಖುದ್ದು ಶಾಸಕರು 'ಒನ್ ಇಂಡಿಯಾ'ಗೆ ತಿಳಿಸಿದ್ದಾರೆ.
ಮಂಡ್ಯದಲ್ಲಿ ಈಗಾಗಲೇ ಟಿಕೆಟ್ ಪಡೆದು ಪ್ರಚಾರ ಆರಂಭಿಸಿರುವ ಎಂ ಶ್ರೀನಿವಾಸ್ ಅವರು ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮಂಡ್ಯದಲ್ಲಿ ಮೊದಲಿನಿಂದಲೂ ಜೆಡಿಎಸ್ ಪ್ರಾಬಲ್ಯವಿದೆ. ಎಚ್ಡಿ ದೇವೇಗೌಡ, ಎಚ್ಡಿ ಕುಮಾರಸ್ವಾಮಿ ಹಾಗೂ ಹಾಲಿ ಶಾಸಕ ಎಂ ಶ್ರೀನಿವಾಸ್ ಅವರ ಬೆಂಬಲಿಗರು ಕಾರ್ಯಕರ್ತರ ಬಹುದೊಡ್ಡ ಪಡೆ ಇದೆ.

ಜೆಡಿಎಸ್ ಭದ್ರಕೋಟೆಯಾಗಿರುವ ಮಂಡ್ಯದಲ್ಲಿ ಚುನಾವಣಾ ರಂಗ ಜೋರಾಗಿದೆ. ಎಲ್ಲ ಪಕ್ಷಗಳಿಂದಲೂ ಪ್ರಚಾರವೂ ನಡೆಯುತ್ತಿದೆ. ಜೆಡಿಎಸ್ನಿಂದ ಈಗಾಗಲೇ ಟಿಕೆಟ್ ಪಡೆದಿರುವ ಎಂ.ಶ್ರೀನಿವಾಸ್ ಅವರು ಧರ್ಮಸ್ಥಳ ಮಂಜುನಾಥೇಶ್ವರನ ದರ್ಶನ ಪಡೆದಿದ್ದು, ಏಪ್ರಿಲ್ 17-19ರೊಳಗೆ ನಾಮಪತ್ರ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ.
ಜೆಡಿಎಸ್ನ ಎರಡನೇ ಪಟ್ಟಿ ಬಿಡುಗಡೆಯಾಗಬೇಕಿದೆ. ಪಕ್ಷದ ಮೊದಲ ಪಟ್ಟಿಯಲ್ಲೇ ಟಿಕೆಟ್ ಪಡೆದಿರುವ ಎಂ ಶ್ರೀನಿವಾಸ್ ಅವರು ಮತ್ತೊಮ್ಮೆ ಕ್ಷೇತ್ರದಲ್ಲಿ ಜೆಡಿಎಸ್ ಪತಾಕೆ ಹಾರಿಸಲು ಮುಂದಾಗಿದ್ದಾರೆ. ಎಂ. ಶ್ರೀನಿವಾಸ್ ಮಂಡ್ಯ ತಾಲ್ಲೂಕು ಹನಕೆರೆ ಗ್ರಾಮದಲ್ಲಿ 02.02.1951ರಲ್ಲಿ ಜನಿಸಿದ್ದರು. ಅವರ ತಂದೆ ಮೆಣಸೇಗೌಡ ಹಾಗೂ ತಾಯಿ ಅರಸಮ್ಮ.
ಅವರದು ರೈತಾಪಿ ಕುಟುಂಬ. ಹನಕೆರೆಯಲ್ಲಿಯೇ ಪ್ರಾಥಮಿಕ ಹಾಗೂ ಮಾಧ್ಯಮಿಕ ವಿದ್ಯಾಭ್ಯಾಸ ಮುಗಿಸಿದರು. ಪ್ರೌಢಶಾಲಾ ಶಿಕ್ಷಣವನ್ನು ಮಂಡ್ಯದ ಸರ್ಕಾರಿ ಪ್ರೌಢಶಾಲೆಯಲ್ಲೂ (ಕಲ್ಲುಕಟ್ಟಡ), ಬಿಎಸ್ಸಿ ಪದವಿಯನ್ನು ಮೈಸೂರಿನ ಎಂಡಿಟಿಡಿಬಿ ಕಾಲೇಜಿನಲ್ಲಿ ಮುಗಿಸಿದರು. ಕಾನೂನು ಪದವಿಯನ್ನು ಮಂಡ್ಯದ ಹೊಂಬೇಗೌಡ ಕಾನೂನು ಕಾಲೇಜಿನಲ್ಲಿ ಪಡೆದು ವಕೀಲಿ ವೃತ್ತಿಯನ್ನು ಮಂಡ್ಯದಲ್ಲಿಯೇ ಪ್ರಾರಂಭಿಸಿದ್ದರು.

ಮೊದಲಿಗೆ ದಿವಂಗತ ರಾಮಕೃಷ್ಣ ಹೆಗ್ಗಡೆಯವರ ಕರ್ನಾಟಕ ಜನಶಕ್ತಿಯ ಅಭ್ಯರ್ಥಿಯಾಗಿ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಹದಿನೆಂಟು ಸಾವಿರ ಮತಗಳನ್ನು ಪಡೆಯುತ್ತಾರೆ. ಇದು ಅವರಲ್ಲಿ ವಿಶ್ವಾಸವನ್ನು ಮೂಡಿಸುತ್ತದೆ.
ನಂತರ ನಡೆದ ಚುನಾವಣೆಯಲ್ಲಿ ಜೆಡಿಯು ಪಕ್ಷದಿಂದ ಸ್ಪರ್ಧಿಸಿ ಪರಾಭವ ಹೊಂದುತ್ತಾರೆ. ಇದಕ್ಕೆ ಎದೆಗುಂದದೆ ಆಶಾಭಾವವಿರಿಸಿಕೊಂಡು ಮುಂದಿನ ಚುನಾವಣೆಯಲ್ಲಿ ಜಾತ್ಯತೀತ ಜನತಾದಳದ ಅಭ್ಯರ್ಥಿಯಾಗಿ ಮೊತ್ತಮೊದಲಿಗೆ ಗೆಲುವು ಸಾಧಿಸುತ್ತಾರೆ.
ಒಕ್ಕಲಿಗ ಮತದಾರರ ಸಂಪೂರ್ಣ ಮತಗಳು ಒಟ್ಟಾಗಿ ಬೀಳುವುದರಿಂದ ಮೊದಲಿನಿಂದಲೂ ಇಲ್ಲಿ ಜೆಡಿಎಸ್ ಪ್ರಾಬಲ್ಯ ಇದೆ. 2009ರಲ್ಲಿ ಮಂಡ್ಯ ಮತ್ತು ಕೆರಗೋಡು ವಿಲೀನಗೊಂಡ ಕ್ಷೇತ್ರದ ಶಾಸಕರಾಗಿ ಆಯ್ಕೆಗೊಂಡು ದಾಖಲೆ ನಿರ್ಮಿಸುತ್ತಾರೆ. 2013ರಲ್ಲಿ ಸೋತು 2018ರಲ್ಲಿ 69,421 ಮತಗಳೊಂದಿಗೆ ಮೂರನೇ ಬಾರಿಗೆ ಶಾಸಕರಾಗಿ ಆಯ್ಕೆಗೊಂಡಿದ್ದರು.
ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಎಂ ಶ್ರೀನಿವಾಸ್ ಅವರೊಂದಿಗೆ ಹಲವು ಮಂದಿ ಟಿಕೆಟ್ ಆಕಾಂಕ್ಷಿಗಳಾಗಿದ್ದರು. ಆದರೂ ಎಂ ಶ್ರೀನಿವಾಸ್ ಅವರು ಟಿಕೆಟ್ ಪಡೆಯುವುದರಲ್ಲಿ ಯಶಸ್ವಿಯಾಗಿದ್ದರು. ಬಳಿಕ ಜೆಡಿಎಸ್ ವರಿಷ್ಠರು ಎಂ ಶ್ರೀನಿವಾಸ್ ಅವರಿಗೆ ಟಿಕೆಟ್ ನೀಡಿದ್ದರು. ಕ್ಷೇತ್ರದಲ್ಲಿ ಮೊದಲಿನಿಂದಲೂ ಚಿರಪರಿಚಿತರಾಗಿರುವ ಎಂ ಶ್ರೀನಿವಾಸ್ ಅವರು ಈ ಬಾರಿಯೂ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮಂಡ್ಯದಲ್ಲಿ ಮೊದಲಿನಿಂದಲೂ ಕಾಂಗ್ರೆಸ್ ಜೆಡಿಎಸ್ಗೆ ಪೈಪೋಟಿ ಇದ್ದೇ ಇದೆ. ಆದರೆ ಕ್ಷೇತ್ರದ ಜನರು ಮೊದಲಿನಿಂದಲೂ ಜೆಡಿಎಸ್ನ ಎಂ ಶ್ರೀನಿವಾಸ್ ಅವರನ್ನು ಗೆಲ್ಲಿಸಿಕೊಂಡು ಬಂದಿದ್ದಾರೆ. ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಎರಡನೇ ಪಟ್ಟು ಬಿಡುಗಡೆಯಾಗಿದ್ದು, ಮಂಡ್ಯದಿಂದ ಪಿ ರವಿಕುಮಾರ್ ಅವರಿಗೆ ಟಿಕೆಟ್ ಸಿಕ್ಕಿದೆ. ಈ ಬಾರಿ ಗೆಲುವು ಯಾರದ್ದಾಗುತ್ತದೆ ನೋಡಬೇಕಿದೆ.












Click it and Unblock the Notifications