ಜೆಡಿಎಸ್ನಿಂದ ಪರಿಷತ್ ನಾಮ ನಿರ್ದೇಶನಕ್ಕೆ ಅಚ್ಚರಿ ಹೆಸರು
Recommended Video

ಬೆಂಗಳೂರು, ಜನವರಿ 10 : ಕರ್ನಾಟಕ ಜೆಡಿಎಸ್ ಖಾಲಿ ಇರುವ ಒಂದು ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ನಾಮನಿರ್ದೇಶನ ಮಾಡಲು ಮುಂದಾಗಿದೆ. ದೇವೇಗೌಡರ ಕುಟುಂಬದ ಆಪ್ತರನ್ನು ನಾಮ ನಿರ್ದೇಶನ ಮಾಡಲು ಮುಂದಾಗಿರುವುದು ಅಚ್ಚರಿಗೆ ಕಾರಣವಾಗಿದೆ.
ಎಚ್.ಡಿ.ದೇವೇಗೌಡರು ಪ್ರಧಾನಿಯಾಗಿದ್ದಾಗ ಆಪ್ತ ಕಾರ್ಯದರ್ಶಿಯಾಗಿದ್ದ ತಿಪ್ಪೇಸ್ವಾಮಿ ಅವರನ್ನು ನಾಮ ನಿರ್ದೇಶನ ಮಾಡಲು ಪಕ್ಷ ಮುಂದಾಗಿದೆ. ಈ ಕುರಿತು ಎಚ್.ಡಿ.ಕುಮಾರಸ್ವಾಮಿ ಮತ್ತು ಎಚ್.ಡಿ.ದೇವೇಗೌಡರು ಬುಧವಾರ ಚರ್ಚೆ ನಡೆಸಿದ್ದಾರೆ.
ತಿಪ್ಪೇಸ್ವಾಮಿ ಅವರು ಹಾಸನ ಮೂಲದವರು. ಕುರುಬ ಸಮುದಾಯಕ್ಕೆ ಸೇರಿದ್ದಾರೆ. ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಅವರ ಕಚೇರಿಯ ವಿಶೇಷಾಧಿಕಾರಿಯಾಗಿ ತಿಪ್ಪೇಸ್ವಾಮಿ ಅವರು ಪ್ರಸ್ತುತ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ.

2018ರ ವಿಧಾನಸಭೆ ಚುನಾವಣೆಯಲ್ಲಿ ಸೋತ ಕೋನ ರೆಡ್ಡಿ ಅವರನ್ನು ಸಹ ವಿಧಾನ ಪರಿಷತ್ ಸದಸ್ಯರಾಗಿ ನೇಮಕ ಮಾಡಬೇಕು ಎಂಬ ಒತ್ತಾಯವಿದೆ. ಆದರೆ, ಅವರನ್ನು ಧಾರವಾಡ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸಲು ದೇವೇಗೌಡರು ಮುಂದಾಗಿದ್ದಾರೆ.
ಆದ್ದರಿಂದ, ದೇವೇಗೌಡರು ವಿಧಾನ ಪರಿಷತ ಸದಸ್ಯರಾಗಿ ತಿಪ್ಪೇಸ್ವಾಮಿ ಅವರನ್ನು ನೇಮಕ ಮಾಡಲು ನಿರ್ಧರಿಸಿದ್ದಾರೆ. ಎಚ್.ಡಿ.ಕುಮಾರಸ್ವಾಮಿ ಅವರಿಗೆ ಈ ಕುರಿತು ನಿರ್ದೇಶವನ್ನು ನೀಡಿದ್ದಾರೆ.
ವಿಧಾನ ಪರಿಷತ್ನಲ್ಲಿ ನಾಲ್ಕು ಸ್ಥಾನಗಳು ಖಾಲಿ ಇದ್ದವು. ಇವುಗಳಲ್ಲಿ ಕಾಂಗ್ರೆಸ್ ಮೂರು ಸ್ಥಾನಗಳನ್ನು ಪಡೆದಿದ್ದು, ಮೂವರನ್ನು ನಾಮ ನಿರ್ದೇಶನ ಮಾಡಿದೆ. ಜೆಡಿಎಸ್ ಪಾಲಿಗೆ ಒಂದು ಸ್ಥಾನ ಸಿಕ್ಕಿದ್ದು, ಈಗ ಭರ್ತಿ ಮಾಡಲು ಮುಂದಾಗಿದೆ.












Click it and Unblock the Notifications