JDS Manifesto : ಸ್ವಸಹಾಯ ಸಂಘಗಳ ಸಾಲಮನ್ನಾ! ಕೈಗಾರಿಕೆ ಸ್ಥಾಪನೆಗೆ 10 ಲಕ್ಷ ಸಹಾಯಧನ : ಜೆಡಿಎಸ್ ಭರವಸೆ
2023ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರಕ್ಕೆ ಬರಲೇಬೇಕೆಂದು ಜೆಡಿಎಸ್ ಪಣತೊಟ್ಟಿದೆ. ರಾಜ್ಯಾದಾದ್ಯಂತ ಸಮಾರಂಭ, ಪ್ರಚಾರ, ರೋಡ್ ಶೋ ಗಳನ್ನು ಮಾಡಿರುವ ಹೆಚ್.ಡಿ ಕುಮಾರಸ್ವಾಮಿ ಮತ್ತೊಮ್ಮೆ ಮುಖ್ಯಮಂತ್ರಿಯಾಗುವ ಉತ್ಸಾಹದಲ್ಲಿದ್ದಾರೆ. ಚುನಾವಣೆಗೂ ಮುನ್ನ ಜೆಡಿಎಸ್ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಇದನ್ನು ಜನತಾ ಪ್ರಣಾಳಿಕೆ ಎಂದು ಜೆಡಿಎಸ್ ಹೇಳಿಕೊಂಡಿದೆ.
80 ಸಾವಿರ ಜನರು ಮುಂದಿನ ಸರ್ಕಾರ ಯಾವುದಕ್ಕೆ ಪ್ರಾಮುಖ್ಯತೆ ನೀಡಬೇಕು ಎಂದು ಜನತಾ ಕಾರ್ಯಕ್ರಮದಲ್ಲಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದರು. ಅವರ ಅಭಿಪ್ರಾಯಗಳನ್ನು ಜೆಡಿಎಸ್ ಪ್ರಣಾಳಿಕೆ ರೂಪಿಸುವ ಸಮಯದಲ್ಲಿ ಪರಿಗಣನೆಗೆ ತೆಗೆದುಕೊಂಡಿದೆ. ಜನತಾ ಜಲಧಾರೆ, ಜನತಾ ಮಿತ್ರ, ಪಂಚರತ್ನ ರಥ ಯಾತ್ರೆಯ ಸಮಯದಲ್ಲಿ ಜನರು ನೀಡಿದ ಸಲಹೆ, ಸೂಚನೆಗಳು, ನಿರೀಕ್ಷೆಗಳನ್ನು ಪರಿಗಣಿಸಿ ಪ್ರಣಾಳಿಕೆ ರೂಪಿಸಿದ್ದೇವೆ ಎಂದು ಜೆಡಿಎಸ್ ನಾಯಕರು ತಿಳಿಸಿದ್ದಾರೆ.

ಜೆಡಿಎಸ್ ಪ್ರಣಾಳಿಕೆಯಲ್ಲಿ ಮಹಿಳೆ ಮತ್ತು ಯುವಜನತೆಗೆ ಕೂಡ ಭರಪೂರ ಭರವಸೆಗಳನ್ನು ದಳಪತಿಗಳು ನೀಡಿದ್ದಾರೆ. ಅದರಲ್ಲಿ ಮುಖ್ಯವಾಗಿ ಬಹಳ ದಿನಗಳ ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆ ಈಡೇರಿಸುವುದಾಗಿ ಕುಮಾರಸ್ವಾಮಿ ಭರವಸೆ ನೀಡಿದ್ದಾರೆ. ರಾಜ್ಯದಲ್ಲಿ ಒಟ್ಟು 66,361 ಅಂಗನವಾಡಿ ಕೇಂದ್ರಗಳಿದ್ದು, ಈ ಕೇಂದ್ರಗಳಲ್ಲಿ64,729 ಕಾರ್ಯಕರ್ತೆಯರು ಮತ್ತು59,627 ಸಹಾಯಕಿಯರು ಕರ್ತವ್ಯನಿರ್ವಹಿಸುತ್ತಿದ್ದಾರೆ.
ಅಂಗನವಾಡಿ ಕಾರ್ಯಕರ್ತೆಯರಿಗೆ 11,000 ರುಪಾಯಿ, ಸಹಾಯಕಿಯರಿಗೆ 6,500 ರುಪಾಯಿ ಮತ್ತು ಮಿನಿ ಅಂಗನವಾಡಿ ಕಾರ್ಯಕರ್ತೆಯರಿಗೆ 7,500 ರುಪಾಯಿಗಳ ಗೌರವಧನ ನೀಡುವುದಾಗಿ ಜೆಡಿಎಸ್ ಭರವಸೆ ನೀಡಿದೆ. ಈ ಕಾರ್ಯಕರ್ತರ ಸೇವೆಯನ್ನು ಖಾಯಂಗೊಳಿಸಿ, ವೇತನ ನಿಗದಿಗೊಳಿಸಿ ಪ್ರತಿ ಕಾರ್ಯಕರ್ತೆಯರಿಗೆ ಮಾಸಿಕ ಹೆಚ್ಚುವರಿಯಾಗಿ 5000 ರೂ. ವೇತನ ಪಾವತಿಸಲಾಗುವುದು ಎಂದು ಜೆಡಿಎಸ್ ಹೇಳಿದೆ. ಅಲ್ಲದೆ, ಕನಿಷ್ಠ 15 ವರ್ಷ ಸೇವೆ ಸಲ್ಲಿಸಿ ನಿವೃತ್ತರಾದ ಕಾರ್ಯಕರ್ತೆಯರಿಗೆ ಪಿಂಚಣಿ ಯೋಜನೆ ಜಾರಿ ಮಾಡುವುದಾಗಿ ಹೇಳಿದೆ.
ಸ್ತ್ರೀಶಕ್ತಿ ಸ್ವಸಹಾಯ ಸಂಘಗಳ ಸಾಲ ಮನ್ನಾ
ರಾಜ್ಯದಲ್ಲಿ ಸ್ತ್ರೀಶಕ್ತಿಸ್ವಸಹಾಯ ಸಂಘಗಳ ಸಾಲ ಮನ್ನಾ ಮಾಡುವುದಾಗಿ ಭರವಸೆ ನೀಡಲಾಗಿದೆ. ಮಾತೃಶ್ರೀ ಮತ್ತು ಗರ್ಭಿಣಿ ತಾಯಂದಿರ ಅಗತ್ಯತೆ ಪೂರೈಕೆಗೆ 6 ತಿಂಗಳ ಕಾಲ 6 ಸಾವಿರು ರುಪಾಯಿ ಭತ್ಯೆ ನೀಡಲಾಗುತ್ತದೆ. ವಿಧವಾ ವೇತನವನ್ನು 900 ರುಪಾಯಿಗಳಿಂದ 2,500 ರುಪಾಯಿಗಳಿಗೆ ಹೆಚ್ಚಿಸುವುದಾಗಿ ಭರವಸೆ ನೀಡಿದೆ.
ಮಹಿಳೆಯರಿಗೆ ಗೃಹ ಬಳಕೆ ವಸ್ತು ತಯಾರಿಕೆ ತರಬೇತಿ ನೀಡುವ ಮೂಲಕ ಸ್ವಾವಲಂಬಿಗಳನ್ನಾಗಿ ಮಾಡುವ ಕಾರ್ಯಕ್ರಮ ರೂಪಿಸಿದೆ. ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳನ್ನು ನಡೆಸುವ ಮಹಿಳಾ ಉದ್ಯಮಿಗಳಿಗೆ ರಿಯಾಯಿತಿ ಬಡ್ಡಿ ದರದಲ್ಲಿ ಮೇಲಾಧಾರ ಭದ್ರತೆ (collateral free) ಇಲ್ಲದೆ ಎರಡು ಕೋಟಿ ರುಪಾಯಿವರೆಗೆ ಬ್ಯಾಂಕ್ ಮೂಲಕ ಸಾಲ ಸೌಲಭ್ಯ ನೀಡುವುದಾಗಿ ತಿಳಿಸಿದೆ. ಒಂದು ವರ್ಷದ ಕೌಶಲ್ಯತೆ ಅಭಿವೃದ್ದಿ ತರಬೇತಿ ಯೊಜನೆಯಲ್ಲಿ ತೊಡಗಿಸಿಕೊಳ್ಳುವ ಯುವಕ-ಯುವತಿಯರಿಗೆ ಮಾಸಿಕ 8 ಸಾವಿರ ರೂ.ಗಳ ಭತ್ಯೆ ನೀಡುವುದಾಗಿ ಘೋಷಿಸಿದೆ.
ಯುವಜನತೆಯನ್ನು ಸ್ವಾವಲಂಬಿಗಳನ್ನಾಗಿಸಲು ಯೋಜನೆ
ಯುವಜನತೆಯನ್ನು ಸ್ವಾವಲಂಬಿಗಳನ್ನಾಗಿಸುವ ನಿಟ್ಟಿನಲ್ಲಿ ಜೆಡಿಎಸ್ ಹಲವು ಯೋಜನೆಗಳನ್ನು ಸಿದ್ದಪಡಿಸಿದೆ. ಕೌಶಲ್ಯ ಅಭಿವೃದ್ಧಿ, ತಂತ್ರಜ್ಞಾನ ಆಧಾರಿತ ಉಚಿತ ತರಬೇತಿ ನೀಡುವುದು. ಉದ್ಯೋಗ ಮತ್ತು ಸಂದರ್ಶನ ಕೇಂದ್ರಗಳ ಸ್ಥಾಪನೆ, ಉದ್ಯಮಶೀಲತೆ ಆಧಾರಿತ ತರಬೇತಿ ನೀಡುವುದು, ಪ್ರತಿ ಗ್ರಾಮಕ್ಕೂ ಕೌಶಲ್ಯ ತರಬೇತಿ ವಾಹನ ನೀಡುವ ಭರವಸೆ ನೀಡಿದೆ.
ಸುಲಭ ಮತ್ತು ಬಡ್ಡಿ ರಿಯಾಯಿತಿ ಸಾಲ ಸೌಲಭ್ಯ ನೀಡುವುದು, ಗ್ರಾಮ ಪಂಚಾಯಿತಿಗಳಲ್ಲಿ ಕಂಪ್ಯೂಟರ್ ಕೇಂದ್ರ ಸ್ಥಾಪನೆ, ಯುವ ಜನರಿಗೆ ವ್ಯಕ್ತಿವಿಕಸನ ಮತ್ತುಇಂಗ್ಲಿಷ್ ತರಬೇತಿ, ಯುವಜನತೆಗೆ ಉದ್ಯೋಗ ಸೃಷ್ಟಿ ಯೋಜನೆಗಳು, ಉದ್ಯಮ ಸ್ಥಾಪನೆಗೆ ಸಹಾಯ ಧನ, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸ್ಥಾಪನೆಗೆ ಮುಂದಾಗುವ ನಿರುದ್ಯೋಗ ಯುವಕರಿಗೆ ಕೈಗಾರಿಕೆ ಉತ್ಪನ್ನಘಟಕ ಸ್ಥಾಪನೆಗೆ 10 ಲಕ್ಷ ರುಪಾಯಿ ಸಹಾಯಧನ ನೀಡುವುದಾಗಿ ತಿಳಿಸಿದೆ.
ತರಬೇತಿ ಮತ್ತು ಸೇವೆಗಳನ್ನುಒದಗಿಸುವ ವಲಯಗಳಲ್ಲಿ ತೊಡಗಿಸಿಕೊಳ್ಳುವ ನಿರುದ್ಯೋಗಿ ಯುವಕರಿಗೆ ರೂ.3 ಲಕ್ಷ ರುಪಾಯಿಗಳ ಸಹಾಯಧನ. ಸಣ್ಣಉದ್ಯಮವಾಗಿ ವ್ಯಾಪಾರ-ವಹಿವಾಟು ನಡೆಸುವ ನಿರುದ್ಯೋಗಿ ಯುವಕರಿಗೆ 2 ಲಕ್ಷ ರುಪಾಯಿ ಸಹಾಯಧನ ಸಿಗಲಿದೆ. ಚೀನಾ ದೇಶದ ಜೊತೆ ಸ್ಪರ್ಧೆ ಯೋಜನೆಯಡಿ ಜಿಲ್ಲಾ ಮಟ್ಟದಲ್ಲಿ ಕೂಡ ಕೈಗಾರಿಕಾ ಕ್ಲಸ್ಟರ್ ಗಳ ಸ್ಥಾಪನೆ, ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿಸಿದ್ದಉಡುಪು ತಯಾರಿಸುವ ಘಟಕಗಳ (garment manufacture units) ಅಂದಾಜು ವೆಚ್ಚದ ಶೇ.50 ರಷ್ಟನ್ನುಸಹಾಯ ಧನವಾಗಿ ನೀಡುವ ಭರವಸೆಯನ್ನು ನೀಡಿದೆ.












Click it and Unblock the Notifications