Breaking; ಡಿಕೆ ಸುರೇಶ್ ಭೇಟಿಯಾದ ಜೆಡಿಎಸ್ ನಾಯಕ ಕೆ. ಸಿ. ವಿರೇಂದ್ರ
ಬೆಂಗಳೂರು, ಅಕ್ಟೋಬರ್ 05; ಚಿತ್ರದುರ್ಗ ಜಿಲ್ಲೆಯ ಜೆಡಿಎಸ್ ನಾಯಕ, ಉದ್ಯಮಿ ಕೆ. ಸಿ. ವೀರೇಂದ್ರ (ಪಪ್ಪಿ) ಕಾಂಗ್ರೆಸ್ ಸೇರಲಿದ್ದಾರೆ ಎಂಬ ಸುದ್ದಿಗಳು ಹಬ್ಬಿವೆ. ಚಿತ್ರದುರ್ಗ ಕ್ಷೇತ್ರದಿಂದ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ ಎಂಬುದು ಸದ್ಯ ಹರಿದಾಡುತ್ತಿರುವ ಸುದ್ದಿ.
ನಟ ದೊಡ್ಡಣ್ಣ ಅಳಿಯ ಮತ್ತು ಉದ್ಯಮಿ ಕೆ. ಸಿ. ವೀರೇಂದ್ರ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ, ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಸಹೋದರ ಡಿ. ಕೆ. ಸುರೇಶ್ ಭೇಟಿಯಾಗಿದ್ದಾರೆ. ಈ ಚಿತ್ರಗಳನ್ನು ಅವರು ತಮ್ಮ ಫೇಸ್ಬುಕ್ ಖಾತೆಯಲ್ಲಿ ಅಪ್ ಲೋಡ್ ಮಾಡಿದ್ದಾರೆ.
ಕೆ. ಸಿ. ವೀರೇಂದ್ರ ಮೂಲತಃ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯವರು. ಆದರೆ ಅವರು ಚಿತ್ರದುರ್ಗ ನಗರ ಕ್ಷೇತ್ರದಿಂದ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂಬ ಸುದ್ದಿಗಳು ಹಬ್ಬಿವೆ.

ಉದ್ಯಮಿಯಾಗಿ, ಹಲವು ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಕೆ. ಸಿ. ವೀರೇಂದ್ರ ಜೆಡಿಎಸ್ ಜೊತೆ ಗುರುತಿಸಿಕೊಂಡಿದ್ದಾರೆ. ಆದರೆ ಅವರು ಕಾಂಗ್ರೆಸ್ ಸೇರಲಿದ್ದಾರೆ ಎಂಬ ಸುದ್ದಿಗಳು ಹಬ್ಬಿವೆ.

ಇಂತಹ ಸಂದರ್ಭದಲ್ಲಿಯೇ ಕೆ. ಸಿ. ವೀರೇಂದ್ರ ಡಿ. ಕೆ. ಸುರೇಶ್ ಭೇಟಿ ಮಾಡಿದ್ದು ಕುತೂಹಲಕ್ಕೆ ಕಾರಣವಾಗಿದೆ. ಮಾಜಿ ಸಚಿವ, ಹಿರಿಯೂರು ಕ್ಷೇತ್ರದ ಮಾಜಿ ಶಾಸಕ ಸುಧಾಕರ್ ಮತ್ತು ಇತರ ನಾಯಕರ ಜೊತೆ ಕೆ. ಸಿ. ವೀರೇಂದ್ರ ಡಿ. ಕೆ. ಸುರೇಶ್ ಭೇಟಿಯಾಗಿದ್ದಾರೆ.
ಉದ್ಯಮಿಯಾದ ಕೆ. ಸಿ. ವೀರೇಂದ್ರ ಮನೆ ಮೇಲೆ 2016ರ ಡಿಸೆಂಬರ್ನಲ್ಲಿ ಸಿಬಿಐ ದಾಳಿ ನಡೆದಿತ್ತು. ನೋಟುಗಳ ನಿಷೇಧದ ಬಳಿಕ ನಡೆದ ದಾಳಿಯ ವೇಳೆ ಅವರ ನಿವಾಸದಲ್ಲಿ ಲಕ್ಷಾಂತರ ರೂಪಾಯಿಯ ಹೊಸ ನೋಟುಗಳು ಪತ್ತೆಯಾಗಿತ್ತು.
ಚಳ್ಳಕೆರೆಯ ಉದ್ಯಮಿಯ ಪುತ್ರ ಕೆ. ಸಿ. ವೀರೇಂದ್ರ ರಾಜ್ಯ ಮಾತ್ರವಲ್ಲದೇ ಹೊರ ರಾಜ್ಯಗಳಲ್ಲಿಯೂ ಉದ್ಯಮ ಹೊಂದಿದ್ದಾರೆ. ಚಿತ್ರದುರ್ಗ ನಗರ ಕ್ಷೇತ್ರದಿಂದ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಅವರು ಬಯಸಿದ್ದಾರೆ. ಹಾಲಿ ಕ್ಷೇತ್ರದ ಶಾಸಕರು ಬಿಜೆಪಿಯ ಜಿ. ಎಚ್. ತಿಪ್ಪಾರೆಡ್ಡಿ.












Click it and Unblock the Notifications