Nikhil Kumaraswamy: ಸಂಕ್ರಾಂತಿ ಬಳಿಕ ನಿಖಿಲ್ ಕುಮಾರಸ್ವಾಮಿ ಜೆಡಿಎಸ್ ರಾಜ್ಯಾಧ್ಯಕ್ಷ?
ಬೆಂಗಳೂರು, ಜನವರಿ 02: ಹೊಸ ವರ್ಷದ ಸಂಕ್ರಾಂತಿ ಹಬ್ಬದ ಬಳಿಕ ಪುನಶ್ಚೇತನಕ್ಕೆ ಸಜ್ಜಾಗಿದ್ದು, ನೂತನ ಸಾರಥಿ ನೇಮಿಸುವ ಬಗ್ಗೆ ಪಕ್ಷದಲ್ಲಿ ಚರ್ಚೆ ಆರಂಭವಾಗಿದೆ. ಈಗಾಗಲೇ ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ಹೆಚ್ ಡಿ ಕುಮಾರಸ್ವಾಮಿ ಅವರು ಪಕ್ಷವನ್ನ ಮುನ್ನಡೆಸುತ್ತಿದ್ದು, ಇದೀಗ ಪಕ್ಷದ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರಿಗೆ ರಾಜ್ಯಾಧ್ಯಕ್ಷ ಹುದ್ದೆ ನೀಡುವ ಬಗ್ಗೆ ಮಾಹಿತಿ ಕೇಳಿ ಬರುತ್ತಿದೆ
ಜೆಡಿಎಸ್ ಹಾಲಿ ರಾಜ್ಯಾಧ್ಯಕ್ಷರಾಗಿರುವ ಎಚ್ .ಡಿ.ಕುಮಾರಸ್ವಾಮಿ ಕೇಂದ್ರ ಸಚಿವ ಹುದ್ದೆ ಅಲಂಕರಿಸಿ ಬರೋಬ್ಬರಿ ಆರು ತಿಂಗಳಾಗಿದೆ. ಸಹಜವಾಗಿಯೇ ಪಕ್ಷದ ಸಂಘಟನೆ ಕೆಲಸ ದುರ್ಬಲಗೊಂಡಿದೆ. ಅವರ ಪರ ಪುತ್ರ ಹಾಗೂ ಪಕ್ಷದ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಪರೋಕ್ಷವಾಗಿ ಕೆಲ ಜವಾಬ್ದಾರಿಗಳನ್ನು ಈಗಾಗಲೇ ನಿಭಾಯಿಸುತ್ತಿದ್ದರೂ ಅದು ಪೂರ್ಣಪ್ರಮಾಣದಲ್ಲಿ ಸಾಧ್ಯವಾಗುತ್ತಿಲ್ಲ. ಹೀಗಾಗಿ, ನಿಖಿಲ್ ಕುಮಾರಸ್ವಾಮಿ ಅವರನ್ನೇ ರಾಜ್ಯಾಧ್ಯಕ್ಷರನ್ನಾಗಿ ನೇಮಿಸಿದರೆ ಒಳ್ಳೆಯದು ಎಂಬ ಚರ್ಚೆ ಪಕ್ಷದ ಪಾಳೆಯದಲ್ಲಿ ನಡೆದಿದೆ ಎಂದು ತಿಳಿದು ಬಂದಿದೆ.

ಪ್ರಾದೇಶಿಕ ಪಕ್ಷದ ಮೂಲಗಳ ಪ್ರಕಾರ ನಿಖಿಲ್ ಅವರನ್ನು ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ಆಯ್ಕೆ ಮಾಡುವ ಮೂಲಕ ಅವರ ಜವಾಬ್ದಾರಿಯನ್ನು ಹಸ್ತಾಂತರಿಸಲು ಹಿರಿಯ ನಾಯಕರು ಉತ್ಸುಕರಾಗಿದ್ದಾರೆ.
ಯುವಕರನ್ನು ಸೆಳೆಯಲು ಹೆಚ್ಚಿನ ಯುವ ನಾಯಕರನ್ನು ತಂಡದಲ್ಲಿರಿಸುವುದು ಹಿರಿಯ ನಾಯಕರ ಯೋಜನೆಯಾಗಿದೆ ಎಂದು ಮೂಲಗಳು ತಿಳಿಸಿವೆ. ಪಕ್ಷದಲ್ಲಿ ಯುವ ಶಾಸಕರು ಮತ್ತು ನಾಯಕರಿದ್ದಾರೆ. ಅವರ ಸಾಮರ್ಥ್ಯ ಮತ್ತು ತಳಮಟ್ಟದ ಜಾಲವನ್ನು ತಳಮಟ್ಟದಲ್ಲಿ ಪಕ್ಷವನ್ನು ಬಲಪಡಿಸಲು ಉತ್ತಮವಾಗಿ ಬಳಸಿಕೊಳ್ಳಲಾಗುವುದು ಎಂದು ಮೂಲಗಳು ತಿಳಿಸಿವೆ.
ರಾಜ್ಯಾಧ್ಯಕ್ಷರ ಆಯ್ಕೆ, ಪಕ್ಷ ಬಲವರ್ಧನೆ ಸೇರಿದಂತೆ ನಾನಾ ವಿಷಯಗಳ ಕುರಿತು ಚರ್ಚಿಸಲು ಇದೇ ತಿಂಗಳ ಎರಡನೇ ವಾರದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ಸಭೆ ಆಯೋಜಿಸಲಾಗಿದೆ ಎಂದು ತಿಳಿದು ಬಂದಿದೆ.
ಹಳೆ ಮೈಸೂರು ಭಾಗದಲ್ಲಿ ಮತ್ತು ಉತ್ತರ ಕರ್ನಾಟಕದ ಕೆಲವು ಭಾಗಗಳಲ್ಲಿ ಪಕ್ಷವು ತನ್ನ ಶಕ್ತಿಯನ್ನು ಉಳಿಸಿಕೊಂಡಿದ್ದು, ಮತ್ತೆ ಪಕ್ಷವನ್ನ ಸುಭದ್ರವಾಗಿ ಕಟ್ಟವ ನಿಟ್ಟಿನಲ್ಲಿ ಯುವ ನಾಯಕತ್ವ ಅವಶ್ಯಕತೆ ಇದೆ ಎಂದು ಹೇಳಲಾಗಿದೆ. ಹೀಗಾಗಿ ನಿಖಿಲ್ ಕುಮಾರಸ್ವಾಮಿ ಅವರು ತನ್ನ ಸಂಘಟನಾ ಕೌಶಲ್ಯವನ್ನು ಸಾಬೀತುಪಡಿಸುವುದು ಸಹ ಮುಖ್ಯವಾಗಿದೆ. ಇನ್ನೂ ಮೂರು ಚುನಾವಣೆಯಲ್ಲಿ ರಾಜಕೀಯದಲ್ಲಿ ಯಶಸ್ಸನ್ನು ಕಾಣಲು ಸಾಧ್ಯವಾಗಲಿಲ್ಲ. ಏಳು ಜಿಲ್ಲೆಗಳ ಪ್ರವಾಸ ಮುಗಿಸಿದ್ದಾರೆ ಎಂದು ಪಕ್ಷದ ಹಿರಿಯ ಮುಖಂಡರೊಬ್ಬರು ತಿಳಿಸಿದರು.
ಯುವ ಶಾಸಕರಾದ ಹರೀಶ್ಗೌಡ, ಶರಣಗೌಡ ಕಂದಕೂರ್, ಸ್ವರೂಪ್ ಪ್ರಕಾಶ್, ಸಮೃದ್ಧಿ ಮಂಜುನಾಥ್ ಅವರಿಗೂ ಸಹ ಪ್ರಾಮುಖ್ಯತೆ ನೀಡುವ ಆಲೋಚನೆ ಇದೆ ಎಂದು ತಿಳಿದು ಬಂದಿದೆ. ಅಲ್ಲದೇ ಉತ್ತರ ಕರ್ನಾಟಕದಲ್ಲಿ ಲಿಂಗಾಯತ ಸಮುದಾಯದ ಬೆಂಬಲ ಕ್ರೋಢೀಕರಿಸಲು ನಿಖಿಲ್ ನೇತೃತ್ವದಲ್ಲಿ ಯುವ ಜನತಾ ದಳದ ಅಧ್ಯಕ್ಷರಾಗಿ ಶರಣಗೌಡ ಕಂದಕೂರ ಅವರನ್ನು ನೇಮಕ ಮಾಡುವ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿದೆ. ಮುಂಬರುವ ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ನಮ್ಮ ಸಾಮರ್ಥ್ಯ ಸಾಬೀತುಪಡಿಸುವ ಗುರಿ ಹೊಂದಲಾಗಿದೆ ಎಂದು ಹಿರಿಯ ಮುಖಂಡರು ಹೇಳಿದರು.












Click it and Unblock the Notifications