JDS: ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರಿಗೆ ಎಲೆಕ್ಟ್ರಿಕ್ ಸ್ಕೂಟರ್ ಭರವಸೆ ನೀಡಿದ ಜೆಡಿಎಸ್
ಬೆಂಗಳೂರು, ಏಪ್ರಿಲ್ 19: ಕರ್ನಾಟಕ ವಿಧಾನಸಭಾ ಚುನಾವಣೆಗೆ ಜೆಡಿಎಸ್ನಿಂದ ಮತ್ತೊಂದು ಭರವಸೆಯ ಘೊಷಣೆಯಾಗಿದ್ದು, ಈ ಬಾರಿ ಪದವಿ ಓದುತ್ತಿರುವ ವಿದ್ಯಾರ್ಥಿನಿಯರಿಗೆ ಕೊಡುಗೆಯನ್ನು ನೀಡುವ ವಾಗ್ದಾನವನ್ನು ನೀಡಲಾಗಿದೆ.
ಕರ್ನಾಟಕದಲ್ಲಿ ಮತ್ತೆ ಜೆಡಿಎಸ್ ಅಧಿಕಾರಕ್ಕೆ ಬಂದರೆ ಮೊದಲ ಮತದಾರರಾಗಿರುವ ಪದವಿ ಓದುತ್ತಿರುವ ವಿದ್ಯಾರ್ಥಿನಿಯರಿಗೆ ಎಲೆಕ್ಟ್ರಿಕ್ ಮೊಪೆಡ್ ನೀಡುವ ಭರವಸೆಯನ್ನು ಪಕ್ಷ ಘೋಷಣೆ ಮಾಡಿದೆ. ಕರ್ನಾಟಕ ವಿಧಾನಸಭೆ ಹಿನ್ನೆಲೆಯಲ್ಲಿ ಪಕ್ಷ ಈ ಮೊದಲು ಜನರಿಗೆ ವರ್ಷಕ್ಕೆ 5 ಅಡುಗೆ ಸಿಲಿಂಡರ್ ಸ್ತ್ರೀಶಕ್ತಿ ಸಂಘ ಸ್ವಸಹಾಯ ಸಂಘಗಳ ಸಾಲ ಮನ್ನ ಸೇರಿದಂತೆ 12 ಅಂಶಗಳನ್ನು ಒಳಗೊಂಡ ಕರುನಾಡ ಜನರಿಗೆ ಜೆಡಿಎಸ್ ಪರಿಹಾರ ಪತ್ರವನ್ನು ಜೆಡಿಎಸ್ ರಾಷ್ಟ್ರಾಧ್ಯಕ್ಷ ಎಚ್ಡಿ ದೇವೇಗೌಡ ಅವರಿಂದ ಬಿಡುಗಡೆ ಮಾಡಿಸಲಾಗಿತ್ತು.

ಇಲ್ಲಿ ಮಾತೃಶ್ರೀ ಮತ್ತು ಮಹಿಳಾ ಸಬಲೀಕರಣ, ರೈತ ಚೈತನ್ಯ, ಹಿರಿಯ ನಾಗರಿಕರಿಗೆ ಸನ್ಮಾನ, ಅಂಗವಿಕಲರಿಗೆ ಆಸರೆ, ಆರಕ್ಷರಿಗೆ ಅಭಯ, ಕನ್ನಡವೇ ಮೊದಲು, ಶಿಕ್ಷಣವೇ ಆಧುನಿಕ ಶಕ್ತಿ, ಧಾರ್ಮಿಕ ಅಲ್ಪಸಂಖ್ಯಾತರ ಏಳಿಗೆ ಮತ್ತು ಪ್ರಗತಿ, ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಏಳಿಗೆ, ಆರೋಗ್ಯ ಸಂಪತ್ತು, ಯುವಜನ ಸಬಲೀಕರಣ, ವೃತ್ತಿನಿರತ ವಕೀಲರ ಅಭ್ಯುದಯ ಎಂಬ 12 ತಲೆಬರಹದ ಭರವಸೆಗಳನ್ನು ಘೋಷಣೆ ಮಾಡಿದ್ದರು.
ಕನ್ನಡಕ್ಕೆ ಅಗ್ರ ಮನ್ನಣೆ, ಖಾಸಗಿ ಕ್ಷೇತ್ರದಲ್ಲಿ ಕನ್ನಡಿಗರ ಉದ್ಯೋಗಕ್ಕೆ ಮೀಸಲಾತಿ, ವಕೀಲರ ರಕ್ಷಣಗೆ ಕಾಯ್ದೆ, 500 ಹಾಸಿಗೆಗಳ ಸೌಲಭ್ಯ ಒಳಗೊಂಡ ನಿಮ್ಹಾನ್ಸ್ ಮಾದರಿ ಆಸ್ಪತ್ರೆ, ಗಂಭೀರ ಸ್ವರೂಪದ ಕಾಯಿಲೆಗಳಿಗೆ 25 ಲಕ್ಷದವರೆಗೆ ಪರಿಹಾರ, ನ್ಯಾ. ಸಾಚಾರ್ ವರದಿ ಜಾರಿಗೆ ಕ್ರಮ, ಪೊಲೀಸರ ವೇತನ ತಾರತಮ್ಯ ನಿವಾರಣೆ, ಅಂಗವಿಕಲರು, ವಿಧವೆಯರ ಪಿಂಚಣಿ 2500 ರೂಪಾಯಿ ಜೆಡಿಎಸ್ ನೀಡದ್ದ ಭರವಸೆಗಳಾಗಿವೆ.
ಕನಿಷ್ಟ 15 ವರ್ಷ ಸೇವೆ ಸಲ್ಲಿಸಿ ನಿವೃತ್ತರಾದ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರಿಗೆ ಪಿಂಚಣಿ, ಕೇಂದ್ರ ಸಾರ್ವಜನಿಕ ಉದ್ಯಮಗಳು, ಕೇಂದ್ರ ಭದ್ರತಾ ಪಡೆ ಇನ್ನಿತರೆ ನೇಮಕದಲ್ಲಿ ಕನ್ನಡದಲ್ಲೇ ಪರೀಕ್ಷೆ ನಡೆಸಿ, ಕನ್ನಡಿಗರಿಗೆ ಅದ್ಯತೆ ನೀಡಲು ಕೇಂದ್ರದ ಮೇಲೆ ಒತ್ತಡ ಹಾಕುವುದು, ಖಾಸಗಿ ಕ್ಷೇತ್ರದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಕಲ್ಪಿಸಲು ಕಾಯ್ದೆ ಜಾರಿ ಕೂಡ ಹಿಂದಿನ ಭರಸವೆಗಳಲ್ಲಿ ಸೇರಿದ್ದವು.
ಇದಲ್ಲದೆ ಕೃಷಿ ಕಾರ್ಮಿಕ ಕುಟುಂಬಕ್ಕೆ ಮಾಸಿಕ 2,000 ಸಹಾಯಧನ, ಅಶಕ್ತ ಪುರುಷ ಮತ್ತು ಅಬಲೆಯರ ಆಸರೆಗಾಗಿ ಸಹಾರ ಯೋಜನೆ ಜಾರಿ, ಒಂದು ವರ್ಷದ ಕೌಶಲ ತರಬೇತಿಗೆ ಮಾಸಿಕ 8,000 ಭತ್ಯೆ, ಕೈಗಾರಿಕೆ ಉತ್ಪನ್ನ ಘಟಕ ಸ್ಥಾಪನೆಗೆ 10 ಲಕ್ಷ ರೂಪಾಯಿ, ಸಣ್ಣ ವ್ಯಾಪಾರ ವಹಿವಾಟುದಾರರಿಗೆ 2 ಲಕ್ಷ ಸಹಾಯಧನ, ನೋಂದಾಯಿತ ವಕೀಲರ ಮಾಸಿಕ ಭತ್ಯೆ 3000ಕ್ಕೆ ಹೆಚ್ಚಳದ ಭರವಸೆ ನೀಡಲಾಗಿತ್ತು.












Click it and Unblock the Notifications