ಸಚಿವ ಸ್ಥಾನ್ ಕೊಕ್ ಭೀತಿಯಲ್ಲಿರುವ ಅಂಬಿಗೆ ಜೆಡಿಎಸ್ ಆಫರ್
ಮಂಡ್ಯ, ಜೂ 18: ಸಿದ್ದರಾಮಯ್ಯ ಸರಕಾರದ ಸಚಿವ ಸಂಪುಟ ವಿಸ್ತರಣೆ ಸುದ್ದಿ ಮತ್ತೆ ಸುದ್ದಿಯಲ್ಲಿದೆ. ದೆಹಲಿಯಲ್ಲಿ ಬೀಡು ಬಿಟ್ಟಿರುವ ಮುಖ್ಯಮಂತ್ರಿಗಳು ಮತ್ತು ಹಿರಿಯ ಸಚಿವರು, ಮುಖಂಡರು ಅವರವರ ನಿಷ್ಠರ ಪರವಾಗಿ ಲಾಬಿ ಮುಂದುವರಿಸುತ್ತಿದ್ದಾರೆ.
ಈ ಮಧ್ಯೆ, ಸಚಿವ ಸ್ಥಾನ ಕಳೆದುಕೊಳ್ಳಲಿದ್ದಾರೆ ಎನ್ನಲಾಗುತ್ತಿರುವ ಆರೇಳು ಸಚಿವರಲ್ಲಿ ಒಬ್ಬರಾದ ವಸತಿ ಸಚಿವ ಅಂಬರೀಶ್ ಗೆ ಜೆಡಿಎಸ್ ಮುಕ್ತ ಆಫರ್ ನೀಡಿದೆ. (ಸಚಿವ ಸಂಪುಟದಿಂದ ಕೈ ಬಿಟ್ಟರೂ ಸಂತೋಷ)
ಕಾಂಗ್ರೆಸ್ ನಲ್ಲಿದ್ದರೂ ಜೆಡಿಎಸ್ ನಲ್ಲಿನ ಹಲವು ಮುಖಂಡರ ಜೊತೆ ಅಂಬರೀಶ್ ಆಪ್ತರು. ಅವರಿಗೆ ಸಚಿವ ಸ್ಥಾನ ಕೈತಪ್ಪಿ ಅಸಮಾಧಾನಗೊಂಡರೆ ಜೆಡಿಎಸ್ ಪಕ್ಷದ ಬಾಗಿಲು ಅವರಿಗೆ ತೆರೆದಿರುತ್ತದೆ ಎಂದು ಮಂಡ್ಯ ಸಂಸದ ಸಿ ಎಸ್ ಪುಟ್ಟರಾಜು ಹೇಳಿದ್ದಾರೆ.
ನಗರದಲ್ಲಿ ಶುಕ್ರವಾರ (ಜೂ 17) ಮಾಧ್ಯಮದರೊಂದಿಗೆ ಮಾತನಾಡುತ್ತಿದ್ದ ಪುಟ್ಟರಾಜು, ರಾಜ್ಯ ರಾಜಕೀಯದಲ್ಲಿ ಮುಂದಿನ ದಿನಗಳಲ್ಲಿ ಹಲವು ಬದಲಾವಣೆಯಾಗುವ ಸಾಧ್ಯತೆಯಿದೆ.
ಅಂಬರೀಶ್ ನನಗೆ ಪರಮಾಪ್ತರು, ಅವರು ನಮ್ಮ ಪಕ್ಷಕ್ಕೆ ಬರುವ ಇಂಗಿತ ತೋರಿದ್ದಲ್ಲಿ ಅವರ ಮುಕ್ತ ಮನಸ್ಸಿನಿಂದ ಸ್ವಾಗತಿಸಲಾಗುವುದು ಎಂದು ಪುಟ್ಟರಾಜು ಹೇಳಿದ್ದಾರೆ.
ಅಂಬರೀಶ್ ಪ್ರತಿಕ್ರಿಯೆ : ನನಗೆ ಈ ವಿಷಯ ಗೊತ್ತಾಗಿದ್ದೇ ಪುಟ್ಟರಾಜು ಅವರಿಂದ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯಿದ್ದರೆ ತಿಳಿಸಿ. ನನಗೆ ಎಲ್ಲಾ ಪಕ್ಷದಲ್ಲೂ ಮಿತ್ರರಿದ್ದಾರೆ ಎಂದು ಅಂಬಿ ಪ್ರತಿಕ್ರಿಯಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಅಂಬರೀಶ್, ನನ್ನನ್ನು ಸಚಿವರನ್ನಾಗಿ ಮಾಡಿದವರು ಅವರೇ, ಪಕ್ಷದ ಯಾವುದೇ ತೀರ್ಮಾನವನ್ನು ಸಂತೋಷದಿಂದ ಸ್ವೀಕರಿಸುತ್ತೇನೆ. ನಾನು ಕುರ್ಚಿಗೆ ಅಂಟಿಕೊಳ್ಳುವನನಲ್ಲ.
ಸಚಿವನಾಗಿ ಮೂರು ವರ್ಷದ ನನ್ನ ಸಾಧನೆ ಏನು ಎನ್ನುವುದನ್ನು ರಾಜ್ಯದ ಜನತೆ ಹೇಳಬೇಕು. ನಾನೇ ಹೇಳಿಕೊಂಡು ಸುತ್ತಾಡುವುದು ಸಾಧನೆಯಲ್ಲ. ಸಾಧನೆ ಮಾಡದವರನ್ನು, ತಪ್ಪು ಮಾಡಿದವರನ್ನು ಶಿಕ್ಷಿಸಲಿ ಎಂದು ಪರೋಕ್ಷವಾಗಿ ಸಿದ್ದರಾಮಯ್ಯವಿರುದ್ದ ಬೇಸರ ವ್ಯಕ್ತ ಪಡಿಸಿದ್ದಾರೆ.