ಜೆಡಿಎಸ್ ಶಾಸಕಾಂಗ ಸಭೆಯ ಮುಖ್ಯಾಂಶಗಳು
ಬೆಂಗಳೂರು, ಸೆ.4 : "ಜೆಡಿಎಸ್ ಪಕ್ಷದ 40 ಶಾಸಕರೂ ಒಟ್ಟಾಗಿದ್ದೇವೆ, ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಮುಂಬರುವ ಜಿಲ್ಲಾ ಪಂಚಾಯಿತಿ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಗಳನ್ನು ಸ್ವತಂತ್ರವಾಗಿ ಎದುರಿಸಲು ತೀರ್ಮಾನಿಸಿದ್ದೇವೆ" ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಬುಧವಾರ ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ನಡೆದ ಶಾಸಕಾಂಗ ಪಕ್ಷದ ಸಭೆ ನಂತರ ಪತ್ರಿಕಾಗೋಷ್ಠಿ ನಡೆಸಿದ ಎಚ್.ಡಿ.ಕುಮಾರಸ್ವಾಮಿ ಪಕ್ಷದಲ್ಲಿ ಯಾವುದೇ ಗೊಂದಲವಿದಲ್ಲ ಎಂದು ಹೇಳಿದರು. ಪಕ್ಷಕ್ಕೆ ಸಂಬಂಧಿಸಿದ ನಿರ್ಣಯಗಳನ್ನು ಕೈಗೊಳ್ಳುವುದಕ್ಕೆ ಒಂದು ವಾರದಲ್ಲಿ ಕೋರ್ ಕಮಿಟಿಯನ್ನು ರಚಿಸಲಾಗುತ್ತದೆ. ಉಭಯ ಸದನಗಳ ಸದಸ್ಯರು ಈ ಕಮಿಟಿಯಲ್ಲಿರುತ್ತಾರೆ ಎಂದರು.
ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡರ ಮಾರ್ಗದರ್ಶನದಲ್ಲಿ ಪಕ್ಷ ಸಂಘಟನೆ ಮಾಡಲು ಶಾಸಕಾಂಗ ಪಕ್ಷದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಕುಮಾರಸ್ವಾಮಿ ಮೊದಲಿನಂತೆ ಚುರುಕಾಗಿಲ್ಲ ಎನ್ನುವ ಭಾವನೆ ಶಾಸಕರಲ್ಲಿದೆ. ಪಕ್ಷ ಸಂಘಟನೆ ಕೈಗೊಳ್ಳಲು ರಾಜ್ಯ ಪ್ರವಾಸ ಮಾಡಬೇಕೆನ್ನುವುದು ಅವರ ಸಲಹೆಯಾಗಿದೆ. ಈ ನಿಟ್ಟಿನಲ್ಲಿ ಶ್ರಮ ವಹಿಸಲಾಗುವುದು ಎಂದು ತಿಳಿಸಿದರು. ಜೆಡಿಎಸ್ ಸಭೆಯ ಪ್ರಮುಖ ನಿರ್ಣಯಗಳು
ಕೋರ್ ಕಮಿಟಿ ರಚನೆ
ಒಂದು ವಾರದೊಳಗೆ ಕೋರ್ ಕಮಿಟಿ ರಚಿಸಲಾಗುವುದು. ಇದರಲ್ಲಿ ಉಭಯ ಸದನಗಳ ಸದಸ್ಯರು ಹಾಗೂ ಹಿರಿಯ ನಾಯಕರು ಇರುತ್ತಾರೆ. ಜೆಡಿಎಸ್ ಅಪ್ಪ, ಮಕ್ಕಳ ಪಕ್ಷವೆನ್ನುವ ಅಪವಾದ ಇನ್ನು ಮುಂದೆ ಇರುವುದಿಲ್ಲ. ಎಲ್ಲರ ಅಭಿಪ್ರಾಯಕ್ಕೂ ಬೆಲೆ ನೀಡಲಾಗುವುದು.
ಒಂದು ತಿಂಗಳಿನಲ್ಲಿ ರಾಜ್ಯಾಧ್ಯಕ್ಷರ ನೇಮಕ
ಜೆಡಿಎಸ್ ರಾಜ್ಯಾಧ್ಯಕ್ಷರು ಯಾರು ಆಗಬೇಕೆನ್ನುವ ಬಗ್ಗೆ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರೊಂದಿಗೆ ಚರ್ಚಿಸಿದ ಬಳಿಕ ತೀರ್ಮಾನ ಕೈಗೊಳ್ಳಲಾಗುತ್ತದೆ. ಒಂದು ತಿಂಗಳ ಅವಧಿಯಲ್ಲಿ ಹೊಸ ರಾಜ್ಯಾಧ್ಯಕ್ಷರನ್ನು ದೇವೇಗೌಡರು ಆಯ್ಕೆ ಮಾಡಲಿದ್ದಾರೆ ಎಂದು ಕುಮಾರಸ್ವಾಮಿ ಸಭೆಯ ಬಳಿಕ ತಿಳಿಸಿದರು.
ಪಕ್ಷ ಸಂಘಟನೆಗೆ ತೀರ್ಮಾನ
ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡರ ಮಾರ್ಗದರ್ಶನದಲ್ಲಿ ಪಕ್ಷ ಸಂಘಟನೆ ಮಾಡಲು ಶಾಸಕಾಂಗ ಪಕ್ಷದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಕುಮಾರಸ್ವಾಮಿ ಮೊದಲಿನಂತೆ ಚುರುಕಾಗಿಲ್ಲ ಎನ್ನುವ ಭಾವನೆ ಶಾಸಕರಲ್ಲಿದೆ. ಪಕ್ಷ ಸಂಘಟನೆ ಕೈಗೊಳ್ಳಲು ರಾಜ್ಯ ಪ್ರವಾಸ ಮಾಡಬೇಕೆನ್ನುವುದು ಅವರ ಸಲಹೆಯಾಗಿದೆ. ಈ ನಿಟ್ಟಿನಲ್ಲಿ ಶ್ರಮ ವಹಿಸಲಾಗುವುದು ಎಂದು ಕುಮಾರಸ್ವಾಮಿ ಹೇಳಿದರು.
ಸ್ವತಂತ್ರವಾಗಿ ಚುನಾವಣೆ ಎದುರಿಸುತ್ತೇವೆ
ಜೆಡಿಎಸ್ ಪಕ್ಷದ 40 ಶಾಸಕರೂ ಒಟ್ಟಾಗಿದ್ದೇವೆ, ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಮುಂಬರುವ ಜಿಲ್ಲಾ ಪಂಚಾಯಿತಿ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಗಳನ್ನು ಸ್ವತಂತ್ರವಾಗಿ ಎದುರಿಸಲು ತೀರ್ಮಾನಿಸಿದ್ದೇವೆ ಎಂದು ಸಭೆಯ ಬಳಿಕ ಕುಮಾರಸ್ವಾಮಿ ತಿಳಿಸಿದರು.
ಲೋಪದೋಷ ತಿದ್ದಿಕೊಳ್ಳೋಣ
ಸಭೆಯಲ್ಲಿ ಶಾಸರು ನಾಯಕತ್ವ ವಹಿಸಿಕೊಂಡವರು ಜವಾಬ್ದಾರಿ, ಶಿಸ್ತು ತೋರಿದರೆ ಮಾತ್ರ ಪಕ್ಷದ ಭವಿಷ್ಯ ಬದಲಿಸಲು ಸಾಧ್ಯ. ಇದೇ ರೀತಿ ಮುಂದುವರಿದರೆ, ಮುಂದಿನ ಚುನಾವಣೆಯಲ್ಲಿ ನೆಲಕಚ್ಚುವ ಸ್ಥಿತಿ ಬರುತ್ತದೆ ಎಂಬ ಆತಂಕವನ್ನೂ ತೋಡಿಕೊಂಡರು. ಇದಕ್ಕೆ ಸಕಾರಾತ್ಮಕವಾಗಿಯೇ ಪ್ರತಿಕ್ರಿಯಿಸಿದ ಕುಮಾರಸ್ವಾಮಿ ಲೋಪದೋಷ ತಿದ್ದುಕೊಂಡು ಒಗ್ಗಟ್ಟಿನಿಂದ ಪಕ್ಷ ಕಟ್ಟುವ ಭರವಸೆ ನೀಡಿದರು ಎಂದು ತಿಳಿದುಬಂದಿದೆ.
ಪ್ರಮುಖ ನಾಯಕರು ಸಭೆಯಿಂದ ದೂರ
ಜೆಡಿಎಸ್ ಪಕ್ಷದಲ್ಲಿ 40 ಶಾಸಕರು ಹಾಗೂ 12 ವಿಧಾನ ಪರಿಷತ್ ಸದಸ್ಯರಿದ್ದಾರೆ. ಇವರಲ್ಲಿ ಪ್ರಮುಖ ನಾಯಕರಾದ ಬಸವರಾಜ ಹೊರಟ್ಟಿ, ಉಪ ಸಭಾಪತಿ ಪುಟ್ಟಣ್ಣ, ಶಾಸಕರಾದ ಜಮೀರ್ ಅಹ್ಮದ್, ಎಚ್.ಎಸ್. ಶಿವಶಂಕರ, ಇಕ್ಬಾಲ್ ಅನ್ಸಾರಿ, ಮಲ್ಲಿಕಾರ್ಜುನ ಖೂಬಾ, ಎಂ.ಟಿ. ಕೃಷ್ಣಪ್ಪ ಸಭೆಗೆ ಗೈರು ಹಾಜರಾಗಿದ್ದರು. ಗೈರು ಹಾಜರಾದ ನಾಯಕರ ಪೈಕಿ ಜಮೀರ್ ಅಹ್ಮದ್ ಹೊರತುಪಡಿಸಿ ಇತರರು ಸಭೆಗೆ ಆಗಮಿಸಲು ಆಗದಿರುವುದಕ್ಕೆ ಮುಂಚಿತವಾಗಿ ಸಕಾರಣದೊಂದಿಗೆ ಮಾಹಿತಿ ನೀಡಿದ್ದಾರೆ. ಸಭೆಯ ನಿರ್ಣಯಕ್ಕೆ ಬದ್ಧವಾಗಿರುವುದಾಗಿ ತಿಳಿಸಿದ್ದಾರೆ ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದರು.