ಕಾಂಗ್ರೆಸ್-ಜೆಡಿಎಸ್ ಮೈತ್ರಿ ಗಟ್ಟಿ, ಬಿಜೆಪಿ ಲೆಕ್ಕಾಚಾರ ಬುಡಮೇಲು!
Recommended Video
ಬೆಂಗಳೂರು, ಜೂನ್ 06 : ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಮತ್ತಷ್ಟು ಗಟ್ಟಿಯಾಗಿದೆ. ಎರಡೂ ಪಕ್ಷಗಳ ಒಳಜಗಳದಿಂದಾಗಿ ಸರ್ಕಾರ ಪತನವಾಗಲಿದೆ ಎಂದು ಕಾದು ಕುಳಿತಿದ್ದ ಬಿಜೆಪಿಗೆ ಹಿನ್ನಡೆಯಾಗಿದ್ದು, ಲೆಕ್ಕಾಚಾರ ಬುಡಮೇಲಾಗಿದೆ.
ಕರ್ನಾಟಕದ ಮೈತ್ರಿ ಸರ್ಕಾರ ಉಳಿಸಿಕೊಳ್ಳಲು ಯಾವ ತ್ಯಾಗಕ್ಕೂ ಸಿದ್ಧ ಎಂದು ಉಭಯ ಪಕ್ಷಗಳ ನಾಯಕರು ಘೋಷಣೆ ಮಾಡಿದ್ದಾರೆ. ಇದರಿಂದಾಗಿ 2018ರ ಚುನಾವಣೆಯಲ್ಲಿ 104 ಸ್ಥಾನಗಳಲ್ಲಿ ಜಯಗಳಿಸಿ, ಚಿಂಚೋಳಿ ವಿಧಾನಸಭೆ ಉಪ ಚುನಾವಣೆ ಗೆದ್ದ ಬಿಜೆಪಿ ಲೆಕ್ಕಾಚಾರ ತಲೆಕೆಳಗಾಗಿದೆ.
ಲೋಕಸಭಾ ಚುನಾವಣೆ 2019 : ಕರ್ನಾಟಕದಲ್ಲಿ ಗೆದ್ದವರು, ಸೋತವರು
ಎರಡು ಬಾರಿ ಸರ್ಕಾರ ಪತನಗೊಳಿಸಲು ಬಿಜೆಪಿ ಮಾಡಿದ್ದ ತಂತ್ರಗಳು ಫಲ ನೀಡಲಿಲ್ಲ. 2019ರ ಲೋಕಸಭಾ ಚುನಾವಣೆ ಬಳಿಕ ಸರ್ಕಾರ ಬಿದ್ದು ಹೋಗಲಿದೆ ಎಂದು ಪ್ರತಿಪಕ್ಷ ಎದುರು ನೋಡುತ್ತಿತ್ತು. ಆದರೆ, ಚುನಾವಣೆ ಬಳಿಕ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮತ್ತಷ್ಟು ಗಟ್ಟಿಯಾಗಿದೆ.
ಲೋಕಸಭಾ ಚುನಾವಣೆ : ಕರ್ನಾಟಕದಿಂದ ಮೊದಲ ಬಾರಿ ಗೆದ್ದ 10 ಸಂಸದರು
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 25 ಸ್ಥಾನಗಳಲ್ಲಿ ಜಯಗಳಿಸುವ ಮೂಲಕ ತನ್ನ ಶಕ್ತಿ ಪ್ರದರ್ಶನ ಮಾಡಿದೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡರೂ ಉಭಯ ಪಕ್ಷಗಳಿಗೆ ಸಿಕ್ಕಿದ್ದು ಕೇವಲ 1 ಸ್ಥಾನ. ಆದರೆ, ಈ ಫಲಿತಾಂಶ ಮೈತ್ರಿ ಸರ್ಕಾರದ ಮೇಲೆ ಪರಿಣಾಮ ಬೀರಿಲ್ಲ ಎಂಬುದು ಗಮನಿಸಬೇಕಾದ ಅಂಶ.....
ಸಿಎಂ ಆಗುವ ಯಡಿಯೂರಪ್ಪ ಆಸೆಗೆ ಹೈಕಮಾಂಡ್ ತಣ್ಣೀರು!
ಇಬ್ಬರೂ ಸಮಾನ ದುಃಖಿಗಳು
ಲೋಕಸಭಾ ಚುನಾವಣೆ ಫಲಿತಾಂಶ ಕಾಂಗ್ರೆಸ್-ಜೆಡಿಎಸ್ ಎರಡೂ ಪಕ್ಷಕ್ಕೆ ಪಾಠ ಕಲಿಸಿದೆ. ಮಂಡ್ಯ, ತುಮಕೂರಿನಲ್ಲಿ ಸೋತು ಜೆಡಿಎಸ್ ಪಾಠ ಕಲಿತಿದೆ. ಕಾಂಗ್ರೆಸ್ ಕಣಕ್ಕಿಳಿದಿದ್ದ 21 ಕ್ಷೇತ್ರಗಳ ಪೈಕಿ 1ರಲ್ಲಿ ಮಾತ್ರ ಗೆಲವು ಸಾಧಿಸಿ ಜನಾಭಿಪ್ರಾಯವೇನು ಎಂಬುದನ್ನು ಅರ್ಥೈಸಿಕೊಂಡಿದೆ. ಸೋಲಿನ ಅನುಭವ ಇಬ್ಬರು ಸಮಾನ ದುಃಖಿಗಳನ್ನು ಒಂದು ಮಾಡಿದೆ. ಆದ್ದರಿಂದ, ಮೈತ್ರಿ ಮತ್ತಷ್ಟು ಗಟ್ಟಿಯಾಗಿದ್ದು, ಬಿಜೆಪಿಯ ಲೆಕ್ಕಾಚಾರ ಉಲ್ಟಾ ಹೊಡೆದಿದೆ.
ಸರ್ಕಾರ ಸುಭದ್ರ ಎಂದು ಘೋಷಣೆ
ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟಗೊಂಡ ಮರು ದಿನವೇ ಸಚಿವರ ಅನೌಪಚಾರಿಕ ಸಭೆಯನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನಡೆಸಿದರು. ಮೈತ್ರಿ ಸರ್ಕಾರವನ್ನ ಭದ್ರಗೊಳಿಸುವ ಮೊದಲ ಹೆಜ್ಜೆ ಈ ಸಭೆಯೇ ಆಗಿತ್ತು.
ಸಭೆಯ ಬಳಿಕ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರು, 'ಲೋಕಸಭಾ ಚುನಾವಣೆಯ ಫಲಿತಾಂಶ ಕರ್ನಾಟಕ ಸಮ್ಮಿಶ್ರ ಸರಕಾರದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ರಾಜ್ಯ ಸರಕಾರವು ಕುಮಾರಸ್ವಾಮಿ ಅವರ ನೇತೃತ್ವದಲ್ಲಿಯೇ ಐದು ವರ್ಷ ಸುಭದ್ರವಾಗಿವಾಗಿ ಮುಂದುವರೆಯಲಿದೆ' ಎಂದು ಪಕ್ಕದಲ್ಲಿ ಕುಮಾರಸ್ವಾಮಿ ಅವರನ್ನು ಕೂರಿಸಿಕೊಂಡು ಘೋಷಿಸಿ ಬಿಟ್ಟರು.
ಚುನಾವಣೆ ನಡೆದರೆ ಹಿನ್ನಡೆ ಸಾಧ್ಯತೆ
ಲೋಕಸಭಾ ಚುನಾವಣೆ ಫಲಿತಾಂಶ ಎರಡೂ ಪಕ್ಷಗಳಿಗೆ ಸ್ಪಷ್ಟ ಸಂದೇಶವನ್ನು ಸಾರಿದೆ. ಒಂದು ವೇಳೆ ಸರ್ಕಾರ ಪನತಗೊಂಡು ಚುನಾವಣೆ ಎದುರಾದರೆ ಬಿಜೆಪಿಗೆ ಆಗುವ ಲಾಭವೇ ಹೆಚ್ಚು ಎಂಬುದು. ಇದರಿಂದಾಗಿ ಮೈತ್ರಿ ಸರ್ಕಾರವನ್ನು ಉಳಿಸಿಕೊಳ್ಳಬೇಕು ಎಂದು ಉಭಯ ಪಕ್ಷಗಳು ಪಣ ತೊಟ್ಟಿವೆ. ಅದರ ಭಾಗವಾಗಿಯೇ ಪಕ್ಷದಲ್ಲಿನ ಅಸಮಾಧಾನ ಶಮನಕ್ಕೆ ಹೆಜ್ಜೆ ಇಡಲಾಗಿದೆ.
ಕುಮಾರಸ್ವಾಮಿ ವಿರುದ್ದ ಆಕ್ರೋಶವಿಲ್ಲ
ಕಾಂಗ್ರೆಸ್ನ ಹಲವು ಶಾಸಕರು ಅದರಲ್ಲೂ ಸಿದ್ದರಾಮಯ್ಯ ಬೆಂಬಲಿಗರು ಎಚ್.ಡಿ.ಕುಮಾರಸ್ವಾಮಿ ವಿರುದ್ದ ಅಸಮಾಧಾನಗೊಂಡಿದ್ದರು. ಕುಮಾರಸ್ವಾಮಿ ಅವರು ನಿಮ್ಮ ಪಕ್ಷದ ಅಸಮಾಧಾನ ಬಗೆಹರಿಸುವುದು ನಿಮ್ಮ ಜವಾಬ್ದಾರಿ ಎಂದು ಕಾಂಗ್ರೆಸ್ ನಾಯಕರ ಜವಾಬ್ದಾರಿ ಹೆಚ್ಚಿಸಿದ್ದಾರೆ. ಮತ್ತೊಂದು ಕಡೆ ಸಿದ್ದರಾಮಯ್ಯ ಅವರಿಗೆ ಲೋಕಸಭಾ ಚುನಾವಣೆ ಸೋಲು ಭಾರಿ ಹಿನ್ನಡೆ ಉಂಟು ಮಾಡಿದೆ. ಆದ್ದರಿಂದ, ಅವರು ಮೈತ್ರಿ ಸರ್ಕಾರ ಮುಂದುವರೆಯಲಿ ಎಂದೇ ಬಯಸುತ್ತಿದ್ದಾರೆ.
ಸರ್ಕಾರ ಬೀಳುವುದು ಕಾಂಗ್ರೆಸ್ಗೆ ಬೇಕಿಲ್ಲ
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಿರೀಕ್ಷಿತ ಫಲಿತಾಂಶ ಪಡೆದಿಲ್ಲ. ಆದ್ದರಿಂದ, ಹೈಕಮಾಂಡ್ ನಾಯಕರು ಪಕ್ಷ ಅಧಿಕಾರದಲ್ಲಿರುವ ರಾಜ್ಯವನ್ನು ಕಳೆದುಕೊಳ್ಳಲು ತಯಾರಿಲ್ಲ. ಮೈತ್ರಿ ಸರ್ಕಾರ ಮುಂದುವರೆಯಬೇಕು ಎಂದು ಅವರು ರಾಜ್ಯ ನಾಯಕರಿಗೆ ಸೂಚನೆ ಕೊಟ್ಟಿದ್ದಾರೆ. ಕಾಂಗ್ರೆಸ್-ಜೆಡಿಎಸ್ ಯಾವ ಪಕ್ಷಕ್ಕೂ ಈಗ ಸರ್ಕಾರ ಪತನಗೊಳ್ಳುವುದು ಬೇಕಿಲ್ಲ.
ಬಿಜೆಪಿ ವಿರುದ್ಧ ಒಂದಾದ ಮೈತ್ರಿಕೂಟ
ಸರ್ಕಾರ ಉಳಿಸಿಕೊಳ್ಳಲು ಒದೊಂದೆ ದಾಳ ಉರುಳಿಸುತ್ತಿರುವ ಉಭಯ ಪಕ್ಷಗಳು ಅಸಮಾಧಾನ ಬಗೆಹರಿಸಲು ಮುಂದಾಗಿವೆ. ಶಾಸಕರನ್ನು ಕರೆದು ಮಾತನಾಡಿಸಿ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿವೆ. ಸರ್ಕಾರಕ್ಕೆ ಬೆಂಬಲ ನೀಡಿದ ಪಕ್ಷೇತರರಿಗೆ ಸಚಿವ ಸ್ಥಾನ ನೀಡುವ ಮೂಲಕ ಅವರನ್ನು ಆಪರೇಷನ್ ಕಮಲದಿಂದ ಕಾಪಾಡುತ್ತಿವೆ. ಇದರಿಂದಾಗಿ ಬಿಜೆಪಿ ಮಾಡಿದ್ದ ತಂತ್ರಗಳು ತಲೆಕೆಳಗಾಗಿವೆ.