JDS Candidates List: ಬಿಎಸ್ವೈ ಆಪ್ತ ಸಂತೋಷ್, ರಘು ಆಚಾರ್ ಸೇರಿ ಮತ್ತೆ ಐವರು ಅಭ್ಯರ್ಥಿಗಳ ಘೋಷಣೆ- ಉಳಿದವರು ಯಾರು ತಿಳಿಯಿರಿ
ಬೆಂಗಳೂರು, ಏಪ್ರಿಲ್ 15: ಈಗಾಗಲೇ ಕರ್ನಾಟಕ ವಿಧಾನಸಭೆ ಚುನಾವಣೆಗೆ ( Karnataka Assembly Elections 2023 ) ಜೆಡಿಎಸ್ ( JDS ) ಅಭ್ಯರ್ಥಿಗಳ ಎರಡು ಪಟ್ಟಿಗಳನ್ನು ಬಿಡುಗಡೆ ಮಾಡಿರುವ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ( HD Kumaraswamy ) ಅವರು, ಶನಿವಾರ ಮತ್ತೆ ಐವರು ಅಭ್ಯರ್ಥಿಗಳ ಹೆಸರುಗಳನ್ನು ಘೋಷಣೆ ಮಾಡಿದ್ದಾರೆ.
JDS Candidates List: ಹೆಚ್ಚುವರಿ 6 ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ
- 1. ಮಾಜಿ ಶಾಸಕ ಡಾ.ಭಾರತಿ ಶಂಕರ್ - ವರುಣಾ ವಿಧಾನಸಭಾ ಕ್ಷೇತ್ರ
- 2. ದೇವರಾಜ್ ಪಾಟೀಲ್ - ಬಾಗಲಕೋಟೆ ವಿಧಾನಸಭಾ ಕ್ಷೇತ್ರ
- 3. ಮಾಜಿ ಸಚಿವ ಎ.ಬಿ.ಮಾಲಕರೆಡ್ಡಿ - ಯಾದಗಿರಿ ವಿಧಾನಸಭಾ ಕ್ಷೇತ್ರ
- 4. ರಘು ಅಚಾರ್ - ಚಿತ್ರದುರ್ಗ ವಿಧಾನಸಭಾ ಕ್ಷೇತ್ರ
- 5. ಎನ್.ಎಂ.ಮುತ್ತಪ್ಪ - ಮಡಿಕೇರಿ ವಿಧಾನಸಭಾ ಕ್ಷೇತ್ರ
- 6. ಅಮರಶ್ರೀ - ಮೂಡಬಿದಿರೆ ವಿಧಾನಸಭಾ ಕ್ಷೇತ್ರ
ಅವರು ಜೆಡಿಎಸ್ ಅಭ್ಯರ್ಥಿಗಳು ಎಂದು ಬೆಂಗಳೂರಿನಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಪ್ರಕಟಿಸಿದ್ದರೆ.

ಎನ್ಆರ್ ಸಂತೋಷ್, ದೇವರಾಜ್ ಪಾಟೀಲ್ ಸೇರ್ಪಡೆ
ಇದೇ ಸಂದರ್ಭದಲ್ಲಿ ಅರಸೀಕೆರೆ ವಿಧಾನಸಭೆ ಕ್ಷೇತ್ರದ ಎನ್ ಆರ್ ಸಂತೋಷ್ ಅವರು ಬಿಜೆಪಿ ತೊರೆದು ಜೆಡಿಎಸ್ ಪಕ್ಷವನ್ನು ಸೇರಿದರು. ಹಾಗೆಯೇ, ಬಾಗಲಕೋಟೆಯ ದೇವರಾಜ್ ಪಾಟೀಲ್ ಅವರು ಕಾಂಗ್ರೆಸ್ ತೊರೆದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.
ನಿನ್ನೆ ಎರಡನೇ ಪಟ್ಟಿ
ಹಾಸನ ಕ್ಷೇತ್ರಕ್ಕೆ ಜೆಡಿಎಸ್ನ ಸಸ್ಪೆನ್ಸ್ ಅಂತ್ಯವಾಗಿದೆ. ಅಲ್ಲಿಂದ ಸ್ಪರ್ಧಿಸಲು ದೃಢವಾಗಿದ್ದ ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡರ ಸೊಸೆ ಭವಾನಿ ರೇವಣ್ಣ ಅವರನ್ನು ಕಡೆಗಣಿಸಿ ಎಚ್ಪಿ ಸ್ವರೂಪ್ ಅವರನ್ನು ಪಕ್ಷ ಕಣಕ್ಕಿಳಿಸಿದೆ.

ಜೆಡಿಎಸ್ ಮುಖಂಡ ಎಚ್ ಡಿ ಕುಮಾರಸ್ವಾಮಿ ಪದೇ ಪದೇ ಸ್ಪಷ್ಟನೆ ನೀಡಿದರೂ ಕಣಕ್ಕಿಳಿಯಬೇಕೆಂದು ಭವಾನಿ ರೇವಣ್ಣ ಬಯಸಿದ್ದರು. ಕೊನೆಯ ಕ್ಷಣದವರೆಗೂ ಪಟ್ಟು ಬಿಡದ ಕಾರಣ ಹಾಸನ ಕ್ಷೇತ್ರ ತೀವ್ರ ವಿವಾದಕ್ಕೆ ಕಾರಣವಾಗಿತ್ತು. ಆಕೆಯನ್ನು ಕಣಕ್ಕಿಳಿಸುವುದಿಲ್ಲ ಮತ್ತು ಬದಲಿಗೆ ಪಕ್ಷದ ನಿಷ್ಠಾವಂತ ಕಾರ್ಯಕರ್ತನನ್ನು ಕಣಕ್ಕಿಳಿಸುತ್ತೇನೆ ಎಂದು ಹೇಳಿದ್ದರು.
ಹಾಸನ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಭವಾನಿ ರೇವಣ್ಣ ಅವರು ಕುಮಾರಸ್ವಾಮಿಯವರ ಅಣ್ಣ ಹೆಚ್ ಡಿ ರೇವಣ್ಣ ಅವರ ಪತ್ನಿ. ಅವರಿಗೆ ಪತಿ ಹಾಗೂ ಪುತ್ರರಾದ ಸಂಸದ ಪ್ರಜ್ವಲ್ ರೇವಣ್ಣ ಮತ್ತು ಎಂಎಲ್ಸಿ ಸೂರಜ್ ರೇವಣ್ಣ ಅವರ ಬೆಂಬಲವಿತ್ತು.
ಹಾಸನ ಅಭ್ಯರ್ಥಿಯಾಗಿ ಸ್ವರೂಪ್ ಅವರ ಹೆಸರನ್ನು ಘೋಷಿಸಿದ ಕುಮಾರಸ್ವಾಮಿ, 'ರೇವಣ್ಣ ಮತ್ತು ಭವಾನಿ ಅವರ ಒಪ್ಪಿಗೆ ಮತ್ತು ಹೆಚ್ ಡಿ ದೇವೇಗೌಡರ ಆಶೀರ್ವಾದದಿಂದ ಹೆಸರನ್ನು ಅಂತಿಮಗೊಳಿಸಲಾಗಿದೆ' ಎಂದು ಹೇಳಿದ್ದಾರೆ.
ಹಾಲಿ ಶಾಸಕರಾದ ಹೆಚ್ ಡಿ ರೇವಣ್ಣ (ಹೊಳೆನರಸೀಪುರ), ಕೆ ಎಸ್ ಲಿಂಗೇಶ್ (ಬೇಲೂರು), ಎಚ್ ಕೆ ಕುಮಾರಸ್ವಾಮಿ (ಸಕಲೇಶಪುರ), ಮತ್ತು ಸಿ ಎನ್ ಬಾಲಕೃಷ್ಣ (ಶ್ರವಣಬೆಳಗೊಳ) ಸೇರಿದಂತೆ ಇತರ ಹೆಸರುಗಳು ಪಟ್ಟಿಯಲ್ಲಿ ಉಲ್ಲೇಖವಾಗಿವೆ.
ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದ ವೈಎಸ್ ವಿ ದತ್ತ ಅವರಿಗೆ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಇತ್ತೀಚೆಗಷ್ಟೇ ಪಕ್ಷಕ್ಕೆ ಮರಳಿದ್ದು, ಕಡೂರಿನಿಂದ ಕಣಕ್ಕಿಳಿದಿದ್ದಾರೆ. ಇತ್ತೀಚೆಗಷ್ಟೇ ಪಕ್ಷಕ್ಕೆ ಸೇರ್ಪಡೆಯಾಗಿದ್ದ ಮಾಜಿ ಸಚಿವ ಎ ಮಂಜು ಅರಕಲಗೂಡು ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ. ಅವರು ಈ ಹಿಂದೆ ಕಾಂಗ್ರೆಸ್ ಮತ್ತು ಬಿಜೆಪಿ ಎರಡರಲ್ಲೂ ಇದ್ದಾರೆ. ಜೆಡಿಎಸ್ ತನ್ನ 93 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಡಿಸೆಂಬರ್ನಲ್ಲಿ ಪ್ರಕಟಿಸಿತ್ತು.












Click it and Unblock the Notifications