Lok Sabha Election 2024: ಒಗ್ಗಟ್ಟಿನ ಸಂದೇಶ ರವಾನಿಸಿದ ಕಮಲ-ದಳ ನಾಯಕರು
ಮೈಸೂರು, ಮಾರ್ಚ್ 28: ರಾಜ್ಯದಲ್ಲಿ 2024ರ ಲೋಕಸಭಾ ಚುನಾವಣೆಯನ್ನು ಎದುರಿಸಿ ಕಾಂಗ್ರೆಸ್ ಗೆ ಠಕ್ಕರ್ ನೀಡಲು ಮುಂದಾಗಿರುವ ಜೆಡಿಎಸ್ ಮತ್ತು ಬಿಜೆಪಿ ಈಗಾಗಲೇ ಚುನಾವಣೆಗೆ ತಯಾರಿ ಮಾಡಿಕೊಂಡಿದ್ದು, ನಾವು ಒಗ್ಗಟ್ಟಾಗಿದ್ದೇವೆ ಎಂಬ ಸಂದೇಶವನ್ನು ಮೈಸೂರಿನಿಂದಲೇ ರವಾನಿಸಿದ್ದಾರೆ.
ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್ ಪ್ರಬಲವಾಗಿದ್ದು, ಈ ಭಾಗದಿಂದಲೇ ಒಗ್ಗಟ್ಟು ಪ್ರದರ್ಶಿಸಿದರೆ ಮುಂದಿನ ಹಾದಿ ಸುಗಮವಾಗಲಿದೆ ಎಂಬುದು ನಾಯಕರ ಅಭಿಪ್ರಾಯವಾಗಿದೆ. ಈ ಹಿಂದೆ 2019ರಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಮಾಡಿಕೊಂಡು ಚುನಾವಣೆಗೆ ಹೋದಾಗ ಅದರಿಂದ ಯಾವುದೇ ಪ್ರಯೋಜನವಾಗಿರಲಿಲ್ಲ. ಅವತ್ತು ಮಾಡಿದ ತಪ್ಪನ್ನು ಈ ಬಾರಿ ಮಾಡದಂತೆ ಜೆಡಿಎಸ್ ಎಚ್ಚರ ವಹಿಸುತ್ತಿದೆ.

ಈ ನಡುವೆ ಚುನಾವಣಾ ಪ್ರಕ್ರಿಯೆಗಳು ಆರಂಭವಾಗುತ್ತಿರುವುದರಿಂದ ನಾಮಪತ್ರ ಸಲ್ಲಿಕೆಯಿಂದ ಆರಂಭವಾಗಿ ಚುನಾವಣೆ ತನಕವೂ ಬಿಜೆಪಿ ಮತ್ತು ಜೆಡಿಎಸ್ ಮುಖಂಡರ ನಡುವೆಯಾಗಲೀ, ಕಾರ್ಯಕರ್ತರ ಮಧ್ಯೆಯಾಗಲೀ ಯಾವುದೇ ಭಿನ್ನಾಭಿಪ್ರಾಯಕ್ಕೆ ಅವಕಾಶವಾಗದಂತೆ ಮುಂದಿನ ಕಾರ್ಯತಂತ್ರ ಹೆಣೆಯಲು ನಾಯಕರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ಮೋದಿ ನಾಯಕತ್ವದಲ್ಲಿ ಕೆಲಸ
ರಾಜ್ಯದಲ್ಲಿ ಕಾಂಗ್ರೆಸ್ ಗೆ ಸೆಡ್ಡು ಹೊಡೆದು ಮೈತ್ರಿ ಅಭ್ಯರ್ಥಿಗಳ ಗೆಲುವಿಗೆ ಸ್ವತಃ ಎರಡು ಪಕ್ಷಗಳ ಅಧ್ಯಕ್ಷರೇ ಅಖಾಡಕ್ಕಿಳಿದು ಹೋರಾಟ ಆರಂಭಿಸಿದ್ದಾರೆ. ಈ ನಡುವೆ ಮೈಸೂರಿನಲ್ಲಿ ಜಿಲ್ಲೆಯ ಮೈತ್ರಿ ಪಕ್ಷದ ಸಾರಥ್ಯ ಹೊತ್ತಿರುವ ಶಾಸಕ ಜಿ.ಟಿ.ದೇವೇಗೌಡ ಅವರು ರಾಜ್ಯದಲ್ಲಿ ಮೈತ್ರಿ ಗಟ್ಟಿಯಾಗಿದ್ದು, ಮುಂದೆಯೂ ಹೀಗೆಯೇ ಇರುತ್ತದೆ. ಮೋದಿ ನಾಯಕತ್ವದಲ್ಲಿ ದೇಶಕ್ಕಾಗಿ ನಾವೆಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಲಿದ್ದೇವೆ ಎಂಬ ಸಂದೇಶವನ್ನು ರವಾನಿಸುವ ಕೆಲಸವನ್ನು ಮಾಡಿದ್ದಾರೆ.
ಈ ನಡುವೆ ಮೈಸೂರಿನ ಖಾಸಗಿ ಹೋಟೆಲ್ನಲ್ಲಿ ನಡೆದ ಬಿಜೆಪಿ ಹಾಗೂ ಜೆಡಿಎಸ್ ಹಾಲಿ ಹಾಗೂ ಮಾಜಿ ಶಾಸಕರು, ನಗರ, ಜಿಲ್ಲೆ ಹಾಗೂ ಬ್ಲಾಕ್ ಮುಖಂಡರ ಮೈತ್ರಿ ಸಭೆಯಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹಾಗೂ ಬಿಜೆಪಿ ರಾಜ್ಯಾಧಕ್ಷ ಬಿ.ವೈ.ವಿಜಯೇಂದ್ರ ಪಾಲ್ಗೊಂಡು ರಣತಂತ್ರ ರೂಪಿಸಿದ್ದಾರೆ.

ನಮಗೆ ದೇಶದ ಭದ್ರತೆ ಮುಖ್ಯ
ಈ ವೇಳೆ ಮೈತ್ರಿ ಸಭೆಯನ್ನುದ್ದೇಶಿಸಿ ಮಾತನಾಡಿದ ಶಾಸಕ ಜಿ.ಟಿ.ದೇವೇಗೌಡ, ನಮ್ಮಲ್ಲಿ ಇಂದಿಗೂ ಪರಸ್ಪರ ಮಾತನಾಡದ ಸ್ಥಿತಿಯಲ್ಲಿ ಬಿಜೆಪಿ-ಜೆಡಿಎಸ್ ಕಾರ್ಯಕರ್ತರಿದ್ದಾರೆ. ಆದರೆ, ದೇಶದ ಭದ್ರತೆ ಮುಖ್ಯವಾಗಿದೆ. ಬೇರೆ ಬೇರೆ ದೇಶದಲ್ಲಿ ಕೋಮು-ಗಲಭೆ ಹೆಚ್ಚಾಗಿದೆ. ಆದರೆ, ಅಲ್ಪಸಂಖ್ಯಾತರು ಸಹ ನೆಮ್ಮದಿಯಾಗಿ ಇರುವ ದೇಶ ಯಾವುದಾದರೂ ಇದ್ದರೆ ಅದು ಭಾರತ. ಅದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರೇ ಕಾರಣರಾಗಿದ್ದಾರೆ ಎಂದು ಹೇಳಿದರು.
ಬಿಜೆಪಿ ಜತೆಗೆ ಸೇರಿದ ಜೆಡಿಎಸ್ ಮುಳುಗೇ ಹೋಯಿತು. ಅಸ್ತಿತ್ವವೇ ಇಲ್ಲ ಎಂದು ಕಾಂಗ್ರೆಸ್ನವರು ಹೇಳುತ್ತಿದ್ದಾರೆ. ಆದರೆ, ರಾಜ್ಯದಲ್ಲಿ ಇಂದಿಗೂ ಶೇ.23ರಷ್ಟು ಮತಗಳು ಜೆಡಿಎಸ್ಗೆ ಬಂದಿವೆ. ಪರಿಸ್ಥಿತಿ ಹೀಗಿರುವಾಗ ದೇಶದಲ್ಲಿಯೂ ಪಕ್ಷ ವಿಸ್ತರಿಸುವ ಆಲೋಚನೆ ನಮ್ಮಲ್ಲಿದೆ ಎಂದರು.
ಮುಖಂಡರಿಂದ ಒಗ್ಗಟ್ಟಿನ ಸಂದೇಶ ರವಾನೆ
ಯದುವೀರ್ ಅವರು ಮೈತ್ರಿ ಪಕ್ಷದ ಅಭರ್ಥಿಯಾಗಿದ್ದು, ನಾವೆಲ್ಲರೂ ಒಗ್ಗೂಡಿ ಕೆಲಸ ಮಾಡಬೇಕಿದೆ. ನಮ್ಮಲ್ಲಿ ಪ್ರತ್ಯೇಕ ತಂಡ ಕಟ್ಟುವುದು ಬೇಡ. ಈ ಹಿಂದೆ ನಾವೆಲ್ಲರೂ ಒಗ್ಗೂಡಿ ಕುಮಾರಪರ್ವ ಮಾಡಿ ಕುಮಾರಣ್ಣನವರನ್ನು ಮುಖ್ಯಮಂತ್ರಿ ಮಾಡಿದಂತೆ, ಈಗ ಮೋದಿಯವರ ಪರ್ವ ಮಾಡಿ ಮತ್ತೆ ಪ್ರಧಾನಿ ಮಾಡೋಣ ಎಂದು ಹೇಳಿದರು.

ಮೈಸೂರು ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಚಾಮರಾಜನಗರ ಅಭರ್ಥಿ ಎಸ್. ಬಾಲರಾಜ್, ಸಂಸದ ಪ್ರತಾಪ್ ಸಿಂಹ, ಮಾಜಿ ಸಚಿವರಾದ ಡಾ.ಸಿ.ಎನ್.ಅಶ್ವತ್ಥ ನಾರಾಯಣ್, ಎಸ್.ಎ.ರಾಮದಾಸ್, ಸಾ.ರಾ.ಮಹೇಶ್, ಶಾಸಕರಾದ ಟಿ.ಎಸ್.ಶ್ರೀವತ್ಸ, ಜಿ.ಡಿ.ಹರೀಶ್ ಗೌಡ, ಮಾಜಿ ಶಾಸಕರಾದ ಎನ್.ಮಹೇಶ್, ಕೆ.ಮಹದೇವ್, ಎಲ್.ನಾಗೇಂದ್ರ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ ಸೇರಿದಂತೆ ಎರಡೂ ಪಕ್ಷದ ನೂರಾರು ಮಂದಿ ಮುಖಂಡರು ಭಾಗವಹಿಸಿ ನಾವೆಲ್ಲರೂ ಒಟ್ಟಾಗಿ ಚುನಾವಣೆಯನ್ನು ಎದುರಿಸುತ್ತೇವೆ ಎಂಬ ಸಂದೇಶ ರವಾನಿಸಿದ್ದಾರೆ.












Click it and Unblock the Notifications