ಬಿಜೆಪಿ & ಜೆಡಿಎಸ್ 25 ಸೀಟುಗಳಿಗಿಂತ ಹೆಚ್ಚು ಗೆಲ್ಲಲ್ಲ: ಸಿದ್ದರಾಮಯ್ಯ
ಕೋಲಾರ, ಏಪ್ರಿಲ್ 07: ಜೆಡಿಎಸ್ ಮತ್ತು ಬಿಜೆಪಿಗಳಿಗೆ ಈ ಬಾರಿ ಚುನಾವಣೆಯಲ್ಲಿ 25 ಕ್ಕೂ ಹೆಚ್ಚು ಸ್ಥಾನಗಳು ಗೆಲ್ಲಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಜೆಡಿಎಸ್ ಎಷ್ಟು ಸೀಟು ಗೆಲ್ಲಲಿದೆ? ಸಿದ್ದರಾಮಯ್ಯ ನುಡಿದ ಭವಿಷ್ಯ
ಕೋಲಾರದಲ್ಲಿ ಆಯೋಜಿಸಿದ್ದ 'ಜನಾಶೀರ್ವಾದ ಯಾತ್ರೆ' ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳು ಒಟ್ಟುಗೂಡಿ ಕಾಂಗ್ರೆಸ್ ಪಕ್ಷವನ್ನು ಸೋಲಿಸಲು ತಯಾರಾಗಿವೆ ಆದರೆ ವಿಜಯ ಕಾಂಗ್ರೆಸ್ನದ್ದೇ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | 2018ರ ನಿಮ್ಮ ಕನಸಿನ ಸಂಪುಟವನ್ನು ಆಯ್ಕೆ ಮಾಡಿ
ಬಿಜೆಪಿಗರಿಗೆ ಸಂವಿಧಾನದ ಬಗ್ಗೆ ಕಿಂಚಿತ್ತೂ ಗೌರವ ಇಲ್ಲ, ಅವರು ಸಮ ಸಮಾಜದ ಪರಿಕಲ್ಪನೆಗೆ ವಿರುದ್ಧವಾಗಿದ್ದಾರೆ ಎಂದು ಸಿದ್ದರಾಮಯ್ಯ ಟೀಕಿಸಿದರು.
ಯೋಜನೆಗಳ ಪಟ್ಟಿ ಓದಿದ ಸಿಎಂ
ಕಾಂಗ್ರೆಸ್ ಸರ್ಕಾರ ನೀಡಿದ ಅನ್ನಭಾಗ್ಯ, ಶಾದಿ ಭಾಗ್ಯ, ಮನಸ್ವಿನಿ, ಶೂ ಭಾಗ್ಯ.. ಇನ್ನೂ ಹಲವು ಯೋಜನೆಗಳನ್ನು ಮತ್ತೆ ನೆನಪಿಸಿದ ಸಿದ್ದರಾಮಯ್ಯ ಅವರು ಕೊನೆಯ ಬಜೆಟ್ನಲ್ಲಿ ಆದ ಘೋಷಣೆಗಳನ್ನೂ ಜನರಿಗೆ ತಿಳಿಸಿದರು. 'ನಾವು ಪ್ರಣಾಳಿಕೆಯಲ್ಲಿ ಏನು ಹೇಳಿದ್ದೆವೊ ಅದಕ್ಕಿಂತಲೂ ಹೆಚ್ಚಿನದ್ದನ್ನು ನೀಡಿದ್ದೇವೆ' ಎಂದು ಸಿದ್ದರಾಮಯ್ಯ ಹೇಳಿದರು.
ಹಗರಣ ಮುಕ್ತ ಸರ್ಕಾರ ನಮ್ಮದು
ಈ ಐದು ವರ್ಷದಲ್ಲಿ ನಮ್ಮ ಸರ್ಕಾರದ ಮೇಲೆ ಯಾವುದೇ ಭ್ರಷ್ಟಾಚಾರದ ಆರೋಪ ಇಲ್ಲ ಎಂದ ಅವರು, ನಾವು ಸ್ವಚ್ಛವಾದ ಆಡಳಿತ ನೀಡಿದ್ದೇವೆ ನಮ್ಮದು ಮಾದರಿ ಸರ್ಕಾರ ಎಂದರು. ಬಡವರ ಪರ ಕೆಲಸ ಮಾಡಿರುವ ನಾವು ಅವರ ಜೀವನ ಮಟ್ಟ ಸುಧಾರಿಸುವ ಕಾರ್ಯ ಮಾಡಿದ್ದೇವೆ ಎಂದರು.
ದೇಶದ ಗಮನ ಸೆಳೆದಿದೆ ಈ ಚುನಾವಣೆ
ಈಗ ನಡೆಯಲಿರುವ ರಾಜ್ಯ ವಿಧಾನಸಭೆ ಚುನಾವಣೆ ಹಲವು ಕಾರಣಗಳಿಗಾಗಿ ದೇಶದ ಗಮನ ಸೆಳೆದಿದೆ, ಇದು ಸಂವಿಧಾನ ವಿರೋಧಿಗಳ ಮತ್ತು ಸಂವಿಧಾನವನ್ನು ಕಾಪಾಡುವವರ ನಡುವೆ ನಡೆದಿರುವ ಚುನಾವಣೆ ಎಂದು ಅವರು ಹೇಳಿದರು.
ಜೆಡಿಎಸ್-ಬಿಜೆಪಿ ಸಮ್ಮಿಶ್ರ
ಜೆಡಿಎಸ್ ಪಕ್ಷಕ್ಕೆ ಭವಿಷ್ಯ ಇಲ್ಲ ಎಂದ ಸಿದ್ದರಾಮಯ್ಯ ಅವರು, ಜೆಡಿಎಸ್ ಪಕ್ಷವು ಅವಕಾಶವಾದಿ ಆಗಿದ್ದು, ಅದು ಕೇವಲ ಅಧಿಕಾರಕ್ಕಾಗಿ ರಾಜಕಾರಣ ಮಾಡುತ್ತಿದೆ. ಅದು ಈಗಾಗಲೇ ಬಿಜೆಪಿಯೊಂದಿಗೆ ಕೈ ಜೋಡಿಸಿದೆ ಎಂದು ಅವರು ಹೇಳಿದರು.
ಬಸವಣ್ಣ-ಗಾಂಧಿ-ಅಂಬೇಡ್ಕರ್ ನೆನಪು
ಭಾಷಣದಲ್ಲಿ ಬಸವಣ್ಣ, ಮಹಾತ್ಮಾ ಗಾಂಧಿ ಮತ್ತು ಅಂಬೇಡ್ಕರ್ ಅವರನ್ನು ನೆನೆಸಿಕೊಂಡ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಪಕ್ಷವು ಈ ಮಹನೀಯರ ಆದರ್ಶದ ಹಾದಿಯಲ್ಲಿ ನಡೆಯುವ ಪ್ರಯತ್ನ ಮಾಡುತ್ತಿದೆ ಎಂದು ಹೇಳಿದರು.