ಜಾರಕಿಹೊಳಿ ಸಹೋದರರ ಟಾರ್ಗೆಟ್ 14: ಯಾರು ಆ ಶಾಸಕರು?
Recommended Video

ಬೆಂಗಳೂರು, ಸೆಪ್ಟೆಂಬರ್ 11: ಕಾಂಗ್ರೆಸ್ಗೆ ತಲೆನೋವಾಗಿ ಪರಿಣಮಿಸಿರುವ ಸತೀಶ್ ಮತ್ತು ರಮೇಶ್ ಜಾರಕಿಹೊಳಿ ಸಹೋದರರೊಂದಿಗೆ ಒಟ್ಟು 14 ಶಾಸಕರು ಬಿಜೆಪಿಯತ್ತ ಸ್ನೇಹ ಹಸ್ತ ಚಾಚುವ ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ.
ಮೂರು ದಿನಗಳಿಂದ ಬಿಜೆಪಿ ಮುಖಂಡರ ಸಂಪರ್ಕದಲ್ಲಿರುವ ಜಾರಕಿಹೊಳಿ ಸಹೋದರರು, ಈಗಾಗಲೇ ಕಾಂಗ್ರೆಸ್ನ ಏಳು ಶಾಸಕರೊಂದಿಗೆ ಬಿಜೆಪಿ ಮುಖಂಡರ ಜತೆ ಮಾತುಕತೆ ನಡೆಸುತ್ತಿದ್ದಾರೆ. ಸೋಮವಾರ ಮಧ್ಯರಾತ್ರಿಯವರೆಗೂ ಚರ್ಚೆ ನಡೆಸಿದ್ದು, ಮಂಗಳವಾರವೂ ಮಾತುಕತೆ ಮುಂದುವರಿಸಲಿದ್ದಾರೆ ಎನ್ನಲಾಗಿದೆ.
ವಿಧಾನಸೌಧದ ಬಲಾಬಲದ ಬಗ್ಗೆ ಚಿಂತನೆ ನಡೆಸಿದ್ದು, ಕಾಂಗ್ರೆಸ್ನಲ್ಲಿರುವ ತಮ್ಮ ಆಪ್ತರಲ್ಲದೆ, ಪಕ್ಷೇತರ ಶಾಸಕರನ್ನು ಸಹ ತಮ್ಮೊಂದಿಗೆ ಸೆಳೆದುಕೊಳ್ಳಲು ಅವರು ಪ್ರಯತ್ನ ನಡೆಸಿದ್ದಾರೆ.
ಸಚಿವ ಸ್ಥಾನ ಸಿಗದ ಕಾರಣ ಪಕ್ಷೇತರ ಶಾಸಕ ನಾಗೇಶ್ ಅವರು ಕೂಡ ಜಾರಕಿಹೊಳಿ ಸಹೋದರರೊಂದಿಗೆ ಸಂಪರ್ಕದಲ್ಲಿದ್ದು, ಬಿಜೆಪಿ ಸೇರಲು ಸಿದ್ಧತೆ ಮಾಡುತ್ತಿದ್ದಾರೆ,

14 ಶಾಸಕರು ಯಾರು?
ರಮೇಶ್ ಜಾರಕಿಹೊಳಿ (ಗೋಕಾಕ್), ಶ್ರೀಮಂತ್ ಪಾಟೀಲ್ (ಕಾಗವಾಡ), ರಮೇಶ್ ಜಾರಕಿಹೊಳಿ, ನಾಗೇಶ್ (ಮುಳಬಾಗಿಲು) , ಸತೀಶ್ ಜಾರಕಿಹೊಳಿ (ಯಮನಕರಡಿ), ಮಹೇಶ್ ಕುಮಠಹಳ್ಳಿ (ಅಥಣಿ), ನಾಗೇಂದ್ರ (ಬಳ್ಳಾರಿ ಗ್ರಾಮಾಂತರ) ಆನಂದ್ ಸಿಂಗ್ ಈವಿಜಯನಗರ), ಪ್ರತಾಪ್ ಗೌಡ ಪಾಟೀಲ್ (ಮಸ್ಕಿ), ಡಿ.ಎಸ್. ಹುಲಿಗೇರಿ (ಲಿಂಗಸುಗೂರು) ಅಮರೇಗೌಡ ಬೈಯ್ಯಾಪುರ (ಕುಷ್ಟಗಿ), ಬಸವನಗೌಡ ದದ್ದಲ್ (ರಾಯಚೂರು ಗ್ರಾಮಾಂತರ), ತುಕಾರಾಮ್ (ಸಂಡೂರು) ಬಿ. ನಾರಾಯಣ್ (ಬಸವಕಲ್ಯಾಣ)

ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಬೇಡಿಕೆ
ಕೆಪಿಸಿಸಿ ಅಧ್ಯಕ್ಷ ಸ್ಥಾನ ಮತ್ತು ತಾವು ಸೂಚಿಸಿದವರಿಗೆ ಸಚಿವ ಸ್ಥಾನ ನೀಡದೆ ಇದ್ದರೆ ತಮ್ಮ ಜತೆಗಿರುವ ಹತ್ತಕ್ಕೂ ಹೆಚ್ಚು ಶಾಸಕರ ಜತೆ ಪಕ್ಷಕ್ಕೆ ರಾಜೀನಾಮೆ ನೀಡುವುದಾಗಿ ಜಾರಕಿಹೊಳಿ ಶಾಸಕರು ತಮ್ಮ ಆಪ್ತರೊಂದಿಗೆ ಹೇಳಿಕೊಂಡಿದ್ದಾರೆ.

ಬಿಜೆಪಿ ಮುಖಂಡರೊಂದಿಗೆ ಮಾತುಕತೆ
ಜಾರಕಿಹೊಳಿ ಸಹೋದರರು ತಮ್ಮ ಜೊತೆ 14 ಶಾಸಕರನ್ನು ಪಕ್ಷಕ್ಕೆ ರಾಜೀನಾಮೆ ಕೊಡಿಸಿ ಸಮ್ಮಿಶ್ರ ಸರ್ಕಾರವನ್ನು ಪತನಗೊಳಿಸುವ ಮೂಲಕ ಬಿಜೆಪಿಯೊಂದಿಗೆ ಸೇರಿಕೊಂಡು ಸರ್ಕಾರ ರಚಿಸುವ ಮಾತುಕತೆಗಳು ನಡೆಯುತ್ತಿವೆ ಎನ್ನಲಾಗಿದೆ.
ಬಿಜೆಪಿ ಮುಖಂಡ ಶ್ರೀರಾಮುಲು ಅವರ ಜತೆ ಜಾರಕಿಹೊಳಿ ಸಹೋದರರು ಈ ವಿಚಾರವಾಗಿಯೇ ಸಮಾಲೋಚನೆ ನಡೆಸಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ತಮ್ಮ ಎಲ್ಲ ಪೂರ್ವನಿಗದಿತ ಕಾರ್ಯಚಟುವಟಿಕೆಗಳನ್ನು ಬದಿಗೊತ್ತಿ ಬೆಂಗಳೂರಿನಲ್ಲಿಯೇ ವಾಸ್ತವ್ಯ ಹೂಡಿಸಿದ್ದಾರೆ.

ಸಿದ್ದರಾಮಯ್ಯ ಬರುವವರೆಗೂ ಕಾಯುತ್ತಾರೆಯೇ?
ಯುರೋಪ್ ಪ್ರವಾಸದಲ್ಲಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೆ.16ರಂದು ಬೆಂಗಳೂರಿಗೆ ಮರಳಲಿದ್ದಾರೆ. ಬಳಿಕ ಅವರೊಂದಿಗೆ ಮಾತುಕತೆ ನಡೆಸಿ ಜಾರಕಿಹೊಳಿ ಸಹೋದರರು ಮುಂದಿನ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.
ಈ ನಡುವೆ ಸತೀಶ್ ಜಾರಕಿಹೊಳಿ ಅವರಿಗೆ ಕನಿಷ್ಠ ಒಂದು ವರ್ಷ ಮುಖ್ಯಮಂತ್ರಿ ಸ್ಥಾನ ಕೊಡುವ ಬೇಡಿಕೆ ಮುಂದಿರಿಸಿ ರಮೇಶ್ ಜಾರಕಿಹೊಳಿ ಅವರು ಬಿಜೆಪಿ ಮುಖಂಡರ ಜತೆ ಮಾತುಕತೆ ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ.












Click it and Unblock the Notifications