ಜಂತಕಲ್ ಗಣಿಗಾರಿಕೆ: ಎಚ್ಡಿಕೆ ನಿರೀಕ್ಷಣಾ ಜಾಮೀನು ಅವಧಿ ವಿಸ್ತರಣೆ
ಮಂಗಳವಾರ ಜಾಮೀನು ಅವಧಿ ಮುಗಿದಿದ್ದರಿಂದ ಮತ್ತೆ ನ್ಯಾಯಾಧೀಶೆ ವನಮಾಲ ಆನಂದರಾವ್ ಕುಮಾರಸ್ವಾಮಿಗೆ 7 ದಿನಗಳ ರಿಲೀಫ್ ನೀಡಿದ್ದು ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆಯನ್ನು ಮೇ 30ರವರೆಗೆ ಮುಂದೂಡಿದ್ದಾರೆ.
ಬೆಂಗಳೂರು, ಮೇ 24: ಜಂತಕಲ್ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಗೆ ನೀಡಲಾಗಿದ್ದ ನಿರೀಕ್ಷಣಾ ಜಾಮೀನು ಅವಧಿಯನ್ನು ಮೇ 30ರವರೆಗೆ ವಿಸ್ತರಿಸಲಾಗಿದೆ.
ಜಂತಕಲ್ ಎಂಟರ್ಪ್ರೈಸಸ್'ಗೆ ಅಕ್ರಮವಾಗಿ ಅದಿರು ಸಾಗಿಸಲು ಅನುಮತಿ ನೀಡಿದ್ದ ಪ್ರಕರಣದಲ್ಲಿ ಕುಮಾರಸ್ವಾಮಿ ಆರೋಪಿಯಾಗಿದ್ದಾರೆ. ಈ ಸಂಬಂಧ ನಿರೀಕ್ಷಣಾ ಜಾಮೀನು ಕೋರಿ ಕಳೆದ 17ರಂದು 53ನೇ ಸಿಟಿ ಸಿವಿಲ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ್ದ ನ್ಯಾಯಾಲಯ ಕುಮಾರಸ್ವಾಮಿಗೆ ಮೇ 23ರವರೆಗೆ ಜಾಮೀನು ನೀಡಿ ವಿಚಾರಣೆ ಮುಂದೂಡಿತ್ತು.
ಮಂಗಳವಾರ ಜಾಮೀನು ಅವಧಿ ಮುಗಿದಿದ್ದರಿಂದ ಮತ್ತೆ ನ್ಯಾಯಾಧೀಶೆ ವನಮಾಲ ಆನಂದರಾವ್ ಕುಮಾರಸ್ವಾಮಿಗೆ 7 ದಿನಗಳ ರಿಲೀಫ್ ನೀಡಿದ್ದು ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆಯನ್ನು ಮೇ 30ರವರೆಗೆ ಮುಂದೂಡಿದ್ದಾರೆ.
ಇದೇ ಪ್ರಕರಣದಲ್ಲಿ ಮೇ 18ರಂದು ವಿಶೇಷ ತನಿಖಾ ತಂಡದ ಮುಂದೆ ಹಾಜರಾಗಿದ್ದ ಪ್ರಕರಣದ ದೂರುದಾರ ಜನಾರ್ಧನ್ ರೆಡ್ಡಿ ಸೂಕ್ತ ಸಾಕ್ಷ್ಯಗಳನ್ನು ನೀಡಲು ಮೂರು ವಾರಗಳ ಕಾಲಾವಕಾಶ ಕೇಳಿದ್ದರು. ಇನ್ನು ಇದೇ ಪ್ರಕರಣದಲ್ಲಿ ಐಎಎಸ್ ಅಧಿಕಾರಿ ಗಂಗಾರಾಮ್ ಬಡೇರಿಯಾ ಬಂಧಿತರಾಗಿದ್ದನ್ನೂ ಇಲ್ಲಿ ಸ್ಮರಿಸಬಹುದು.