ಬೊಮ್ಮಾಯಿ ಸರ್ಕಾರಕ್ಕೆ ಒಂದು ವರ್ಷ; ಎಲ್ಲಾ ಜಿಲ್ಲೆಯಲ್ಲೂ ಜನೋತ್ಸವ
ಬೆಂಗಳೂರು, ಜುಲೈ 26: "ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಬಿಜೆಪಿ ಸರ್ಕಾರವು ಒಂದು ವರ್ಷವನ್ನು ಪೂರ್ಣಗೊಳಿಸುತ್ತಿರುವ ಸಂದರ್ಭದಲ್ಲಿ ನಾವು ಜುಲೈ 28ರಿಂದ ಎಲ್ಲಾ ಜಿಲ್ಲೆಗಳಲ್ಲಿ ಜನೋತ್ಸವವನ್ನು ಹಮ್ಮಿಕೊಂಡಿದ್ದೇವೆ. ಇದರ ಸಂಬಂಧ ಮೊದಲ ಕಾರ್ಯಕ್ರಮ ಜುಲೈ 28ರಂದು ದೊಡ್ಡಬಳ್ಳಾಪುರದಲ್ಲಿ ನಡೆಯಲಿದೆ" ಎಂದು ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನೀಲ್ ಕುಮಾರ್ ಹೇಳಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ "ಜಗನ್ನಾಥ ಭವನ"ದಲ್ಲಿ ಮಂಗಳವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, "ಬಿಜೆಪಿ ಆಡಳಿತದ ಮೂರು ವರ್ಷ ಮತ್ತು ಬೊಮ್ಮಾಯಿ ನೇತೃತ್ವದ ಸರ್ಕಾರದ ಒಂದು ವರ್ಷವನ್ನು ಜನೋತ್ಸವವಾಗಿ ರಾಜ್ಯದಾದ್ಯಂತ ನಡೆಸಲಾಗುತ್ತಿದೆ" ಎಂದು ತಿಳಿಸಿದರು.
"ನಮ್ಮ ಇಂಧನ ಇಲಾಖೆಯಲ್ಲಿ ಒಂದು ವರ್ಷದ ಅವಧಿಯಲ್ಲಿ ಹೊಸ ಹೊಸ ಯೋಜನೆಗಳನ್ನು ಜನರಿಗೆ ತಲುಪಿಸಲಾಗಿದೆ. ಬೆಳಕು ಯೋಜನೆಯಡಿ ವಿದ್ಯುತ್ ಸಂಪರ್ಕ ಇಲ್ಲದ ಮನೆಗಳಿಗೆ ವಿದ್ಯುತ್ ಸಂಪರ್ಕ ಕೊಡಲಾಗಿದೆ. ಪರಿಶಿಷ್ಟ ಜಾತಿ, ಪಂಗಡದವರಿಗೆ 75 ಯೂನಿಟ್ ಉಚಿತ ವಿದ್ಯುತ್ ಕೊಡುವ ಪ್ರಕ್ರಿಯೆ ಪ್ರಾರಂಭವಾಗಿದೆ. ರಾಜ್ಯದ ಇತಿಹಾಸದಲ್ಲಿ ಮೊದಲ ಬಾರಿಗೆ ಟಿಸಿ ನಿರ್ವಹಣಾ ಅಭಿಯಾನವನ್ನು ಹಮ್ಮಿಕೊಂಡಿದ್ದು, ಒಂದು ವಾರದಲ್ಲಿ ಸುಮಾರು 3.5 ಲಕ್ಷದಿಂದ 4 ಲಕ್ಷ ಟ್ರಾನ್ಸ್ಫಾರ್ಮರ್ ನಿರ್ವಹಣೆ ಮಾಡಲಾಗಿದೆ" ಎಂದು ಸಚಿವರು ವಿವರಿಸಿದರು.
"ಸುಟ್ಟು ಹೋದ ಟಿಸಿಗಳನ್ನು 24 ಗಂಟೆಯೊಳಗೆ ಬದಲಿಸಬೇಕೆಂಬ ದೊಡ್ಡ ಪ್ರಯತ್ನ ಕರ್ನಾಟಕದ ಇತಿಹಾಸದಲ್ಲಿ ಮೊದಲ ಬಾರಿಗೆ ಆರಂಭಿಸಿದ್ದು, ಒಂದು ವರ್ಷದಲ್ಲಿ ಪ್ರಗತಿಯನ್ನು ನಮ್ಮ ಇಲಾಖೆ ಮೂಲಕ ಕಾಣುತ್ತಿದ್ದೇವೆ. ಬೆಂಗಳೂರಿನಲ್ಲಿ ಒಕ್ಕುಪೆನ್ಸಿ ಸರ್ಟಿಫಿಕೇಟ್ ಇಲ್ಲದೆ ವಿದ್ಯುತ್ ಸಂಪರ್ಕ ಇಲ್ಲ ಎಂಬ ತಪ್ಪು ನಿರ್ಧಾರವನ್ನು ಹಿಂದಿನ ಕಾಂಗ್ರೆಸ್ ಮಾಡಿತ್ತು. ಅದನ್ನು ಸರಿಪಡಿಸಿ 5 ಲಕ್ಷಕ್ಕೂ ಹೆಚ್ಚು ಮನೆಗಳಿಗೆ ವಿದ್ಯುತ್ ಸಂಪರ್ಕ ಕೊಡುವ ಪ್ರಯತ್ನ ಮಾಡಲಾಗಿದೆ" ಎಂದರು.

37 ಕಡೆಗಳಲ್ಲಿ ಸಬ್ ಸ್ಟೇಷನ್
"ಕೆಪಿಟಿಸಿಎಲ್ ಮೂಲಕ 1,850 ಕಿ. ಮೀ. ಹೊಸ ವಿದ್ಯುತ್ ಲೈನ್ ಅನ್ನು ಒಂದು ವರ್ಷದಲ್ಲಿ ಎಳೆಯಲಾಗಿದೆ. ಇದೊಂದು ದೊಡ್ಡ ಸಾಧನೆ. 37 ಕಡೆಗಳಲ್ಲಿ ಸಬ್ ಸ್ಟೇಷನ್ ನಿರ್ಮಾಣ, 200 ಕಡೆಗಳಲ್ಲಿ ಸಬ್ ಸ್ಟೇಷನ್ ಉನ್ನತೀಕರಣ ಮಾಡಲಾಗಿದೆ. ಇದು ಸೇರಿದಂತೆ ವಿವಿಧ ಇಲಾಖೆಗಳ ಸಾಧನೆಯನ್ನು ಜನೋತ್ಸವದ ಮೂಲಕ ತಿಳಿಸಲಾಗುವುದು" ಎಂದು ಸಚಿವ ಸುನೀಲ್ ಕುಮಾರ್ ತಿಳಿಸಿದರು.

ನಾವು ಯಾವತ್ತೂ ವ್ಯಕ್ತಿಯನ್ನು ಆರಾಧಿಸಲಿಲ್ಲ
"ನಾವು ಜನರನ್ನು ಕಣ್ಣಮುಂದೆ ಇಟ್ಟುಕೊಂಡು ಜನೋತ್ಸವ ಮಾಡಿದರೆ, ಕಾಂಗ್ರೆಸ್ನವರು ವ್ಯಕ್ತಿಯನ್ನು ಇಟ್ಟುಕೊಂಡು ವ್ಯಕ್ತಿಯ ಉತ್ಸವ ಮಾಡುತ್ತಿದ್ದಾರೆ. ಇದು ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ವ್ಯತ್ಯಾಸ. ನಾವು ಯಾವತ್ತೂ ವ್ಯಕ್ತಿಯನ್ನು ಆರಾಧಿಸಲಿಲ್ಲ. ನಾವು ವಿಚಾರ, ಜನರನ್ನು ಆರಾಧಿಸಿದ್ದೇವೆ. ವ್ಯಕ್ತಿ ಆರಾಧಿಸುವ ಅವರು ಸಿದ್ದರಾಮೋತ್ಸವ ಮಾಡುತ್ತಿದ್ದಾರೆ" ಎಂದು ಸಚಿವರು ಟೀಕಿಸಿದರು.

ಜಮೀರ್ ಅವರಿಗೆ ಹೈಕಮಾಂಡ್ ನೋಟಿಸ್
"ವ್ಯಕ್ತಿ ಉತ್ಸವವನ್ನು ಜನರು ಮೆಚ್ಚಿಕೊಳ್ಳಲಾರರು. ಜನೋತ್ಸವವನ್ನು ಜನರು ಮೆಚ್ಚಿಕೊಳ್ಳುತ್ತಾರೆ ಮತ್ತು ಬೆಂಬಲಿಸಲಿದ್ದಾರೆ" ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.
"ಶಾಸಕ ಜಮೀರ್ ಅವರಿಗೆ ಕಾಂಗ್ರೆಸ್ ಹೈಕಮಾಂಡ್ ನೋಟಿಸ್ ಕೊಟ್ಟಿದೆ. ಸಿದ್ದರಾಮಯ್ಯನವರು ತನ್ನ ಬಾಯಲ್ಲಿ ಹೇಳಲಾಗದ್ದನ್ನು ಜಮೀರ್ ಅವರ ಮೂಲಕ ಹೇಳಿಸುವ ಕೆಲಸ ಮಾಡಿದರು. ಈ ನೋಟಿಸ್ ಜಮೀರ್ ಅವರಿಗಲ್ಲ, ಅದು ಪರೋಕ್ಷವಾಗಿ ಸಿದ್ದರಾಮಯ್ಯರಿಗೆ ಎಂದು ಭಾವಿಸುವುದಾಗಿ" ಹೇಳಿದರು.

ಜಾತಿಗೆ ಕೆಲಸ ಮಾಡಲು ಸಾಧ್ಯವಿಲ್ಲ
"ಸಿದ್ದರಾಮಯ್ಯ ತನ್ನ ಆಡಳಿತದ ಅವಧಿಯಲ್ಲಿ ಜಾತಿಗಳ ನಡುವೆ ವಿಷಬೀಜ ಬಿತ್ತಿದ್ದರು. ಅದನ್ನು ಜಮೀರ್ ಮುಂದುವರಿಸಿದ್ದಾರೆ.ಯಾವುದೇ ಜಾತಿಗೆ ಸೀಮಿತವಾಗಿ ಸರ್ಕಾರವೊಂದು ಕೆಲಸ ಮಾಡಲು ಸಾಧ್ಯವಿಲ್ಲ. ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಹೋಗುವುದು ಇವತ್ತಿನ ಅನಿವಾರ್ಯತೆ. ಆ ಕಾರ್ಯವನ್ನು ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ನೆಲೆಯಲ್ಲಿ ಬಿಜೆಪಿ ಮಾಡುತ್ತಿದೆ. ಆದರೆ, ಕಾಂಗ್ರೆಸ್ ಪಕ್ಷವು ಜಾತಿಗಳನ್ನು ಒಡೆಯುತ್ತಿರುವುದು ಒಳ್ಳೆಯ ಬೆಳವಣಿಗೆ ಅಲ್ಲ" ಎಂದು ಸಚಿವರು ತಿಳಿಸಿದರು.












Click it and Unblock the Notifications