ಜನತಾ ಕರ್ಫ್ಯೂ ಜನತೆಗೆ ಯಡಿಯೂರಪ್ಪ ಮನವಿ ಏನು?
ಬೆಂಗಳೂರು, ಮಾರ್ಚ್ 21 : ಪ್ರಧಾನಿ ನರೇಂದ್ರ ಮೋದಿ ಕೊರೊನಾ ಸೋಂಕು ಹರಡುವುದನ್ನು ತಡೆಯಲು ಮಾರ್ಚ್ 22ರ ಭಾನುವಾರ 'ಜನತಾ ಕರ್ಫ್ಯೂ'ಗೆ ಕರೆ ನೀಡಿದ್ದಾರೆ. ದೇಶಾದ್ಯಂತ ಈ ಕರೆಗೆ ಉತ್ತಮ ಬೆಂಬಲ ವ್ಯಕ್ತವಾಗಿದೆ.
ಕರ್ನಾಟಕದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ 'ಜನತಾ ಕರ್ಫ್ಯೂ' ಹಿನ್ನಲೆಯಲ್ಲಿ ರಾಜ್ಯದ ಜನರಿಗೆ ಮನವಿಯೊಂದನ್ನು ಮಾಡಿದ್ದಾರೆ. ರಾಜ್ಯದಲ್ಲಿ ಕೊರೊನಾ ವೈರಾಣು ಹರಡುವಿಕೆಯನ್ನು ತಡೆಗಟ್ಟುವಲ್ಲಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದ್ದೇವೆ. ಇದಕ್ಕೆ ರಾಜ್ಯದ 6.5 ಕೋಟಿ ಜನರ ನೈತಿಕ ಮತ್ತು ಸಾಂಘಿಕ ಬೆಂಬಲ ಕಾರಣ ಎಂದು ಹೇಳಿದ್ದಾರೆ.
ನರೇಂದ್ರ ಮೋದ ಅವರು ಭಾನುವಾರ ಬೆಳಗ್ಗೆ 7 ರಿಂದ ರಾತ್ರಿ 9 ಗಂಟೆಯವರೆಗೆ 'ಜನತಾ ಕರ್ಫ್ಯೂ' ಆಚರಣೆಗೆ ಕರೆ ಕೊಟ್ಟಿದ್ದು, ನಿಮ್ಮೆಲ್ಲರ ಬೆಂಬಲ ಅತ್ಯಂತ ಅಗತ್ಯವಾಗಿದೆ. ನಾವೆಲ್ಲರೂ ಮನೆಯಲ್ಲೇ ಉಳಿದು ನಿಜವಾದ ಅರ್ಥದಲ್ಲಿ ಕರ್ಫ್ಯೂ ಬೆಂಬಲಿಸೋಣ ಎಂದು ಮನವಿ ಮಾಡಿದ್ದಾರೆ.

ಭಾನುವಾರ ರಾತ್ರಿ 9 ಗಂಟೆಯ ನಂತರ ಜನತಾ ಕರ್ಫ್ಯೂ ಅವಧಿ ಮುಗಿದಿದೆ ಎಂದು ಎಲ್ಲರೂ ಮನೆಯಿಂದ ಹೊರಗಡೆ ಬಂದು ಸಂಭ್ರಮಿಸುವುದಾಗಲೀ, ಅಥವಾ ದಿನ ನಿತ್ಯದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದನ್ನು ಮಾಡಬೇಡಿ ಎಂದು ಕರೆ ನೀಡಿದ್ದಾರೆ.
ಇದರಿಂದಾಗಿ ಬೆಳಗ್ಗೆಯಿಂದ ಆಚರಿಸಿದ ರೋಗ ತಡೆಯುವ ಕ್ರಮದ ಕರ್ಫ್ಯೂ ಅರ್ಥರಹಿತವಾಗುತ್ತದೆ. ಪ್ರಧಾನಿ ನರೇಂದ್ರ ಮೋದಿಯವರೂ ಕೂಡ, ನಿಮಗೆ 9 ಗಂಟೆಯಿಂದ ಮನೆ ಹೊರಗಡೆ ಬರದೆ ಮನೆಯವರೆಲ್ಲರೂ ಆಪ್ತರೊಂದಿಗೆ ಕಾಲ ಕಳೆಯಲು ಮನವಿ ಮಾಡಿದ್ದಾರೆ. ಹೀಗೆ ಮಾಡುವುದರಿಂದ ಬೆಳಗ್ಗೆ 7ರಿಂದ ರಾತ್ರಿ 9 ಗಂಟೆಯ ಕರ್ಫ್ಯೂಗೆ ಒಂದು ಅರ್ಥ ಮತ್ತು ಸಾರ್ಥಕತೆ ಸಾಧ್ಯವಾಗಲಿದೆ ಎಂದು ಯಡಿಯೂರಪ್ಪ ಹೇಳಿದ್ದಾರೆ.
ನೀವು ಯಾರೂ ರಾತ್ರಿ 9 ಗಂಟೆಯ ನಂತರ ಮನೆಯಿಂದ ಹೊರಗೆ ಬರಬೇಡಿ. ಆದರೆ, ಸಂಜೆ 5 ಗಂಟೆಗೆ ನಿಮ್ಮ ಮನೆಯ ಕಿಟಕಿಗಳಿಂದ ಮತ್ತು ಛಾವಣಿಗಳ ಮೇಲಿಂದ ಚಪ್ಪಾಳೆ ತಟ್ಟಿ ಸರಕಾರದ ಮತ್ತು ರೋಗ ತಡೆಯುವಲ್ಲಿ ಭಾಗಿಯಾಗಿರುವ ಜನರಿಗೆ ನೈತಿಕ ಬೆಂಬಲ ಸೂಚಿಸಲು ಮಾತ್ರ ಮರೆಯಬೇಡಿ ಎಂದು ಸಾಮಾಜಿಕ ಜಾಲತಾಣದ ಮೂಲಕ ಸಂದೇಶ ಕಳಿಸಿದ್ದಾರೆ.












Click it and Unblock the Notifications