ಜೈಲಿನಿಂದ ಹೊರಬರುವ ರೆಡ್ಡಿ ಬಿಜೆಪಿ ಸೇರಲಿದ್ದಾರೆಯೇ?
ಬೆಂಗಳೂರು, ಜ. 21 : ಅಕ್ರಮ ಗಣಿಗಾರಿಕೆ ಆರೋಪದಲ್ಲಿ ಜೈಲು ಸೇರಿದ್ದ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರಿಗೆ ಜಾಮೀನು ಸಿಕ್ಕಿದ್ದು, ಜೈಲಿನಿಂದ ಹೊರಬರಲಿದ್ದಾರೆ. ಬಳ್ಳಾರಿ ಭಾಗದಲ್ಲಿ ನೆಲೆ ಕಂಡುಕೊಂಡಿರುವ ಬಿಜೆಪಿಗೆ ರೆಡ್ಡಿ ಶಕ್ತಿ ತುಂಬುತ್ತಾರೆಯೇ? ರೆಡ್ಡಿ ಮರಳಿ ಬಿಜೆಪಿ ಸೇರಲಿದ್ದಾರೆಯೇ? ಎಂಬ ರಾಜಕೀಯ ಲೆಕ್ಕಾಚಾರ ಈಗ ಆರಂಭವಾಗಿದೆ.
ಮಾಜಿ ಸಚಿವ ಜನಾರ್ದನ ರೆಡ್ಡಿ ಪುನಃ ಬಿಜೆಪಿ ಸೇರಿ ರಾಜಕೀಯ ಚಟುವಟಿಕೆ ಆರಂಭಿಸಲಿದ್ದಾರೆಯೇ ಎಂಬುದು ಸದ್ಯದ ಪ್ರಶ್ನೆ. ಜನಾರ್ದನ ರೆಡ್ಡಿ ಅವರ ಬಿಜೆಪಿ ಸದಸ್ಯತ್ವ ರದ್ದುಗೊಂಡಿದೆ. ರೆಡ್ಡಿಗೆ ಜಾಮೀನು ಸಿಕ್ಕಿರುವುದಕ್ಕೆ ಸಂತಸ ವ್ಯಕ್ತಪಡಿಸಿರುವ ರಾಜ್ಯದ ಬಿಜೆಪಿ ನಾಯಕರು ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಬಗ್ಗೆ ತೀರ್ಮಾನ ವರಿಷ್ಠರಿಗೆ ಬಿಟ್ಟಿದ್ದು ಎಂದು ಪ್ರತಿಕ್ರಿಯೆ ನೀಡಿದ್ದಾರೆ. [ರೆಡ್ಡಿಗೆ ಜಾಮೀನು : ಯಾರು, ಏನು ಹೇಳಿದರು?]

ಸುಪ್ರೀಂಕೋರ್ಟ್ ಷರತ್ತಿನ ಅನ್ವಯ ಜನಾರ್ದನ ರೆಡ್ಡಿ ಬಳ್ಳಾರಿಗೆ ಸದ್ಯಕ್ಕೆ ಕಾಲಿಡುವಂತಿಲ್ಲ. ಸದ್ಯಕ್ಕೆ ಕರ್ನಾಟಕದಲ್ಲಿ ಚುನಾವಣೆಯೂ ಎದುರಾಗುವುದಿಲ್ಲ. ಬಳ್ಳಾರಿ ಸಂಸದ ಮತ್ತು ರಾಜ್ಯ ಬಿಜೆಪಿ ನಾಯಕ ಬಿ.ಶ್ರೀರಾಮುಲು ಅವರ ಆಪ್ತರಾಗಿರುವ ರೆಡ್ಡಿ ಪುನಃ ಬಿಜೆಪಿ ಸೇರಲಿದ್ದಾರೆಯೇ? ಮುಂಬರುವ ಚುನಾವಣೆಯಲ್ಲಿ ಪಕ್ಷಕ್ಕೆ ಶಕ್ತಿ ತುಂಬಲಿದ್ದಾರೆಯೇ? ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. [ರೆಡ್ಡಿಗೆ ಷರತ್ತುಬದ್ಧ ಜಾಮೀನು ಮಂಜೂರು]
ಕಾನೂನು ತೊಡಕುಗಳು : ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಿಧ ಪ್ರಕರಣಗಳಲ್ಲಿ ಜನಾರ್ದನ ರೆಡ್ಡಿ ಆರೋಪಿ ನಂ.1. ಆದ್ದರಿಂದ ಅವರನ್ನು ಈಗಲೇ ಪಕ್ಷಕ್ಕೆ ಬರಮಾಡಿಕೊಂಡರೆ ಪಕ್ಷದ ವರ್ಚಸ್ಸಿಗೆ ಧಕ್ಕೆ ಉಂಟಾಗಲಿದೆ. ಆದ್ದರಿಂದ ರೆಡ್ಡಿ ಎಲ್ಲಾ ಕಾನೂನು ತೊಡಕುಗಳಿಂದ ಆಚೆ ಬಂದ ನಂತರ ಅವರನ್ನು ಪಕ್ಷಕ್ಕೆ ಬರಮಾಡಿಕೊಳ್ಳುವ ಸಾಧ್ಯತೆ ಇದೆ. [ಬಳ್ಳಾರಿ ಕೈವಶ, ರೆಡ್ಡಿಪಾಳಯಕ್ಕೆ ಮುಖಭಂಗ]

ಕಾಂಗ್ರೆಸ್ಗೆ ತಿರುಗೇಟು : ಜನಾರ್ದನ ರೆಡ್ಡಿ ಅವರು ಜೈಲಿಗೆ ಹೋದ ಬಳಿಕ ಬಳ್ಳಾರಿಯಲ್ಲಿ ಶ್ರೀರಾಮುಲು ಏಕಾಂಗಿಯಾಗಿದ್ದರು. ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಹೀನಾಯವಾಗಿ ಸೋಲುಂಡಿದ್ದರು. ಲೋಕಸಭೆ ಚುನಾವಣೆಯಲ್ಲಿ ಏಕಾಂಗಿಯಾಗಿ ಜಿಲ್ಲೆಯ ತುಂಬಾ ಸಂಚರಿಸಿ ಪ್ರಚಾರಮಾಡಿ ಶ್ರೀರಾಮಲು ಗೆಲುವು ಸಾಧಿಸಿದ್ದರು.
ಸದ್ಯ ಬಳ್ಳಾರಿ ಭಾಗದಲ್ಲಿ ಕಾಂಗ್ರೆಸ್ ಪ್ರಭಾವ ಹೆಚ್ಚಾಗಿದೆ. ಜಿಲ್ಲೆಯಲ್ಲಿ ಪುನಃ ಕಮಲ ಅರಳಬೇಕೆಂದರೆ ಶ್ರೀರಾಮುಲು ಮತ್ತು ರೆಡ್ಡಿ ಜೊತೆಯಾಗಬೇಕು. ಈ ಲೆಕ್ಕಾಚಾರಗಳು ಬಿಜೆಪಿ ನಾಯಕರಿಗೂ ತಿಳಿದಿದೆ. ಆದ್ದರಿಂದ ಜನಾರ್ದನ ರೆಡ್ಡಿಯನ್ನು ಪಕ್ಷಕ್ಕೆ ಸೇರಿಸಿಕೊಳ್ಳವ ಸಾಧ್ಯತೆಯೂ ಇದೆ.












Click it and Unblock the Notifications