ಸಿಎಂಗಾಗಿ ಜನಾರ್ಧನ ಪೂಜಾರಿ ಕಾದರು, ಆದರೆ ಸಿದ್ದು ಬರಲಿಲ್ಲ
ಮಂಗಳೂರು, ಅ 10: ಮಾಜಿ ಕೇಂದ್ರ ಸಚಿವ ಜನಾರ್ಧನ ಪೂಜಾರಿಯವರ ಬೆಂಬಲಿಗರು ಹರಿಯಬಿಟ್ಟ ವದಂತಿಯಿಂದಾಗಿ, ಜನಾರ್ಧನ ಪೂಜಾರಿ ಮುಖ್ಯಮಂತ್ರಿಗಳಿಗಾಗಿ ಕಾದು ಕುಳಿತ ಘಟನೆ ಭಾನುವಾರ (ಅ 9) ಮಂಗಳೂರಿನಲ್ಲಿ ನಡೆದಿದೆ.
ದಕ್ಷಿಣಕನ್ನಡ ಜಿಲ್ಲಾ ಪ್ರವಾಸದಲ್ಲಿದ್ದ ಮುಖ್ಯಮಂತ್ರಿಗಳು, ಕುದ್ರೋಳಿ ಗೋಕರ್ಣನಾಥೇಶ್ವರ ದೇವಾಲಯದ ಮಂಗಳೂರು ದಸರಾ ಕಾರ್ಯಕ್ರಮದ ಉದ್ಘಾಟನೆಗೆ ಬರಲಿದ್ದಾರೆಂದು ಪೂಜಾರಿ ಬೆಂಬಲಿಗರು ವದಂತಿ ಹಬ್ಬಿಸಿದ್ದರು.
ಸಿದ್ದರಾಮಯ್ಯ ಬರುತ್ತಾರೆಂದು ಜನಾರ್ಧನ ಪೂಜಾರಿ ಸಮಯಕ್ಕಿಂತ ಮುಂಚೆಯೇ ಹೋಗಿ ಕಾಯುತ್ತಿದ್ದರು. ಆದರೆ ಮುಖ್ಯಮಂತ್ರಿಗಳು ಪರಿಷತ್ತಿನ ಸರಕಾರದ ಸಚೇತಕ ಐವನ್ ಡಿಸೋಜ ಅವರ ನಿವಾಸಕ್ಕೆ ತೆರಳಿ ಅಲ್ಲಿಂದ ಸೀದಾ ಮಂಗಳೂರು ವಿಮಾನ ನಿಲ್ದಾಣಕ್ಕೆ ತೆರಳಿದರು.

ಮುಖ್ಯಮಂತ್ರಿಗಳನ್ನು ದಸರಾ ಕಾರ್ಯಕ್ರಮಕ್ಕೆ ಆಹ್ವಾನಿಸಿರಲಿಲ್ಲ, ಹಾಗಾಗಿಯೇ ದಸರಾ ಕಾರ್ಯಕ್ರಮ ಉದ್ಘಾಟನೆಗೆ ಸಿದ್ದರಾಮಯ್ಯ ಬರಲಿಲ್ಲ ಎಂದು ಮುಖ್ಯಮಂತ್ರಿ ಸಚಿವಾಲಯ ಸ್ಪಷ್ಟನೆ ನೀಡಿದೆ.
ಕಾವೇರಿ, ಎತ್ತಿನಹೊಳೆ, ಮಹದಾಯಿ, ಕೆ ಜೆ ಜಾರ್ಜ್ ವಿಚಾರ ಸೇರಿದಂತೆ, ನಿರಂತರವಾಗಿ ಸಿದ್ದರಾಮಯ್ಯನವರ ವಿರುದ್ದ ವಾಕ್ ಪ್ರಹಾರ ನಡೆಸುತ್ತಿರುವ ಜನಾರ್ದನ ಪೂಜಾರಿ ಮತ್ತು ಸಿಎಂ ಸಿದ್ದರಾಮಯ್ಯ ನಡುವೆ ಮುಖಾಮುಖಿ ಭೇಟಿಗೆ ವೇದಿಕೆ ಕಲ್ಪಿಸುವ ಸಾಹಸಕ್ಕೆ ಪೂಜಾರಿ ಬೆಂಬಲಿಗರು ಕೈ ಹಾಕಿದ್ದರು.
ಕುದ್ರೋಳಿ ದೇವಸ್ಥಾನಕ್ಕೆ ಭೇಟಿ ನೀಡುವ ಕಾರ್ಯಕ್ರಮ ಮುಖ್ಯಮಂತ್ರಿಗಳ ಅಧಿಕೃತ ಕಾರ್ಯಕ್ರಮಗಳ ಪಟ್ಟಿಯಲ್ಲಿ ಇರಲಿಲ್ಲ.
ಆದರೂ, ಮುಖ್ಯಮಂತ್ರಿಗಳು ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ ಎಂಬ ವದಂತಿಯನ್ನು ಪೂಜಾರಿ ಬೆಂಬಲಿಗರು ಹರಿಯ ಬಿಟ್ಟಿದ್ದರಿಂದ 'ಹಿರಿಯ ಜೀವ ಪೂಜಾರಿ' ಅನಾವಶ್ಯಕವಾಗಿ ಕಾಯುವಂತಾಯಿತು.












Click it and Unblock the Notifications