Vande Bharat Train: ಕೇಂದ್ರ ರೈಲ್ವೆ ಸಚಿವರ ಭೇಟಿಯಾದ ಜಗದೀಶ್ ಶೆಟ್ಟರ್, ಬೆಳಗಾವಿ ರೈಲಿನ ಮಹತ್ವದ ಅಪ್ಡೇಟ್
ಬೆಂಗಳೂರು, ಸೆಪ್ಟಂಬರ್ 19: ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ 06 ಹೊಸ ವಂದೇ ಭಾರತ್ ರೈಲು ಸಂಚಾರ ಕಾರ್ಯಾಚರಣೆಗೆ ಹಸಿರು ನಿಶಾನೆ ತೋರಿಸಿದರು. ಇದೇ ವೇಳೆ ಬೆಂಗಳೂರಿನಿಂದ ಹುಬ್ಬಳ್ಳಿ ಮಾರ್ಗವಾಗಿ ಸಂಚರಿಸಿ ಧಾರವಾಡಕ್ಕೆ ಕೊನೆಗೊಳ್ಳುವ ವಂದೇ ಭಾರತ್ ರೈಲನ್ನು ಬೆಳಗಾವಿ ವಿಸ್ತರಣೆಗೆ ಸಂಸದ ಜಗದೀಶ್ ಶೆಟ್ಟರ್ ಮನವಿ ಮಾಡಿದ್ದರು. ಇದೀಗ ಮತ್ತೆ ಅದೇ ವಿಚಾರವಾಗಿ ಕೇಂದ್ರ ಸಚಿವರನ್ನು ಭೇಟಿ ಮಾಡಿದ್ದಾರೆ. ಮಹತ್ವದ ಚರ್ಚೆ ಬಳಿಕ ಅಪ್ಡೇಟ್ ಕೊಟ್ಟಿದ್ದಾರೆ.
ಹೊಸ ವಂದೇ ಭಾರತ್ ರೈಲುಗಳ ಪೈಕಿ ಒಂದು ಪುಣೆಯಿಂದ ಬೆಳಗಾವಿ ಮಾರ್ಗವಾಗಿ ಹುಬ್ಬಳ್ಳಿಗೆ ಬರುತ್ತದೆ. ಆದರೆ ಬೆಂಗಳೂರಿನಿಂದ ಧಾರವಾಡಕ್ಕೆ, ಇಲ್ಲ ಧಾರವಾಡದಿಂದ ಬೆಳಗಾವಿಗೆ ವಂದೇ ಭಾರತ್ ರೈಲು ಇಲ್ಲ. ಬಹುದಿನಗಳಿಂದ ಬೆಳಗಾವಿವರೆಗೆ ಈ ರೈಲು ವಿಸ್ತರಣೆಗೆ ಬೇಡಿಕೆ ಇದೆ. ಆದರೆ ಇನ್ನು ಸಾಕಾರವಾಗಿಲ್ಲ. ಒಂದಷ್ಟು ತಾಂತ್ರಿಕ ಸಮಸ್ಯೆಗಳನ್ನು ರೈಲ್ವೆ ಅಧಿಕಾರಿಗಳು ಈ ಹಿಂದೆ ತಿಳಿಸಿದ್ದರು.

ಸಂಸದರು ಸಚಿವರ ಭೇಟಿ ವೇಳೆ ನಡೆದ ಚರ್ಚೆಗಳೇನು?
ಇದೀಗ ಪಟ್ಟು ಬಿಡದ ಜಗದೀಶ್ ಶೆಟ್ಟರ್ ಅವರು, ಈಗಾಗಲೇ ಕೇಂದ್ರ ರೈಲ್ವೆ ರಾಜ್ಯ ಸಚಿವರಾದ ವಿ.ಸೋಮಣ್ಣ ಅವರಿಗೆ ಬೆಂಗಳೂರು ರೈಲು ಬೆಳಗಾವಿ ವಿಸ್ತರಣೆ ಮಾಡುವಂತೆ ಕೇಳಿಕೊಂಡಿದ್ದರು. ಅವರು ಸಕಾರಾತ್ಮಕವಾಗಿ ಭರವಸೆ ನೀಡಿದ್ದರು. ಇದೀಗ ಮತ್ತೆ ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಅವರನ್ನು ಖುದ್ದು ಸಂಸದರು ಭೇಟಿಯಾಗಿ ಹೊಸ ಮಾರ್ಗದಲ್ಲಿ ರೈಲು ವಿಸ್ತರಣೆಗೆ ಮನವಿ ಮಾಡಿದ್ದಾರೆ. ಈ ಕುರಿತು ಕೆಲ ಹೊತ್ತು ಚರ್ಚೆ ನಡೆಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಜಗದೀಶ್ ಶೆಟ್ಟರ್ ಅವರು, ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಅವರನ್ನು ಭೇಟಿ ಮಾಡಿದೆ. ಬೆಂಗಳೂರು - ಧಾರವಾಡ ನಡುವೆ ಸದ್ಯ ಸಂಚರಿಸುತ್ತಿರುವ ವಂದೇ ಭಾರತ್ ಹೈ ಸ್ಪೀಡ್ ರೈಲು ಸಂಚಾರವನ್ನು ಬೆಳಗಾವಿ ನಗರದ ವರೆಗೆ ವಿಸ್ತರಿಸುವ ಕೋರಿದ್ದೇನೆ.
ಕೆಂದ್ರ ಸಚಿವರಿಗೆ ಸಂಸದರ ಅಭಿನಂದನೆ
ಚರ್ಚೆ ಪ್ರಾರಂಭದಲ್ಲಿ ಪುಣೆ - ಬೆಳಗಾವಿ - ಹುಬ್ಬಳ್ಳಿ ನಡುವೆ ಇತ್ತೀಚಿಗೆ ವಂದೇ ಭಾರತ್ ನೂತನ ಹೈ ಸ್ಪೀಡ್ ರೈಲು ಸಂಚಾರಕ್ಕೆ ಚಾಲನೆ ನೀಡಿರುವುದು, ಬೆಳಗಾವಿ ಜಿಲ್ಲೆಯ ರಹವಾಸಿಗಳ ಅನೇಕ ದಿನಗಳ ಬೇಡಿಕೆಯನ್ನು ಈಡೇರಿಸಿ, ಅನುಕೂಲತೆ ಕಲ್ಪಿಸಿ ಕೊಟ್ಟಿರುವುದಕ್ಕೆ ಅಭಿನಂದನೆ ಸಲ್ಲಿಸಿದೆ ಎಂದರು.

ಇದೇ ಸಮಯದಲ್ಲಿ ಬೆಂಗಳೂರು - ಧಾರವಾಡ ನಡುವೆ ಹಾಲಿ ಕಾರ್ಯಾಚರಣೆ ಮಾಡುತ್ತಿರುವ ವಂದೇ ಭಾರತ್ ರೈಲು ಸಂಚಾರ ಸೇವೆಯನ್ನು ಸಹ ಬೆಳಗಾವಿಯವರೆಗೆ ವಿಸ್ತರಿಸುವ ಅವಶ್ಯಕತೆಯ ಕುರಿತು ಕೇಂದ್ರ ರೈಲ್ವೆ ಸಚಿವ ಮನವರಿಕೆ ಮಾಡಿಕೊಡಲಾಯಿತು.
ಬೆಳಗಾವಿಯಿಂದ ಸವದತ್ತಿ ದೇವಸ್ಥಾನಕ್ಕೆ ರೈಲಿಗೆ ಮನವಿ
ಅದೇ ರೀತಿ ಬೆಳಗಾವಿ ಜಿಲ್ಲೆಯ ಸವದತ್ತಿ ರೇಣುಕಾ ಯಲ್ಲಮ್ಮ ದೇವಸ್ಥಾನಕ್ಕೆ ನೂತನ ರೈಲು ಸೇವೆ ಕಲ್ಪಿಸುವ ಬಗ್ಗೆ ಅಗತ್ಯವೆನಿಸುವ ಸಮೀಕ್ಷೆ ಕಾರ್ಯವನ್ನು ಕೈಗೊಳ್ಳಬೇಕು ಎಂದು ಸಚಿವರಾದ ವಿ.ಸೋಮಣ್ಣ ಹಾಗೂ ಅಶ್ವಿನಿ ವೈಷ್ಣವ್ ಅವರಿಗೂ ಲಿಖಿತ ಮನವಿ ಮಾಡಲಾಯಿತು. ಇದೆಲ್ಲ ಆಲಿಸಿದ ಅವರು ಮುಂದಿನ ದಿನಗಳಲ್ಲಿ ಈ ಬೇಡಿಕೆಗಳನ್ನು ಸಹ ಈಡೇರಿಸುವುದಾಗಿ ಅವರು ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.












Click it and Unblock the Notifications