ಬಂಟ್ವಾಳ ಕ್ಷೇತ್ರ : ರಮಾನಾಥ ರೈ v/s ಬಿಜೆಪಿ ಕದನ!
ಮಂಗಳೂರು, ಜನವರಿ 31 : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತಿ ಹೆಚ್ಚು ಕುತೂಹಲ ಕೆರಳಿಸಿರುವ ಕ್ಷೇತ್ರ ಬಂಟ್ವಾಳ. ಕ್ಷೇತ್ರದ ಶಾಸಕರು ರಾಜ್ಯ ಅರಣ್ಯ ಮತ್ತು ಪರಿಸರ ಖಾತೆ ಸಚಿವ ಬಿ ರಮಾನಾಥ ರೈ.
ಹಲವಾರು ವಿವಾದಗಳಿಂದ ಸುದ್ದಿ ಮಾಡಿದ್ದ ಸಚಿವ ರಮಾನಾಥ ರೈ ಅವರಿಗೆ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ತೀವ್ರ ಪೈಪೋಟಿ ನೀಡುವ ಸಾಧ್ಯತೆ ಇದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಂಟ್ವಾಳ ಕ್ಷೇತ್ರ ಬಿಜೆಪಿ ಹಾಗೂ ಸಂಘಪರಿವಾರಕ್ಕೆ ಪ್ರಮುಖ ಟಾರ್ಗೆಟ್.
ಕಲ್ಲಡ್ಕ ಪ್ರಭಾಕರ ಭಟ್ ರ ಶಾಲೆಗೆ ರಾಜ್ಯ ಸರ್ಕಾರದ ಅನುದಾನ ರದ್ದು
ಕಾಂಗ್ರೆಸ್ ಹಾಗು ಬಿಜೆಪಿಯ ಜಿದ್ದಾಜಿದ್ದಿನ ಕ್ಷೇತ್ರವಾಗಿದೆ ಬಂಟ್ವಾಳ. ಬಿ.ರಮಾನಾಥ ರೈ 6 ಬಾರಿ ಶಾಸಕರಾಗಿ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ. ಒಂದು ಬಾರಿ ಸೋಲನ್ನು ಕಂಡಿದ್ದಾರೆ. 2013ರ ಚುನಾವಣೆಯಲ್ಲಿ ಅವರು 17,850 ಮತಗಳ ಅಂತರದಿಂದ ಗೆದ್ದಿದ್ದಾರೆ.
ಮಂಗಳೂರು ದಕ್ಷಿಣ ಕ್ಷೇತ್ರ : ಕಾಂಗ್ರೆಸ್ v/s ಬಿಜೆಪಿ ನೇರ ಹಣಾಹಣಿ!
2013ರ ಚುನಾವಣೆಯಲ್ಲಿ ರಮಾನಾಥ ರೈ ಬಿಜೆಪಿಯ ರಾಜೇಶ್ ನಾಯ್ಕ್ ಉಳಿಪ್ಪಾಡಿ ವಿರುದ್ಧ 17,850 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ರಮಾನಾಥ ರೈ 81,665 ಮತಗಳನ್ನು ಗಳಿಸಿದರೆ, ರಾಜೇಶ್ ನಾಯ್ಕ್ 63,815 ಮತ, ಜೆಡಿಎಸ್ನ ಕೃಷ್ಣಪ್ಪ ಪೂಜಾರಿ ಕಲ್ಲಡ್ಕ 1,927 ಮತ ಪಡೆದಿದ್ದರು...
ಬಿಲ್ಲವ ಮತಗಳು ನಿರ್ಣಾಯಕ
ಹಲವು ವರ್ಷಗಳಿಂದ ಅನಾಯಾಸವಾಗಿ ಗೆಲುವು ಸಾಧಿಸಿಕೊಂಡು ಬಂದಿರುವ ರಮಾನಾಥ ರೈ ಅವರಿಗೆ ಈ ಬಾರಿ ಕ್ಷೇತ್ರದಲ್ಲಿ ಗೆಲುವು ಕೊಂಚ ಕಷ್ಟವಾಗುವ ಸಾಧ್ಯತೆ ಇದೆ. ಕ್ಷೇತ್ರದಲ್ಲಿ ಬಿಲ್ಲವ ಮತಗಳು ನಿರ್ಣಾಯಕ. ಉಳಿದಂತೆ ಅಲ್ಪಸಂಖ್ಯಾತರ ಹಾಗೂ ಬಂಟ ಸಮುದಾಯದ ಮತಗಳೂ ಹೆಚ್ಚಿನ ಸಂಖ್ಯೆಯಲ್ಲಿವೆ. ಕಾಂಗ್ರೆಸ್ ಬೆಂಬಲಿಸಿಕೊಂಡು ಬಂದಿರುವ ಬಿಲ್ಲವ ಸಮಾಜ ಈ ಬಾರಿ ರಮಾನಾಥ ರೈ ಅವರನ್ನು ತಿರಸ್ಕರಿಸಲಿದ್ದಾರೆಯೇ?.
ಜನಾರ್ದನ ಪೂಜಾರಿ
ಬಿಲ್ಲವ ಸಮಾಜದ ಮುಖಂಡ, ಹಿರಿಯ ಕಾಂಗ್ರೆಸ್ ನಾಯಕ, ಮಾಜಿ ಕೇಂದ್ರ ಸಚಿವ ಬಿ.ಜನಾರ್ದನ ಪೂಜಾರಿ ಜೊತೆಗಿನ ಮುಸುಕಿನ ಗುದ್ದಾಟ ರಮಾನಾಥ ರೈ ಅವರಿಗೆ ಹಿನ್ನಡೆ ಉಂಟು ಮಾಡಬಹುದು. ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಪೂಜಾರಿ ಪ್ರಭಾವಿ ನಾಯಕರು. ಪೂಜಾರಿಯವರನ್ನು ರಮಾನಾಥ ರೈ ಅವಮಾನಿಸಿದ್ದಾರೆ ಎನ್ನುವ ವಿಚಾರದಲ್ಲಿ ಸಮುದಾಯ ಕಾಂಗ್ರೆಸ್ ಬೆಂಬಲಿಸದೇ ಇರಬಹುದು. ಅಲ್ಲದೆ ಪಕ್ಷದಲ್ಲಿದ್ದ ಇನ್ನೊಬ್ಬ ಪ್ರಭಾವಿ ಮುಖಂಡ ಹರಿಕೃಷ್ಣ ಬಂಟ್ವಾಳ ಇದೀಗ ಬಿಜೆಪಿಗೆ ಸೇರಿದ್ದು ಕಾಂಗ್ರೆಸ್ಗೆ ಹಿನ್ನಡೆಯಾಗಲಿದೆ.
ಪ್ರಭಾಕರ ಭಟ್ ಶಾಲೆಯ ವಿವಾದ
ಬಂಟ್ವಾಳದ ಕಲ್ಲಡ್ಕ ಶಾಲೆಗಳ ಮಧ್ಯಾಹ್ನದ ಬಿಸಿಯೂಟ ಅನುದಾನ ರದ್ದು ಪಡಿಸಿರುವ ವಿಚಾರ ಈ ಬಾರಿಯ ಚುನಾವಣೆಯಲ್ಲಿ ಸದ್ದು ಮಾಡಲಿದೆ. ಆರ್ಎಸ್ಎಸ್ ಮುಖಂಡ ಕಲ್ಲಡ್ಕ ಡಾ. ಪ್ರಭಾಕರ ಭಟ್ ನೇತೃತ್ವದಲ್ಲಿ ನಡೆಯುತ್ತಿರುವ ಈ ಶಾಲೆಗಳ ಅನುದಾನ ರದ್ದು ಮಾಡಿರುವ ಹಿಂದೆ ರಮಾನಾಥ ರೈ ಕೈವಾಡವಿದೆ ಎಂದು ಹೇಳಲಾಗಿದ್ದು, ಈ ಎಲ್ಲಾ ವಿವಾದ ಗಳು ಮುಂದಿನ ಚುನಾವಣೆಯಲ್ಲಿ ಪಕ್ಷಕ್ಕೆ ಮುಳುವಾಗುವ ಸಾಧ್ಯತೆ ಇದೆ.
ವಿವಾದಾತ್ಮಕ ಹೇಳಿಕೆಗಳು
ರಮಾನಾಥ ರೈ ಅವರ ವಿವಾದಾತ್ಮಕ ಹೇಳಿಕೆಗಳು, ಅತಿಯಾದ ಮುಸ್ಲಿಂ ತುಷ್ಟೀಕರಣ ನೀತಿಗಳೂ ಈ ಬಾರಿ ಅವರಿಗೆ ಹಿನ್ನಡೆ ಉಂಟು ಮಾಡುವ ಸಾಧ್ಯತೆ ಇದೆ. ಅಭಿವೃದ್ಧಿಗೆ ಸಂಬಂಧಿಸಿದಂತೆಯೂ ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆ ಎನ್ನುವ ಆರೋಪವೂ ಇದೆ. ಆದರೆ, ಬಂಟ್ವಾಳದಲ್ಲಿ ಇತ್ತೀಚೆಗೆ ನೂರಾರು ಕೋಟಿ ರೂಪಾಯಿಗಳ ಕಾಮಗಾರಿಗಳನ್ನೂ ನಡೆಸಿರುವ ವಿಚಾರ ಚುನಾವಣೆಯಲ್ಲಿ ವರವಾಗುವ ಸಾಧ್ಯತೆ ಇದೆ.
ರಾಜೇಶ್ ನಾಯ್ಕ್ ಬಿಜೆಪಿ ಅಭ್ಯರ್ಥಿ
ಬಂಟ್ವಾಳ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳ ನಡುವೆ ನೇರ ಹಣಾಹಣಿ ಇದೆ. ಉಳಿದ ಪಕ್ಷಗಳು ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವ ಸ್ಥಿತಿಯಲ್ಲಿದೆ. ಕಾಂಗ್ರೆಸ್ ಪಕ್ಷದಲ್ಲಿ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಕಡಿಮೆ. ರಮಾನಾಥ ರೈ ಅವರಿಗೆ ಪರ್ಯಾಯ ನಾಯಕರು ಇನ್ನೂ ಮುಂದೆ ಬಂದಿಲ್ಲ. ಕಳೆದ ಬಾರಿ ರಮಾನಾಥ ರೈ ವಿರುದ್ಧ ಸೋತ ರಾಜೇಶ್ ನಾಯ್ಕ್ ಉಳಿಪ್ಪಾಡಿಗೆ ಈ ಬಾರಿಯೂ ಪಕ್ಷ ಮಣೆ ಹಾಕುವ ಸಾಧ್ಯತೆ ಇದೆ, ಅವರು ಪ್ರಚಾರ ಕಾರ್ಯವನ್ನು ಆರಂಭಿಸಿದ್ದಾರೆ.
ಹರಿಕೃಷ್ಣ ಬಂಟ್ವಾಳ ಸಹ ಟಿಕೆಟ್ ಆಕಾಂಕ್ಷಿ
ಕಾಂಗ್ರೆಸ್ ತೊರೆದು ಯಡಿಯೂರಪ್ಪ ಸಮ್ಮುಖದಲ್ಲಿ ಬಿಜೆಪಿ ಸೇರಿರುವ ಹಾಗೂ ಬಂಟ್ವಾಳದಲ್ಲಿ ಪ್ರಭಾವಿ ಬಿಲ್ಲವ ಸಮುದಾಯದ ಮುಖಂಡರಾಗಿರುವ ಹರಿಕೃಷ್ಣ ಬಂಟ್ವಾಳ ಕೂಡಾ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಈ ಕುರಿತು ಅವರು ಬಹಿರಂಗವಾಗಿ ಹೇಳಿಕೆ ನೀಡದಿದ್ದರೂ, ಅವರ ಆಪ್ತ ವಲಯದಲ್ಲಿ ಈ ರೀತಿಯ ಮಾತುಗಳು ಕೇಳಿ ಬರುತ್ತಿದೆ.
ರಮಾನಾಥ ರೈಗೆ ಬೆಂಬಲ
6 ಬಾರಿ ಶಾಸಕರಾದ ರಮಾನಾಥ ರೈ ಅವರು ಈ ಬಾರಿ ಜಯಗಳಿಸಲು ಕೊಂಚ ಪ್ರಯಾಸ ಪಡಬೇಕಿದೆ. ಆದರೆ, ಅಲ್ಪಸಂಖ್ಯಾತ ಸಮಾಜ ಮಾತ್ರ ರಮಾನಾಥ ರೈಯವರ ಜೊತೆಯಲ್ಲೇ ಇರುವುದರಿಂದ ಅವರಿಗೆ ಚುನಾವಣೆ ಸಮಯದಲ್ಲಿ ಸಹಾಯಕವಾಗಬಹುದು.