ಮಾನ್ಯ ಸಂಸದರುಗಳೇ ಮುಖ್ಯಮಂತ್ರಿಗಳ ಪರಿಹಾರ ನಿಧಿ ಅನ್ನೋದೂ ಇದೆ
ಮನುಷ್ಯ, ಮನುಷ್ಯನಿಗೆ ಆಗಿಬರಬೇಕಾಗಿರುವ ಸಮಯವಿದು. ಇತರ ರಾಜ್ಯದ ನಮ್ಮ ಪ್ರಜೆಗಳಿಗೆ ತೊಂದರೆಯಾದರೆ, ಅವರೂ ನಮ್ಮವರೇ. ಆದರೆ, ಮೊದಲು ನಮ್ಮ ರಾಜ್ಯದ ನಾಗರೀಕರನ್ನು ನೋಡುವುದು ಸರಿಯಾದ ಆರ್ಡರ್ ಅಲ್ಲವೇ?
ಒಂದು ದಿನದ ಅಂತರದಲ್ಲಿ ಪ್ರಧಾನಮಂತ್ರಿ ಮತ್ತು ರಾಜ್ಯದ ಮುಖ್ಯಮಂತ್ರಿಗಳು ಕೊರೊನಾ ವಿರುದ್ದದ ಹೋರಾಟಕ್ಕೆ ಸಹೃದಯಿ ಬಾಂಧವರು ಉದಾರವಾಗಿ ದೇಣಿಗೆ ನೀಡಬೇಕೆಂದು ಮನವಿ ಮಾಡಿದ್ದರು.
ಪ್ರಧಾನಿ ನೀಡಿದ ಮನವಿಗೆ ಈಗಾಗಲೇ ಕ್ರೀಡಾ, ಸಿನಿಮಾ ಕ್ಷೇತ್ರ ಸೇರಿದಂತೆ ಹಲವು ಕಡೆಯಿಂದ ನೆರವಿನ ಮಹಾಪೂರವೇ ಪ್ರಧಾನಿ ಪರಿಹಾರ ನಿಧಿಗೆ ಹರಿದು ಬರುತ್ತಿದೆ. ಈ ಮಟ್ಟಿನ ಪ್ರತಿಕ್ರಿಯೆ ಸಿಎಂ ಪರಿಹಾರದ ನಿಧಿಗೆ ಸಿಗುತ್ತಿಲ್ಲ ಎನ್ನುವುದು ವಾಸ್ತವತೆ.

ರಾಜ್ಯದ 28 ಸಂಸದರುಗಳ ಪೈಕಿ 25 ಬಿಜೆಪಿ ಎಂಪಿಗಳಿಗೆ ತಲಾ ಒಂದು ಕೋಟಿ ನೀಡುವಂತೆ ಅವರ ಬಾಸ್ ಕಡೆಯಿಂದ ಆರ್ಡರ್ ಬಂದಿದೆ. ಸಂಸದರ ಕ್ಷೇತ್ರಾಭಿವೃದ್ದಿಗೆ ನೀಡಲಾಗುವ (MPLAD) ಫಂಡ್ ನಿಂದ ಈ ಹಣವನ್ನು ನೀಡುವ ತೀರ್ಮಾನಕ್ಕೆ ಕೆಲವು ಸಂಸದರು ಬಂದಿದ್ದಾರೆ.
ಇಲ್ಲಿ ಪ್ರಶ್ನೆಯಿರುವುದು ನಮ್ಮ ರಾಜ್ಯದಿಂದ ಆಯ್ಕೆಯಾಗಿರುವ ಸಂಸದರು ಪರಿಹಾರ ಹಣವನ್ನು ಪಿಎಂ ಅಥವಾ ಸಿಎಂ ಪರಿಹಾರ ನಿಧಿಗೆ ನೀಡಬೇಕೇ ಎನ್ನುವುದು. ಇಂತದ್ದಕ್ಕೇ ನೀಡಬೇಕು ಎನ್ನುವುದು ಅವರವರ ವಿವೇಚನೆಗೆ ಬಿಟ್ಟ ವಿಚಾರವೇ? ಯಾಕೆಂದರೆ ಅದು ಸಾರ್ವಜನಿಕರ ತೆರಿಗೆ ದುಡ್ಡು. ಅವರಿಗೆ ಕೊಡಲಾಗುವ ಹಣ, ಅವರು ಪ್ರತಿನಿಧಿಸುವ ಕ್ಷೇತ್ರದ ಅಭಿವೃದ್ದಿಗೆ ಎನ್ನುವುದು ಗಮನಿಸಬೇಕಾದ ವಿಚಾರ.
ಈಗಾಗಲೇ, ಪಕ್ಷೇತರ ಸಂಸದೆ ಸುಮಲತಾ, ತಮ್ಮ ಮೂರು ತಿಂಗಳ ಸಂಬಳವನ್ನು ಪಿಎಂ ಪರಿಹಾರ ನಿಧಿಗೆ ಕೊಡುತ್ತೇನೆ ಎಂದು ಘೋಷಿಸಿಯಾಗಿದೆ. ಕೇಂದ್ರ ಸಚಿವ, ಹುಬ್ಬಳ್ಳಿ ಸಂಸದ ಪ್ರಲ್ಹಾದ್ ಜೋಶಿಗೆ ಪ್ರಧಾನಿ ಪರಿಹಾರ ನಿಧಿ ನೆನಪಾಯಿತೇ ಹೊರತು, ನಮ್ಮ ರಾಜ್ಯದ ಸಿಎಂ ಪರಿಹಾರ ನಿಧಿಯಲ್ಲ.

ನಮ್ಮ ತೆರಿಗೆ ಹಣ, ನಮ್ಮ ದೇಣಿಗೆ ಮುಂದೆ ನಮ್ಮ ರಾಜ್ಯದ ಅಭಿವೃದ್ದಿಗೇ ಮೀಸಲಾಗಿರುತ್ತೆ ಎನ್ನುವ ವಿಚಾರದಲ್ಲಿ ಕರ್ನಾಟಕದ ಜನತೆಗೆ ಇನ್ನೂ ಸ್ಪಷ್ಟನೆಯಿಲ್ಲ. ನೆರೆ ಪರಿಹಾರಕ್ಕೆ ಎಷ್ಟು ಗೋಗರೆದದ್ದು ಎನ್ನುವುದು ಕನ್ನಡಿಗರಿಗೆ ತಿಳಿಯದ ವಿಚಾರವೇನೂ ಅಲ್ಲ.
ಒಂದೇ ಒಂದು ಇದಕ್ಕೆ ನಿನ್ನೆಮೊನ್ನೆಯ ಉದಾಹರಣೆ ಕೊಡುವುದಾರೆ, 2018-19 ಆರ್ಥಿಕ ವರ್ಷಕ್ಕೆ ಅನ್ವಯವಾಗುವಂತೆ, ಪಶುಸಂಗೋಪಾನೆ ಅಡಿಯ ಬರಪರಿಹಾರವಾಗಿ ಕರ್ನಾಟಕಕ್ಕೆ ಬಂದಿದ್ದು 11.48 ಕೋಟಿ ಪುಡಿಗಾಸು. ಅದೇ ಮಹಾರಾಷ್ಟ್ರಕ್ಕೆ 1,758 ಕೋಟಿ, ರಾಜಸ್ಥಾನಕ್ಕೆ 1,090 ಕೋಟಿ.
ನಮ್ಮ ತೆರಿಗೆ ದುಡ್ಡನ್ನು ನಮ್ಮ ಕ್ಷೇತ್ರದ ಅಭಿವೃದ್ದಿಗೆ ಕಾಲಕಾಲಕ್ಕೆ ಸರಿಯಾಗಿ ಕೊಡಿ ಎಂದು ಪ್ರಧಾನಿ ಅಥವಾ ಕೇಂದ್ರ ಗೃಹ ಸಚಿವರ ಮುಂದೆ ಕೇಳುವ ಧೈರ್ಯ ನಮ್ಮ ಬಿಜೆಪಿ ಸಂಸದರಿಗೆ ಇದೆಯೋ ಎನ್ನುವ ಪ್ರಶ್ನೆ ಕಾಡುವುದಕ್ಕೆ ಹತ್ತು ಹಲವು ಉದಾಹರಣೆಗಳನ್ನು ನೋಡಿಯಾಗಿದೆ.
ಹಾಗಾಗಿ, ನಮ್ಮೆಲ್ಲಾ ಸಂಸದರಲ್ಲಿ ಮನವಿ ಏನಂದರೆ, ಮೊದಲು, ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆ ನೀಡುವುದು ಸೂಕ್ತ. ಯಾಕೆಂದರೆ, ಮುಂದಿನ ದಿನಗಳಲ್ಲಿ, ಅದಕ್ಕೂ ಕೇಂದ್ರದ ಮುಂದೆ ಕೈಚಾಚುವುದು ತಪ್ಪುತ್ತೆ. ಜನರಿಗೆ ತಲುಪಬೇಕಾಗಿರುವ ಪರಿಹಾರವೂ ಶೀಘ್ರದಲ್ಲಿ ಸಿಗಬಹುದು.












Click it and Unblock the Notifications