ಮಳೆ, ಪ್ರವಾಹದಿಂದ ಸಂಕಷ್ಟದಲ್ಲಿರುವವರಿಗೆ ಜನಪ್ರತಿನಿಧಿಗಳು ಸ್ಪಂದಿಸುವ ಕಾಲ ಇದಲ್ಲವೇ?

ಬೆಂಗಳೂರು, ಜುಲೈ 11:ರಾಜ್ಯದಲ್ಲಿ ವರುಣ ಇನ್ನಿಲ್ಲದಂತೆ ಕಾಡುತ್ತಿದ್ದಾನೆ. ಪರಿಣಾಮ ಜನ ಸಾಮಾನ್ಯರು ಪ್ರವಾಹ, ಭೂಕುಸಿತ, ಭೂಕಂಪನದ ಭಯದಲ್ಲಿ ಬದುಕುತ್ತಿದ್ದರೆ, ನಮ್ಮ ರಾಜಕೀಯ ಪಕ್ಷಗಳ ನಾಯಕರಿಗೆ ಮಾತ್ರ ಮುಂದೆ ಬರಲಿರುವ ಚುನಾವಣೆಯ ಚಿಂತೆಯಾಗಿದೆ. ಹೀಗಾಗಿ ಅವರು ಮತದಾರರ ಓಲೈಕೆ ಮಾಡಿಕೊಳ್ಳುವುದು ಹೇಗೆಂದು ತಲೆಕೆಡಿಸಿಕೊಳ್ಳುತ್ತಿದ್ದಾರೆ.

ಬೇರೆ ಯಾವುದೇ ಘಟನೆಗಳು ನಡೆದಾಗ ಒಬ್ಬರ ಮೇಲೊಬ್ಬರು ಹೇಳಿಕೆ ನೀಡುವ ನಾಯಕರು ಇವತ್ತು ಪ್ರವಾಹ ಪರಿಸ್ಥಿತಿಯಿಂದ ಜನರಿಗೆ ದಿಕ್ಕು ತೋಚದಂತಾಗಿದ್ದರೂ ಅವರ ಪರವಾಗಿ ಹೇಳಿಕೆ ನೀಡುವುದಾಗಲೀ, ಅವರ ಬಳಿ ತೆರಳಿ ನಿಮ್ಮೊಂದಿಗೆ ನಾವಿದ್ದೇವೆ ಎನ್ನುವ ಧೈರ್ಯ ತೋರಿಸುವ ಪ್ರಯತ್ನವನ್ನಾಗಲೀ ಮಾಡುತ್ತಿಲ್ಲ. ಇದೇನಾ ಜನಪ್ರತಿನಿಧಿಗಳು ಜನರ ಸಂಕಷ್ಟಕ್ಕೆ ಸ್ಪಂದಿಸುವ ರೀತಿ?

ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಕೊಡಗು, ಹಾಸನ ಮತ್ತು ಉಡುಪಿ ಸೇರಿದಂತೆ ಕೆಲವು ಜಿಲ್ಲೆಗಳಲ್ಲೂ ಮುಂಗಾರು ಅಬ್ಬರಿಸುತ್ತಿದೆ. ಹಲವಾರು ಕಡೆ ಮನೆಗಳು ಕುಸಿದಿ ಬೀಳುತ್ತಿವೆ, ರಸ್ತೆಗಳು ವರುಣನ ಆರ್ಭಟಕ್ಕೆ ಖುಸಿಯುತ್ತಿವೆ. ತೋಟಗಳು ಜಲಾವೃತವಾಗಿವೆ. ಕೆಲೆವೆಡೆ ಮಳೆ ಬಾರದಿದ್ದರೂ ಜಲಾಶಯಗಳಿಂದ ನೀರು ಬಿಟ್ಟರೆ ಪ್ರವಾಹ ಸಂಭವ ಎದುರಾಗಬಹುದೆಂದು ಭೀತಿಯಲ್ಲಿದ್ದಾರೆ. ಈ ಕಠಿಣ ಸಂದರ್ಭದಲ್ಲಿ ಜನಪ್ರತಿನಿಧಿ ಎನಿಸಿಕೊಂಡವರು, ರಾಜಕೀಯ ಬಿಟ್ಟು, ಜನರ ಕಣ್ಣೀರೊರೆಸುವ ಕಾರ್ಯಕ್ಕೆ ಮುಂದಾಗಬೇಕಿದೆ. ಆಶ್ರಯ ಕಳೆದುಕೊಂಡರಿಗೆ ಸೂರು ಒದಗಿಸಿಕೊಡಬೇಕಿದೆ.

 ಸಮಾಜ ಸೇವೆಯಲ್ಲೂ ಲಾಭ-ನಷ್ಟದ ಲೆಕ್ಕಾಚಾರ

ಸಮಾಜ ಸೇವೆಯಲ್ಲೂ ಲಾಭ-ನಷ್ಟದ ಲೆಕ್ಕಾಚಾರ

ಸದಾ ಅಧಿಕಾರ ಉಳಿಸಿಕೊಳ್ಳುವ ಮತ್ತು ಉನ್ನತ ಲಾಭದಾಯಕ ಹುದ್ದೆಯತ್ತಲೇ ದೃಷ್ಠಿ ನೆಟ್ಟಿರುವ ರಾಜಕಾರಣಿಗಳು ಏನೇ ಮಾಡಿದರೂ ಅದರ ಹಿಂದೆ ಮತಪಡೆಯುವ ಸ್ವಾರ್ಥ ಇರುತ್ತದೆ. ಮೇಲುನೋಟಕ್ಕೆ ಸಮಾಜ ಸೇವೆಯ ಜಪ ಮಾಡುವ ನಾಯಕರು ಅದರಾಚೆಗೆ ಲಾಭ-ನಷ್ಟದ ಲೆಕ್ಕಾಚಾರವನ್ನು ಹಾಕಿಕೊಂಡೇ ಮುನ್ನಡೆಯುತ್ತಾರೆ ಎನ್ನುವುದು ಸುಳ್ಳೇನಲ್ಲ. ರಾಜ್ಯದಲ್ಲಿ ಇನ್ನೆರಡು ವರ್ಷಗಳ ಅವಧಿಯೊಳಗೆ ವಿಧಾನಸಭೆ ಮತ್ತು ಲೋಕಸಭೆ ಹೀಗೆ ಎರಡು ಚುನಾವಣೆಗಳು ನಡೆದು ಹೋಗುತ್ತವೆ.

ಹೀಗಿರುವಾಗ ರಾಜ್ಯದ ಹಿತಾಸಕ್ತಿಗಿಂತ ಹೆಚ್ಚಾಗಿ ಜನಪ್ರತಿನಿಧಿಗಳು ಮುಂದಿನ ಚುನಾವಣೆಯಲ್ಲಿ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಏನು ಮಾಡಬೇಕು ಎಂಬುದರ ಬಗ್ಗೆಯೇ ಹೆಚ್ಚು ತಲೆಕೆಡಿಸಿಕೊಂಡಂತೆ ಕಾಣುತ್ತಿದೆ. ಹೀಗಾಗಿ ಆಡಳಿತ ಪಕ್ಷ ಕೆಲವೊಂದು ಯೋಜನೆಗಳನ್ನು ಪ್ರಕಟಿಸಿ ಜನರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದರೆ, ವಿರೋಧ ಪಕ್ಷಗಳು ವಿರೋಧಿಸಲೇ ಬೇಕೆಂಬ ಕಾರಣಕ್ಕೆ ವಿರೋಧಗಳನ್ನು ಮಾಡುತ್ತಿವೆ. ಯಾರಲ್ಲೂ ಗಟ್ಟಿಯಾದ ತಿರುಳು ಕಾಣಿಸುತ್ತಿಲ್ಲ.

 ಹೊಸ ಬದುಕನ್ನು ಕಟ್ಟಿಕೊಳ್ಳಬೇಕಾದ ಅನಿವಾರ್ಯ

ಹೊಸ ಬದುಕನ್ನು ಕಟ್ಟಿಕೊಳ್ಳಬೇಕಾದ ಅನಿವಾರ್ಯ

ರಾಜ್ಯದಲ್ಲಿ ಯಾವುದೂ ಕೂಡ ಸಲೀಸಾಗಿ ನಡೆಯುತ್ತಿಲ್ಲ. ಏನೇ ಮಾಡಿದರೂ ಅದನ್ನು ವಿವಾದನ್ನಾಗಿಸುವತ್ತ ಪಕ್ಷಗಳು, ಸಂಘಟನೆಗಳು ಮಾಡುತ್ತಿವೆ. ಅದಕ್ಕಿಂತ ಹೆಚ್ಚಾಗಿ ಪ್ರಕೃತಿ ವಿಕೋಪಗಳು ಜನರನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಕಳೆದ ಎರಡು ವರ್ಷಗಳಿಂದ ಕೊರೊನಾ ಹೊಡೆತಕ್ಕೆ ಸಿಲುಕಿ ಆರ್ಥಿಕ ಸಂಕಷ್ಟದಿಂದಾಗಿ ನಲುಗಿ ಹೋಗಿರುವ ಬಹುತೇಕರ ಬಳಿ ಜೀವ ಮಾತ್ರ ಉಳಿದಿದೆ. ಈಗ ಅದನ್ನು ಉಳಿಸಿಕೊಳ್ಳಲು ಹೋರಾಡಬೇಕಿದೆ.

ಬಹಳಷ್ಟು ಉದ್ದಿಮೆಗಳು ನೆಲಕಚ್ಚಿದ್ದರಿಂದ ಶ್ರೀಮಂತರು, ಬಡವರು ಎನ್ನದೆ ಎಲ್ಲರೂ ಬಸವಳಿದಿದ್ದಾರೆ. ಪ್ರತಿಯೊಬ್ಬರೂ ಹೊಸದಾದ ಬದುಕನ್ನು ಕಟ್ಟಿಕೊಳ್ಳಬೇಕಾದ ಅನಿವಾರ್ಯತೆಗೆ ಬಂದು ನಿಂತಿದ್ದಾರೆ. ಹೀಗಿರುವಾಗಲೇ ಪ್ರಾಕೃತಿಕ ವಿಕೋಪ ಜನರನ್ನು ಕಿತ್ತು ತಿನ್ನುತ್ತಿದೆ. ಕಷ್ಟಪಟ್ಟು ಕಟ್ಟಿದ ಮನೆಗಳು, ಬೆವರು ಸುರಿಸಿ ಮಾಡಿದ ಕೃಷಿ ನೀರು ಪಾಲಾಗಿದೆ. ಮುಂದೇನು ಎಂಬುದೇ ಪ್ರಶ್ನೆಗಳಾಗಿ ಗಿರಕಿ ಹೊಡೆಯುತ್ತಿವೆ.

 ಕ್ಷೇತ್ರದಲ್ಲಿದ್ದು ಕೊಂಡು ಜನರ ಜತೆ ನಿಲ್ಲುವ ಶಾಸಕರೆಷ್ಟು?

ಕ್ಷೇತ್ರದಲ್ಲಿದ್ದು ಕೊಂಡು ಜನರ ಜತೆ ನಿಲ್ಲುವ ಶಾಸಕರೆಷ್ಟು?

ಮನೆಮಠಗಳನ್ನು ಕಳೆದುಕೊಂಡು ಜನ ಬೀದಿಗೆ ಬಿದ್ದಾಗಿದೆ. ಹೀಗಾದರೆ ಹೇಗೆ? ಎಂಬ ಪ್ರಶ್ನೆಗಳು ಇವತ್ತು ಪ್ರವಾಹ ಪೀಡಿತ ಪ್ರದೇಶಗಳ ಜನರನ್ನು ಕಾಡುತ್ತಿದೆ. ಮೇಲಿಂದ ಮೇಲೆ ಸಮಸ್ಯೆಗಳು ಒಂದೇ ಸಮನೆ ಕಾಡುತ್ತಾ ಹೋದರೆ ಬದುಕು ಕಟ್ಟಿಕೊಳ್ಳುವುದಾದರೂ ಹೇಗೆ? ಇಡೀ ರಾಜ್ಯ ಸಂಕಷ್ಟದಲ್ಲಿದೆ. ಆಯಾ ಕ್ಷೇತ್ರದ ಶಾಸಕರು ಸೇರಿದಂತೆ ಜನಪ್ರತಿನಿಧಿಗಳು ಜನರ ಕಷ್ಟಕ್ಕೆ ಸ್ಪಂಧಿಸುವುದು ಅಗತ್ಯವಾಗಿದೆ.

ಆದರೆ ಕ್ಷೇತ್ರದಲ್ಲಿದ್ದು ಕೊಂಡು ಜನರ ಜತೆ ನಿಲ್ಲುವ ಶಾಸಕರು ಎಷ್ಟು ಮಂದಿ ಇದ್ದಾರೆ? ನಿಜವಾಗಲೂ ನಾವು ಆರಿಸಿ ಕಳುಹಿಸಿದವರು ನಮ್ಮ ಸಂಕಷ್ಟಕ್ಕೆ ಸ್ಪಂದಿಸುತ್ತಿದ್ದಾರಾ? ಎಂದು ಜನ ಪ್ರಶ್ನೆ ಮಾಡಿಕೊಳ್ಳುವ ಕಾಲ ಈಗ ಬಂದಿದೆ. ಇವತ್ತು ಕಷ್ಟಕ್ಕೆ ಸ್ಪಂದಿಸದವರು ನಾಳೆ ಯಾವ ಮುಖ ಹೊತ್ತು ಜನರ ಮುಂದೆ ಮತ ಕೇಳಲು ಬರುತ್ತಾರೆ?

 ಜನರ ನೋವಿಗೆ ಸ್ಪಂದಿಸಲು ಇದು ಅವಕಾಶ

ಜನರ ನೋವಿಗೆ ಸ್ಪಂದಿಸಲು ಇದು ಅವಕಾಶ

ರಾಜ್ಯ ವಿಧಾನ ಸಭಾ ಚುನಾವಣೆಗೆ ಕೇವಲ ಹತ್ತು ತಿಂಗಳು ಬಾಕಿಯಿದೆ. ಈ ಅವಧಿ ರಾಜಕಾರಣಿಗಳ ಪಾಲಿಗೆ ಅಲ್ಪಾವಧಿ ಎಂದರೆ ತಪ್ಪಾಗಲಾರದು. ಈ ಸಂದರ್ಭದಲ್ಲಿಯೇ ಸಂಕಷ್ಟಗಳು ಎದುರಾಗಿದೆ. ಜನರಿಗೆ ನಿಮ್ಮ ನಾಯಕ ಯಾರು? ನಿಮ್ಮ ಕಷ್ಟಕ್ಕೆ ಯಾರು ಸ್ಪಂದಿಸುತ್ತಾರೆ? ಎಂಬುದು ಅರಿವಿಗೆ ಬರಲು ಇದು ಸಕಾಲ.

ರಾಜಕಾರಣಿಗಳಿಗೂ ಅಷ್ಟೆ ಜನರ ನೋವಿಗೆ ಸ್ಪಂದಿಸಲು ಇದೊಂದು ಅವಕಾಶ. ನೀವು ಏನಾದರೂ ಜನರಿಗೆ ಸ್ಪಂದಿಸದೆ ಉದ್ದಟತನ ತೋರಿದರೆ ಮುಂದಿನ ಚುನಾವಣೆಯಲ್ಲಿ ಜನ ಅದಕ್ಕೆ ಸರಿಯಾದ ಉತ್ತರ ನೀಡುತ್ತಾರೆ ಎಂಬುದಂತು ಸತ್ಯ. ರಾಜ್ಯದ ಬಹುತೇಕ ಜಿಲ್ಲೆಗಳು ವರುಣನ ಆರ್ಭಟಕ್ಕೆ ಸಿಕ್ಕಿ ನಲುಗಿದೆ. ಈಗಲಾದರೂ ರಾಜಕೀಯವನ್ನು ಬದಿಗಿಟ್ಟು ಬಡವರ ಪರ ನಿಲ್ಲಿ ಎಂಬುದಷ್ಟೆ ನಮ್ಮ ಆಶಯವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+