ಯಡಿಯೂರಪ್ಪ ವಿರುದ್ದ ಆಪರೇಷನ್ ಕಮಲದ 16 ಮುಖಂಡರ ಬಂಡಾಯ ಸಾಧ್ಯತೆ?
ಆಪರೇಷನ್ ಕಮಲದ ಮೂಲಕ ಅಧಿಕಾರಕ್ಕೇರಿದ ಯಡಿಯೂರಪ್ಪನವರದ್ದು ಅಂದಿನಿಂದ ಇಂದಿನವರೆಗೂ ತಂತಿಯ ಮೇಲಿನ ನಡಿಗೆ. ಕೇಂದ್ರದ ಅಸಹಕಾರ, ಪಾಕೃತಿಕ ವಿಕೋಪ, ಕೊರೊನಾ ಹೀಗೆ.. ನೆಮ್ಮದಿಯಿಂದ ಅಥವಾ ಸಮರ್ಥವಾಗಿ ಬಿಎಸ್ವೈಗೆ ಅಧಿಕಾರ ನಡೆಸಲು ಸಾಧ್ಯವೇ ಆಗಿಲ್ಲ.
ಆದರೂ, ಎಲ್ಲಾ ಅಡೆತಡೆಗಳನ್ನು ಮೆಟ್ಟಿ, ಹದಿನೈದು ಕ್ಷೇತ್ರಗಳ ಉಪಚುನಾವಣೆಯನ್ನು ಗೆದ್ದು, ಗೆದ್ದವರಲ್ಲಿ ಬಹುತೇಕ ಎಲ್ಲರಿಗೂ ಮಂತ್ರಿಗಿರಿ ಕೊಟ್ಟು, ಇನ್ನಾದರೂ ನಿಟ್ಟುಸಿರು ಬಿಡೋಣ ಎಂದಾಗ, ಮತ್ತೆ ಈಗ ಎರಡು ಕ್ಷೇತ್ರದ ಉಪಚುನಾವಣೆ ಎದುರಾಗಿದೆ.
ಅದರಲ್ಲಿ ಶಿರಾ ಕ್ಷೇತ್ರದ ಸೋಲು/ಗೆಲುವಿನಲ್ಲಿ ಬಿಜೆಪಿ ಕಳೆದುಕೊಳ್ಳುವುದು ಏನೂ ಇಲ್ಲ. ಒಂದು ವೇಳೆ ಗೆದ್ದರೆ, ಬೋನಸ್ ಪಾಯಿಂಟ್ ಅಷ್ಟೇ. ಆದರೆ, ಆರ್.ಆರ್.ನಗರದ ಚುನಾವಣೆ ಹಾಗಲ್ಲ. ಹಾಗಾಗಿ, ಬಿಎಸ್ವೈಗೆ ಮತ್ತೆ ಈಗ ಟೆಸ್ಟಿಂಗ್ ಸಮಯ.
ಇದಕ್ಕೆ ಕಾರಣ ಇಲ್ಲದಿಲ್ಲ. ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರವನ್ನು ಖೆಡ್ಡಾಗೆ ತಳ್ಳಲು ಕಾರಣಕರ್ತರಾದ ಎಲ್ಲರೂ ಸಚಿವರಾಗಿ ಅಥವಾ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದಾಗಿದೆ. ಈಗ ಉಳಿದಿರುವುದು ಮುನಿರತ್ನ ಮತ್ತು ಪ್ರತಾಪ್ ಗೌಡ ಪಾಟೀಲ್.

ಅಸೆಂಬ್ಲಿ ಕ್ಷೇತ್ರದ ಚುನಾವಣೆಗೆ ನವೆಂಬರ್ ಮೂರರ ದಿನ ನಿಗದಿ
ರಾಜರಾಜೇಶ್ವರಿ ನಗರದ ಅಸೆಂಬ್ಲಿ ಕ್ಷೇತ್ರದ ಚುನಾವಣೆಗೆ ನವೆಂಬರ್ ಮೂರರ ದಿನ ನಿಗದಿಯಾಗಿದೆ. ಗುರುವಾರ (ಅ 1)ಸಭೆ ಸೇರಿದ್ದ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಎರಡು ಹೆಸರನ್ನು ಶಿಫಾರಸು ಮಾಡಿ ಕೇಂದ್ರಕ್ಕೆ ಕಳುಹಿಸಲಾಗಿದೆ. ಅದರಲ್ಲಿ ಒಂದು ಮುನಿರತ್ನ ಇನ್ನೊಂದು ತುಳಸಿ ಮುನಿರಾಜು ಗೌಡ. ಒಬ್ಬರು ಒಕ್ಕಲಿಗ ಸಮುದಾಯದವರು, ಇನ್ನೊಬ್ಬರು, ನಾಯ್ಡು. ಕ್ಷೇತ್ರದಲ್ಲಿ ಒಕ್ಕಲಿಗ ಮತ್ತು ಹಿಂದುಳಿದ ವರ್ಗಗಳದ್ದು ನಿರ್ಣಾಯಕ ಎನ್ನುವಷ್ಟು ವೋಟ್ ಶೇರ್ ಗಳಿವೆ.

ಕೋರ್ ಕಮಿಟಿಯ ನಿರ್ಧಾರ
ಕೋರ್ ಕಮಿಟಿಯ ನಿರ್ಧಾರಕ್ಕೆ ಕೇಂದ್ರದವರು ಗ್ರೀನ್ ಸಿಗ್ನಲ್ ನೀಡುತ್ತಾರಾ ಎನ್ನುವ ಪ್ರಶ್ನೆಗೆ ಖಚಿತವಾಗಿ ಹೌದು ಎಂದು ಹೇಳಲು ಬರುವುದಿಲ್ಲ. ಕಳೆದ ರಾಜ್ಯಸಭಾ ಚುನಾವಣೆಯಲ್ಲಿ ಕೋರ್ ಕಮಿಟಿಯ ನಿರ್ಧಾರವನ್ನು ಬಿಜೆಪಿ ವರಿಷ್ಠರು ಕಸದಬುಟ್ಟಿಗೆ ಹಾಕಿದ್ದರು ಎನ್ನುವುದನ್ನು ಮತ್ತೆ ಹೇಳಬೇಕಾಗಿಲ್ಲ. ಹಾಗಂತ, ಮುನಿರತ್ನ ಅಥವಾ ತುಳಸಿ ಮುನಿರಾಜು ಹೊರತಾಗಿ, ಬೇರೊಬ್ಬರಿಗೆ ಟಿಕೆಟ್ ಸಿಗುವ ಸಾಧ್ಯತೆ ಸದ್ಯದ ಮಟ್ಟಿಗೆ ರೂಲ್ಡೌಟ್.

ಎಸ್.ಬಿ.ಎಂ ಎಂದೇ ಹೆಸರಾಗಿದ್ದ ಮೂವರು
ಆದರೆ, ಮುನಿರತ್ನ ಅವರಿಗೆ ಟಿಕೆಟ್ ಸಿಗದೇ ಇದ್ದ ಪಕ್ಷದಲ್ಲಿ ಯಡಿಯೂರಪ್ಪ ತಮ್ಮ ಕುರ್ಚಿಗೆ ಸಂಚಕಾರ ತಂದುಕೊಳ್ಳುವುದಂತೂ ಸತ್ಯ ಎಂದು ಹೇಳಲಾಗುತ್ತಿದೆ. ಕುಮಾರಸ್ವಾಮಿ ಸರಕಾರದ ವೇಳೆ ಎಸ್.ಬಿ.ಎಂ ಎಂದೇ ಹೆಸರಾಗಿದ್ದ ಮೂವರಲ್ಲಿ ಇಬ್ಬರು, ಎಸ್.ಟಿ.ಸೋಮಶೇಖರ್ ಮತ್ತು ಬೈರತಿ ಬಸವರಾಜು, ತಮ್ಮ ಗ್ರೂಪಿನ ಇನ್ನೋರ್ವ, ಟಿಕೆಟ್ ಆಕಾಂಕ್ಷಿ ಮುನಿರತ್ನ ಅವರಿಗೆ ಟಿಕೆಟ್ ಸಿಗುವಂತೆ ಮಾಡಲು, ಸಾಧ್ಯವಾದ ಎಲ್ಲಾ ಒತ್ತಡವನ್ನು ಹೇರುತ್ತಿದ್ದಾರೆ.

ತುಳಸಿ ಮುನಿರಾಜು ವರ್ಸಸ್ ಮುನಿರತ್ನ
ಇವರಿಬ್ಬರಲ್ಲದೇ, ಅಂದು ಜೊತೆಗಿದ್ದ ಎಲ್ಲಾ ಮುಖಂಡರು, ಯಡಿಯೂರಪ್ಪನವರಿಗೆ ತೀವ್ರ ಒತ್ತಡವನ್ನು ಹೇರುತ್ತಿದ್ದಾರೆ. ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಅವರಂತೂ ಬಹಿರಂಗವಾಗಿಯೇ ಮುನಿರತ್ನ ಅವರಿಗೆ ಟಿಕೆಟ್ ನೀಡಬೇಕೆಂದು ಹೇಳಿದ್ದಾರೆ. ಬಿ.ಸಿ.ಪಾಟೀಲ್, ನಾರಾಯಣ ಗೌಡ್ರೂ ಇದಕ್ಕೆ ಧ್ವನಿಗೂಡಿಸಿದ್ದಾರೆ. ಹಾಗಾದರೆ, ಮುನಿರತ್ನಗೆ ಟಿಕೆಟ್ ಸಿಗಲು ಇರುವ ತೊಡಕಾದರೂ ಏನು?
Recommended Video

ಬಿಎಸ್ವೈ ವಿರುದ್ದ ಬಂಡಾಯ ಸಾಧ್ಯತೆ?
ಮೂಲ ಬಿಜೆಪಿಗ ಮತ್ತು ಕ್ಷೇತ್ರದ ಚಿರಪರಿಚಿತ ನಾಯಕ ತುಳಸಿ ಮುನಿರಾಜು ಗೌಡ ಟಿಕೆಟ್ ಆಕಾಂಕ್ಷಿಯಾಗಿರುವುದೇ ಮುನಿರತ್ನ ತೊಡಕಿಗೆ ಕಾರಣ. ತುಳಸಿ ಪರ ರಾಜ್ಯಾಧ್ಯಕ್ಷ ನಳಿನ್ ಕಟೀಲ್ ಬ್ಯಾಟ್ ಮಾಡಿದರೆ, ಮುನಿರತ್ನ ಪರ ಬಿಎಸ್ವೈ ನಿಂತಿದ್ದಾರೆ. ಸದ್ಯದ ರಾಜಕೀಯ ಚಿತ್ರಣವನ್ನು ನೋಡಿದರೆ, ಮುನಿರತ್ನಗೆ ಟಿಕೆಟ್ ಸಿಗದೇ ಇದ್ದರೆ, ಆಪರೇಶನ್ ಕಮಲದ ಮೂಲಕ ಬಂದ ಎಲ್ಲಾ ಮುಖಂಡರು, ಸರಕಾರದ ವಿರುದ್ದ ತಿರುಗಿಬೀಳುವ ಸಾಧ್ಯತೆಯಿಲ್ಲದಿಲ್ಲ.












Click it and Unblock the Notifications