ಜಯಲಲಿತಾ ಅನಾರೋಗ್ಯ: ಮುಖ್ಯಮಂತ್ರಿಗಳ ಸಭೆ ಸಾಧ್ಯವೇ?
ಬೆಂಗಳೂರು, ಸೆಪ್ಟೆಂಬರ್ 27: ಕಾವೇರಿ ನೀರಿನ ಹಂಚಿಕೆ ವಿಚಾರ ಸಮಸ್ಯೆ ಬಗೆಹರಿಸುವುದಕ್ಕೆ ಕೇಂದ್ರ ಸರಕಾರ ಮಧ್ಯಸ್ಥಿಕೆ ವಹಿಸಬೇಕು. ಎರಡೂ ರಾಜ್ಯದ ಮುಖ್ಯಮಂತ್ರಿಗಳನ್ನು ಒಂದೆಡೆ ಕೂರಿಸಿ, ಮಾತನಾಡಿಸಿ ಇನ್ನು ಎರಡು ದಿನದೊಳಗೆ ಒಂದು ಪರಿಹಾರ ಕಂಡುಹಿಡಿಯಬೇಕು ಎಂದು ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.
ಇಂಥದ್ದೊಂದು ಸಂಧಾನ ಸಭೆಗೆ ಸುಪ್ರೀಂ ಕೋರ್ಟ್ ಸೂಚನೆಯೇನೋ ನೀಡಿದೆ. ಅದರೆ ಇದು ಸಾಧ್ಯವಿದೆಯಾ ಎಂಬುದು ಸದ್ಯದ ಪ್ರಶ್ನೆ. ತಮಿಳುನಾಡಿನ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಆರೋಗ್ಯ ಸ್ಥಿತಿ ಗಮನಿಸಿದರೆ ಇನ್ನೆರಡು ದಿನದಲ್ಲಿ ಸಭೆ ನಡೆಸಲು ಸಾಧ್ಯವೇ ಎಂಬ ಪ್ರಶ್ನೆ ಮೂಡುತ್ತದೆ.[ಕಾವೇರಿ ವಿವಾದ : ಚೆಂಡು ಈಗ ಕೇಂದ್ರ ಸರ್ಕಾರದ ಅಂಗಳಕ್ಕೆ]
ಕಳೆದ ಗುರುವಾರ ಜ್ವರ, ಅತಿಸಾರದಿಂದ ಚೆನ್ನೈನ ಅಪೋಲೋ ಆಸ್ಪತ್ರೆ ಸೇರಿದ ಜಯಲಲಿತಾ ಅವರನ್ನು ವೈದ್ಯರು ಇನ್ನೂ ನಿಗಾದಲ್ಲಿರಿಸಿದ್ದಾರೆ. ನಿನ್ನೆ ಅಂದರೆ ಸೋಮವಾರ ಅವರ ಆರೋಗ್ಯದ ಬಗ್ಗೆ ಮಾಹಿತಿ ಬಿಡುಗಡೆ ಮಾಡಿದ ಆಸ್ಪತ್ರೆ, ಚಿಕಿತ್ಸೆಗೆ ಜಯಲಲಿತಾ ಅವರು ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ ಎಂದು ತಿಳಿಸಿದೆ.
ಮುಖ್ಯಮಂತ್ರಿ ಆರೋಗ್ಯವಾಗಿ, ಆಸ್ಪತ್ರೆಯಿಂದ ಬಿಡುಗಡೆಯಾಗಿ, ಎಂದಿನಂತೆ ಕೆಲಸದಲ್ಲಿ ತೊಡಗಿಕೊಳ್ಳುವುದಕ್ಕೆ ಇನ್ನೂ ಕೆಲವು ದಿನ ಆಗುತ್ತದೆ ಎಂದು ಅಸ್ಪತ್ರೆ ಮೂಲಗಳು ತಿಳಿಸಿವೆ. ಜ್ವರದ ಪ್ರಮಾಣ ತಗ್ಗುವುದಕ್ಕೆ ಎಲ್ಲ ವೈದ್ಯಕೀಯ ತಪಾಸಣೆ ನಡೆಸಿ, ಚಿಕಿತ್ಸೆ ನೀಡಲಾಗಿದೆ ಎಂದು ಹೇಳಲಾಗಿದೆ.[ಸದನದ ತೀರ್ಮಾನ ಏನೇ ಇರ್ಲಿ, ಮೊದಲು ನೀರು ಬಿಡಿ : ಸುಪ್ರೀಂ ಆದೇಶ]
ಜಯಲಲಿತಾ ಅವರ ಆರೋಗ್ಯ ಸ್ಥಿತಿ ಹೀಗಿರುವಾಗ ಮುಂದಿನ ಎರಡು ದಿನದಲ್ಲಿ ಎರಡೂ ರಾಜ್ಯದ ಮುಖ್ಯಮಂತ್ರಿಗಳ ಸಭೆ ಸಾಧ್ಯವಾಗಲಾರದು. ಒಂದು ವೇಳೆ ಸಾಧ್ಯವಾದರೆ ಸಭೆ ದೆಹಲಿಯಲ್ಲಿ ನಡೆಯಬೇಕು, ಜಯಲಲಿತಾ ಅವರು ಪ್ರಯಾಣ ಮಾಡುವುದಕ್ಕೆ ವೈದ್ಯರು ಒಪ್ಪಿಗೆ ನೀಡುತ್ತಾರೆಯೆ ಎಂಬುದು ಸದ್ಯದ ಪ್ರಶ್ನೆ.[ನೀರು ರಕ್ಷಿಸಿ, ಇಲ್ಲಾ ಕಠಿಣ ಬೇಸಿಗೆ ಎದುರಿಸಿ, ಖಡಕ್ ಎಚ್ಚರಿಕೆ!]
ಒಂದು ವೇಳೆ ಕರ್ನಾಟಕದ ಜತೆಗೆ ಸಭೆಯಲ್ಲಿ ಮಾತನಾಡಲು ಮಂತ್ರಿಯೊಬ್ಬರನ್ನು ಕಳಿಸುವುದಾದರೆ, ಅದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಪ್ಪುತ್ತಾರೆಯೇ ಎಂಬುದು ದೊಡ್ಡ ಪ್ರಶ್ನೆ.