ಅಣ್ಣಾವ್ರ ಕುಟುಂಬ ಸದಸ್ಯರ ಅಕಾಲಿಕ ಸಾವು ಅರಿಯಲು ಕೇರಳ ತಂತ್ರಿಗಳ ಮೊರೆ: ಏನಿದು ಅಷ್ಟಮಂಗಲ ಪ್ರಶ್ನೆ?
ವರನಟ ಡಾ.ರಾಜಕುಮಾರ್ ಕುಟುಂಬದ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಅವರ ಅಕಾಲಿಕ ಸಾವು ಕುಟುಂಬವನ್ನು ಚಿಂತೆಗೆ ದೂಡಿದೆ. ಈ ಸಂಬಂಧ, ಕೇರಳದ ತಂತ್ರಿಗಳ ಬಳಿ ಅಷ್ಟಮಂಗಲ ಪ್ರಶ್ನೆ ಕೇಳಿ ಪರಿಹಾರ ಕಂಡುಕೊಳ್ಳಲು ನಿರ್ಧರಿಸಲಾಗಿದೆ.
ಈಡಿಗ ಸಮುದಾಯಕ್ಕೆ ಸೇರಿದ ಡಾ.ರಾಜ್ ಕುಟುಂಬದ ಪರವಾಗಿ ಸಮುದಾಯದ ಪೀಠಾಧಿಪತಿ ಪ್ರಣವಾನಂದ ಸ್ವಾಮೀಜಿ ಈ ಬಗ್ಗೆ ನಿರ್ಧಾರವನ್ನು ತೆಗೆದುಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ. ಈಗಾಗಲೇ ಶಿವರಾಜ್ ಕುಮಾರ್ ಬಳಿ ಶ್ರೀಗಳು ಮಾತುಕತೆಯನ್ನು ನಡೆಸಿದ್ದಾರೆ ಎಂದು ಏಷ್ಯಾನೆಟ್ ಸುದ್ದಿಸಂಸ್ಥೆ ವರದಿ ಮಾಡಿದೆ.

ಏನಿದು ಅಷ್ಟಮಂಗಲ ಪ್ರಶ್ನೆ? ಪುರಾತನ ದೇವಾಲಯಗಳ ಜೀರ್ಣೋದ್ದಾರ ಅಥವಾ ಪ್ರಮುಖ ಧಾರ್ಮಿಕ ಕಾರ್ಯಕ್ರಮಕ್ಕೆ ಮುನ್ನ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಅಷ್ಟಮಂಗಲ ಪ್ರಶ್ನೆ ಹಾಕುವ ಪದ್ದತಿ ಆರಂಭವಾಗಿತ್ತು. ತದನಂತರ ಇದು ಕೌಟುಂಬಿಕ ಸಮಸ್ಯೆಗಳ ಪರಿಹಾರಕ್ಕೂ ಮುಂದುವರಿದುಕೊಂಡು ಬಂದಿದೆ.
ಕೇರಳದ ಪೊದುವಾಳ್ ಕುಟುಂಬಸ್ಥರು ಅಷ್ಟಮಂಗಲ ಪ್ರಶ್ನೆ ಅಥವಾ ದೇವ ಪ್ರಶ್ನೆ ನಡೆಸುವಲ್ಲಿ ಹೆಸರುವಾಸಿಯಾಗಿದ್ದಾರೆ. ಪ್ರಶ್ನೆಯ ಸಂದರ್ಭದಲ್ಲಿ ಹಲವು ತಲೆಮಾರಿನ ಹಿಂದೆ ನಡೆದ ಲೋಪದೋಷಗಳು, ತಪ್ಪುಒಪ್ಪುಗಳನ್ನು ತಂತ್ರಿಗಳು ವಿವರಿಸಿಕೊಂಡು ಹೋಗುತ್ತಾರೆ.
ಅಷ್ಟಮಂಗಲ ಪ್ರಶ್ನೆಗೆ ಪ್ರಮುಖವಾಗಿ ಎಂಟು ವಸ್ತುಗಳು ಬೇಕಾಗುತ್ತದೆ. ಬಿಳಿ ಬಟ್ಟೆ, ಕನ್ನಡಿ, ತೆಂಗಿನಕಾಯಿ, ಕುಂಕುಮ, ವೀಳ್ಯದೆಲೆ, ಭತ್ತ, ಅಕ್ಕಿ, ಹೂವಿನ ಅಕ್ಷತೆ. ಒಬ್ಬರಿಗಿಂತ ಹೆಚ್ಚು (ಹೆಚ್ಚಾಗಿ ಮೂರು ಮಂದಿ) ದೈವಜ್ಞರು ಇರುತ್ತಾರೆ. ಪ್ರಶ್ನೆ ಪ್ರಕ್ರಿಯೆ ಮುಗಿಯಲು ಕಾಲ ಮಿತಿಯಿಲ್ಲ. ದೈವಜ್ಞರ ಬಳಿ ಪ್ರಶ್ನೆ ಕೇಳಲು ಬರುವ ಸಮಯದಿಂದ ಲೆಕ್ಕಚಾರ ಆರಂಭವಾಗುತ್ತದೆ.

ಅಷ್ಟಮಂಗಲ ಪ್ರಶ್ನೆ ಧಾರ್ಮಿಕ ಪ್ರಕ್ರಿಯೆ
ಅಷ್ಟಮಂಗಲ ಪ್ರಶ್ನೆ ಧಾರ್ಮಿಕ ಪ್ರಕ್ರಿಯೆಗೆ ದಿನಾಂಕ ನಿಗದಿ ಪಡಿಸಲು ಸಂಬಂಧ ಪಟ್ಟವರು ತಂತ್ರಿಯವರ ಬಳಿ ಬರುವ ಸಮಯವನ್ನು ಆಧರಿಸಿ ಈ ಪ್ರಕ್ರಿಯೆಗೆ ದಿನಾಂಕ ನಿಗದಿ ಪಡಿಸಲಾಗುತ್ತದೆ. ಸಂಖ್ಯಾಶಾಸ್ತ್ರದಿಂದ ಮಾತ್ರವೇ ಅಲ್ಲದೇ, ಬಾಡಿ ಲಾಂಗ್ವೇಜ್ ಮೂಲಕವೂ ಸಮಸ್ಯೆಗಳನ್ನು ತಂತ್ರಿಗಳು ವಿವರಿಸುತ್ತಾರೆ.
ಹನ್ನೆರಡು ರಾಶಿಯ ಮಂಡಲ
ಹನ್ನೆರಡು ರಾಶಿಯ ಮಂಡಲವನ್ನು ಹಾಕಲಾಗುತ್ತದೆ, ಕುಟುಂಬದ ಬಾಲಕಿಯೊಬ್ಬಳಿಗೆ ಹೊಸ ಬಟ್ಟೆಯನ್ನು ಖರೀದಿಸಲು ಮುಂಚಿತವಾಗಿಯೇ ತಂತ್ರಿಗಳು ಹೇಳಿರುತ್ತಾರೆ. ಅಷ್ಠಮಂಗಲಕ್ಕೆ ಹಾಕುವ ಮಂಡಲ, ಹೂವು, ಗಂಧ ಮತ್ತು ಪುಷ್ಪವನ್ನು ಒಂದು ತಟ್ಟೆಯಲ್ಲಿಟ್ಟು, ಅದರಲ್ಲಿ ಸಣ್ಣ ಚಿನ್ನವನ್ನು ಇಟ್ಟು, ಆ ತಟ್ಟೆಯನ್ನು ಬಾಲಕಿಯೊಬ್ಬಳ ಕೈಯಲ್ಲಿ ಕೊಟ್ಟು, ಮಂಡಲಕ್ಕೆ, ಬಾಲಕಿ ಮೂರು ಪ್ರದಕ್ಷಿಣಿ ಹಾಕಿ ಮಂಡಲದ ಮಧ್ಯೆ ಇಡಲು ಹೇಳುತ್ತಾರೆ.
ಉಡುಪಿ ರಥಬೀದಿಯಲ್ಲಿರುವ ಅನಂತೇಶ್ವರ ದೇವಾಲಯ
ಬಾಲಕಿ ತನ್ನ ಇಚ್ಚೆಗೆ ಅನುಗುಣವಾಗಿ ಯಾವ ರಾಶಿಯ ಮಂಡಲದಲ್ಲಿ ಸ್ವರ್ಣವಿರುವ ತಟ್ಟೆಯನ್ನು ಇಡುತ್ತಾಳೋ ಮತ್ತು ಅಷ್ಟಮಂಗಲ ಕವಡೆಯಲ್ಲಿ ಯಾವ ಸಂಖ್ಯೆ ಬರುತ್ತದೋ ಅದನ್ನು ಆಧರಿಸಿ ಈ ಪ್ರಶ್ನಾ ಚಿಂತನವನ್ನು ನಡೆಸಲು ಆರಂಭಿಸಲಾಗುತ್ತದೆ. ತಿರುವಂತನಪುರದ ಅನಂತ ಪದ್ಮನಾಭ ದೇವಾಲಯದಲ್ಲಿ 'ಅನಂತ ಸಂಪತ್ತು' ಸಂಬಂಧ ಆಗಸ್ಟ್ 2012 ತಿಂಗಳಲ್ಲಿ ಅಷ್ಟಮಂಗಲ ಪ್ರಶ್ನೆ ಪ್ರಕ್ರಿಯೆ ನಡೆದಿತ್ತು. ಮತ್ತು ಉಡುಪಿ ರಥಬೀದಿಯಲ್ಲಿರುವ ಅನಂತೇಶ್ವರ ದೇವಾಲಯದಲ್ಲೂ ಅಷ್ಟಮಂಗಲ ಪ್ರಶ್ನೆ ನಡೆಸಿ ಪರಿಹಾರ ಕಂಡಿದ್ದನ್ನು ಇಲ್ಲಿ ಸ್ಮರಿಸಿಕೊಳ್ಲಬಹುದಾಗಿದೆ.












Click it and Unblock the Notifications