ಬಿಎಸ್ ಯಡಿಯೂರಪ್ಪ ಅವರನ್ನು ಟಿಶ್ಯೂ ಪೇಪರ್ ಅಂದುಕೊಂಡಿದೆಯಾ ಬಿಜೆಪಿ: ಹೀಗಂದಿದ್ಯಾಕೆ ಕಾಂಗ್ರೆಸ್?
ಬೆಂಗಳೂರು, ಜುಲೈ 4: ಕರ್ನಾಟಕ ರಾಜ್ಯ ರಾಜಕೀಯದಲ್ಲಿ ಬಿಎಸ್ ಯಡಿಯೂರಪ್ಪ ಮತ್ತೆ ಮುನ್ನಲೆಗೆ ಬಂದಿದ್ದಾರೆ. ಕರ್ನಾಟಕ ಸಿಎಂ ಸ್ಥಾನದಿಂದ ಕೆಳಗಿಳಿದ ಬಳಿಕ ಅವರನ್ನು ಹಿನ್ನಲೆಗೆ ಸರಿಸಿದ್ದ ಹೈಕಮಾಂಡ್ ಅದಕ್ಕೆ ಸರಿಯಾದ ಪೆಟ್ಟನ್ನು ತಿಂದಿದೆ. ಕೆಟ್ಟ ಮೇಲೆ ಬುದ್ದಿ ಬಂತು ಎನ್ನುವಂತೆ ಮತ್ತೆ ಬಿಎಸ್ವೈ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗಲು ಮುಂದಾಗಿದೆ.
ಇದಕ್ಕೆ ಸಾಕ್ಷಿ ಎನ್ನುವಂತೆ ವಿರೋಧ ಪಕ್ಷದ ನಾಯಕರ ವಿಚಾರವಾಗಿ ಚರ್ಚೆ ಮಾಡಲು ಹೈಕಮಾಂಡ್ ಬಿಎಸ್ವೈ ಅವರನ್ನು ದೆಹಲಿಗೆ ಆಹ್ವಾನಿಸಿತ್ತು. ರಾಜ್ಯಾಧಕ್ಷರ ಬದಲಾವಣೆ ಬಗ್ಗೆಯೂ ಹೈಕಮಾಂಡ್ ಬಿಎಸ್ವೈ ಅವರ ಬಳಿ ಅಭಿಪ್ರಾಯ ಕೇಳಿದೆ. ಅಚ್ಚರಿ ಎನ್ನುವಂತೆ ರಾಜ್ಯಾಧ್ಯಕ್ಷರ ಸ್ಥಾನಕ್ಕೆ ಶೋಭಾ ಕರಂದ್ಲಾಜೆ ಅವರ ಹೆಸರನ್ನು ಸೂಚಿಸಲಾಗಿದೆ ಎನ್ನುವ ವರದಿಗಳು ಕೂಡ ಕೇಳಿ ಬಂದಿದೆ.

ಚುನಾವಣೆಯಲ್ಲಿ ಬಹುಮತ ಪಡೆದುಕೊಂಡ ಕಾಂಗ್ರೆಸ್ ಸರ್ಕಾರ ರಚನೆ ಮಾಡಿ 50 ದಿನವಾದರೂ ಬಿಜೆಪಿ ಇನ್ನೂ ವಿರೋಧ ಪಕ್ಷದ ಹೆಸರನ್ನು ಸೂಚಿಸಿಲ್ಲ. ಕಾಂಗ್ರೆಸ್ ತಾನು ನೀಡಿದ ಭರವಸೆಗಳನ್ನು ಸರಿಯಾಗಿ ಈಡೇರಿಸಿಲ್ಲ ಎಂದು ಬಿಎಸ್ ಯಡಿಯೂರಪ್ಪ ಅವರು ಪ್ರತಿಭಟನೆ ಮಾಡಲು ನಿರ್ಧರಿಸಿದ್ದಾರೆ. ಈ ಬಗ್ಗೆ ಕಾಂಗ್ರೆಸ್ ಟ್ವೀಟ್ ಮಾಡಿದ್ದು ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದೆ.
ಯಡಿಯೂರಪ್ಪರನ್ನು ಕಣ್ಣೀರು ಹಾಕಿಸಿ ಪದಚ್ಯುತಿಗೊಳಿಸಿ ನಂತರ ವಯಸ್ಸಿನ ಕಾರಣ ನೀಡಿದ ಬಿಜೆಪಿ ಈಗ ರಾಜಕೀಯ ಕಾರಣಕ್ಕಾಗಿ ಅವರನ್ನು ಫ್ರಿಡಂ ಪಾರ್ಕಿನಲ್ಲಿ, ಬಿಸಿಲು, ಮಳೆಯಲ್ಲಿ ಕೂರಿಸುತ್ತಿರುವುದು ನಾಚಿಕೆಗೇಡು.
— Karnataka Congress (@INCKarnataka) July 4, 2023
ಅಧಿಕಾರ ನಡೆಸಲು ಮಾತ್ರ ಅವರಿಗೆ ವಯಸ್ಸಾಗಿತ್ತೇ, ಈಗ ಅವರಿಗೆ ಅದಿನೆಂಟರ ಹರೆಯವೇ @BJP4Karnataka?
ಬೇಕಾದಾಗ ಬಳಸಿ, ಬೇಡವಾದಾಗ…
ಬಿಎಸ್ವೈ ಅವರನ್ನು ಟಿಶ್ಯೂ ಪೇಪರ್ ಅಂದುಕೊಂಡಿದ್ದೀರಾ?
ಟ್ವೀಟ್ ಮಾಡಿರುವ ಕಾಂಗ್ರೆಸ್ ಬೇಕಾದಾಗ ಬಳಸಿ ಬೇಡವಾದಾಗ ಬಿಸಾಕಲು ಬಿಎಸ್ ಯಡಿಯೂರಪ್ಪ ಅವರನ್ನು ಟಿಶ್ಯೂ ಪೇಪರ್ ಅಂದುಕೊಂಡಿದ್ದೀರಾ ಎಂದು ಪ್ರಶ್ನೆ ಮಾಡಿದೆ. "ಯಡಿಯೂರಪ್ಪರನ್ನು ಕಣ್ಣೀರು ಹಾಕಿಸಿ ಪದಚ್ಯುತಿಗೊಳಿಸಿ ನಂತರ ವಯಸ್ಸಿನ ಕಾರಣ ನೀಡಿದ ಬಿಜೆಪಿ ಈಗ ರಾಜಕೀಯ ಕಾರಣಕ್ಕಾಗಿ ಅವರನ್ನು ಫ್ರಿಡಂ ಪಾರ್ಕಿನಲ್ಲಿ, ಬಿಸಿಲು, ಮಳೆಯಲ್ಲಿ ಕೂರಿಸುತ್ತಿರುವುದು ನಾಚಿಕೆಗೇಡು. ಅಧಿಕಾರ ನಡೆಸಲು ಮಾತ್ರ ಅವರಿಗೆ ವಯಸ್ಸಾಗಿತ್ತೇ, ಈಗ ಅವರಿಗೆ ಅದಿನೆಂಟರ ಹರೆಯವೇ? ಬೇಕಾದಾಗ ಬಳಸಿ, ಬೇಡವಾದಾಗ ಬಿಸಾಡುವುದಕ್ಕೆ ಬಿಎಸ್ವೈ ಅವರನ್ನು ಟಿಶ್ಯು ಪೇಪರ್ ಎಂದುಕೊಂಡಿದೆಯೇ ಬಿಜೆಪಿ?" ಎಂದು ಪ್ರಶ್ನೆ ಮಾಡಿದೆ.
ಮತ್ತೆ ಬಿಎಸ್ವೈ ಆಶ್ರಯಿಸಿದ್ದು ನಾಚಿಕೆಗೇಡು!
ಮತ್ತೊಂದು ಟ್ವೀಟ್ನಲ್ಲಿ ವಿಪಕ್ಷ ನಾಯಕನ ಆಯ್ಕೆ ಮಾಡದಿರುವ ಬಗ್ಗೆ ಕೂಡ ಟೀಕಿಸಿದೆ. "ಒಬ್ಬ ವಿಪಕ್ಷ ನಾಯಕನನ್ನು ಆಯ್ಕೆ ಮಾಡಲಾಗದ ಬಿಜೆಪಿ, ರಾಜಕೀಯದಿಂದ ದೂರ ತಳ್ಳಿದ್ದ ಯಡಿಯೂರಪ್ಪ ಅವರನ್ನೇ ಮತ್ತೆ ಆಶ್ರಯಿಸಿದ್ದು ಬಿಜೆಪಿಯ ಶೋಚನೀಯ ಸ್ಥಿತಿಗೆ ಹಿಡಿದ ಕನ್ನಡಿ. ಅಗತ್ಯವಿದ್ದಾಗ ಕಾಲು ಹಿಡಿಯುವುದು, ಅಗತ್ಯವಿಲ್ಲದಾಗ ಕಾಲು ಎಳೆಯುವುದು ಬಿಜೆಪಿ ಸಂಸ್ಕೃತಿ!" ಎಂದು ವ್ಯಂಗ್ಯವಾಡಿದೆ.












Click it and Unblock the Notifications