ಶಂಕಿತ ಉಗ್ರರ ಬಂಧನ; ಕಾಂಗ್ರೆಸ್ ನವರು ಬ್ರದರ್ಸ್ ಎಂದು ಅವರನ್ನ ಬಿಡಿಸಲು ಹೋಗದಿರಲಿ: ಸಿ ಟಿ ರವಿ
ಬೆಂಗಳೂರು, ಜುಲೈ 19: ಬೆಂಗಳೂರಿನಲ್ಲಿ ಶಂಕಿತ ಉಗ್ರರನ್ನು ಬಂಧಿಸಿದ ಕ್ರಮವನ್ನು ಸ್ವಾಗತಿಸಿದ ಸಿ.ಟಿ. ರವಿ ಸಂಬಂಧಿಸಿದ ಇಲಾಖೆಯನ್ನು ಅಭಿನಂದಿಸಿದರು. ಇನ್ನೊಬ್ಬ ಶಂಕಿತ ಉಗ್ರ ವಿದೇಶದಲ್ಲಿ ತಲೆಮರೆಸಿಕೊಂಡಿದ್ದು, ಈ ಜಾಲದ ಕುರಿತು ತನಿಖೆಯನ್ನು ಎನ್ಐಎಗೆ ವಹಿಸಲು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಆಗ್ರಹಿಸಿದರು.
ಈ ಕುರಿತು ಬುಧವಾರ ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಕರ್ನಾಟಕ ರಾಜ್ಯ ವ್ಯಾಪ್ತಿಯನ್ನು ಮೀರಿ ವಿದೇಶಕ್ಕೂ ಈ ಜಾಲ ಹರಡಿದೆ ಎಂಬ ಸಂಶಯವಿದೆ. ಆದ್ದರಿಂದ ಈ ಪ್ರಕರಣದ ತನಿಖೆಯನ್ನು ಎನ್ಐಎಗೆ ವಹಿಸುವುದು ಸೂಕ್ತ ಎಂದು ಹೇಳಿದರು.

ಶಂಕಿತರು ಬೆಂಗಳೂರಿನ ಹಲವೆಡೆ ಬಾಂಬ್ ಸ್ಫೋಟಿಸಲು ಯೋಜಿಸಿದ್ದರು ಎಂಬುದು ಬಹಳ ಗಂಭೀರವಾದ ಸಂಗತಿ ಎಂದ ಅವರು, ಕಾಂಗ್ರೆಸ್ ನಾಯಕರು ಈಗಲಾದರೂ ಮನ ಪರಿವರ್ತನೆ ಮಾಡಿಕೊಳ್ಳಲಿ ಎಂದು ಆಗ್ರಹಿಸಿದರು. ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಫೋಟ ಆದಾಗ ಕೆಪಿಸಿಸಿ ಅಧ್ಯಕ್ಷರು ಬಿಜೆಪಿಯನ್ನು ನಿಂದಿಸಿದ್ದರು. ಬಿಜೆಪಿ ದುರುದ್ದೇಶದಿಂದ ಬಂಧಿಸಿದೆ ಎಂದು ಟೀಕಿಸಿದ್ದರು ಎಂದು ಕಿಡಿಕಾರಿದರು.
ಉಗ್ರಗಾಮಿ ಜಾಲ ಕರ್ನಾಟಕದಲ್ಲಿ ವಿಸ್ತರಿಸುತ್ತಿರುವುದು ನಿರ್ವಿವಾದ ಸಂಗತಿ ಎಂದು ಅವರು ತಿಳಿಸಿದರು. ವಿವೇಚನೆ ಇಲ್ಲದೆ ಮತಬ್ಯಾಂಕಿಗಾಗಿ ಅವರೆಲ್ಲ ನಮ್ಮ ಸೋದರರು ಎಂದು ಅಪ್ಪಿಕೊಳ್ಳಲು ಹೋಗಬೇಡಿ ಎಂದು ವ್ಯಂಗ್ಯವಾಡಿದರು. ನೀವು ಅವರನ್ನು ಅಪ್ಪಿಕೊಳ್ಳಲು ಹೋದರೆ ಬೆಂಗಳೂರು, ಕರ್ನಾಟಕಕ್ಕೆ ಸಿಲುಕಬಹುದು ಎಂದು ಎಚ್ಚರಿಸಿದರು.
ಪೊಲೀಸರು ಸಮಗ್ರ ತನಿಖೆಗೆ ಸಹಕರಿಸಲಿ. ಕಾಂಗ್ರೆಸ್ ಪಕ್ಷದವರು ಬ್ರದರ್ಸ್ ಎಂದು ಅವರನ್ನು ಬಿಡಿಸಲು ಹೋಗದಿರಲಿ ಎಂದು ಸಲಹೆ ನೀಡಿದರು. ಈ ಜಾಲ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಸಕ್ರಿಯವಾಗಿರುವ ಸಾಧ್ಯತೆ ಇದ್ದು, ಇದನ್ನು ಎನ್ಐಎ ತನಿಖೆಗೆ ಒಪ್ಪಿಸಿ ಎಂದು ಒತ್ತಾಯಿಸಿದ ಅವರು, ಟೆರರಿಸ್ಟ್ಗಳಿಗೆ ಕಾಂಗ್ರೆಸ್ ಅಧಿಕಾರದಲ್ಲಿ ಇದ್ದರೆ 'ನಮ್ದೂ ಕೆ ಸರಕಾರ್' ಎಂಬ ಭಾವನೆ ಬರುತ್ತದೆ.
ಇನ್ನೂ ವಿಪಕ್ಷಗಳ ಸಭೆಯ ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಸಿದ ಅವರು, ಅದೇ ಬಾಟಲಿ ಅದೆ ವೈನು ಆದರೆ ಹೊಸ ಲೇಬಲ್ ನಂತಿದೆ ಎಂದು ಟೀಕಿಸಿದರು.












Click it and Unblock the Notifications