ನೀರಾವರಿ ಜಾಗೃತಿಗಾಗಿ ಯುವಶಕ್ತಿಯ ಹೊಸ ಪ್ರಯೋಗ
ಬೆಂಗಳೂರು, ಆಗಸ್ಟ್ 24 : ಮದುವೆಯ ಮಮತೆಯ ಕರೆಯೋಲೆಗಳಲ್ಲಿ ಸ್ವಾತಂತ್ರ್ಯಪೂರ್ವದಲ್ಲಿ ದೇಶಭಕ್ತಿ ಇರುವವರು ಮಹಾತ್ಮಾ ಗಾಂಧಿ ಚಿತ್ರ ಪ್ರಕಟಿಸಿ, ಮದುವೆಗೆ ಖಾದಿ ದಿರಿಸಿನಲ್ಲೇ ಬಂದು ವಧುವರರನ್ನು ಆಶೀರ್ವದಿಸಲು ಬರುವವರನ್ನು ಕೋರುತ್ತಿದ್ದರು. ಈಗ ಆ ಕಾಲ ಎಲ್ಲಿ?
ಈಗಂತು ಕರೆಯೋಲೆಗಳಲ್ಲಿ ನಾನಾ ನಮೂನೆಯ ದೇವರ ಹೆಸರುಗಳು, ವಧುವರರ ಡಿಗ್ರೀಗಳು, ಸಕುಟುಂಬ ಸಪರಿವಾರ ಸಮೇತರಾಗಿ ಬಂದು ಆಶೀರ್ವದಿಸಬೇಕಾಗಿ ಬರಬೇಕೆಂಬ ಆಗ್ರಹಗಳು, ಬುಡದಲ್ಲಿ ಬಂಧು ಬಳಗದವರ ಶ್ರೀಮತಿ ಮತ್ತು ಶ್ರೀಗಳ ಹೆಸರುಗಳೇ ತುಂಬಿರುತ್ತವೆ. ಇನ್ನು ಅಲ್ಲಿ ಸಂದೇಶಗಳಿಗೆ, ಸಾಮಾಜಿಕ ಕಳಕಳಿಗಳಿಗೆ ಜಾಗವೇ ಇರುವುದಿಲ್ಲ.
ಅಂತಹುದರಲ್ಲಿ, ದಕ್ಷಿಣ ಕರ್ನಾಟಕದ ಬಯಲುಸೀಮೆ ನಾಡಿನ ಕುಡಿಯುವ ನೀರಿಗಾಗಿ ಹೋರಾಟ ನಡೆಸುತ್ತಿರುವ ಯುವಶಕ್ತಿ ಸಂಘಟನೆಯ ವಿದ್ಯಾವಂತ ಯುವಕರು, ಶಾಶ್ವತ ನೀರಾವರಿ ಜಾಗೃತಿಗಾಗಿ ಹೊಸ ಪ್ರಯೋಗಕ್ಕೆ ಮುಂದಾಗಿದ್ದಾರೆ ಮತ್ತು ಹೊಸ ಟ್ರೆಂಡ್ ಹುಟ್ಟುಹಾಕಿದ್ದಾರೆ. [ಕನ್ನಡ ಹೋರಾಟಗಾರರಿಗೆ ಕುವ್ವತ್ತು ಇಲ್ಲ : ಮದ್ರಾಸಿ]
ಅದೇನೆಂದರೆ, ತಮ್ಮ ಕುಟು0ಬದಲ್ಲಿ ನಡೆಯುವ ಮದುವೆ, ಮುಂಜಿ, ಸತ್ಯನಾರಾಯಣ ಪೂಜೆ, ಗೃಹಪ್ರವೇಶ ಇತ್ಯಾದಿ ಶುಭ ಕಾರ್ಯಗಳ ಆಹ್ವಾನ ಪತ್ರಿಕೆಗಳಲ್ಲಿ ಈ ಕೆಳಗಿನ ಸ0ದೇಶವನ್ನು ಪ್ರಕಟಿಸಿ, ಶಾಶ್ವತ ನೀರಾವರಿಗಾಗಿ ಜನರನ್ನು ಉತ್ತೇಜಿಸುವುದು.
"ಒಗ್ಗಟ್ಟಿನಲ್ಲಿ
ಬಲವಿದೆ,
ಬಯಲು
ಸೀಮೆಯಲ್ಲಿ
ನಮ್ಮ
ಮನೆಯಿದೆ
ಶಾಶ್ವತ
ನೀರಾವರಿ
ಯೋಜನೆಯಲ್ಲಿ
ನಮ್ಮೆಲ್ಲರ
ಬದುಕಿದೆ".
ಯುವಶಕ್ತಿಯ ಕೆಲ ಸದಸ್ಯರು ತಮ್ಮ ಮದುವೆಯ ಆಮ೦ತ್ರಣದಲ್ಲಿ ನೀರಾವರಿ ಹೋರಾಟಕ್ಕೆ ಜನ-ಜಾಗೃತಿ ಮೂಡಿಸಲು ಆರ೦ಭಿಸಿದ ಈ ಅಭಿಯಾನಕ್ಕೆ, ಈಗ ಜನ-ಸಾಮಾನ್ಯರೂ ಸಹ ಕೈ ಜೋಡಿಸಿದ್ದಾರೆ. [ಬಯಲುಸೀಮೆಗೆ ಕುಡಿಯುವ ನೀರು ಕೊಡಿ ಸ್ವಾಮೀ!]
ಗ್ರಾಮ೦ತರ ಪ್ರದೇಶದಲ್ಲಿ ಈಗೀಗ ತಮ್ಮ ಮನೆಯ ಶುಭ ಕಾರ್ಯದ ಆಹ್ವಾನ ಪತ್ರಿಕೆಗಳಲ್ಲಿ ತಮ್ಮ ಜಾತಿಸೂಚಕ ವ್ಯಕ್ತಿಗಳ ಚಿತ್ರ ಹಾಕಿಸುವ ಪ್ರಕ್ರಿಯೆಯನ್ನು ಹಲವರು ಶುರು ಮಾಡಿದ್ದರು. ಆದರೆ, ಈ ಜಾತಿವಾದವನ್ನು ಧಿಕ್ಕರಸಿ, ಸರ್ವಜನಕ್ಕೂ ಹಿತವಾಗುವ ನೀರಾವರಿ ಹೋರಾಟದ ಸ೦ದೇಶವನ್ನು ಸಾರಲು ಯುವಜನತೆ ಮು೦ದಾಗಿರುವದಕ್ಕೆ ಜಿಲ್ಲೆಯ ಎಲ್ಲಾ ಹಿರಿಯ ಹೋರಾಟಗಾರರು ಹರ್ಷ ವ್ಯಕ್ತಪಡಿಸಿದ್ದಾರೆ.
ಸಾವಿರಾರು ಕುಟು೦ಬಗಳಿಗೆ ವೈಯಕ್ತಿಕವಾಗಿ ಆಹ್ವಾನ ಪತ್ರಿಕೆ ತಲುಪಿಸುವುದರಿ೦ದ, ಉಭಯಕುಶಲೋಪರಿ, ಮಳೆ, ಬರಗಾಲದ ಮಾತಿನ ಜೊತೆ ಶಾಶ್ವತ ನೀರಾವರಿ ಯೋಜನೆಯ ಅಗತ್ಯತೆ, ಅದಕ್ಕಾಗಿ ಒಗ್ಗಟ್ಟಿನ ಹೋರಾಟ ಮಾಡಬೇಕಾದ ಅನಿವಾರ್ಯತೆ ಬಗ್ಗೆ ಜನ ಮಾತಾಡಿಕೊಳ್ಳುತ್ತಿರುವುದರಿ೦ದ ಈ ಪ್ರಯೋಗ ಯಶಸ್ವಿಯಾಗಿದೆ.