ಡಾ. ಸುಧಾಕರ್ ಕೆಲಸಕ್ಕೆ ಬಾರದ ಪ್ರಣಾಳಿಕೆ ಮಾಡಿದ್ರು ಎಂದ ರೇಣುಕಾಚಾರ್ಯ- ದಿನದಿಂದ ದಿನಕ್ಕೆ ವಿಷಮ ಸ್ಥಿತಿಯತ್ತ ಬಿಜೆಪಿ ಪರಸ್ಥಿತಿ
ಹೊನ್ನಾಳಿ, ಜೂನ್ 27: ಕರ್ನಾಟಕ ಸೋಲಿನ ನಂತರ ರಾಜ್ಯ ಬಿಜೆಪಿಯಲ್ಲಿ ಅಸಮಾಧಾನದ ಬೆಂಕಿ ಹೊತ್ತಿಕೊಂಡಿದೆ. ಬಿಜೆಪಿ ನಾಯಕರು ತಮ್ಮದೇ ಪಕ್ಷದ ವಿರುದ್ಧ ಬಹಿರಂಗವಾಗಿ ಹೇಳಿಕೆ ನೀಡುತ್ತಿದ್ದಾರೆ. ಈಗ ಮಾಜಿ ಶಾಸಕ ರೇಣುಕಾಚಾರ್ಯ ಅವರು ಹಿಂದಿನ ಬಿಜೆಪಿ ಸರ್ಕಾರದ ತಪ್ಪುಗಳ ಬಗ್ಗೆ ಮಾತನಾಡಿದ್ದಾರೆ. ತಮ್ಮ ಹೇಳಿಕೆ ಮೂಲಕ ಗಂಭೀರವಾದ ಆರೋಪಗಳನ್ನು ಅವರು ಮಾಡಿದ್ದಾರೆ.
ಈ ವಿಚಾರವಾಗಿ ದಾವಣಗೆರೆ ಜಿಲ್ಲೆಯ ಹೊನ್ನಾಳಿಯಲ್ಲಿ ಮಾತನಾಡಿರುವ ಅವರು, ಡಾ. ಸುಧಾಕರ್ ಕೆಲಸಕ್ಕೆ ಬಾರದ ಪ್ರಣಾಳಿಕೆ ಮಾಡಿದ್ರು ಎಂದು ರೇಣುಕಾಚಾರ್ಯ ಹರಿಹಾಯ್ದಿದ್ದಾರೆ.
ಡಾ ಸುಧಾಕರ್ ಅವರು ಬೊಮ್ಮಾಯಿ ಸರ್ಕಾರದಲ್ಲಿ ಆರೋಗ್ಯ ಸಚಿವರಾಗಿದ್ದರು. ಅವರನ್ನು ಚುನಾವಣಾ ಪ್ರಣಾಳಿಕೆ ಸಮಿತಿಯ ಅಧ್ಯಕ್ಷರನ್ನಾಗಿ ಮಾಡಲಾಗಿತ್ತು.

ಸರ್ಕಾರದ ವೈಫಲ್ಯಗಳು ಸೋಲಿಗೆ ಕಾರಣವಾದವು. ಅಕ್ಕಿಯನ್ನು ಕಡಿಮೆ ಮಾಡಿ ಬಡವರ ಹೊಟ್ಟೆ ಮೇಲೆ ಹೊಡದ್ರು ಎಂದು ರೇಣುಕಾಚಾರ್ಯ ಆರೋಪಿಸಿದರು.
ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಬೇಡಿ ಎಂದು ನಾವು ಹೇಳಿದ್ದೆವು. ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಲಾಯಿತು. ಒಂದು ವೇಳೆ, ಅವರೇ ಐದು ವರ್ಷ ಮುಂದುವರಿದಿದ್ದರೆ ಈ ಬಾರಿಯೂ ನಮ್ಮದೇ ಸರ್ಕಾರ ಬರುತ್ತಿತ್ತು ಎಂದು ಅವರು ಹೇಳಿದ್ದಾರೆ.
ಈಶ್ವರಪ್ಪ ಹಾಗೂ ಜಗದೀಶ್ ಶೆಟ್ಟರ್ ಅವರಿಗೆ ಟಿಕೆಟ್ ಅನ್ನು ನಿರಾಕರಿಸಿದ್ದು ಬಹುದೊಡ್ಡ ತಪ್ಪು. ಅವರಿಗೇನು ಮಹಾ ವಯಸ್ಸಾಗಿತ್ತು. ಅವರೇನು ತಪ್ಪು ಮಾಡಿದ್ದರು ಎಂದು ರೇಣುಕಾಚಾರ್ಯ ಪ್ರಶ್ನಿಸಿದ್ದಾರೆ.

ಹೊಂದಾಣಿಕೆ ರಾಜಕಾರಣದ ಮಾತು
ಕೆಲ ದಿನಗಳ ಹಿಂದೆಯಷ್ಟೇ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಸಂಸದ ಪ್ರತಾಪ್ ಸಿಂಹ, ಸಿ.ಟಿ.ರವಿ ಮುಂತಾದ ಹಿರಿಯ ನಾಯಕರು ಪ್ರತಿಸ್ಪರ್ಧಿ ಪಕ್ಷಗಳೊಂದಿಗಿನ ಹೊಂದಾಣಿಕೆ ರಾಜಕಾರಣವೇ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಪ್ರಮುಖ ಕಾರಣ ಎಂದು ಆರೋಪಿಸಿದ್ದರು.
ವಲಸಿಗರನ್ನು ಟಾರ್ಗೆಟ್ ಮಾಡಿದ ಈಶ್ವರಪ್ಪ
ಮಾಜಿ ಮುಖ್ಯಮಂತ್ರಿ ಕೆಎಸ್ ಈಶ್ವರಪ್ಪ ಅವರು ವಲಸಿಗರನ್ನು ಟಾರ್ಗೆಟ್ ಮಾಡಿದ್ದಾರೆ. ಕಾಂಗ್ರೆಸ್ನಿಂದ ಬಂದ ವಲಸಿಗರು ಪಕ್ಷದಲ್ಲಿ ಅಶಿಸ್ತನ್ನು ಬಿತ್ತಿದ್ದಾರೆ. ನಮ್ಮ ನಾಯಕರು ಇಷ್ಟು ದಿನ ಸುಮ್ಮನಿದ್ದರು. ಈಗ ಬಾಲವನ್ನು ಕಟ್ ಮಾಡುತ್ತಾರೆ ಎಂದು ಹೇಳಿದ್ದಾರೆ. ಬಿಜೆಪಿ ಸೋಲಿಗೆ ವಲಸಿಗರೇ ಕಾರಣವೆಂದು ಅವರು ಹೇಳಿದ್ದಾರೆ. ಇದು ಬಿಜೆಪಿಯಲ್ಲೀಗ ಅಸಮಾಧಾನದ ಬೆಂಕಿಯನ್ನೇ ಹೊತ್ತಿಸಿದೆ.

ವಿಜಯಪುರ, ಬಾಗಲಕೋಟೆಯಲ್ಲಿ ಪ್ರತಿಧ್ವನಿಸಿದ ಅಸಮಾಧಾನ
ವಿಜಯಪುರ ಮತ್ತು ಬಾಗಲಕೋಟೆಯಲ್ಲಿ ಸೋಮವಾರ ನಡೆದ ಸಭೆಗಳಲ್ಲಿ ರಾಜ್ಯ ಬಿಜೆಪಿ ನಾಯಕರ ನಡುವೆ ಹೊಗೆಯಾಡುತ್ತಿರುವ ಭಿನ್ನಾಭಿಪ್ರಾಯ ಹಾಗೂ ಪಕ್ಷದೊಳಗಿನ ಗುಂಪುಗಾರಿಕೆ ಬಯಲಿಗೆ ಬಂದಿದೆ. ಮಾಜಿ ಮುಖ್ಯಮಂತ್ರಿ ಬೊಮ್ಮಾಯಿ ಮತ್ತಿತರರ ಸಮ್ಮುಖದಲ್ಲಿ ನಾಯಕರು ಪರಸ್ಪರ ಆರೋಪ-ಪ್ರತ್ಯಾರೋಪಗಳನ್ನು ಮಾಡಿಕೊಂಡಾಗ ಸಭೆಗಳು ಗದ್ದಲಕ್ಕೆ ಸಾಕ್ಷಿಯಾದವು.
ವಿಜಯಪುರದಲ್ಲಿ ನಡೆದ ಸಭೆಯಲ್ಲಿ ಶಾಸಕಿ ಶಶಿಕಲಾ ಜೊಲ್ಲೆ ಅವರು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸಂಸದ ರಮೇಶ ಜಿಗಜಿಣಗಿ ಅವರನ್ನು ಮರು ಆಯ್ಕೆ ಮಾಡುವಂತೆ ಮತದಾರರಲ್ಲಿ ಮನವಿ ಮಾಡಿದ ನಂತರ ಯತ್ನಾಳ್ ಬೆಂಬಲಿಗರು ಘೋಷಣೆಗಳನ್ನು ಕೂಗಲಾರಂಭಿಸಿದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಬೊಮ್ಮಾಯಿ ಅವರಿಗೆ ಇದು ನಿಜಕ್ಕೂ ಮುಜುಗರದ ಕ್ಷಣವಾಗಿತ್ತು. ಸಭೆಯಲ್ಲಿನ ಅಶಿಸ್ತಿನ ದೃಶ್ಯಗಳಿಗೆ ಮೂಕಪ್ರೇಕ್ಷಕರಾಗಿ ಮಾಜಿ ಮುಖ್ಯಮಂತ್ರಿಗಳು ನಿಂತಿದ್ದರು.












Click it and Unblock the Notifications