ನವಜಾತ ಶಿಶು ಮಾರಾಟ ಕೇಸ್: ನರ್ಸ್ಗೆ ಜಾಮೀನು ನೀಡಿದ ಹೈಕೋರ್ಟ್
ಬೆಂಗಳೂರು, ನವೆಂಬರ್ 18: ನವಜಾತ ಶಿಶು ಮಾರಾಟ ಮಾಡಲು ಮಧ್ಯಸ್ಥಿಕೆ ವಹಿಸಿದ ಆರೋಪ ಎದುರಿಸುತ್ತಿದ್ದ ಸರ್ಕಾರಿ ಆಸ್ಪತ್ರೆಯ ನರ್ಸ್ಗೆ ಹೈಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಇದರಿಂದಾಗಿ ಬಂಧನ ಭೀತಿಯಿಂದ ಕುಮಟಾದ ಸರ್ಕಾರಿ ಆಸ್ಪತ್ರೆಯಲ್ಲಿ ಶುಶ್ರೂಷಕಿ ಅಶ್ವಿನಿ ಗಣಪತಿ ಹರಿಕಾಂತ ಪಾರಾಗಿದ್ದಾರೆ.
ಅಶ್ವಿನಿ ಗಣಪತಿ ನಿರೀಕ್ಷಣಾ ಜಾಮೀನು ಅರ್ಜಿ ಆಲಿಸಿದ ನ್ಯಾಯಮೂರ್ತಿ ಶಿವಶಂಕರ್ ಅಮರಣ್ಣನವರ್ ಅವರಿದ್ದ ಏಕಸದಸ್ಯಪೀಠ ಈ ಆದೇಶ ಮಾಡಿದೆ. ಅಲ್ಲದೆ, ಒಂದು ಲಕ್ಷ ರೂ. ಮೊತ್ತಕ್ಕೆ ವೈಯಕ್ತಿ ಬಾಂಡ್ ಮತ್ತು ಒಬ್ಬರ ಭದ್ರತಾ ಖಾತರಿ ನೀಡಬೇಕು. ತನಿಖೆ ಮತ್ತು ವಿಚಾರಣಾ ನ್ಯಾಯಾಲಯದ ವಿಚಾರಣೆಗೆ ಸಹಕರಿಸಬೇಕು. ಅಗತ್ಯವಿದ್ದಾಗೆಲ್ಲಾ ತನಿಖಾಧಿಕಾರಿ ಮುಂದೆ ಹಾಜರಾಗಬೇಕು. ಸಾಕ್ಷಿಗಳ ಮೇಲೆ ಪ್ರಭಾವ ಬೀರಬಾರದು. ಸಾಕ್ಷ್ಯಾಧಾರ ನಾಶಪಡಿಸಲು ಯತ್ನಿಸಬಾರದು ಎಂದು ಅರ್ಜಿದಾರೆಗೆ ಷರತ್ತು ವಿಧಿಸಿದ ಹೈಕೋರ್ಟ್, ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಹೈಕೋರ್ಟ್ ಏನು ಹೇಳಿದೆ?
ದೂರಿನ ಎಲ್ಲಾ ಅಂಶಗಳನ್ನು ಗಮನಿಸಿದರೆ ಮೊದಲ ಮತ್ತು ಎರಡನೇ ಆರೋಪಿ ನಡುವೆ ಮಗು ಮಾರಾಟ ಮಾಡಲು ಮಧ್ಯಸ್ಥಿಕೆ ವಹಿಸಿದ್ದಾರೆ ಎಂಬ ಸಂಬಂಧ ಅರ್ಜಿದಾರ ಬಗ್ಗೆ ನಿರ್ದಿಷ್ಟ ಆರೋಪವಿಲ್ಲ. ಈ ವಿಚಾರವು ತನಿಖೆ ಪೂರ್ಣಗೊಳಿಸಿ, ದೋಷಾರೋಪ ಪಟ್ಟಿ ಸಲ್ಲಿಸಿದ ನಂತರ ವಿಚಾರಣಾ ನ್ಯಾಯಾಲಯವು ವಿಚಾರಣೆ ನಡೆಸಿ ಸತ್ಯಾಂಶವನ್ನು ಪತ್ತೆ ಹಚ್ಚಬೇಕಿದೆ ಎಂದು ಹೇಳಿದೆ.

ಅಲ್ಲದೆ, ಮರಣ ದಂಡನೆ ಅಥವಾ ಜೀವಾವಧಿ ಶಿಕ್ಷೆ ವಿಧಿಸುವಂತ ಆರೋಪಗಳು ಅರ್ಜಿದಾರರ ಮೇಲಿಲ್ಲ. ಅರ್ಜಿದಾರೆ ಮಹಿಳೆಯಾಗಿದ್ದು, ಅವರು ಯಾವುದೇ ಕ್ರಿಮಿನಲ್ ಹಿನ್ನೆಲೆ ಹೊಂದಿಲ್ಲ. ಆದ್ದರಿಂದ ಅವರಿಗೆ ಕಠಿಣ ಷರತ್ತುಗಳನ್ನು ವಿಧಿಸಿ ನಿರೀಕ್ಷಣಾ ಜಾಮೀನು ಮಂಜೂರು ಮಾಡಬಹುದು ಎಂದು ಅಭಿಪ್ರಾಯಪಟಿದೆ.
ಪ್ರಕರಣದ ಹಿನ್ನೆಲೆ ಏನು?
2022ರ ಸೆಪ್ಟೆಂಬರ್ 5ರಂದು ಮಹಿಳೆಯೊಬ್ಬರು ಕಾರವಾರದ ಸಿವಿಲ್ ಆಸ್ಪತ್ರೆಯಲ್ಲಿ ಹೆಣ್ಣು ಜನ್ಮ ನೀಡಿದ್ದರು. ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದ ಮಗುವಿನ ತಾಯಿಗೆ ಹಣದ ನೆರವು ಬೇಕಿತ್ತು. ಈ ವಿಷಯವನ್ನು ಅದೇ ಆಸ್ಪತ್ರೆಯಲ್ಲಿ ಶುಶ್ರೂಷಕಿಯಾಗಿ ಕೆಲಸ ಮಾಡುತ್ತಿದ್ದ ಅರ್ಜಿದಾರಳಿಗೆ ಹೇಳಿಕೊಂಡಿದ್ದರು. ಮಗುವಿನ ತಾಯಿ ಸೆ.3ರಂದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರು. ಸೆ. 15 ರಂದು ಅಂಕೋಲದ ಜೈಹಿಂದ್ ಮೈದಾನದ ಬಳಿ ವ್ಯಕ್ತಿಯೊಬ್ಬರಿಗೆ (ಎರಡನೇ ಆರೋಪಿ)ಗೆ ಮಗುವನ್ನು ನೀಡಿ, ಅವರಿಂದ 1.70 ಲಕ್ಷ ರೂ ಪಡೆದಿದ್ದರು. ಅದಕ್ಕೆ ಅರ್ಜಿದಾರೆ ಶುಶ್ರೂಷಕಿಗೆ ಮಧ್ಯಸ್ಥಿಕೆ ವಹಿಸಿದ್ದರು. ನಂತರ ತಾಯಿ ಮಗುವನ್ನು ವಾಪಸ್ ಕೊಡಿಸುವಂತೆ ಶುಶ್ರೂಷಕಿಗೆ ಕೇಳಿಕೊಂಡಿದ್ದರು. ಆದರೆ, ಮಗು ಸಿಗದಿದ್ದಾಗ ತಾಯಿಯೇ ಅಂಕೋಲದ ಮಕ್ಕಳ ಅಭಿವೃದ್ಧಿ ಯೋಜನಾಧಿಕಾರಿಯನ್ನು (ಸಿಡಿಪಿಒ) ಭೇಟಿಯಾಗಿ ವಿಷಯ ತಿಳಿಸಿದ್ದರು. ಅವರು ಅಂಕೋಲಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಪೊಲೀಸರು ಮಗುವಿನ ತಾಯಿಯನ್ನು ಮೊದಲನೇ ಆರೋಪಿಯನ್ನಾಗಿ ಮಾಡಿದ್ದರು. ಮಗುವನ್ನು ಖರೀದಿಸಿದ ವ್ಯಕ್ತಿ ಮತ್ತು ಮಧ್ಯಸ್ಥಿಕೆ ವಹಿಸಿದ್ದ ಶುಶ್ರೂಷಕಿಯನ್ನು ಕ್ರಮವಾಗಿ ಎರಡು ಮತ್ತು ಮೂರನೇ ಆರೋಪಿಯನ್ನಾಗಿ ಮಾಡಿದ್ದರು. ಹಾಗಾಗಿ, ಬಂಧನ ಭೀತಿಯಿಂದ ಶುಶ್ರೂಷಕಿ ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಕಾರವಾರದ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ವಜಾಗೊಳಿಸಿ 2022ರ ಅ.14ರಂದು ಆದೇಶಿಸಿದ್ದರು. ಹಾಗಾಗಿ ಶುಶ್ರೂಷಕಿ ಹೈಕೋರ್ಟ್ ಮೊರೆ ಹೋಗಿದ್ದರು.












Click it and Unblock the Notifications